ನಮ್ಮ ಮನೆಗೆ ಬಂದು ಸೊಪ್ಪು ಸಾರು ತಿಂದು ಒಂದು ವಾರ ಉಳಿದುಕೊಂಡಿದ್ದರು;  ಭೈರಪ್ಪ ಅವರಿಗೆ ಬಾನು ಮುಷ್ತಾಕ್ ನುಡಿ ನಮನ
x

ನಮ್ಮ ಮನೆಗೆ ಬಂದು ಸೊಪ್ಪು ಸಾರು ತಿಂದು ಒಂದು ವಾರ ಉಳಿದುಕೊಂಡಿದ್ದರು; ಭೈರಪ್ಪ ಅವರಿಗೆ ಬಾನು ಮುಷ್ತಾಕ್ ನುಡಿ ನಮನ

ಬಾನು ಮುಷ್ತಾಕ್ ಅವರು ಫೇಸ್​ಬುಕ್​ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ತಮ್ಮ ಮನೆಯಲ್ಲಿ ಉಳಿದುಕೊಂಡಾಗ ಅವರು ಯಾವ ರೀತಿ ಇದ್ದರು ಎಂಬದನ್ನು ವಿವರಿಸಿದ್ದಾರೆ.


ಕನ್ನಡ ಸಾಹಿತ್ಯ ಲೋಕದ ದಂತಕಥೆ, ಬುಧವಾರ ನಿಧನರಾದ ಖ್ಯಾತ ಕಾದಂಬರಿಕಾರ ಎಸ್. ಎಲ್. ಭೈರಪ್ಪ ಅವರು, ತಮ್ಮ ಪ್ರಸಿದ್ಧ 'ಆವರಣ' ಕಾದಂಬರಿಯ ರಚನೆಗೆ ಮುನ್ನ ಮಾಹಿತಿ ಸಂಗ್ರಹಣೆಗಾಗಿ ಲೇಖಕಿ ಬಾನು ಮುಷ್ತಾಕ್ ಅವರ ಹಾಸನದ ಮನೆಗೆ ಅತಿಥಿಯಾಗಿ ಹೋಗಿದ್ದರು. ಈ ವಿಷಯವನ್ನು ಬೂಕರ್ ಪ್ರಶಸ್ತಿ ವಿಜೇತೆ ಬಾನು ಅವರೇ ಹೇಳಿಕೊಂಡಿದ್ದಾರೆ. ಬಾನು ಅವರು ಈ ವಿಷಯವನ್ನು ಫೇಸ್​ಬುಕ್​ನಲ್ಲಿ ಬರೆದುಕೊಂಡು ಬೈರಪ್ಪ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಅವರು ಫೇಸ್​ಬುಕ್​ನಲ್ಲಿ ಬರೆದ ಬರಹವನ್ನು ಈ ಕೆಳಗೆ ನೀಡಲಾಗಿದೆ.

ಕನ್ನಡ ಸಾಹಿತ್ಯ ಲೋಕದ ದಂತಕಥೆ, ಬುಧವಾರ ನಿಧನರಾದ ಖ್ಯಾತ ಕಾದಂಬರಿಕಾರ ಎಸ್. ಎಲ್. ಭೈರಪ್ಪ ಅವರು, ತಮ್ಮ ಪ್ರಸಿದ್ಧ 'ಆವರಣ' ಕಾದಂಬರಿಯ ರಚನೆಗೆ ಮುನ್ನ ಮಾಹಿತಿ ಸಂಗ್ರಹಣೆಗಾಗಿ ಲೇಖಕಿ ಬಾನು ಮುಷ್ತಾಕ್ ಅವರ ಹಾಸನದ ಮನೆಗೆ ಅತಿಥಿಯಾಗಿ ಬಂದಿದ್ದರು. ಈ ಒಂದು ವಾರದ ಭೇಟಿಯ ಮುಖ್ಯ ಉದ್ದೇಶ, ಮುಸ್ಲಿಂ ಕುಟುಂಬದ ಸಾಂಸ್ಕೃತಿಕ ಹಿನ್ನೆಲೆ, ಆಚಾರ-ವಿಚಾರ ಮತ್ತು ಜೀವನಶೈಲಿಯನ್ನು ಹತ್ತಿರದಿಂದ ಅರಿಯುವುದಾಗಿತ್ತು. ಹಾಸನದಲ್ಲಿ ನಡೆದ ಸಾಹಿತ್ಯಕ ಕಾರ್ಯಕ್ರಮವೊಂದರಲ್ಲಿ ಆಕಸ್ಮಿಕವಾಗಿ ಭೇಟಿಯಾದಾಗ, ಭೈರಪ್ಪನವರೇ ಸ್ವತಃ ಬಾನು ಅವರ ಮನೆಗೆ ಬಂದು ಉಳಿಯುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಈ ಅನಿರೀಕ್ಷಿತ ಕೋರಿಕೆಯು ಬಾನು ಅವರ ಕುಟುಂಬದಲ್ಲಿ ಸಹಜವಾಗಿಯೇ ಅಚ್ಚರಿ ಮತ್ತು ಸಣ್ಣ ಗೊಂದಲವನ್ನು ಸೃಷ್ಟಿಸಿದರೂ, ಅವರು ಅತಿಥಿ ಸತ್ಕಾರಕ್ಕೆ ಸಿದ್ಧರಾದರು.

