
ತುಮಕೂರಿನಲ್ಲಿ ರೈತರು ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ವಿರೋಧಿಸಿ ಪ್ರತಿಭಟನೆ ನಡೆಸಿದ ವೇಳೆ ಪೊಲೀಸರು ಭದ್ರತೆ ಒದಗಿಸಿದ್ದರು
Hemavathi Express Link Canal |ಪೈಪ್ಲೈನ್ ಹಾಕಲು ವಿರೋಧ; ಸರ್ಕಾರದ ವಿರುದ್ಧ ʼಮಾಡು ಇಲ್ಲವೇ ಮಡಿʼ ಹೋರಾಟಕ್ಕೆ ರೈತರು ಸಜ್ಜು
ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ವಿರೋಧಿಸಿ ಮಾಡು ಇಲ್ಲವೇ ಮಡಿ ಹೋರಾಟಕ್ಕೆ ರೈತ ಸಂಘಟನೆಗಳು, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ನಿರ್ಧರಿಸಿವೆ.
ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿಸಿ ತುಮಕೂರಿನಲ್ಲಿ ನಡೆಯುತ್ತಿರುವ ರೈತರ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಶನಿವಾರ ಹೆದ್ದಾರಿ ಬಂದ್ ಮಾಡಿ ಕಾಮಗಾರಿಗೆ ಅಡ್ಡಿಪಡಿಸಿದ ರೈತರು ಹಾಗೂ ರಾಜಕೀಯ ನಾಯಕರ ಮೇಲೆ ಪೊಲೀಸರು 13 ಪ್ರಕರಣಗಳನ್ನು ದಾಖಲಿಸಿರುವುದು ಹೋರಾಟಗಾರರಲ್ಲಿ ಇನ್ನಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ವಿರೋಧಿಸಿ ಮಾಡು ಇಲ್ಲವೇ ಮಡಿ ಹೋರಾಟಕ್ಕೆ ರೈತ ಸಂಘಟನೆಗಳು, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ನಿರ್ಧರಿಸಿವೆ. ರಾಜ್ಯ ಸರ್ಕಾರದ ವಿರುದ್ಧ ಮುಂದಿನ ಹೋರಾಟದ ಕುರಿತು ರೂಪುರೇಷ ಸಿದ್ದಪಡಿಸಲು ಸೋಮವಾರ ತುಮಕೂರಿನಲ್ಲಿ ಹೋರಾಟಗಾರರ ಸಭೆ ನಡೆಯುತ್ತಿದೆ.
ಈಗಾಗಲೇ ಶಾಸಕರಾದ ಬಿ.ಸುರೇಶ್ ಗೌಡ, ಜ್ಯೋತಿ ಗಣೇಶ್, ಎಂ.ಟಿ.ಕೃಷ್ಣಪ್ಪ ಸೇರಿ ಹಲವು ರೈತ ನಾಯಕರ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ಕಾಮಗಾರಿಗೆ ಅಡ್ಡಿಪಡಿಸಿದ ಆರೋಪದ ಮೇಲೆ ಇನ್ನಷ್ಟು ಮುಖಂಡರ ಮೇಲೆ ಪ್ರಕರಣ ದಾಖಲಿಸಲಾಗುತ್ತಿದ್ದು, ರೈತರು ಹಾಗೂ ಸರ್ಕಾರದ ಮಧ್ಯೆ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದೆ.
ಯೋಜನೆಗೆ ವಿರೋಧ ಏಕೆ?
ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಮೂಲಕ ಕುಣಿಗಲ್ ಹಾಗೂ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಕೆರೆಗಳಿಗೆ ನೀರು ಹರಿಸುವ ಯೋಜನೆಯನ್ನು ಸರ್ಕಾರ ಆರಂಭಿಸಿದೆ. ಇದಕ್ಕಾಗಿ ಪೈಪ್ಲೈನ್ ಅಳವಡಿಸುತ್ತಿರುವುದು ರೈತರು ಹಾಗೂ ರಾಜಕೀಯ ಪಕ್ಷಗಳ ವಿರೋಧಕ್ಕೆ ಕಾರಣವಾಗಿದೆ.
