Hemavati Express Link Canal | ಕುಣಿಗಲ್‌ ತಾಲೂಕಿಗಷ್ಟೇ ನೀರು; ಮಾಗಡಿಗೆ ನೀರು ಬಿಡಲ್ಲ- ಸಚಿವ ಡಾ.ಜಿ.ಪರಮೇಶ್ವರ್‌ ಸ್ಪಷ್ಟ ನುಡಿ
x

ತುಮಕೂರಿನಲ್ಲಿ ಸಚಿವ ಡಾ.ಜಿ.ಪರಮೇಶ್ವರ್‌ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು

Hemavati Express Link Canal | ಕುಣಿಗಲ್‌ ತಾಲೂಕಿಗಷ್ಟೇ ನೀರು; ಮಾಗಡಿಗೆ ನೀರು ಬಿಡಲ್ಲ- ಸಚಿವ ಡಾ.ಜಿ.ಪರಮೇಶ್ವರ್‌ ಸ್ಪಷ್ಟ ನುಡಿ

ಹೇಮಾವತಿ ನಾಲೆ ವಿಚಾರದಲ್ಲಿ ಜಿಲ್ಲೆಯ ಜನರ ಹಿತವೇ ಮುಖ್ಯ. ಇದಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ದನಿದ್ದೇನೆ. ಎಕ್ಸ್‌ಪ್ರೆಸ್‌ ಕೆನಾಲ್ ಲಿಂಕ್ ಯೋಜನೆಯಡಿ ಕುಣಿಗಲ್‌ ತಾಲೂಕಿಗೆ ಮಾತ್ರ ನೀರು ಹರಿಸಲಾಗುವುದು. ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿಗೆ ನೀರು ಹರಿಸುವುದಿಲ್ಲ ಎಂದು ಸಚಿವ ಪರಮೇಶ್ವರ್‌ ತಿಳಿಸಿದರು.


ಹೇಮಾವತಿ ಎಕ್ಸ್‌ಪ್ರೆಸ್‌ ಲಿಂಕ್‌ ಕೆನಾಲ್‌ ಕಾಮಗಾರಿಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಜಿಲ್ಲೆಯ ರೈತರು ಹಾಗೂ ರಾಜಕೀಯ ನಾಯಕರ ಮನವೊಲಿಕೆಗೆ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್‌ ಅಖಾಡಕ್ಕೆ ಇಳಿದಿದ್ದಾರೆ.

ಹೇಮಾವತಿ ನಾಲೆ ವಿಚಾರದಲ್ಲಿ ಜಿಲ್ಲೆಯ ಜನರ ಹಿತವೇ ಮುಖ್ಯ. ಇದಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ದನಿದ್ದೇನೆ. ಎಕ್ಸ್‌ಪ್ರೆಸ್‌ ಕೆನಾಲ್ ಲಿಂಕ್ ಯೋಜನೆಯಡಿ ಕುಣಿಗಲ್‌ ತಾಲೂಕಿಗೆ ಮಾತ್ರ ನೀರು ಹರಿಸಲಾಗುವುದು. ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿಗೆ ನೀರು ಹರಿಸುವುದಿಲ್ಲ ಎಂದು ಜಿಲ್ಲೆಯ ರೈತರಿಗೆ ಡಾ.ಜಿ. ಪರಮೇಶ್ವರ್‌ ಭರವಸೆ ನೀಡಿದ್ದಾರೆ.

ಸೋಮವಾರ ತುಮಕೂರಿನಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಎಕ್ಸ್‌ಪ್ರೆಸ್‌ ಲಿಂಕ್‌ ಕೆನಾಲ್‌ ಯೋಜನೆ ಸರ್ಕಾರದ ತೀರ್ಮಾನ. ನಮ್ಮದು ರೈತ ವಿರೋಧಿ ಸರ್ಕಾರವಲ್ಲ. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳಿಗೆ ರೈತರ ಬಗ್ಗೆ ಕಾಳಜಿ ಇದೆ. ಆದರೆ, ಶನಿವಾರ ನಡೆದ ಘಟನೆ ಬೇಸರ ತರಿಸಿದೆ ಎಂದು ಹೇಳಿದರು.

ಕಾಂಗ್ರೆಸ್‌ ನೇತೃತ್ವದ ಸರ್ಕಾರ 2013 ರಿಂದ ಪ್ರತಿವರ್ಷ ನೀರಾವರಿ ಯೋಜನೆಗಳಿಗಾಗಿ 10 ಸಾವಿರ ಕೋಟಿ ರೂ. ಖರ್ಚು ಮಾಡುತ್ತಿದೆ. ಆ ಪ್ರಕಾರ ಇಲ್ಲಿಯವರೆಗೆ 68 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗಿದೆ. ಇದೆಲ್ಲವನ್ನೂ ರೈತ ಕಲ್ಯಾಣಕ್ಕಾಗಿ ಮಾಡುತ್ತಿದ್ದೇವೆ. ಪ್ರಸಕ್ತ ಹೇಮಾವತಿ ಎಕ್ಸ್‌ಪ್ರೆಸ್‌ ಲಿಂಕ್‌ ಯೋಜನೆಯನ್ನು ಯಾವುದೇ ತೊಂದರೆ ಆಗದಂತೆ ಅನುಷ್ಠಾನ ಮಾಡಲಾಗುವುದು ಎಂದು ಭರವಸೆ ನೀಡಿದರು.

