HEART OF DARKNESS | ಬೆಳಕು ಕಾಣದ ಉರುಳುʼಗಲ್ಲುʼ: ಸಂತ್ರಸ್ತರ ಪಾಲಿಗೆ ಇರುಳಾಯಿತು ಕಾಡು!
x

ಸಕಲ ನಾಗರಿಕ ಸೌಲಭ್ಯವಂಚಿತ ಶರಾವತಿ ಕಣಿವೆಯ ಉರುಳುಗಲ್ಲು ಗ್ರಾಮ  | ಫೋಟೋ: ಶಶಿ ಸಂಪಳ್ಳಿ

HEART OF DARKNESS | ಬೆಳಕು ಕಾಣದ ಉರುಳುʼಗಲ್ಲುʼ: ಸಂತ್ರಸ್ತರ ಪಾಲಿಗೆ ಇರುಳಾಯಿತು ಕಾಡು!

ಇಡೀ ರಾಜ್ಯಕ್ಕೆ ಬೆಳಕು ಕೊಡುವ ಉದ್ದೇಶದಿಂದ ನಿರ್ಮಾಣವಾದ ಲಿಂಗನಮಕ್ಕಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗಿ ಆಸ್ತಿಪಾಸ್ತಿ ಕಳೆದುಕೊಂಡು ಸಂತ್ರಸ್ತರಾದ ಸಾಗರ ತಾಲೂಕಿನ ಶರಾವತಿ ಕೊಳ್ಳದ ಹಲವು ಕುಗ್ರಾಮಗಳ ಜನರ ಬದುಕು ಈಗಲೂ ಕತ್ತಲೆಯ ಕೂಪವೇ. ಬೆಳಕು, ರಸ್ತೆ, ಆಸ್ಪತ್ರೆ, ಶಾಲೆಯಂತಹ ಮೂಲ ಸೌಕರ್ಯಗಳೇ ಇಲ್ಲದ ಇಲ್ಲಿನ ಮಗುವೊಂದು ಶಾಲೆಗೆ ಹೋಗಲು ಬರೋಬ್ಬರಿ 10 ಕಿ.ಮೀ ಕಗ್ಗಾಡಿನ ದುರ್ಗಮ ದಾರಿ ಸವೆಸಬೇಕಾಗಿದೆ!


ಶರಾವತಿ ನದಿ ಜಲವಿದ್ಯುತ್ ಯೋಜನೆಯ ಲಿಂಗನಮಕ್ಕಿ ಜಲಾಶಯದಿಂದ ಮುಳುಗಡೆಯಾಗಿ ಸರ್ಕಾರವೇ ತೋರಿಸಿದ ಜಾಗದಲ್ಲಿ ಬದುಕು ಕಟ್ಟಿಕೊಂಡ ಜನ ಕಳೆದ ಅರವತ್ತು ವರ್ಷಗಳಿಂದ ಯಾವ ನಾಗರಿಕ ಸೌಲಭ್ಯಗಳೂ ಇಲ್ಲದೆ, ಅಭಯಾರಣ್ಯದ ಒಳಗೆ ಸ್ವತಃ ಬೋನಿನಲ್ಲಿರುವ ಪ್ರಾಣಿಗಳಂತೆ ಜೀವನ ಸಾಗಿಸುತ್ತಿರುವ ಕರುಣಾಜನಕ ಕಥೆ ಇದು.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಾರ್ಗಲ್- ಕೋಗಾರ್ ರಸ್ತೆಯ ಭಾನುಕುಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಈ ಕುಗ್ರಾಮಗಳು ಈಗಲೂ ವಿದ್ಯುತ್, ರಸ್ತೆ, ಶಾಲೆ, ಆಸ್ಪತ್ರೆಯಂತಹ ಎಲ್ಲಾ ಬಗೆಯ ಕನಿಷ್ಟ ನಾಗರಿಕ ಸೌಲಭ್ಯಗಳಿಂದ ದೂರವೇ ಉಳಿದಿವೆ. ಗ್ರಾಮ ಪಂಚಾಯ್ತಿ ಕಚೇರಿಗೆ ತಲುಪಲು ಆ ಊರಿನ ಜನ ಕನಿಷ್ಠ 22 ಕೀ.ಮೀ ದುರ್ಗಮ ಕಾಡು ಹಾದು ಕಾಲ್ನಡಿಗೆಯಲ್ಲೇ ಬರಬೇಕು ಎಂದರೆ ನಾಗರಿಕ ಜಗತ್ತಿನಿಂದ ಅಲ್ಲಿನ ನಿವಾಸಿಗಳು ಎಷ್ಟು ಗಾವುದ ದೂರದಲ್ಲಿದ್ದಾರೆ ಎಂದು ಅಂದಾಜಿಸಬಹುದು.

