Guarantees make people lazy: Rambhapuri Sri Khyathe
x

ರಂಭಾಪುರಿ ಶ್ರೀ ವೀರ ಸೋಮೇಶ್ವರ ಸ್ವಾಮೀಜಿ 

'ಗ್ಯಾರಂಟಿ ಯೋಜನೆಗಳಿಂದ ಜನರು ಸೋಮಾರಿಗಳಾಗುತ್ತಿದ್ದಾರೆ': ಬಾಳೆಹೊನ್ನೂರು ಶ್ರೀ

ಉಚಿತವಾಗಿ ಎಲ್ಲವೂ ಸಿಗುತ್ತಿರುವುದರಿಂದ ಜನರಲ್ಲಿ ದುಡಿಯುವ ಮನೋಭಾವ ಕಡಿಮೆಯಾಗಿದೆ. ರೈತರು ಹಾಗೂ ಗಡಿ ಕಾಯುವ ಯೋಧರು ದೇಶದ ಎರಡು ಕಣ್ಣುಗಳಿದ್ದಂತೆ ಎಂದು ರಂಭಾಪುರಿ ಶ್ರೀ ವೀರ ಸೋಮೇಶ್ವರ ಸ್ವಾಮೀಜಿ ತಿಳಿಸಿದ್ದಾರೆ.


ರಾಜ್ಯ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳು ಜನರನ್ನು ಸೋಮಾರಿಗಳನ್ನಾಗಿ ಮಾಡುತ್ತಿವೆ ಎಂದು ಬಾಳೆಹೊನ್ನೂರಿನ ಶ್ರೀ ರಂಭಾಪುರಿ ವೀರ ಸೋಮೇಶ್ವರ ಸ್ವಾಮೀಜಿ ಅವರು ಹೇಳಿದ್ದಾರೆ. ಸರ್ಕಾರದ ಈ 'ಬಿಟ್ಟಿ ಭಾಗ್ಯ'ಗಳಿಂದ ಜನರ ಬದುಕು ಉಜ್ವಲಗೊಳ್ಳುವುದಿಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಚಿಪ್ಪಲಕಟ್ಟೆಯಲ್ಲಿ ಸೋಮವಾರ (ಜುಲೈ 7) ನಡೆದ ಕಲ್ಲೇಶ್ವರ ಸ್ವಾಮಿಗಳ ಷಷ್ಠಿಪೂರ್ತಿ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀ ರಂಭಾಪುರಿ ಸ್ವಾಮೀಜಿ, "ಉಚಿತವಾಗಿ ಎಲ್ಲವೂ ಸಿಗುತ್ತಿರುವುದರಿಂದ ಜನರಲ್ಲಿ ದುಡಿಯುವ ಮನೋಭಾವ ಕಡಿಮೆಯಾಗಿದೆ. ಕಷ್ಟಪಟ್ಟು ದುಡಿದರೆ ಭೂಮಿ ತಾಯಿ ನಮ್ಮನ್ನು ಎಂದಿಗೂ ಕೈಬಿಡುವುದಿಲ್ಲ" ಎಂದು ನುಡಿದರು. ಜಮೀನುಗಳಲ್ಲಿ ಶ್ರಮಿಸುವ ರೈತರು ಮತ್ತು ದೇಶದ ಗಡಿ ಕಾಯುವ ಯೋಧರು ರಾಷ್ಟ್ರದ ಎರಡು ಕಣ್ಣುಗಳಿದ್ದಂತೆ ಎಂದು ಸ್ವಾಮೀಜಿ ಇದೇ ಸಂದರ್ಭದಲ್ಲಿ ಒತ್ತಿ ಹೇಳಿದರು.

ಆಡಳಿತ ಪಕ್ಷದ ಶಾಸಕರಿಂದಲೂ ಅಪಸ್ವರ

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಸಿಗುತ್ತಿಲ್ಲ ಎಂದು ಸ್ವತಃ ಆಡಳಿತ ಪಕ್ಷದ ಶಾಸಕರು ಮತ್ತು ಸಚಿವರೇ ಬೇಸರ ವ್ಯಕ್ತಪಡಿಸುತ್ತಿರುವ ಸಮಯದಲ್ಲೇ ಸ್ವಾಮೀಜಿಗಳ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಇತ್ತೀಚೆಗೆ, ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಅವರು 'ಶಕ್ತಿ ಯೋಜನೆ'ಯಿಂದ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರೇ ತುಂಬಿರುತ್ತವೆ, ಪುರುಷರಿಗೆ ಪ್ರಯಾಣಿಸಲು ಜಾಗವೇ ಇರುವುದಿಲ್ಲ ಎಂದು ಹೇಳಿದ್ದರು. ಅದೇ ರೀತಿ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಕೂಡ ಗ್ಯಾರಂಟಿಗಳಿಗೆ ಹಣ ಹೊಂದಿಸಲು ಸರ್ಕಾರ 'ಹರಸಾಹಸ' ಪಡುತ್ತಿದೆ, ಅನುದಾನ ನೀಡಲು ಸರ್ಕಾರದ ಬಳಿ ಹಣವಿಲ್ಲ ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿ, ನಂತರ ಸ್ಪಷ್ಟೀಕರಣ ನೀಡಿದ್ದರು.

ಶ್ರೀ ರಂಭಾಪುರಿ ಸ್ವಾಮೀಜಿ ಅವರ ಈ ಹೇಳಿಕೆಯು ರಾಜ್ಯದ ಪ್ರಸ್ತುತ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ನಡೆಯುತ್ತಿರುವ ಚರ್ಚೆಗೆ ಮತ್ತಷ್ಟು ಇಂಬು ನೀಡಿದೆ. ಗ್ಯಾರಂಟಿ ಯೋಜನೆಗಳು ಜನರಿಗೆ ತಾತ್ಕಾಲಿಕ ನೆಮ್ಮದಿ ನೀಡಿದರೂ, ದೀರ್ಘಾವಧಿಯಲ್ಲಿ ಅವುಗಳ ಪರಿಣಾಮಗಳ ಬಗ್ಗೆ ಚಿಂತಿಸಬೇಕಾದ ಅನಿವಾರ್ಯತೆಯನ್ನು ಇದು ಸೂಚಿಸುತ್ತದೆ.

Read More
Next Story