![ʻಅವರಿವರ ಕಾಲು ಹಿಡಿದು ಅಧ್ಯಕ್ಷನಾದವನಿಗೆ ರಾಜಕೀಯ ಏನು ಗೊತ್ತಿರುತ್ತದೆʼ: ವಿಜಯೇಂದ್ರ ವಿರುದ್ಧ ಈಶ್ವರಪ್ಪ ವಾಗ್ದಾಳಿ ʻಅವರಿವರ ಕಾಲು ಹಿಡಿದು ಅಧ್ಯಕ್ಷನಾದವನಿಗೆ ರಾಜಕೀಯ ಏನು ಗೊತ್ತಿರುತ್ತದೆʼ: ವಿಜಯೇಂದ್ರ ವಿರುದ್ಧ ಈಶ್ವರಪ್ಪ ವಾಗ್ದಾಳಿ](https://karnataka.thefederal.com/h-upload/2024/04/18/441347-kseshwarappa-1713081975-1.webp)
ʻಅವರಿವರ ಕಾಲು ಹಿಡಿದು ಅಧ್ಯಕ್ಷನಾದವನಿಗೆ ರಾಜಕೀಯ ಏನು ಗೊತ್ತಿರುತ್ತದೆʼ: ವಿಜಯೇಂದ್ರ ವಿರುದ್ಧ ಈಶ್ವರಪ್ಪ ವಾಗ್ದಾಳಿ
ಆರು ತಿಂಗಳು ದೆಹಲಿಯಲ್ಲಿ ಕೂತು ಅವರಿವರ ಕಾಲು ಹಿಡಿದು ಅಧ್ಯಕ್ಷನಾದವನಿಗೆ ರಾಜಕೀಯ ಏನು ಗೊತ್ತಿರುತ್ತದೆ
ಉಡುಪಿ: ʻʻನಾಲ್ಕು ದಶಕಗಳ ಕಾಲ ಅವರಪ್ಪನೊಂದಿಗೆ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ, ಅವನು ಹೋಗಿ ತನ್ನಪ್ಪ ಮತ್ತು ತನ್ನಣ್ಣನಿಗೆ ನನ್ನ ಬಗ್ಗೆ ಕೇಳಲಿ, ಒಂದು ವೇಳೆ ಯಡಿಯೂರಪ್ಪ ಸಹ ನನ್ನ ಕೊಡುಗೆ ನಗಣ್ಯ ಎಂದು ಹೇಳಿದರೆ ಆಗ ಅಪ್ಪ-ಮಗ ಇಬ್ಬರಿಗೂ ಉತ್ತರ ಕೊಡುತ್ತೇನೆʼʼ ಎಂದು ಮಾಜಿ ಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ತಿಳಿಸಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಟಿಯೊಂದನ್ನು ನಡೆಸಿ ಮಾತಾಡಿದ ಕೆಎಸ್ ಈಶ್ವರಪ್ಪ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರನ್ನು ಎಳಸು, ರಾಜಕೀಯ ಜ್ಞಾನ ಇರದವನು ಎಂದು ಜರಿದರು. ಪಕ್ಷಕ್ಕೆ ಈಶ್ವರಪ್ಪ ಕೊಡುಗೆ ಏನೂ ಇಲ್ಲ ಎಂದು ವಿಜಯೇಂದ್ರ ಹೇಳಿದ್ದಾರೆ ಎಂದಿದ್ದಕ್ಕೆ ಉರಿದು ಬಿದ್ದ ಈಶ್ವರಪ್ಪ, 4 ದಶಕಗಳ ಕಾಲ ಅವರಪ್ಪನೊಂದಿಗೆ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ, ಅವನು ಹೋಗಿ ತನ್ನಪ್ಪ ಮತ್ತು ತನ್ನಣ್ಣನಿಗೆ ನನ್ನ ಬಗ್ಗೆ ಕೇಳಲಿ, ಒಂದು ವೇಳೆ ಯಡಿಯೂರಪ್ಪ ಸಹ ನನ್ನ ಕೊಡುಗೆ ನಗಣ್ಯ ಎಂದು ಹೇಳಿದರೆ ಆಗ ಅಪ್ಪ-ಮಗ ಇಬ್ಬರಿಗೂ ಉತ್ತರ ಕೊಡುತ್ತೇನೆ ಎಂದರು.
6 ತಿಂಗಳು ದೆಹಲಿಯಲ್ಲಿ ಕೂತು ಅವರಿವರ ಕಾಲು ಹಿಡಿದು ಅಧ್ಯಕ್ಷನಾದವನಿಗೆ ರಾಜಕೀಯ ಏನು ಗೊತ್ತಿರುತ್ತದೆ ಎಂದು ಹೇಳಿದರು. ಶಿವಮೊಗ್ಗ ಕ್ಷೇತ್ರದಲ್ಲಿ ತಮ್ಮ ಗೆಲುವು ನಿಶ್ಚಿತ ಎಂದ ಈಶ್ವರಪ್ಪ ತನ್ನ ಹಿಂದೂತ್ವ ವಾದವನ್ನು ಕಾಂಗ್ರೆಸ್ ಮುಖಂಡರು ಸಹ ಒಪ್ಪಿ ಬೆಂಬಲ ಸೂಚಿಸುತ್ತಿದ್ದಾರೆ. ಕಾಂಗ್ರೆಸ್ ಒಬ್ಬ ದುರ್ಬಲ ಅಭ್ಯರ್ಥಿಯನ್ನು ಸ್ಪರ್ಧೆಗಿಳಿಸಿದೆ ಮತ್ತು ರಾಘವೇಂದ್ರನನ್ನು ನಾವು ಗೆಲ್ಲಲು ಬಿಡಲ್ಲ, ಹಾಗಾಗಿ ನಮ್ಮ ಬೆಂಬಲ ನಿಮಗೆ ಅಂತ ಅವರು ಹೇಳುತ್ತಿದ್ದಾರೆ ಎಂದು ಈಶ್ವರಪ್ಪ ಹೇಳಿದರು.