ಅಲ್ಲಿನ ಯಾವುದೇ ಮಗು ಅಕ್ಷರ ಲೋಕದ ದಾರಿ ಹಿಡಿಯಲು ಶಾಲೆಗೆ ತಲುಪಬೇಕಾದರೂ ಬರೋಬ್ಬರಿ 12 ಕಿ.ಮೀ ದೂರ ಕ್ರಮಿಸಬೇಕು. ಆ ಪೈಕಿ ಸುಮಾರು 10 ಕಿ.ಮೀ ದೂರದ ದಟ್ಟ ಕಾಡಿನ ನಡುವಿನ ದಾರಿ ಇಂದಿಗೂ ಗುಂಡಿ-ಗೊಟರುಗಳ, ಮರದ ಬೇರು-ಬೊಡ್ಡೆಗಳ ದುರ್ಗಮ ಕೊರಕಲು ಹಾದಿ. ಮಳೆಗಾಲದ ನಾಲ್ಕೈದು ತಿಂಗಳ ಕಾಲ ಫೋರ್‌ವೀಲ್‌ ಡ್ರೈವ್ ಜೀಪು ಹೊರತುಪಡಿಸಿ ಬೇರಾವುದೇ ನಾಲ್ಕು ಚಕ್ರದ ವಾಹನ ಕೂಡ ಸಾಗಲಾರದ ಕಗ್ಗಾಡಿನ ಕಾಲು ಹಾದಿ ಅದು.

ಭಾನುಕುಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಿಳಿಗಾರು ಗ್ರಾಮದಿಂದ ಒಳಗೆ ಕಾನೂರು ಕೋಟೆ ರಸ್ತೆಯಲ್ಲಿ ಹತ್ತು ಕಿ.ಮೀ ಸಾಗಿ, ಮುಂದೆ ಮತ್ತೆ ಸುಮಾರು 12 ಕಿ.ಮೀ ದುರ್ಗಮ ಹಾದಿ ಸವೆಸಿದರೆ, ಅಲ್ಲಿ ಉರುಳುಗಲ್ಲು ಗ್ರಾಮ ವ್ಯಾಪ್ತಿಯ ಚೀಕನಹಳ್ಳಿ, ಸಾಲ್ಕೋಡ್ಲು, ಹೆಬ್ಬಯ್ಯನಕೆರೆ, ಮೇಲೂರು, ದಾಸಮನೆ, ಮುಂಡುವಾಳ ಹಾಗೂ ಕಾನೂರು ಭಾಗದ ಕಲ್ಲಗಲ್ಲಿ, ತತ್ತಿ ಮತ್ತಿತರ ಕುಗ್ರಾಮಗಳು ಶತಮಾನಗಳ ಪಳೆಯುಳಿಕೆಯಂತೆ ಈಗಲೂ ಉಳಿದುಕೊಂಡಿವೆ.

ಒಟ್ಟು ಸುಮಾರು 60ಕ್ಕೂ ಹೆಚ್ಚು ಮನೆಗಳಿರುವ ಈ ಕುಗ್ರಾಮಗಳಲ್ಲಿ ಸುಮಾರು 350 ಮಂದಿ ಜನಸಂಖ್ಯೆ ಇದ್ದು, ಬಹುತೇಕ ಎಲ್ಲರೂ ಹಿರೇಭಾಸ್ಕರ, ಲಿಂಗನಮಕ್ಕಿ ಹಾಗೂ ತಳಕಳಲೆ ಜಲಾಶಯಗಳಲ್ಲಿ ಮುಳುಗಡೆಯಾಗಿ ಆಸ್ತಿ-ಮನೆ ಕಳೆದುಕೊಂಡು ನಿರಾಶ್ರಿತರಾಗಿ ಬಂದು ನೆಲೆ ಕಂಡುಕೊಂಡವರೇ! ಕೆಲವರಂತೂ ಎರಡು, ಮೂರು ಬಾರಿ ನಿರಂತರವಾಗಿ ಮುಳುಗಡೆ ಸಂತ್ರಸ್ತರಾಗಿ, ನಯಾಪೈಸೆ ಪರಿಹಾರವೂ ಇಲ್ಲದೆ ಬರೀಗೈಲಿ ಊರು ತೊರೆದು, ದುರ್ಗಮ ಕಾಡಿನ ನಡುವೆ ಬದುಕು ಕಟ್ಟಿಕೊಂಡವರು.

ಉರುಳುಗಲ್ಲು ಗ್ರಾಮದ ಅಪಾಯಕಾರಿ ಕಡಿದಾದ ಕಾಲು ದಾರಿ

ಕೇವಲ ಒಂದೆರಡು ಎಕರೆ ಜಮೀನನ್ನೇ ಜೀವನಾಧಾರವಾಗಿ ಹೊಂದಿರುವ ಬಹುತೇಕ ಕುಟುಂಬಗಳಿಗೆ ಕೃಷಿ ಹೊರತುಪಡಿಸಿ ಇತರ ಆದಾಯವೂ ಇಲ್ಲ. ಭಾರೀ ಮಳೆ ಸುರಿಯುವ ಈ ಕಣಿವೆಯಲ್ಲಿ, ಮಳೆಗಾಲದ ನಾಲ್ಕೈದು ತಿಂಗಳು ಇಡೀ ಜನಸಮುದಾಯವೇ ಹೊರಜಗತ್ತಿನ ಸಂಪರ್ಕ ಕಡಿದುಕೊಳ್ಳುತ್ತದೆ. ತೀರಾ ಅನಿವಾರ್ಯ ಪರಿಸ್ಥಿತಿಯಲ್ಲಿ ಮಾತ್ರ ಗ್ರಾಮದ ಗಟ್ಟಿಮುಟ್ಟಾದ ಯುವಕರು ಬೈಕಿನ ಮೇಲೆ ಸಮೀಪದ ಗ್ರಾಮ ಪಂಚಾಯ್ತಿ ಕೇಂದ್ರವಿರುವ ಬಿಳಿಗಾರಿಗೆ ಹೋಗುತ್ತಾರೆ. ಯಾರಾದರೂ ಹುಷಾರುತಪ್ಪಿದರೆ, ಅನಾರೋಗ್ಯಕ್ಕೀಡಾದರೆ ಅವರನ್ನು ಕಂಬಳಿ ಜೋಲಿ ಕಟ್ಟಿ ನಾಲ್ವರು ಹೊತ್ತುಕೊಂಡು ಹನ್ನೆರಡು ಕಿ.ಮೀ ದೂರದ ಕಾಡಿನ ದಾರಿ ಸವೆಸಿ ನಂತರ ದಿನಕ್ಕೆರಡು ಬಾರಿ ಬಂದುಹೋಗುವ ಬಸ್ ಹಿಡಿದು ದೂರದ ನಲವತ್ತೈದು ಕಿ.ಮೀ ದೂರದ ಕಾರ್ಗಲ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಬೇಕು.