ಈ ಹಿಂದೆ ಅನೇಕ‌ ಸಂದರ್ಭಗಳಲ್ಲಿ ತುಮಕೂರಿಗೆ ಬರುವ ಹೇಮಾವತಿ ನೀರನ್ನು ಬೇರೆ ಬೇರೆ ತಾಲ್ಲೂಕುಗಳಿಗೆ ಹಂಚಿಕೆ ಮಾಡಲಾಗಿದೆ. ಕುಣಿಗಲ್ ತಾಲ್ಲೂಕಿಗೆ ಹಂಚಿಕೆಯಾಗಿರುವ ನೀರಿನ ವಿಚಾರವಾಗಿ ಸರ್ಕಾರಕ್ಕೆ ಹಲವು ಮನವಿಗಳು ಬಂದಿದ್ದವು. ಈ ಸಂಬಂಧ ಸರ್ಕಾರ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ಅನೇಕ ಸಭೆಗಳನ್ನು ನಡೆಸಿ ಚರ್ಚಿಸಲಾಗಿದೆ. ಆ ಸಭೆಗಳಲ್ಲಿ ತುಮಕೂರು ಭಾಗದ ಶಾಸಕರಾದ ಬಿ. ಸುರೇಶ್‌ಗೌಡ, ಜ್ಯೋತಿಗಣೇಶ್, ಎಂ.ಟಿ. ಕೃಷ್ಣಪ್ಪ ಹಾಗೂ ಪ್ರತಿಭಟನೆಯ ನೇತೃತ್ವ ವಹಿಸಿರುವ ರೈತ ಮುಖಂಡರು ಕೂಡ ಭಾಗವಹಿಸಿದ್ದರು. ಸಭೆಯಲ್ಲಿ ಅವರೇ ಅನೇಕ ಸಲಹೆ ಸೂಚನೆಗಳನ್ನು ನೀಡಿದ್ದರು ಎಂದು ವಿವರಿಸಿದರು.

2024 ಜ.5 ರಂದು ಸಂಪುಟ ಸಭೆಯಲ್ಲಿ ಕೈಗೊಂಡ ತೀರ್ಮಾನ ಹಾಗೂ ರೈತರು, ಶಾಸಕರೊಂದಿಗೆ ನಡೆದ ಸಭೆಗಳಲ್ಲಿ ಕೈಗೊಂಡ ನಿರ್ಣಯಗಳ ಅನುಸಾರ ಕುಣಿಗಲ್ ತಾಲ್ಲೂಕಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಎಕ್ಸ್‌ಪ್ರೆಸ್‌ ಕೆನಾಲ್‌ ಮೂಲಕ ನೀರು ಹರಿಸಲು ತೀರ್ಮಾನಿಸಲಾಯಿತು. ಸಭೆಯ ತೀರ್ಮಾನದಂತೆ ಡಿಸಿಎಂ ಅವರು ತಾಂತ್ರಿಕ ಸಮಿತಿ ರಚಿಸಿದ್ದರು.

ಈಗ ಆ ಸಮಿತಿ ನೀಡಿರುವ ವರದಿ ಆಧರಿಸಿಯೇ ನೀರಾವರಿ ಇಲಾಖೆಗೆ ಕಾಮಗಾರಿ ನಡೆಸಲು ಅನುಮತಿ ನೀಡಲಾಗಿದೆ. ಗುತ್ತಿಗೆದಾರರು ಅನುಮತಿ ತೆಗೆದುಕೊಂಡಿಲ್ಲ ಎಂದು ಈ ಹಿಂದೆ ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ಕಾಮಗಾರಿ ನಿಲ್ಲಿಸಲಾಗಿತ್ತು.‌ ಈಗ ಎಲ್ಲಾ ರೀತಿಯ ಅನುಮತಿಗಳನ್ನು ಪಡೆದೇ ಮೇ‌ 31ರಿಂದ ಕೆಲಸ ಆರಂಭಿಸಲಾಗಿದೆ ಎಂದು ಪರಮೇಶ್ವರ್‌ ತಿಳಿಸಿದರು.