ಭೈರಪ್ಪನವರ ಆಗಮನಕ್ಕಾಗಿ ಬಾನು ಮುಷ್ತಾಕ್ ಅವರ ಮನೆಯಲ್ಲಿ ವಿಶೇಷ ಸಿದ್ಧತೆಗಳು ನಡೆದವು. ಸಂಪೂರ್ಣ ಸಸ್ಯಾಹಾರಿಯಾಗಿದ್ದ ಭೈರಪ್ಪನವರಿಗಾಗಿ, ಮನೆಯಲ್ಲಿ ಮಾಂಸಾಹಾರವನ್ನು ತಾತ್ಕಾಲಿಕವಾಗಿ ನಿಲ್ಲಿಸಿ, ಶುದ್ಧ ಸಸ್ಯಾಹಾರಿ ಊಟದ ವ್ಯವಸ್ಥೆ ಮಾಡಲಾಯಿತು. ಈ ಒಂದು ವಾರದ ಅವಧಿಯಲ್ಲಿ, ಭೈರಪ್ಪನವರು ಮುಸ್ಲಿಂ ಸಮುದಾಯದ ಆಚರಣೆಗಳನ್ನು ತಿಳಿದುಕೊಳ್ಳಲು ಖಬರಸ್ತಾನ್ ಮತ್ತು ಮಸೀದಿಗಳಿಗೆ ಭೇಟಿ ನೀಡಿದರು, ಅಲ್ಲದೆ ಮುಸ್ಲಿಂ ವಿದ್ಯಾಸಂಸ್ಥೆಗಳ ಕಾರ್ಯವೈಖರಿಯನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಬಾನು ಅವರ ಕುಟುಂಬ ಸದಸ್ಯರೊಂದಿಗೆ, ವಿಶೇಷವಾಗಿ ಅವರ ಮಗಳು ಸಮೀನಾ ಅವರೊಂದಿಗೆ ಇತಿಹಾಸ ಮತ್ತು ತತ್ವಶಾಸ್ತ್ರದ ಕುರಿತು ಸುದೀರ್ಘ ಚರ್ಚೆಗಳನ್ನು ನಡೆಸಿದರು. ಈ ಭೇಟಿಯ ಅನುಭವಗಳು ಮತ್ತು ಅವರು ಸಂಗ್ರಹಿಸಿದ ಮಾಹಿತಿಗಳು, ಮುಂದೆ ವಿವಾದ ಮತ್ತು ಚರ್ಚೆಗೆ ಗ್ರಾಸವಾದ 'ಆವರಣ' ಕಾದಂಬರಿಯ ರಚನೆಗೆ ದಾರಿ ಮಾಡಿಕೊಟ್ಟವು.

ಆವರಣ' ಬರೆಯುವುದಕ್ಕೆ ಮುಂಚಿತವಾಗಿ ಎಸ್. ಎಲ್. ಭೈರಪ್ಪನವರು ಹಾಸನದಲ್ಲಿ ಒಂದು ಸಾಹಿತ್ಯಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಆಗಮಿಸಿದ್ದರು. ನಾನು ಕಾರ್ಯಕ್ರಮಕ್ಕೆ ತಡವಾಗಿ ಹೋದೆ. ಆಗ ಅಲ್ಲಿದ್ದ ಕೆಲವರು, ಭೈರಪ್ಪನವರು ನನ್ನ ಬಗ್ಗೆ ಒಂದೆರಡು ಸಾರಿ ವಿಚಾರಿಸಿದರು ಎಂದು ಸಂದೇಶವನ್ನು ಕೊಟ್ಟರು. ಕಾರ್ಯಕ್ರಮ ಮುಗಿದ ನಂತರ ನಾನು ಅವರನ್ನು ಸಂಪರ್ಕಿಸಿದೆ. ಆಗ ಅವರು ನನ್ನೊಡನೆ, "ನಾನು ನಿಮ್ಮ ಮನೆಗೆ ಬರಬೇಕೆಂದಿದ್ದೇನೆ" ಎಂದು ಹೇಳಿದರು. "ಬನ್ನಿ" ಎಂದು ಕರೆದೆ. "ಈಗಲೇ ಬರುವುದಿಲ್ಲ, ಆದರೆ ನಾನು ಒಂದು ವಾರದ ಮಟ್ಟಿಗೆ ಬಂದು ನಿಮ್ಮ ಮನೆಯಲ್ಲಿಯೇ ಉಳಿಯುತ್ತೇನೆ" ಎಂದರು. ನನಗೆ ಗಲಿಬಿಲಿಯಾದದ್ದಂತೂ ನಿಜ. ನಂತರ ನಾನು ಆ ವಿಷಯವನ್ನು ಮರೆತೇಬಿಟ್ಟೆ.