ಈ ಯಾವ ಹಳ್ಳಿಗಳಿಗೂ ವಿದ್ಯುತ್ ಸಂಪರ್ಕ ಇಲ್ಲ. ಇಡೀ ನಾಡಿಗೆ ಬೆಳಕು ನೀಡಿದ ವಿದ್ಯುತ್ ಯೋಜನೆಗಳಿಗಾಗಿ ಮತ್ತೆ-ಮತ್ತೆ ಸಂತ್ರಸ್ತರಾಗಿ ಬದುಕು ಕಳೆದುಕೊಂಡ ಈ ಜನರ ಬದುಕು ಅರವತ್ತು ವರ್ಷಗಳ ಬಳಿಕವೂ ಕತ್ತಲಲ್ಲೇ ಮುಳುಗಿದೆ. ವಿದ್ಯುತ್ ಮಾರ್ಗ ನಿರ್ಮಾಣಕ್ಕೆ ಶರಾವತಿ ಅಭಯಾರಣ್ಯದ ಕಾನೂನು ಅಡ್ಡಿಯಾಗಿವೆ. ಅಭಯಾರಣ್ಯದ ನಡುವಿನ ಈ ಹಳ್ಳಿಗಳಿಗೆ ವಿದ್ಯುತ್ ಮತ್ತು ರಸ್ತೆ ಸಂಪರ್ಕಕ್ಕೆ ದಶಕಗಳಿಂದ ಇಲ್ಲಿನ ಜನ ಶತಪ್ರಯತ್ನ ನಡೆಸುತ್ತಿದ್ದರೂ, ಸಂಸದರು, ಶಾಸಕರು, ಜಿಲ್ಲಾಧಿಕಾರಿಗಳು, ಉನ್ನತ ಅರಣ್ಯಾಧಿಕಾರಿಗಳು ಸೇರಿದಂತೆ ಹತ್ತಾರು ಅಧಿಕಾರಸ್ಥರು, ಜನಪ್ರತಿನಿಧಿಗಳನ್ನು ಬೇಡಿಕೊಂಡರೂ, ಲೋಕಸಭೆ, ವಿಧಾನಸಭೆ ಚುನಾವಣೆಗಳನ್ನು ಬಹಿಷ್ಕರಿಸಿ ತಮ್ಮ ಬೇಡಿಕೆ ಮುಂದಿಟ್ಟಿದ್ದರೂ, ಪಾದಯಾತ್ರೆ, ಧರಣಿ ನಡೆಸಿದ್ದರೂ ಕತ್ತಲ ಊರಿಗೆ ಬೆಳಕು ಮಾತ್ರ ಮರೀಚಿಕೆಯಾಗಿದೆ.

ದಸರಾದ ಈ ಹೊತ್ತಲ್ಲಿ ಮೈಸೂರಿನ ಅರಮನೆಯಿಂದ ಹಿಡಿದು ಇಡೀ ನಾಡು ಝಗಮಗಿಸುತ್ತಿರುವಾಗ, ಈ ಕುಗ್ರಾಮಗಳಿಗೆ ಭೇಟಿ ನೀಡಿದ್ದ ʼದ ಫೆಡರಲ್‌ ಕರ್ನಾಟಕʼದೊಂದಿಗೆ ಅಲ್ಲಿನ ಜನರು ತಮ್ಮ ಬದುಕು ದಿನದಿಂದ ದಿನಕ್ಕೆ ಇನ್ನಷ್ಟು ಕತ್ತಲ ಕೂಪಕ್ಕೆ ಕುಸಿಯುತ್ತಿರುವ ಆತಂಕ ವ್ಯಕ್ತಪಡಿಸಿದರು.

