
ಸಾಂದರ್ಭಿಕ ಚಿತ್ರ
Bangalore |ಪಬ್ಗೆ ಪಿಸ್ತೂಲ್ ಹಿಡಿದು ಬಂದು ಆತಂಕ ಸೃಷ್ಟಿಸಿದ ಅಪರಿಚಿತ ವ್ಯಕ್ತಿ
ಬೆಂಗಳೂರಿನ ರಾಜಾಜಿನಗರ ಪಬ್ವೊಂದಕ್ಕೆ ಅಪರಿಚಿತ ವ್ಯಕ್ತಿ ಪಿಸ್ತೂಲ್ ಹಿಡಿದು ಓಡಾಡಿದ್ದರಿಂದ ತೀವ್ರ ಆತಂಕ ಎದುರಾಗಿತ್ತು. ಪೊಲೀಸರು, ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.
ಅಪರಿಚಿತ ವ್ಯಕ್ತಿಯೊಬ್ಬ ಪಿಸ್ತೂಲ್ ಹಿಡಿದು ಪಬ್ಗೆ ನುಗ್ಗಿರುವ ಘಟನೆ ಬೆಂಗಳೂರಿನ ರಾಜಾಜಿನಗರದಲ್ಲಿ ನಡೆದಿದೆ. ಇಲ್ಲಿನ ಜಾಮಿಟ್ರಿ ಪಬ್ಗೆ ನುಗ್ಗಿದ ವ್ಯಕ್ತಿ ಪಿಸ್ತೂಲ್ ಹಿಡಿದಿದ್ದರಿಂದ ಆತಂಕ ಎದುರಾಗಿದೆ. ಖಚಿತ ಮಾಹಿತಿ ಮೇರೆಗೆ ಧಾವಿಸಿದ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳ ಪರಿಶೀಲನೆ ನಡೆಸಿದೆ.
ಅಪರಿಚಿತ ವ್ಯಕ್ತಿಯು ಪಬ್ನಲ್ಲಿ ಅವಿತುಕೊಂಡಿರುವ ಸಾಧ್ಯತೆ ಇದ್ದು, ಆತನನ್ನು ವಶಕ್ಕೆ ಪಡೆಯಲು ಪೊಲೀಸರು ಮುಂದಾಗಿದ್ದಾರೆ. ಪಬ್ನಲ್ಲಿ ಡ್ರೋನ್ ಹಾರಿಸಿ ಪರಿಶೀಲನೆ ನಡೆಸಿದ್ದಾರೆ. ವ್ಯಕ್ತಿಯು ಕಳ್ಳತನಕ್ಕೆ ಬಂದಿರುವ ಶಂಕೆ ವ್ಯಕ್ತವಾಗಿದೆ.
ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಆರೋಪಿಯು ಪಬ್ನಲ್ಲೇ ಅವಿತುಕೊಂಡಿದ್ದಾನೆ ಎನ್ನಲಾಗಿದೆ.
ಮಾಧ್ಯಮದವರೊಂದಿಗೆ ಮಾತನಾಡಿದ ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್ ಅವರು, ಬೆಳಿಗ್ಗೆ 5 ಗಂಟೆ ಸುಮಾರಿಗೆ ನಮಗೆ ಕರೆ ಬಂದಿತ್ತು. ಪಬ್ ಭದ್ರತಾ ಸಿಬ್ಬಂದಿಯೊಬ್ಬರು ಕರೆ ಮಾಡಿ ಗನ್ ಹಿಡಿದು ವ್ಯಕ್ತಿಯೊಬ್ಬ ಪಬ್ ಒಳಗಡೆ ಇದ್ದಾರೆ ಎಂದು ತಿಳಿಸಿದರು. ಮಧ್ಯರಾತ್ರಿ 3.30ರ ಸುಮಾರಿಗೆ ಆತ ಒಳಗಡೆ ಬಂದಿರುವ ಮಾಹಿತಿ ಇದೆ. ಆತ ಮಾಸ್ಕ್ ಮತ್ತು ಗ್ಲೌಸ್ ಧರಿಸಿ ಒಳಗಡೆ ಪ್ರವೇಶಿಸಿದ್ದಾನೆ. ಅಲ್ಲದೇ ಸಿಸಿಟಿವಿ ಕ್ಯಾಮೆರಾ ಆಫ್ ಮಾಡಿ ಕಳ್ಳತನ ಮಾಡಿದ್ದಾನೆ. ಈ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.