ಸುಮಾರು ಒಂದು ತಿಂಗಳ ನಂತರ ನನ್ನ ಲ್ಯಾಂಡ್‌ಲೈನ್‌ಗೆ ಒಂದು ಫೋನ್ ಬಂದಿತ್ತು. ಭೈರಪ್ಪನವರು ಫೋನ್ ಮಾಡಿದ್ದರು ಮತ್ತು ತಾವು ಇಂತಹ ದಿನ ಬರುವುದಾಗಿ ನನಗೆ ಮಾಹಿತಿ ನೀಡಿದರು. ನನಗೆ ಸಿಕ್ಕಾಪಟ್ಟೆ ಗಾಬರಿಯಾಯಿತು. ಅವರಿಗಾಗಿ ನಾನು ಯಾವ ವ್ಯವಸ್ಥೆಯನ್ನು ಮಾಡಬೇಕು ಎಂಬುದೇ ನನಗೆ ತೋಚದಂತಾಯಿತು. ಆಗ ನನ್ನ ಮೂವರು ಹೆಣ್ಣು ಮಕ್ಕಳು ಕೂಡ ಅವಿವಾಹಿತರಾಗಿದ್ದರು ಮತ್ತು ವಿದ್ಯಾಭ್ಯಾಸದಲ್ಲಿ ತೊಡಗಿದ್ದರು. ಮಗ ತಾಹೇರ್ ಹೈಸ್ಕೂಲಿನಲ್ಲಿ ಓದುತ್ತಿದ್ದ. ಹಿರಿಯವಳಾದ ಸಮೀನಾ ಮೈಸೂರು ವಿಶ್ವವಿದ್ಯಾಲಯದಲ್ಲಿ ಚಿನ್ನದ ಪದಕವನ್ನು ಪಡೆದಿದ್ದಳು, ನಂತರ ಏಕಕಾಲದಲ್ಲಿ ಐಎಎಸ್ ಮತ್ತು ಕೆಎಎಸ್ ಪರೀಕ್ಷೆಗೆ ಸಿದ್ಧತೆ ನಡೆಸಿದ್ದಳು. ಇವರೆಲ್ಲರೂ ಮನೆಯಲ್ಲಿಯೇ ಇದ್ದುದರಿಂದ ಮನೆಯೆಲ್ಲಾ ಗಲಗಲ ಎನಿಸುತ್ತಿತ್ತು. ಆದರೆ ನನಗೆ ಆತಂಕವಾಗಿದ್ದು ಅವರಿಗಾಗಿ ನಾನು ಪ್ರಚಾರದ ವ್ಯವಸ್ಥೆಯನ್ನು ಹೇಗೆ ಮಾಡಬೇಕು ಎಂದು. ಹೀಗಾಗಿ ನಾನು ಅವರನ್ನೇ ಕೇಳುವುದು ಉತ್ತಮ ಎಂದು ಭಾವಿಸಿ, ಮತ್ತೆ ನಾನೇ ಅವರಿಗೆ ಫೋನ್ ಮಾಡಿ, ಅವರಿಗಾಗಿ ನಾನು ಏನು ವ್ಯವಸ್ಥೆಯನ್ನು ಮಾಡಬೇಕು ಎಂದು ಕೇಳಿದೆ. ಅದಕ್ಕೆ ಅವರು ಬಹಳ ಸರಳವಾಗಿ, ತಾವು ಮಾಂಸಾಹಾರ ಅಭ್ಯಾಸಕ್ಕೆ ಒಗ್ಗಿಕೊಂಡಿಲ್ಲ ಎಂದು ತಿಳಿಸಿ, ಸಸ್ಯಹಾರಿ ಮನೆ ಊಟವನ್ನು ತಮಗೆ ಮಾಡಬಹುದು ಎಂದು ತಿಳಿಸಿದರು. ನಮ್ಮ ಮನೆಯಲ್ಲಿ ನಮ್ಮ ಜೊತೆಯಲ್ಲಿ ಅಡುಗೆ ಮನೆಯ ಊಟವನ್ನೇ ತಾವು ಕೂಡ ಸೇವಿಸುವುದಾಗಿ ನನಗೆ ಸಮಾಧಾನದಿಂದ ಉತ್ತರಿಸಿದರು.

ಹೀಗಾಗಿ ಅವರು ಬರುವುದಕ್ಕೆ ಒಂದು ವಾರ ಮುಂಚಿತವಾಗಿಯೇ ನಾನು ನನ್ನ ಫ್ರಿಜ್ ಅನ್ನು ಖಾಲಿ ಮಾಡಿದೆ. ಹಾಸನದ ನಳನಳಿಸುವ ತಾಜಾ ತರಕಾರಿಗಳಿಂದ ತುಂಬಿಸಿದೆ ಮತ್ತು ಮೀನು, ಚಿಕನ್ ಮತ್ತು ಮಟನ್ ಅನ್ನು ಫ್ರಿಜ್‌ನಿಂದ ಹೊರತೆಗೆದು ಬಳಸಿದೆ, ಮತ್ತೆ ಅವುಗಳನ್ನು ಖರೀದಿಸಲಿಲ್ಲ. ಎಲ್ಲರಿಗಿಂತ ಹೆಚ್ಚು ತಕರಾರು ತೆಗೆದವನೇ ಮಗ. ಏಕೆಂದರೆ ಮೂರು ಹೊತ್ತು ಕೂಡ ಮಾಂಸಾಹಾರ ತಿನ್ನುತ್ತಿದ್ದ ಅವನಿಗೆ, ಒಂದು 15 ದಿನಗಳ ಕಾಲ ಅವನ ಆಯ್ಕೆಯ ಆಹಾರ ಸಿಗುವುದಿಲ್ಲ ಎಂಬುದು ಇಷ್ಟವಾಗಲಿಲ್ಲ. ಎಲ್ಲಾ ರೀತಿಯ ಕ್ಯಾತೆ ತೆಗೆದ. ಅವು ಯಾವುವೂ ನಿಲ್ಲಲಿಲ್ಲ ಎಂದು ಅವನಿಗೆ ಅರಿವಾದ ನಂತರ, ಅವರ ಸಾಹಿತ್ಯದ ಬಗ್ಗೆ ತಕರಾರು ತೆಗೆದ. ಅಂದರೆ ನನ್ನ ಮತ್ತು ಅವನ ನಡುವೆ ಭೈರಪ್ಪನವರ ಬರವಣಿಗೆಯ ಬಗ್ಗೆ ಸಾಕಷ್ಟು ಚರ್ಚೆ ನಡೆಯಿತು. ಅವನ ಅಕ್ಕಂದಿರು ಕೂಡ ನಡುನಡುವೆ ಮೂಗು ತೂರಿಸಿದರು. ಅವನ ಆಕ್ಷೇಪಣೆಯನ್ನು ಸರ್ವಾನುಮತದಿಂದ ತಳ್ಳಿಹಾಕಿ, ವೋಟಿಂಗ್ ಹಾಕದೆಯೂ ಬಹುಮತದಿಂದ ಕರಾರು ಪಾಸಾಗಿ, ಭೈರಪ್ಪನವರ ಆತಿಥ್ಯವನ್ನು ನಿರ್ವಹಿಸಲು ಎಲ್ಲರೂ ತಯಾರಾದರು. ತಾಹೇರ್ ಒಂದು ವಾರದ ಮಟ್ಟಿಗೆ ತನ್ನ ಅಜ್ಜಿಯ ಮನೆಗೆ, ಅಂದರೆ ನನ್ನ ತಾಯಿಯ ಮನೆಗೆ ಶಿಫ್ಟ್ ಆಗುವುದಾಗಿ ಹೇಳಿ ನನ್ನನ್ನು ಬೆದರಿಸಲು ಪ್ರಯತ್ನಪಟ್ಟ. ಸಮೀನಾ ಅವನ ಬ್ಯಾಗ್ ಪ್ಯಾಕ್ ಮಾಡಿದಳು, ಲುಬ್ನಾ ಅವನ ಪುಸ್ತಕಗಳನ್ನು ರೆಡಿ ಮಾಡಿಕೊಟ್ಟಳು, ಆಯೆಷಾ ಕಿಕಿ ಎಂದು ನಗುತ್ತಾ ಅವನನ್ನು ಕಿಚಾಯಿಸಿದಳು. ಕೊನೆಗೂ ಅವನು ತನ್ನ ಆಕ್ಷೇಪಣೆ ಮತ್ತು ಬೆದರಿಕೆಗಳನ್ನು ಹಿಂಪಡೆದು, ವಿಧೇಯ ಮಗನಂತೆ ಭೈರಪ್ಪನವರ ಆಗಮನವನ್ನು ಎದುರು ನೋಡತೊಡಗಿದ.