ಜನರ ಪಾದಯಾತ್ರೆ, ನಿರಂತರ ಹೋರಾಟ

“ಉರುಳುಗಲ್ಲು ಗ್ರಾಮ ವ್ಯಾಪ್ತಿಯ ಕುಗ್ರಾಮಗಳ ಜನ ತಮಗೆ ರಸ್ತೆ, ವಿದ್ಯುತ್, ಶಾಲೆಯಂತಹ ಮೂಲ ಸೌಕರ್ಯಗಳನ್ನು ಬೇಡಿ ಅರವತ್ತು ವರ್ಷಗಳಿಂದ ಗೋಳಿಡುತ್ತಿದ್ದರೂ ಕುರುಡಾಗಿರುವ ಆಡಳಿತ ಮತ್ತು ಜನಪ್ರತಿನಿಧಿಗಳು, ಅಲ್ಲಿನ ಜನರ ಕೃಷಿ ಮತ್ತು ಜೀವನಾವಶ್ಯಕ ಅಗತ್ಯಗಳಿಗೆ ಅರಣ್ಯದ ಉತ್ಪನ್ನಗಳನ್ನು ಬಳಸುವಾಗ ಮಾತ್ರ ಅತ್ಯುಗ್ರ ವ್ಯಾಘ್ರಗಳಂತೆ ದಾಳಿ ಮಾಡುತ್ತಾರೆ. ಕಳೆದ ವರ್ಷ ಊರಿನ ಕಾಲುದಾರಿಗೆ ಅಡ್ಡಲಾಗಿದ್ದ ನಾಲ್ಕು ಮರ ಕಡಿದದ್ದಕ್ಕೆ ನಮ್ಮ ಊರಿನ ಹುಡುಗರನ್ನು ಭಯೋತ್ಪಾದಕರಂತೆ ನಡೆಸಿಕೊಂಡಿದ್ದರು. ಬಂಧಿಸಿ, ಕೈಕಾಲಿಗೆ ಸರಪಳಿ ಹಾಕಿ, ಕೋಳ ಹಾಕಿ ರಹಸ್ಯ ಸ್ಥಳದಲ್ಲಿ ಕೂಡಿಹಾಕಿದ್ದರು. ನಾಡಿಗೆ ಬೆಳಕು ನೀಡಲು ತಮ್ಮ ಬದುಕನ್ನೇ ಜಲಸಮಾಧಿ ಮಾಡಿ, ತ್ಯಾಗ ಮಾಡಿದ ನಮಗೆ ಸರ್ಕಾರ ಕೊಡುತ್ತಿರುವ ಉಡುಗೊರೆ ಇದು. ಇಂತಹ ಅನ್ಯಾಯವನ್ನು ಪ್ರತಿಭಟಿಸಿ, ಊರಿಗೆ ನಾಗರಿಕ ಸೌಲಭ್ಯ ನೀಡಲು ಆಗ್ರಹಿಸಿ ಭಾನುಕುಳಿಯಿಂದ ಕಾರ್ಗಲ್ ವರಗೆ ಪಾದಯಾತ್ರೆ ನಡೆಸಿದ್ದೆವು” ಎನ್ನುತ್ತಾರೆ ಕುಗ್ರಾಮಗಳಿಗೆ ನಾಗರಿಕ ಸೌಲಭ್ಯಕ್ಕಾಗಿ ಒತ್ತಾಯಿಸಿ ನೂರಾರು ಜನರೊಂದಿಗೆ ಪಾದಯಾತ್ರೆ ನಡೆಸಿದ್ದ ತುಮರಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ, ಲೇಖಕ ಜಿ ಟಿ ಸತ್ಯನಾರಾಯಣ.

ಎರಡು ವರ್ಷಗಳ ಹಿಂದೆ ಉರುಳುಗಲ್ಲು ನಾಗರಿಕ ಸೌಲಭ್ಯಕ್ಕಾಗಿ ನಡೆದ ಪಾದಯಾತ್ರೆಯಲ್ಲಿ ಕಾಗೋಡು ತಿಮ್ಮಪ್ಪ

ಕಾರ್ಯಯೋಜನೆ ಹಂತದಲ್ಲೇ ನಿಂತ ವಿದ್ಯುತ್

ಇಲ್ಲಿನ ಜನರ ನಿರಂತರ ಪ್ರಯತ್ನ ಮತ್ತು ಮಾಧ್ಯಮಗಳ ವರದಿಗಳ ಪರಿಣಾಮವಾಗಿ ಶಿವಮೊಗ್ಗ ಜಿಲ್ಲಾಡಳಿತ ಮತ್ತು ಮೆಸ್ಕಾಂ, ಕುಗ್ರಾಮಗಳ ವಿದ್ಯುತ್ ಸಂಪರ್ಕ ಯೋಜನೆಗೆ ಪ್ರಸ್ತಾವನೆ ಸಿದ್ಧಪಡಿಸಿದ್ದರೂ, ಅದು ಕಳೆದ ನಾಲ್ಕು ವರ್ಷಗಳಿಂದ ಇನ್ನೂ ಮಂಜೂರಾತಿ ಹಂತದಲ್ಲೇ ಇದೆ.

ಶರಾವತಿ ಕಣಿವೆಯ ಸಿಂಗಳೀಕ ಅಭಯಾರಣ್ಯ ವ್ಯಾಪ್ತಿಯ ಈ ಹಳ್ಳಿಗಳಿಗೆ ವಿದ್ಯುತ್ ಮಾರ್ಗ ಎಳೆಯಲು ವನ್ಯಜೀವಿ ವಿಭಾಗ ಆಕ್ಷೇಪ ವ್ಯಕ್ತಪಡಿಸಿ, ಭೂಗರ್ಭ ಮಾರ್ಗಕ್ಕೆ ಪ್ರಸ್ತಾವನೆ ಸಲ್ಲಿಸಲು ಕೋರಿತ್ತು. ಅದರಂತೆ ಸಮೀಕ್ಷೆ ನಡೆಸಿ ಪ್ರಸ್ತಾವನೆ ಸಲ್ಲಿಸಿದ್ದರೂ, ಆಡಳಿತಾತ್ಮಕ ನಿರಾಸಕ್ತಿಯ ಕಾರಣಕ್ಕೆ ಕಳೆದ ಎರಡು ವರ್ಷಗಳಿಂದ ಪ್ರಸ್ತಾವನೆ ಧೂಳು ತಿನ್ನುತ್ತಲೇ ಇದೆ.