ಪ್ರಸ್ತುತ, ಗುಬ್ಬಿ ತಾಲೂಕಿನ ಕಡಬಾವರೆಗೆ ಹೇಮಾವತಿ ನಾಲೆ ಅಸ್ತಿತ್ವದಲ್ಲಿದೆ. ಅಲ್ಲಿಂದ ಕುಣಿಗಲ್ ತಾಲೂಕಿಗೆ ನೈಸರ್ಗಿಕ ಹಳ್ಳದ ಮೂಲಕ ನೀರು ಹರಿಯುತ್ತಿದೆ. ಆದರೆ, ಈಗ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ನಿರ್ಮಿಸಿದರೆ ಜಿಲ್ಲೆಯ ರೈತರಿಗೆ ಮಾರಕವಾಗಿ ಪರಿಣಮಿಸಲಿದೆ. ಈ ಯೋಜನೆಯಡಿ 15 ಅಡಿ ಆಳದಲ್ಲಿ 12 ಅಡಿ ವ್ಯಾಸದ ಪೈಪ್ಲೈನ್ ಅಳವಡಿಸಲಾಗುತ್ತದೆ. ನಾಲೆಗಿಂತ ಕೆಳಮಟ್ಟದಲ್ಲಿ ಪೈಪ್ಲೈನ್ ಅಳವಡಿಸಿದರೆ ಹೆಚ್ಚು ನೀರು ಕುಣಿಗಲ್ ಹಾಗೂ ಮಾಗಡಿಗೆ ಹರಿದು ಹೋಗಲಿದೆ. ಆಗ ತುಮಕೂರು, ಗುಬ್ಬಿ, ಮಧುಗಿರಿ ಹಾಗೂ ಕೊರಟಗೆರೆ ತಾಲೂಕಿಗೆ ನೀರಿನ ಹರಿವು ಕಡಿಮೆಯಾಗಲಿದೆ ಎಂಬುದು ರೈತರಲ್ಲಿರುವ ಆತಂಕ. ಹಾಗಾಗಿ ಯೋಜನೆಗೆ ವಿರೋಧ ವ್ಯಕ್ತವಾಗುತ್ತಿದೆ.
ಪಾಲಿನ ನೀರು ಪಡೆಯಲು ಅಭ್ಯಂತರವಿಲ್ಲ
ಕಾವೇರಿ ನ್ಯಾಯಾಧೀಕರಣದ ಆದೇಶದಂತೆ ಹೇಮಾವತಿ ನಾಲಾ ವಲಯ ಮತ್ತು ತುಮಕೂರಿಗೆ ಒಟ್ಟು 25.31 ಟಿಎಂಸಿ ನೀರು ನಿಗದಿಪಡಿಸಲಾಗಿದೆ. ನಾಲಾ ವಲಯದ ವ್ಯಾಪ್ತಿಯಲ್ಲಿ ಹಾಸನ, ಮಂಡ್ಯ, ತುಮಕೂರು ಹಾಗೂ ರಾಮನಗರ ಜಿಲ್ಲೆಗಳ 14 ತಾಲೂಕುಗಳಿಗೆ ನೀರು ಹಂಚಿಕೆಯಾಗಿದೆ. ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ 66 ಕೆರೆಗಳಿಗೆ ನೀರು ತುಂಬಿಸುವುದು ಕೂಡ ಇದೆ.