ಭೈರಪ್ಪನವರು ನಮ್ಮ ಮನೆಗೆ ಬಂದರು. ಆರಂಭದ ಕೆಲವು ಮುಜುಗರಗಳನ್ನು ಬಿಟ್ಟರೆ, ನನಗೆ ಹೆಚ್ಚಿನ ಸಂಕೋಚಗಳೇನೂ ಆಗಲಿಲ್ಲ. ನನ್ನ ಅಡುಗೆಯ ಸಹಾಯಕ್ಕೆ ಶಬಾನಾ, ಸಸ್ಯಾಹಾರಿ ಅಡುಗೆಯನ್ನೇ ಮಾಡಲು ಸಂತೋಷವಾಗಿ ಒಪ್ಪಿಕೊಂಡಳು. ಭೈರಪ್ಪನವರು ಕೂಡ ತಾವು ಬರೆಯಲಿರುವ ಕಾದಂಬರಿ ಒಂದಕ್ಕೆ ಹಿನ್ನೆಲೆಯಾಗಿ ಮಾಹಿತಿ ಸಂಗ್ರಹಣೆ ಮಾಡುವ ಸಲುವಾಗಿ ನಮ್ಮ ಮನೆಗೆ ಬಂದಿರುವುದಾಗಿ ಹೇಳಿದರು. ಮುಸ್ಲಿಂ ಸಾಂಸ್ಕೃತಿಕ ಹಿನ್ನೆಲೆಯ ಮನೆಯ ವಾತಾವರಣವನ್ನು ತಾವು ಅಭ್ಯಸಿಸಬೇಕಾಗಿದೆ ಎಂತಲೂ ಮತ್ತು ಮುಸ್ಲಿಂ ಕುಟುಂಬದ ನಡವಳಿಕೆಗಳನ್ನು ಕೂಡ ತಾವು ಅವಲೋಕಿಸಬೇಕಾಗಿದೆ ಎಂತಲೂ, ಆ ಕಾರಣಕ್ಕೆ ನಮ್ಮ ಮನೆಗೆ ಬಂದಿರುವುದಾಗಿಯೂ ಅವರು ಹೇಳಿದರು. ನಾನು ನಕ್ಕುಬಿಟ್ಟೆ ಮತ್ತು ಅಂತಹ ವಾತಾವರಣ ನಮ್ಮ ಮನೆಯಲ್ಲಿ ಅವರಿಗೆ ಸಿಗುವುದಿಲ್ಲವೆಂತಲೂ ಮತ್ತು ಅಂತಹ ನೈಜ ವಾತಾವರಣದ ಅಗತ್ಯ ಅವರಿಗೆ ಇದ್ದಲ್ಲಿ, ಅಂತಹ ಮನೆಗಳಲ್ಲಿ ಭೈರಪ್ಪನವರನ್ನು ಸ್ವಾಗತಿಸುವುದಿಲ್ಲವೆಂತಲೂ ನಾನು ಅವರಿಗೆ ಹೇಳಿದೆ. ಹೀಗಾಗಿ ಅವರು ನಮ್ಮ ಮನೆಯಲ್ಲಿ ಉಳಿಯುವುದಾಗಿ ನಿರ್ಧರಿಸಿದರು.