ಈ ನಡುವೆ, ಆರು ವರ್ಷಗಳ ಹಿಂದೆ 2018ರಲ್ಲೇ ದೇಶದ ಪ್ರತಿ ಹಳ್ಳಿಯೂ ವಿದ್ಯುತ್‌ ಸಂಪರ್ಕ ಪಡೆದಿದೆ. ಭಾರತ ಈಗ ಸಂಪೂರ್ಣ ವಿದ್ಯುದೀಕರಣಗೊಂಡ ದೇಶ ಎಂದು ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿದ್ದರು. ರಾಜ್ಯ ಸರ್ಕಾರ ಕೂಡ ತನ್ನ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಉಚಿತ ವಿದ್ಯುತ್‌ ಗೃಹ ಜ್ಯೋತಿ ಯೋಜನೆ ಜಾರಿಗೊಳಿಸಿದೆ. ಆದರೆ, ಈ ಕುಗ್ರಾಮಗಳ ಪಾಲಿಗೆ ಗೃಹ ಜ್ಯೋತಿ ಎಂಬುದೇ ಗಗನ ಕುಸುಮವಾಗಿದೆ!

ಎರಡು ಹೊಳೆ ದಾಟಿ ಶಾಲೆಗೆ ಹೋಗಬೇಕು!

ಇನ್ನು ಶಿಕ್ಷಣ ಮತ್ತು ಆರೋಗ್ಯ ಸೇವೆಯಂತೂ ಈ ಜನಗಳಿಗೆ ಗಗನಕುಸುಮ. ಸುಮಾರು 35-40 ಮಕ್ಕಳು ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗೆ ಹೋಗುವ ವಯಸ್ಸಿನವರಿದ್ದರೂ, ಆ ಮಕ್ಕಳಿಗೆ ಕನಿಷ್ಠ 10 ಕಿ.ಮೀ. ಒಳಗೆ ಯಾವ ಶಾಲೆಯೂ ಇಲ್ಲ. ಮೂರೂವರೆ ವರ್ಷದ ಮಗುವೊಂದು ಜಗತ್ತಿನೆಲ್ಲೆಡೆ ಅಂಗನವಾಡಿಯ ಮೂಲಕ ಶಿಕ್ಷಣದ ಬೆಳಕಿಗೆ ಮುಖ ಮಾಡಿದರೆ, ಇಲ್ಲಿನ ಮಕ್ಕಳು ಅಂತಹ ಕನಿಷ್ಟ ಹಕ್ಕಿನಿಂದಲೂ ವಂಚಿತರು! ಒಂದನೇ ತರಗತಿಗೆ ಇಲ್ಲಿನ ಮಕ್ಕಳು 10 ಕಿ.ಮೀ ದೂರ, ಕಲ್ಲುಮುಳ್ಳಿನ ಕಾಡುದಾರಿಯಲ್ಲಿ ನಡೆದುಹೋಗಬೇಕು. ಎರಡು ಹೊಳೆಗಳನ್ನು ಕಾಲುಸಂಕದ ಮೇಲೆ ದಾಟಬೇಕು. ಇನ್ನು ಐದನೇ ತರಗತಿಗೆ ಹೋಗಲು 22 ಕಿ.ಮೀ ದೂರದ ಬಿಳಿಗಾರಿಗೇ ಹೋಗಬೇಕು. ಅದೂ ಎದೆನಡುಗಿಸುವ ದಟ್ಟ ಅರಣ್ಯದ ನಡುವಿನ ದುರ್ಗಮ ದಾರಿಯಲ್ಲಿ!