ಪೊಲೀಸರ ಮೇಲೆ ಹಲ್ಲೆ

ಪ್ರತಿಭಟನೆ ನಡೆಸದಂತೆ ಸಾಕಷ್ಟು ಮನವಿ ಮಾಡಿದರೂ ಪ್ರತಿಭಟನಾಕಾರರು ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಡಿ-ರಾಂಪುರ ಸಮೀಪ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಲ್ಲದೇ ಕಾಮಗಾರಿಯನ್ನು ನಿಲ್ಲಿಸುವ ಪ್ರಯತ್ನ ಮಾಡಿದ್ದಾರೆ.‌ ಘಟನೆಯಲ್ಲಿ ಪಿಎಸ್‌ಐ ಸೇರಿ ಹಲವು ಸಿಬ್ಬಂದಿಗೆ ಗಾಯಗಳಾಗಿವೆ ಎಂದು ಪರಮೇಶ್ವರ್‌ ದೂರಿದರು.

ಮುಖಂಡ ದಿಲೀಪ್ ಕುಮಾರ್ ಹಾಗೂ ಸ್ವಾಮೀಜಿಗಳ‌ ಮೇಲೆ ಎಫ್‌ಐಆರ್ ಹಾಕಲಾಗಿದೆ. ಇಲ್ಲಿಯವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ತಾಂತ್ರಿಕ ಸಮಿತಿ ವರದಿ ಆಧರಿಸಿ ಅನುಷ್ಠಾನ

ತುಮಕೂರು ಹಾಗೂ ಕುಣಿಗಲ್ ತಾಲೂಕಿಗೆ ಸಮನಾಗಿ ನೀರು ಹಂಚಿಕೆ ಮಾಡಬೇಕು. ಕೆನಾಲ್‌ಗಳಿಗೆ ಅಕ್ರಮವಾಗಿ ಪಂಪ್‌ಸೆಟ್‌ಗಳನ್ನು ಹಾಕಲಾಗಿದೆ. ಇದರಿಂದ ಹೆಚ್ಚಿನ ಪ್ರಮಾಣದ ನೀರು ನಷ್ಟವಾಗುತ್ತಿದೆ. ಇದನ್ನು‌ ತಡೆಗಟ್ಟಬೇಕಾಗಿತ್ತು. 70 ಕಿ.ಮೀ ವರೆಗೆ ಯಾಂತ್ರೀಕೃತ ನಿಯಂತ್ರಣ ವ್ಯವಸ್ಥೆ ಇರಬೇಕು. ಸ್ಕಾಡಾ ಅಳವಡಿಸಬೇಕು. ಕುಣಿಗಲ್ ಕಡೆ ಎಷ್ಟು ನೀರು ಹೋಗುತ್ತದೆ. ತುಮಕೂರು ಕಡೆ ಎಷ್ಟು ಪ್ರಮಾಣದ ನೀರು ಹೋಗುತ್ತದೆ ಎಂಬುದನ್ನು ಪ್ರತಿದಿನ ಲೈವ್ ಆಗಿ ತೋರಿಸುತ್ತದೆ ಎಂದು ಸಮಿತಿ ಶಿಫಾರಸು ಮಾಡಿದೆ.

ಕುಣಿಗಲ್‌ಗೆ ನೀರು ಕೊಟ್ಟರೆ ಮುಂದೆ ನೀರು ಬರುವುದಿಲ್ಲ. ನೀರು ಕಡಿಮೆಯಾಗುತ್ತದೆ ಎಂಬ ತಪ್ಪು ಕಲ್ಪನೆ ಇದೆ‌. ಆ ರೀತಿಯಾಗುವುದಿಲ್ಲ ಎಂಬುದನ್ನು ನೀರಾವರಿ ಇಲಾಖೆಯವರು, ತಾಂತ್ರಿಕ ಸಮಿತಿಯು ಯಾರಿಗೂ ತೊಂದರೆ ಆಗುವುದಿಲ್ಲ ಎಂದು ವರದಿ ನೀಡಿದೆ ಎಂದು ಪರಮೇಶ್ವರ್‌ ತಿಳಿಸಿದರು.

ಮಾಗಡಿಗೆ ನೀರು ಬಿಡುಗಡೆ ಪುನರ್‌ ಪರಿಶೀಲನೆ

ಮಾಗಡಿಗೆ ನೀರು ಹಂಚಿಕೆಯಾಗಿರುವುದು ನಿಜ. ಆದರೆ, ಸರ್ಕಾರ ಅದನ್ನು ಪುನರ್‌ ಪರಿಶೀಲನೆ‌ ಮಾಡಬೇಕು. ನಾವು ಕುಣಿಗಲ್ ತಾಲೂಕಿಗೆ ಮಾತ್ರ ನೀರು ಕೊಡುತ್ತೇವೆ ಎಂದು ಪರಮೇಶ್ವರ್‌ ಸ್ಪಷ್ಟಪಡಿಸಿದರು.

Read More
Next Story