ಶಬಾನಾಳ ಅಡುಗೆ ಅವರಿಗೆ ಇಷ್ಟವಾಯಿತು. ತರಕಾರಿ ಪಲ್ಯ, ಸೊಪ್ಪಿನ ಸಾರು ಕೂಡ ವಿಶೇಷವಾಗಿ ಇಷ್ಟವಾಯಿತು. ಮಾರನೇ ದಿನ ನನಗೆ ಆಲೂರು ಸಾಹಿತ್ಯ ಸಮ್ಮೇಳನದಲ್ಲಿ ಒಂದು ಮುಖ್ಯವಾದ ಕಾರ್ಯಕ್ರಮವಿತ್ತು. ಆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮರಳಿ ಬಂದ ನಾನು, ಬರುವಾಗಲೇ ಜ್ವರವನ್ನು ಹೊತ್ತು ತಂದೆ. ಹೀಗಾಗಿ ನಾನು ಜ್ವರದಿಂದ ನರಳುತ್ತಾ ಮಲಗಿರುವಾಗ, ಸಮೀನಾಳೇ ಭೈರಪ್ಪನವರ ದೇಖುರೇಖುಗಳನ್ನು ನೋಡತೊಡಗಿದಳು.

ಭೈರಪ್ಪನವರಿಗೆ ಮುಚ್ಚೇಮರ ಖಬರಸ್ತಾನವನ್ನು ನೋಡಬೇಕಿತ್ತು ಹಾಗೂ ಮಸೀದಿಯನ್ನೂ ನೋಡಬೇಕಿತ್ತು. ಒಂದು ದಿನ ಬೆಳಗಿನ ಹೊತ್ತು, ಮುಸ್ತಾಕ್ ಭೈರಪ್ಪನವರನ್ನು ಖಬರಸ್ತಾನಿಗೆ ಕರೆದುಕೊಂಡು ಹೋದರು. ಭೈರಪ್ಪನವರು ಹೊರಗಿನಿಂದ ಖಬರಸ್ತಾನನ್ನು ನೋಡಿದರು ಮತ್ತು ಒಳಗಡೆ ಕೂಡ ಗೋರಿಗಳ ನಡುವಿನಿಂದ ಹಾದುಹೋಗಿ, ಮೂಲೆ ಮೂಲೆಯಲ್ಲೂ ಸಂಚರಿಸಿ ಬಂದರು. ಆಮೇಲೆ ಅವರು ಮುಸ್ತಾಕ್‌ರನ್ನು ಕೇಳಿದರು, "ಇಲ್ಲಿ ಗೋರಿಗಳ ತಲೆದಿಕ್ಕಿನಲ್ಲಿ ಗ್ರಾನೈಟ್ ಕಲ್ಲುಗಳನ್ನು ನಿಲ್ಲಿಸಿದ್ದಾರಲ್ಲ, ಅದರ ಮೇಲೆ ಉರ್ದುವಿನಲ್ಲಿ ಏಕೆ ಬರೆದಿದ್ದಾರೆ?" ಮುಸ್ತಾಕ್ ತಬ್ಬಿಬ್ಬಾಗಿ ಹೋದರು. ಅದಕ್ಕೆ ಏನು ಉತ್ತರಿಸಬೇಕು ಎಂಬುದು ಅವರಿಗೆ ಗೊತ್ತಾಗಲಿಲ್ಲ. ಹೀಗಾಗಿ ಅವರು ಮನೆಗೆ ಮರಳಿ ಬಂದ ನಂತರ ನನಗೆ ಭೈರಪ್ಪನವರ ಪ್ರಶ್ನೆಯನ್ನು ಒಪ್ಪಿಸಿದ ಮುಸ್ತಾಕ್, "ಅದಕ್ಕೆ ನೀವೇ ಉತ್ತರ ಹೇಳಿ" ಎಂದು ಜವಾಬ್ದಾರಿಯನ್ನು ನನ್ನ ಮೇಲೆ ಹೊರಿಸಿದರು. ಹಾಗೂ ಭೈರಪ್ಪನವರು ಖಬರಸ್ತಾನದ ಸನ್ನಿವೇಶಗಳನ್ನು ತಮ್ಮ ನೋಟ್‌ಬುಕ್‌ನಲ್ಲಿ ಬರೆದುಕೊಳ್ಳುತ್ತಿದ್ದರು ಎಂದು ತಿಳಿಸಿದರು.

ಆಮೇಲೆ ಭೈರಪ್ಪನವರು ಮಸೀದಿಗೆ ಭೇಟಿ ಕೊಡಬೇಕು ಎಂದು ಕೇಳಿದ ಮೇರೆಗೆ, ಮುಸ್ತಾಕ್ ಮತ್ತೆ ಹಾಸನದ ಹೊಳೆನರಸೀಪುರ ರಸ್ತೆಯಲ್ಲಿರುವ ಮಸೀದಿಯ ಆಡಳಿತ ಮಂಡಳಿಯವರಲ್ಲಿ ವಿಷಯ ತಿಳಿಸಿದ ಮೇರೆಗೆ, ಸದರಿಯವರು ಒಪ್ಪಿದರು. ಮುಸ್ತಾಕ್ ಮತ್ತು ಭೈರಪ್ಪನವರು ಒಂದು ಸಾರಿ ನಮಾಜ್‌ನ ಸಮಯದಲ್ಲಿ ಆ ಮಸೀದಿಗೆ ಹೋದರು. ಅಲ್ಲಿ ಮಹಿಳೆಯರಿಗೆ ನಮಾಜ್ ಮಾಡಲು ಅವಕಾಶವಿತ್ತು. ಅವರಿಗಾಗಿ ಪ್ರತ್ಯೇಕ ಹಾಲ್‌ನಲ್ಲಿ ನಮಾಜ್‌ಗೆ ವ್ಯವಸ್ಥೆ ಮಾಡಿದ್ದರು. ಅದೇ ರೀತಿ ನಾನು ಆಗ ಶುಕ್ರವಾರ ಮಧ್ಯಾಹ್ನ ಮಾತ್ರ ಆ ಮಸೀದಿಯಲ್ಲಿ ನಮಾಜ್ ಸಲುವಾಗಿ ಹೋಗುತ್ತಿದ್ದೆ. ಆದುದರಿಂದ ಮುಸ್ತಾಕ್ ನಮಾಜ್‌ನ ಸಮಯದಲ್ಲಿ ತಮ್ಮ ಜೊತೆಯಲ್ಲಿ ಕರೆದುಕೊಂಡು ಆ ಮಸೀದಿಗೆ ಹೋದರು. ಭೈರಪ್ಪನವರು ಕೈಕಾಲು ತೊಳೆದು ಮಸೀದಿಯೊಳಗೆ ಹೋಗಿ, ಜಮಾತ್‌ನವರು ನಮಾಜ್ ಮಾಡುತ್ತಿದ್ದಾಗ ಮಸೀದಿ ಒಳಗಡೆ ಕುಳಿತಿದ್ದರು ಮತ್ತು ಸಕಲವನ್ನೂ ಕೂಡ ತಮ್ಮ ನೋಟ್‌ಪುಸ್ತಕದಲ್ಲಿ ಬರೆದುಕೊಳ್ಳುತ್ತಿದ್ದರು.