ನ್ಯಾಯಾಧೀಕರಣ ಆದೇಶದಂತೆ ನೀರು ಕೊಂಡೊಯ್ಯಲು ನಮ್ಮದೇನೂ ತಕರಾರು ಇಲ್ಲ. ಆದರೆ, ಪೈಪ್ಲೈನ್ ಅಳವಡಿಕೆಗಷ್ಟೇ ನಮ್ಮ ವಿರೋಧ. ಅವೈಜ್ಞಾನಿಕ ಪೈಪ್ಲೈನ್ ಕಾಮಗಾರಿಯಿಂದ ಜಿಲ್ಲೆಯ ರೈತರಿಗೆ ಸಮಸ್ಯೆಯಾಗಲಿದೆ ಎಂದು ರೈತ ಸಂಘಟನೆಗಳು ದೂರುತ್ತಿವೆ.
ಹೇಮಾವತಿ ನಾಲೆಯ ಪೂರ್ಣಗೊಂಡಿಲ್ಲ
ಗೊರೂರು ಜಲಾಶಯದಿಂದ ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗದವರೆಗೆ ನಾಲೆ ನಿರ್ಮಿಸಬೇಕೆಂಬುದು ಮೂಲ ಯೋಜನೆಯಲ್ಲಿದೆ. ಆದರೆ, ಹೇಮಾವತಿ ನಾಲೆಯನ್ನು ಗುಬ್ಬಿ ತಾಲೂಕಿನ ಕಡಬಾವರೆಗೆ ಮಾತ್ರ ನಿರ್ಮಿಸಲಾಗಿದೆ.
ಹುಲಿಯೂರು ದುರ್ಗಕ್ಕೆ ದಶಕಗಳಿಂದ ಹೇಮಾವತಿ ನಾಲೆ ನಿರ್ಮಿಸುವ ಕನಸು ನನಸಾಗಿಯೇ ಉಳಿದಿದೆ. ಹೀಗಿರುವಾಗ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಹೆಸರಿನಲ್ಲಿ ಹಣ ಲೂಟಿ ಮಾಡುವ ಯೋಜನೆ ಇದಾಗಿದೆ ಎಂದು ರೈತರು ಆರೋಪಿಸಿದ್ದಾರೆ.
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವಧಿಯ ಸಮ್ಮಿಶ್ರ ಸರ್ಕಾರದಲ್ಲಿ ಯೋಜನೆಗೆ ಆದೇಶ ಹೊರಡಿಸಿ, 600 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿತ್ತು. ನಂತರ ಬಿಜೆಪಿ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಅವರು ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು. ಆಗ ಸಂಪುಟ ಸಭೆಯಲ್ಲಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಆದೇಶ ರದ್ದುಪಡಿಸಲಾಯಿತು. ಆದರೆ, ಯೋಜನೆಗೆ ಮಂಜೂರಾಗಿದ್ದ ಹಣವನ್ನು ಹೇಮಾವಾತಿ ನಾಲಾ ಆಧುನೀಕರಣಕ್ಕೆ ಬಳಸಲಾಗಿತ್ತು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಿಂದಿನ ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಯೋಜನೆಗೆ ಮರುಜೀವ ನೀಡಲಾಯಿತು. ಹೊಸದಾಗಿ 900 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಲಾಯಿತು.
ಯೋಜನೆಗೆ ಅಗತ್ಯವಾದ ಪೈಪ್ ಗಳನ್ನು ತಂದಿರಿಸಿ, ಕಳೆದ ಒಂದು ವಾರದಿಂದ ಪೊಲೀಸರ ರಕ್ಷಣೆಯಲ್ಲಿ ಕಾಮಗಾರಿ ನಡೆಸಲಾಗುತ್ತಿತ್ತು. ಇದನ್ನು ವಿರೋಧಿಸಿ ಶನಿವಾರ ಜಿಲ್ಲೆಯ ರೈತರು ಹಾಗೂ ರಾಜಕೀಯ ಪಕ್ಷಗಳ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿ, ಕಾಮಗಾರಿಗೆ ಅಡ್ಡಿಪಡಿಸಿದ್ದರು.