ಶಿಕ್ಷಣದ ಈ ಭೀಕರ ಸವಾಲಿನ ಕಾರಣಕ್ಕಾಗಿಯೇ ಇಲ್ಲಿನ ಬಹುತೇಕ ಮಕ್ಕಳು ಶಿಕ್ಷಣವಂಚಿತರಾಗಿದ್ದಾರೆ. ಹಾಗೂ ಪಟ್ಟಣಗಳಲ್ಲಿ ಸಂಪರ್ಕವಿದ್ದವರು ಸಂಬಂಧಿಕರು, ಇಲ್ಲವೇ ಹಾಸ್ಟೆಲ್‌ಗಳಲ್ಲಿ ಮಕ್ಕಳನ್ನು ಬಿಟ್ಟಿದ್ದಾರೆ. ಅಂತಹ ಅದೃಷ್ಟವಂತರ ಸಂಖ್ಯೆ ಕೂಡ ತೀರಾ ವಿರಳ. ಚೀಕನಹಳ್ಳಿಯ ಆನಂದ ಎಂಬ ಪದವಿ ವಿದ್ಯಾರ್ಥಿಯ ಮಾತುಗಳಲ್ಲೇ ಹೇಳುವುದಾದರೆ, “ಕುಗ್ರಾಮದಲ್ಲಿ ಹುಟ್ಟಿದ ತಪ್ಪಿಗೆ ನಾವು ಶಿಕ್ಷಣದಿಂದಲೂ ವಂಚಿತರಾಗುತ್ತಿದ್ದೇವೆ. ನಾನು ಒಂದನೇ ತರಗತಿಯಿಂದಲೇ ಬಿಳಿಗಾರಿನ ನೆಂಟರ ಮನೆಯಲ್ಲಿದ್ದುಕೊಂಡು ಓದಿದವನು. ಈಗಲೂ ಸಾಗರದಲ್ಲಿ ಹಾಸ್ಟೆಲಿನಲ್ಲಿದ್ದು ಓದುತ್ತಿದ್ದೇನೆ. ಐದು ವರ್ಷದ ಮಗುವೊಂದು ತಂದೆತಾಯಿಯರಿಂದ ದೂರಾಗಿ ಯಾರದೋ ಮನೆಯಲ್ಲಿದ್ದು ಓದುವುದು ಎಂತಹ ಕಷ್ಟ ಎಂಬುದು ನನಗಷ್ಟೇ ಗೊತ್ತು”.

ಉರುಳುಗಲ್ಲು ಗ್ರಾಮದ ಸಂಪರ್ಕ ರಸ್ತೆಯ ದುರವಸ್ಥೆ.

ತುರ್ತು ಚಿಕಿತ್ಸೆಗೆ 80 ಕಿ.ಮೀ ಹೋಗಬೇಕು

ಇನ್ನು ಯಾರಿಗಾದರೂ ದಿಢೀರ್ ಅನಾರೋಗ್ಯವಾದರೆ, ಮಳೆಗಾಲದಲ್ಲಂತೂ ಅವರನ್ನು ಕಂಬಳಿಜೋಲಿ ಕಟ್ಟಿಕೊಂಡೇ ಹೊತ್ತು ಕಾನೂರು ರಸ್ತೆಯವರೆಗೆ ಸಾಗಿಸಬೇಕು. ಅಲ್ಲಿಂದ ಮುಂದೆ ಖಾಸಗಿ ವಾಹನ ಮಾಡಿಕೊಂಡು 50 ಕಿಮೀ ದೂರದ ಕಾರ್ಗಲ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೋಗಬೇಕು. ತುರ್ತು ಸಂದರ್ಭದಲ್ಲಿ 80 ಕಿ.ಮೀ ದೂರದ ಸಾಗರಪಟ್ಟಣಕ್ಕೇ ಹೋಗಬೇಕು!

“ನಮ್ಮ ತಂದೆಯರ ಕಾಲದಲ್ಲೇ ಲಿಂಗನಮಕ್ಕಿ ಜಲಾಶಯ ಯೋಜನೆಯ ಸಂತ್ರಸ್ತರಾಗಿ ನಾವು ಇಲ್ಲಿಗೆ ಬಂದಿದ್ದೇವೆ. ಈ ಊರಿನಲ್ಲಿ ಯಾವ ಸೌಲಭ್ಯಗಳೂ ಇಲ್ಲದೆ, ನಾವು ಒಂದು ರೀತಿಯಲ್ಲಿ ಬಯಲಬಂಧಿಖಾನೆಯಲ್ಲಿ ಜೀವನ ಕಳೆಯುತ್ತಿದ್ದೇವೆ. ನಮಗೆ ರಸ್ತೆ, ವಿದ್ಯುತ್, ಶಾಲೆ ಸೇರಿದಂತೆ ಎಲ್ಲಾ ಸೌಲಭ್ಯಕ್ಕೂ ಅಡ್ಡಗಾಲಾಗಿರುವುದೇ ಅಭಯಾರಣ್ಯ ಯೋಜನೆ. ಆದರೆ, ಈ ಅಭಯಾರಣ್ಯ ಘೋಷಣೆಯಾಗುವುದಕ್ಕೆ ಮುಂಚೆ 25-30 ವರ್ಷ ಹಿಂದೆಯೇ ನಾವಿಲ್ಲಿ ಸ್ವಂತ ಜಮೀನು-ಮನೆ ಮಾಡಿಕೊಂಡು ನೆಲೆಸಿದ್ದೆವು. ಹಾಗಿರುವಾಗ, ನಮ್ಮ ನಾಗರಿಕ ಹಕ್ಕುಗಳನ್ನು ತುಳಿದು ಇವರು ಪ್ರಾಣಿ-ಪಕ್ಷಿಗಳ ಹಕ್ಕನ್ನು ಸ್ಥಾಪಿಸುವುದು ಸರಿಯೇ? ನಾಡಿಗೆ ಬೆಳಕು ನೀಡಲು ಬದುಕನ್ನೇ ತ್ಯಾಗ ಮಾಡಿದ ನಮ್ಮನ್ನು ಸರ್ಕಾರ ಹೀಗೆ ಪಂಜರದೊಳಗಿನ ಪ್ರಾಣಿಗಳಂತೆ ನಡೆಸಿಕೊಳ್ಳುತ್ತಿರುವುದು ಯಾವ ನ್ಯಾಯ” ಎಂದು ತಮ್ಮ ಸಂಕಷ್ಟಗಳಿಗೆ ಸರ್ಕಾರದ ಅರಣ್ಯ ನೀತಿಗಳೇ ಕಾರಣ ಎಂದು ದೂರುತ್ತಾರೆ‌ ಹೆಬ್ಬಯ್ಯನಕೆರೆಯ ಉದಯಕುಮಾರ್.