ನಂತರ ಭೈರಪ್ಪನವರು ಮುಸ್ಲಿಮರ ವಿದ್ಯಾಸಂಸ್ಥೆಯನ್ನು ನೋಡಲು ಬಯಸಿದರು. ಹೀಗಾಗಿ ಮುಸ್ತಾಕ್ ಅವರನ್ನು ಆಲೂರಿನ ದಾರುಲ್ ಮನ್ಸೂರ್‌ಗೆ ಕರೆದುಕೊಂಡು ಹೋದರು. ಅಲ್ಲಿ ಇಡೀ ಸಂಸ್ಥೆಯ ಪ್ರಾಂಗಣದಲ್ಲಿ ಸುತ್ತಾಡಿದ ಭೈರಪ್ಪನವರು, ಅಲ್ಲಿನ ವ್ಯವಸ್ಥೆ ಮತ್ತು ವಿದ್ಯಾರ್ಥಿಗಳಿಗಾಗಿ ಮಾಡಿದ್ದ ವ್ಯವಸ್ಥೆ ಹಾಗೂ ಪಠ್ಯಕ್ರಮ ಮೊದಲಾದವುಗಳನ್ನೆಲ್ಲ ಪರಿಶೀಲನೆ ಮಾಡಿ ತಮ್ಮ ನೋಟ್‌ಬುಕ್‌ನಲ್ಲಿ ಬರೆದುಕೊಂಡರು.

