ಅನ್ನದಾತರಿಗೆ ಅವಮಾನ ಮಾಡಿದ ಜಿಟಿ ಮಾಲ್ ತೆರಿಗೆಯನ್ನೂ  ಪಾವತಿಸಲ್ಲ!
x

ಅನ್ನದಾತರಿಗೆ ಅವಮಾನ ಮಾಡಿದ ಜಿಟಿ ಮಾಲ್ ತೆರಿಗೆಯನ್ನೂ ಪಾವತಿಸಲ್ಲ!


ರೈತರೊಬ್ಬರು ಸಾಂಪ್ರದಾಯಿಕ ಪಂಚೆ ಧರಿಸಿ ಬಂದಿದ್ದರು ಎಂಬ ಕಾರಣಕ್ಕೆ ಒಳಗೆ ಬಿಡದೆ ಅವಮಾನ ಮಾಡಿದ ಹಿನ್ನೆಲೆಯಲ್ಲಿ ಏಳು ದಿನ ಬೀಗ ಜಡಿಯಲು ಸಚಿವ ಭೈರತಿ ಸುರೇಶ್‌ ಘೋಷಣೆ ಮಾಡಿದರು. ಇದರ ಬೆನ್ನಲ್ಲೇ ಜಿಟಿ ಮಾಲ್‌ ಮಾಲೀಕರು ಸ್ವಯಂಪ್ರೇರಿತವಾಗಿ ಬಂದ್‌ ಮಾಡಿದ ಕೆಲವೇ ಗಂಟೆಗಳಲ್ಲಿ ಬಿಬಿಎಂಪಿ ಅಧಿಕಾರಿಗಳು ಮಾಲ್‌ ಅನ್ನು ಸೀಜ್‌ ಮಾಡಿದ್ದಾರೆ.

ಮಾಲ್‌ ಬಾಗಿಲಿಗೆ ಬೀಗ ಜಡಿಯಲಾಗಿದ್ದು, ʻಆಸ್ತಿ ತೆರಿಗೆ ಪಾವತಿಸದ ಕಾರಣಕ್ಕಾಗಿ ಮಾಲ್ಅನ್ನು ಸೀಲ್ ಮಾಡಲಾಗಿದೆʼ ಎಂದು ಬಾಗಿಲಿಗೆ ಅಂಟಿಸಲಾದ ನೋಟೀಸ್‌ನಲ್ಲಿ ತಿಳಿಸಲಾಗಿದೆ.

2023-24ನೇ ಸಾಲಿನ 1,78,23,560 ಕೋಟಿ ರೂ. ಆಸ್ತಿ ತೆರಿಗೆ ಬಾಕಿಯಿದ್ದು, ಪ್ರಸಕ್ತ ಸಾಲಿನಲ್ಲಿ 1,78,23,460 ಆಸ್ತಿ ತೆರಿಗೆ ಪಾವತಿಸಬೇಕಿದೆ. ತೆರಿಗೆ ಪಾವತಿಸಿಲ್ಲ ಎಂದು ಬಿಬಿಎಂಪಿ ಜಿಟಿ ಮಾಲ್ ಅನ್ನು ಬಂದ್ ಮಾಡಿದೆ. ಬಿಬಿಎಂಪಿಯ ಕಂದಾಯ ಇಲಾಖೆ ಅಧಿಕಾರಿಗಳು ಮಾಲ್‌ಗೆ ಬೀಗ ಹಾಕಿದ್ದು, ತೆರಿಗೆ ಕಟ್ಟುವಂತೆ ನೋಟೀಸ್ ಜಾರಿ ಮಾಡಿದ್ದಾರೆ. ತೆರಿಗೆ ಪಾವತಿಸಿದ ಮೇಲೆ ಮಾಲ್ ತೆರೆಯಲು ಒಪ್ಪಿಗೆ ನೀಡಲಿದ್ದಾರೆ.