ಅರಣ್ಯ ಹಕ್ಕು ಕಾಯ್ದೆಗೂ ಅಧಿಕಾರಿಗಳ ಅಡ್ಡಗಾಲು!

1950ರ ದಶಕದ ಅಂತ್ಯದ ಸುಮಾರಿಗೆ ಲಿಂಗನಮಕ್ಕಿ ಜಲಾಶಯ ಪೂರ್ಣಗೊಳ್ಳುವ ಹೊತ್ತಿಗೆ ಈ ಉರುಳುಗಲ್ಲು ಗ್ರಾಮ ವ್ಯಾಪ್ತಿಯ ಹಳ್ಳಿಗಳ ನಿವಾಸಿಗಳು ಇಲ್ಲಿಗೆ ವಲಸೆ ಬಂದಿದ್ದಾರೆ. ಆದರೆ, ಶರಾವತಿ ಅಭಯಾರಣ್ಯ ಯೋಜನೆ ಘೋಷಣೆಯಾಗಿದ್ದು, 1974ರಲ್ಲಿ. ಅಭಯಾರಣ್ಯ ಘೋಷಣೆಗೂ ಮುನ್ನವೇ ದಶಕಗಳ ಕಾಲ ಅಲ್ಲಿ ವಾಸವಿದ್ದ ಜನಗಳ ಮೂಲ ಸೌಕರ್ಯದ ಹಕ್ಕನ್ನು ಅರಣ್ಯ ಕಾಯ್ದೆಗಳು ಕಿತ್ತುಕೊಳ್ಳುವುದು ಸರಿಯೇ ಎಂಬ ಅವರ ಪ್ರಶ್ನೆಯಲ್ಲಿ ನ್ಯಾಯವಿಲ್ಲದಿಲ್ಲ. ಜೊತೆಗೆ ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಮತ್ತು ಅಭಯಾರಣ್ಯ ಕಾನೂನಿನಲ್ಲಿ ಹಾಲಿ ಇರುವ ರಸ್ತೆ ಮತ್ತಿತರ ನಾಗರಿಕ ಸೌಲಭ್ಯಗಳ ನಿರ್ವಹಣೆ ಮತ್ತು ದುರಸ್ತಿಗೆ ಅವಕಾಶವಿದ್ದರೂ, ಆ ಕಾರ್ಯಕ್ಕೂ ಕಾಯ್ದೆಯ ನೆಪದಲ್ಲಿ ಅಡ್ಡಿಪಡಿಸಲಾಗುತ್ತಿದೆ ಎಂಬುದು ಹಳ್ಳಿಗರ ಅಳಲು.

ಗ್ರಾಮದ ಮತ್ತೊಂದು ಸಮಸ್ಯೆಯ ಬಗ್ಗೆ ಹೇಳುವ, ಎಚ್‌ ಕೆ ರಾಮಚಂದ್ರ, “ನಾವು ಇಲ್ಲಿ ಅಕ್ಷರಶಃ ಕಾಡುಮನುಷ್ಯರಂತೆ ಜೀವನ ನಡೆಸುತ್ತಿದ್ದೇವೆ. ಒಂದು ಪಡಿತರ ಧಾನ್ಯಕ್ಕಾಗಲೀ, ಅಕ್ಕಿಬೇಳೆಗಾಗಲೀ ನಾವು 22 ಕಿ.ಮೀ ದೂರ ಹೋಗಬೇಕು. ಅದೂ ನಮ್ಮೂರಿನ ಜನ ಮಳೆಗಾಳಿ, ಚಳಿಯ ನಡುವೆ ಗೊಂಡಾರಣ್ಯದಲ್ಲಿ ನಡೆದುಕೊಂಡು ಜೀವ ಕೈಯಲ್ಲಿ ಹಿಡಿದುಕೊಂಡು ಹೋಗಬೇಕು. ಹುಲಿ, ಚಿರತೆ, ಕಾಡುಕೋಣಗಳ ದಾಳಿಯ ಭೀತಿಯಂತೂ ನಮಗೆ ವರ್ಷದ ಮುನ್ನೂರೈವತ್ತು ದಿನವೂ ತಪ್ಪದು. ರಸ್ತೆ, ವಿದ್ಯುತ್ ಸೌಕರ್ಯ ಕೂಡ ಇಲ್ಲದೆ, ನಾನು ಶಿಲಾಯುಗದ ಜನರಂತೆ ಇದ್ದೇವೆ. ಜನರ ಒತ್ತಾಯಕ್ಕೆ ಮಣಿದು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಮಗೆ ಕನಿಷ್ಟ ಸೌಕರ್ಯ ಕಲ್ಪಿಸಲು ಮನಸು ಮಾಡಿದರೂ ಕಾಯ್ದೆ-ಕಾನೂನು ತೊಡಕಾಗಿವೆ. ಹಾಗಾಗಿ ನಮ್ಮ ಗೋಳಿಗೆ ಕೊನೆಯೇ ಇಲ್ಲದಂತಾಗಿದೆ” ಎನ್ನುತ್ತಾರೆ.