ಆಗ ಮೊಬೈಲ್ ಮತ್ತು ಅದರ ಗೀಳು ಯಾರಿಗೂ ಅಂಟಿಕೊಂಡಿರಲಿಲ್ಲ. ರಾತ್ರಿ ಊಟದ ಟೇಬಲ್‌ನಲ್ಲಿ ಮತ್ತು ಊಟವಾದ ನಂತರ ಒಳ್ಳೆಯ ಚರ್ಚೆ ನಡೆಯುತ್ತಿತ್ತು. ಭೈರಪ್ಪನವರು ಮುಸ್ಲಿಮರ ಇತಿಹಾಸ, ರಿವಾಜು, ಆಲೋಚನಾ ಕ್ರಮದ ಬಗ್ಗೆ ಅನೇಕ ಪ್ರಶ್ನೆಗಳನ್ನು ಕೇಳುತ್ತಿದ್ದರು. ನಾನು ಅದಕ್ಕೆ ಸೂಕ್ತವಾಗಿ ಪ್ರತಿಕ್ರಿಯೆ ನೀಡುತ್ತಿದ್ದೆ. ನಂತರ ಅವರು ತತ್ವಶಾಸ್ತ್ರದ ಕ್ಲಾಸಿಕ್ ವಿಚಾರಗಳ ಮೂಲಕ ಚರ್ಚೆ ಮಾಡುತ್ತಿದ್ದರು. ಆಗ ಸಮೀನಾ ತನ್ನ ಸ್ಪರ್ಧಾತ್ಮಕ ಪರೀಕ್ಷೆಗಳ ಸಲುವಾಗಿ ಭಾರತದ ಇತಿಹಾಸವನ್ನು ಆಳವಾಗಿ ಅಭ್ಯಾಸ ಮಾಡುತ್ತಿದ್ದಳು. ಹೀಗಾಗಿ ಅವಳು ಅವರ ಅನೇಕ ಸಂದೇಹಗಳಿಗೆ ಭಾರತದ ಇತಿಹಾಸದ ದೃಷ್ಟಾಂತಗಳ ಮೂಲಕ ವಿವರಣೆ ನೀಡುತ್ತಿದ್ದಳು. ಅವರಿಬ್ಬರ ನಡುವೆ ನಡೆಯುತ್ತಿದ್ದ ಚರ್ಚೆಗಳನ್ನು ಕೇಳುವುದೇ ಒಂದು ಅದ್ಭುತವಾದ ಸಂದರ್ಭವಾಗಿತ್ತು. ಹೀಗೆ ಒಂದು ವಾರದವರೆಗೂ ನಮ್ಮಗಳ ಬಾಂಧವ್ಯ ಮುಂದುವರೆಯಿತು. ಭೈರಪ್ಪನವರ ಕುತೂಹಲದ ಕಣ್ಣುಗಳಿಗೆ ಮುಸ್ಲಿಂ ಹಿನ್ನೆಲೆಯ ಬದುಕು ಅಗೋಚರವಾಗಿಯೇ ಉಳಿಯಿತು. ಮುಸ್ಲಿಂ ಸಮುದಾಯದ ಒಳಹೊರಗನ್ನು ಒಂದು ವಾರದೊಳಗೆ ತಿಳಿಯುವುದು ಅಸಾಧ್ಯದ ಕೆಲಸ. ಆದರೂ ಕೂಡ ಭೈರಪ್ಪನವರ ತೀವ್ರ ಕುತೂಹಲ ಮತ್ತು ವಿಷಯ ಸಂಗ್ರಹಣೆಯ ದಾಹ ಹಾಗೂ ಅಪರಿಚಿತ ಲೋಕಗಳ ಪರಿಚಯವನ್ನು ಗಳಿಸುವ ತೀವ್ರತೆ ವಿಶಿಷ್ಟವಾಗಿತ್ತು. ಆದರೆ ನನಗೆ ಅನಿಸುತ್ತಿತ್ತು, ಅವರು ಹೊರನೋಟದ ತೊಗಟೆಯ ಅರಿವನ್ನು ಮಾತ್ರ ಪಡೆಯುತ್ತಿದ್ದಾರೆ. ಮುಸ್ಲಿಂ ಸಮುದಾಯದ ಪರಿಚಯ ಮತ್ತು ಚಿಂತನೆಗಳನ್ನು ತೆಗೆದುಕೊಂಡರು. ಅನುಭವವನ್ನು ಪಡೆಯಲು ಎಲ್ಲೋ ಸೋಲುತ್ತಿದ್ದಾರೆ ಅಂತ ಅನಿಸುತ್ತಿತ್ತು. ಹಾಗೂ ಈ ಎಲ್ಲ ಮಾಹಿತಿಯನ್ನು ಅವರು ಹೇಗೆ ಬಳಕೆ ಮಾಡಬಹುದು ಮತ್ತು ಅವರ ಗ್ರಹಿಕೆ ಹಾಗೂ ಬರವಣಿಗೆ ಮುಸ್ಲಿಂ ವಿರೋಧಿ ನಿಲುವನ್ನು ವ್ಯಕ್ತಪಡಿಸಿದಾಗ, ನನ್ನ ಬಗ್ಗೆ ಸಮುದಾಯದ ನಿಲುವು ಏನಾಗಬಹುದು ಎಂಬುದರ ಬಗ್ಗೆ ಕೂಡ ನನಗೆ ಆಲೋಚನೆ ಉಂಟಾಗುತ್ತಿತ್ತು. ಆದರೆ ನಾನು ಎಲ್ಲಾ ಆಲೋಚನೆಗಳನ್ನು ಕೂಡ ಬದಿಗೊತ್ತಿ, ಭೈರಪ್ಪನವರ ಜೊತೆಯಲ್ಲಿ ಅತ್ಯಂತ ಸಹಜವಾಗಿ ವರ್ತಿಸಿದೆ ಮತ್ತು ನನ್ನ ಕುಟುಂಬ ಕೂಡ ಇದಕ್ಕೆ ಪೂರಕವಾಗಿ ಸಂಪೂರ್ಣ ಸಹಕಾರವನ್ನು ನೀಡಿತು. ಆರಂಭದಿಂದಲೇ ಕಿರಿಕಿರಿ ವ್ಯಕ್ತಪಡಿಸುತ್ತಿದ್ದ ಮಗ, ಮಧ್ಯ ಮಧ್ಯದಲ್ಲಿ ನನ್ನ ತಾಯಿಯ ಮನೆಗೆ ಹೋಗಿ ಗಡದ್ದಾಗಿ ಬಿರಿಯಾನಿ ಉಂಡು, ಚಿಕನ್ ಕಬಾಬ್ ತಿಂದು, ಆದರೂ ಮುನಿಸಿಕೊಂಡು ನನ್ನಿಂದಲೂ ಭೈರಪ್ಪನವರಿಂದಲೂ ದೂರವಾಗಿಯೇ ಉಳಿದ.

ನಂತರ 'ಆವರಣ' ಪ್ರಕಟವಾಯಿತು. 'ಆವರಣ'ದಲ್ಲಿ ಭೈರಪ್ಪನವರು ರಿಸರ್ಚ್ ಮಾಡಿದಂತೆಯೇ ತಮ್ಮ ಕೆಲವು ಪೂರ್ವನಿರ್ಧರಿತ ಪ್ರಮೇಯಗಳಿಗೆ ಅನುಕೂಲವಾಗುವಂತಹ ಮತ್ತು ತಕ್ಕದಾದ ನಿದರ್ಶನಗಳನ್ನೇ ಕೊಟ್ಟು, ಮುಸ್ಲಿಂ ಸಮುದಾಯದ ರಾಕ್ಷಸೀಕರಣದ ಬಿಂಬಕ್ಕೆ ಪೂರಕವಾದ ಬರವಣಿಗೆಯನ್ನು ಕೊಟ್ಟರು. ಆದರೆ ಅವರು ಸದರಿ ಕಾದಂಬರಿಯ ಪೀಠಿಕೆಯಲ್ಲಿ ಒಬ್ಬ ಸಹೋದರಿಯ ಮನೆಯಲ್ಲಿ ಉಳಿದುದಾಗಿ ತಿಳಿಸಿದರು ಮತ್ತು ಹೆಸರನ್ನು ಬರೆಯಲಿಲ್ಲ. ಹೀಗಾಗಿ ಆ ಸಹೋದರಿ ಯಾರು ಎಂಬುದು ತಿಳಿಯದೆ, ಊಹಾಪೋಹದ ಮಟ್ಟದಲ್ಲಿಯೇ ಉಳಿಯಿತು. ಆದರೆ ಆ ಸಂದರ್ಭದಲ್ಲಿ ನಮ್ಮ ಮನೆಗೆ ಅನೇಕ ಲೇಖಕರು ಬಂದು, ಅವರೊಡನೆ ಫೋಟೋಗಳನ್ನು ತೆಗೆದುಕೊಂಡಿದ್ದರು ಮತ್ತು ಕ್ರಮೇಣ ಎಲ್ಲರಿಗೂ 'ಆವರಣ' ಬರವಣಿಗೆಯ ಮುಂಚಿತವಾಗಿ ಅವರು ನಮ್ಮ ಮನೆಯಲ್ಲಿದ್ದರು ಎಂಬ ವಿಷಯವು ತಿಳಿದು ಬಂತು.