ಮತ್ತೊಂದೆಡೆ ರೈತರಿಗೆ ಅವಮಾನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಜಿಟಿ ಮಾಲ್‌ಗೆ ನೋ ಟಿಸ್‌ನೀಡಿದೆ. ಈ ನೋಟಿಸ್‌ಗೆ ಉತ್ತರ ನೀಡಿರುವ ಜಿಟಿ ಮಾಲ್‌ ಮಾಲೀಕರು, ʻʻತಪ್ಪೆಸಗಿದ ಸಿಬ್ಬಂದಿ ಮೇಲೆ ಕ್ರಮ ತೆಗೆದುಕೊಳ್ಳಲಾಗಿದೆ. ಪಂಚೆ ಧರಿಸಿದವರಿಗೆ ಮಾಲ್ ಒಳಗೆ ಪ್ರವೇಶ ಇಲ್ಲ ಎಂಬ ನಿಯಮ ನಮ್ಮಲ್ಲಿಲ್ಲ. ಜಿಟಿ ಮಾಲ್ 2017ರಲ್ಲಿ ಆರಂಭವಾಗಿದ್ದು, ಮಾಲ್‌ನಲ್ಲಿ ಅನೇಕ ಮಳಿಗೆಗಳಲ್ಲಿ ಪಂಚೆ ಮಾರಾಟವೂ ನಡೆದಿದೆ. ಪಂಚೆ ನಮ್ಮ ಸಂಸ್ಕೃತಿಯ ಸಂಕೇತ. ಪಂಚೆಯು‌ ನಮ್ಮ ನಾಡಿನ ಸಾಂಸ್ಕೃತಿಕ ಉಡುಗೆಯಾಗಿದೆ, ಇದಕ್ಕೆ ಹೆಮ್ಮೆಯೂ ಇದೆ. ಘಟನೆಯು ಸೆಕ್ಯುರಿಟಿಯ ಅಜಾಗರೂಕತೆಯಿಂದ ನಡೆದಿದೆ. ಪಂಚೆ ಉಟ್ಟು ಬಂದ ರೈತರನ್ನು ಮಾಲ್ ಒಳಗೆ ಬಿಡದೆ ಇದದ್ದು ಸರಿಯಾದ ಕ್ರಮವಲ್ಲ. ಈ ರೀತಿ ಮಾಡಿದ ನಮ್ಮ ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡಲಾಗಿದೆʼʼ ಎಂದು ಜಿಟಿ ಮಾಲ್ ಸಿಇಓ ಪ್ರಶಾಂತ್ ಆನಂದ್ ತಿಳಿಸಿದ್ದಾರೆ.

ʻʻ2017ರಿಂದ ಇಲ್ಲಿಯವರೆಗೆ ಯಾವುದೇ ಅಹಿತಕರ ಘಟನೆ ನಡೆದಿರಲಿಲ್ಲ. ಮುಂದೆ ಇಂತಹ ಪ್ರಮಾದ ನಡೆಯಲು ಬಿಡುವುದಿಲ್ಲ. ಈ ಘಟನೆಯಿಂದ ನಮಗೆ ಬಹಳ ಬೇಸರವಾಗಿದ್ದು ನಾವು ವಿಷಾದ ವ್ಯಕ್ತಪಡಿಸುತ್ತೇವೆ. ನಮ್ಮ ಮಾಲ್‌ನಲ್ಲಿನ ಮಳಿಗೆಗಳಲ್ಲಿ ಪಂಚೆಯನ್ನು ಮುಕ್ತವಾಗಿ ಮಾರಾಟ ಮಾಡುತ್ತೇವೆ. ಈ ಹಿಂದೆ ನಮ್ಮ ಮಾಲ್ ಅನೇಕರು ಪಂಚೆ ತೊಟ್ಟು ಬಂದಿದ್ದು ಅವರ ಸಿಸಿ ಟಿವಿ ಚಿತ್ರಣಗಳನ್ನು ನಾವು ನೀಡಿದ್ದೇವೆ. ಈ ವರೆಗೆ ಸಾಮಾಜಿಕವಾಗಿ ಇನ್ಯಾವುದೇ ಅಹಿತಕರ ಘಟನೆ ನಡೆದಿರುವುದಿಲ್ಲ‌, ಮುಂದೆಯೂ ನಡೆಯದಂತೆ ಜಾಗೃತಿ ವಹಿಸುತ್ತೇವೆʼʼ ಎಂದು ಜಿಟಿ ಮಾಲ್ ನೋಟಿಸ್‌ಗೆ ಉತ್ತರ ನೀಡಿದೆ.

Read More
Next Story