ಸೋಲಾರ್‌ ಬೆಳಕನ್ನೇ ನಂಬಿರುವ ಉರುಳುಗಲ್ಲು ಗ್ರಾಮದ ಹೆಬ್ಬಯ್ಯನಕೆರೆಯ ಮನೆಯೊಂದರ ನೋಟ | ಫೋಟೋ: ಶಶಿ ಸಂಪಳ್ಳಿ

ಸಿದ್ರಾಮಯ್ಯನೋರೇ ನಮ್ಮ ಕಷ್ಟಾನೂ ಕೇಳಿ..

“ಮಕ್ಕಳು ಮರಿಗೆ ಮೈಗೆ ಹುಷಾರಿಲ್ಲದಿದ್ದರೆ, ಎದ್ದುಬಿದ್ದು ಏನಾದ್ರೂ ಅನಾಹುತವಾದರೆ ತಕ್ಷಣಕ್ಕೆ ಆಸ್ಪತ್ರೆಯೋ, ಡಾಕ್ಟರ ಹತ್ರಾನೋ ಕರ್ಕೊಂಡು ಹೋಗಬೇಕು ಅಂದರೂ ಆಗೋದಿಲ್ಲ. ಇಲ್ಲಿಂದ ಕಾನೂರು ತನಕ ಅವರನ್ನು ಜೋಲಿ ಕಟ್ಟಿ ಹೊತ್ತುಕೊಂಡೇ ಹೋಗಬೇಕು. ಮಳೆಗಾಲದಲ್ಲಂತೂ ಜೀಪಿನವರೂ ಯಾರೂ ಬರೋದಿಲ್ಲ. 65-70 ವರ್ಷದ ಹಿಂದೆ ಡ್ಯಾಂ ಕಟ್ಟಿ ನಮ್ಮನ್ನು ಮುಳುಗಿಸಿದರು. ಈಗ ದಿನವೂ ನಮ್ಮನ್ನು ಮುಳುಗಿಸ್ತಾನೇ ಇದಾರೆ. ಸಿದ್ದರಾಮಯ್ಯ ಬಸ್ಸು, ಕಾಸು ಕೊಟ್ಟರೂ ನಮ್ಮಂತವರಿಗೆ ಪಾಲಿಗೆ ಅವೆಲ್ಲಾ ಕನಸು ಅಷ್ಟೇ.. ಬ್ಯಾಂಕಿಗೆ ಗೃಹಲಕ್ಷ್ಮಿ ಬಂದರೂ ಅವಳನ್ನು ಮನೆಗೆ ತರೋಕೆ ಹೋಗೋಕು ಆಗೋದಿಲ್ಲ ಹಂಗಾಗಿದೆ ನಮ್ಮ ಸ್ಥಿತಿ.. ಸಿದ್ದರಾಮಯ್ಯನೋರೇ ನಮ್ಮ ಕಷ್ಟಾನೂ ಚೂರು ಕೇಳಿ ಮಾರಾಯ್ರೇ.. ” ಎಂಬ ಚೀಕನಹಳ್ಳಿಯ ಬೀರಮ್ಮನ ಮಾತುಗಳ ಜೊತೆಗೇ ನೊಂದ ಅವರ ಕಣ್ಣೀರೂ ಕೆನ್ನೆಯ ಮೇಲೆ ಬಸಿಯುತ್ತದೆ. ಪಟ್ಟ ಪಾಡಿನ ನೋವು ಮತ್ತು ಜಿಡ್ಡುಗಟ್ಟಿದ ವ್ಯವಸ್ಥೆಯ ವಿರುದ್ಧದ ಹತಾಶೆ ಆ ಕಣ್ಣೀರನ್ನು ಬಿಸಿಯೇರಿಸದೇ ಇರಲಿಲ್ಲ!

ಆದರೆ, ಅದೇ ಶರಾವತಿ ಅಭಯಾರಣ್ಯದ ಹೃದಯಭಾಗದಲ್ಲಿ ಶರಾವತಿ ಭೂಗತ ಜಲವಿದ್ಯುತ್ ಯೋಜನೆಗಾಗಿ ಬರೋಬ್ಬರಿ 800 ಎಕರೆಯಷ್ಟು ವಿಸ್ತಾರದ ದಟ್ಟ ಕಾಡಿನ ಕಣಿವೆಯನ್ನೇ ಬಲಿ ಕೊಡಲು ಸಿದ್ಧವಿರುವ ಆಡಳಿತಕ್ಕೆ ಇಂತಹ ನೋವುಂಡ ಜನರ ಅಳಲನ್ನು ಕೇಳುವ ಕಿವಿ ಮತ್ತು ಹೃದಯ ಇವೆಯೇ ಎಂಬುದು ಕಾಡುವ ಪ್ರಶ್ನೆ!

ಹಾಗಾಗಿ, ಕಲ್ಲು-ಮುಳ್ಳು, ಬೇರು-ಗೊಟರುಗಳ ಜಾರು ದಾರಿಯ ಪಯಣದಲ್ಲಿ ಪಾದದ ಗೆರೆ ಸವೆದಂತೆಯೇ, ಉರುಳುಗಲ್ಲಿನ ಜನರ ಬದುಕು ಕೂಡ ಕಾಡಿನ ನಡುವೆ ಕರಗುತ್ತಿದೆ!

Read More
Next Story