'ಆವರಣ'ದ ಬರವಣಿಗೆಯು ತೀವ್ರ ವಿವಾದಕ್ಕೊಳಗಾಗುತ್ತದೆ ಎಂಬುದು ಅವರ ನಿರೀಕ್ಷೆಯಾಗಿತ್ತು. ನನಗೆ ಅನಿಸುತ್ತೆ, ಅವರು ವಿವಾದವನ್ನು ಬಯಸಿದ್ದರು ಎಂದು. ಆದರೆ ಅದು ವಿವಾದದ ಸ್ವರೂಪವನ್ನು ಪಡೆಯಲಿಲ್ಲ. ಬದಲಿಗೆ, ಗೌರಿ ಲಂಕೇಶ್‌ರವರು 'ಆವರಣ ಒಂದು ವಿಕೃತಿ' ಎಂಬ ಕೃತಿಯನ್ನು ಪ್ರಕಟ ಮಾಡಿದರು. ಅದರಲ್ಲಿ 'ಆವರಣ'ದ ಬಗ್ಗೆ ಅನೇಕ ಲೇಖಕರ ವಿಮರ್ಶೆಗಳು ಇವೆ.

ನನಗೆ ಅನಿಸಿದ್ದು, ಭೈರಪ್ಪನವರು ಊಟ ತಿಂಡಿಯ ಆಹಾರ ಅಭ್ಯಾಸದಲ್ಲಿ ಕಠೋರ ನಿಯಮವನ್ನೇನೂ ಪಾಲಿಸುತ್ತಿರಲಿಲ್ಲ. ನನ್ನ ಬಾಲ್ಯಕಾಲದಿಂದಲೂ ನನಗೆ ಓದಿನ ರುಚಿ ಹತ್ತಿದ್ದು ಭೈರಪ್ಪನವರ ಬರವಣಿಗೆಯ ಮೂಲಕವೇ. ಅವರ ಓದುಗ ಬಳಗದ ಅತ್ಯಂತ ನಿಷ್ಠಾವಂತ ಓದುಗಳಲ್ಲೊಬ್ಬಳಾಗಿದ್ದೆ ನಾನು. ಆದರೆ ಅವರ ಧೋರಣೆ, ಬದ್ಧತೆ ಮತ್ತು ಪೂರ್ವಗ್ರಹಪೀಡಿತ ಆಲೋಚನಾ ಸರಣಿಯ ಪ್ರತಿಪಾದನೆಯ ನಂತರ, ನಾನು ಅವರಿಗೆ ಪ್ರಿಯ ಓದುಗಳಾಗಿ ಉಳಿಯಲಿಲ್ಲ. ಬದಲಿಗೆ, ಒಬ್ಬ ನುರಿತ ಲಾಯರ್‌ನಂತೆ ಕೆಲವು ವಿಷಯಗಳನ್ನು ರೂಪಿಸಿಕೊಂಡು, ಅದನ್ನು ಸಂಶೋಧನೆಯ ಮೂಲಕ ಅಗೆದು ತೆಗೆದ ಮಾಹಿತಿಯನ್ನು ಬಳಸಿ, ಪ್ರಬುದ್ಧವಾಗಿ ನಿರೂಪಿಸುತ್ತಿದ್ದ ವಾದದ ಶೈಲಿಯಂತೆ ಕಂಡುಬರುತ್ತಿದ್ದವು. ಅವರ ಸೃಜನಶೀಲತೆಯನ್ನು ಅಪಹರಿಸಿದವರು ಯಾರು ಎಂದು ನನ್ನನ್ನು ನಾನೇ ಪ್ರಶ್ನಿಸಿಕೊಳ್ಳುತ್ತಿದ್ದೆ. ಸೈದ್ಧಾಂತಿಕವಾಗಿ ನಮ್ಮ ನಡುವೆ ಭಿನ್ನಾಭಿಪ್ರಾಯವಿದ್ದರೂ ಕೂಡ, ಅವರನ್ನು ಕಂಡು, ಮಾತನಾಡಿ, ಚರ್ಚಿಸಿದ ನೆನಪುಗಳು ನನ್ನ ಮನಃಪಟಲದಲ್ಲಿ ಉಳಿದು, ಇಂದು ಅವರು ಸ್ವರ್ಗಸ್ಥರಾದರು ಎಂಬ ವಿಷಯದಿಂದ ಒಂದು ಭಾವತಂತು ತುಂಡಾದಂತೆ ಭಾಸವಾಗುತ್ತಿದೆ. ನನಗೆ ಏನೋ ಖಾಸಗಿ ನಷ್ಟವಾದಂತೆ ಅನಿಸುತ್ತಿದೆ. ಭೈರಪ್ಪನವರಿಗೆ ನನ್ನ ಭಾವಪೂರ್ಣ ನಮನಗಳು.

Read More
Next Story