ʻಗೃಹಲಕ್ಷ್ಮಿʼ ಯೋಜನೆ ಮನೆಗೆ ಆಧಾರವಾಯ್ತು ಎಂದ ಪಿಯುಸಿಯಲ್ಲಿ ರಾಜ್ಯಕ್ಕೇ ಪ್ರಥಮ ಬಂದ ವೇದಾಂತ
x

ʻಗೃಹಲಕ್ಷ್ಮಿʼ ಯೋಜನೆ ಮನೆಗೆ ಆಧಾರವಾಯ್ತು ಎಂದ ಪಿಯುಸಿಯಲ್ಲಿ ರಾಜ್ಯಕ್ಕೇ ಪ್ರಥಮ ಬಂದ ವೇದಾಂತ

ಬಡತನದಲ್ಲಿ ನಮಗೆ ನೆರವಾಗಿದ್ದು ನಮ್ಮ ತಾಯಿಗೆ ಬರುತ್ತಿದ್ದ ʻಗೃಹ ಲಕ್ಷ್ಮಿ ಯೋಜನೆʼಯ 2000ರೂ ಹಣ. ಅದು ನನ್ನ ಓದಿಗೆ ತುಂಬಾ ಸಹಾಯವಾಯಿತುʼʼ ಎಂದು ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯನ್ನು ನೆನೆದಿದ್ದಾರೆ ವೇದಾಂತ


ʻʻಕ್ಷೌರಿಕ ಕೆಲಸ ಮಾಡುತ್ತಿದ್ದ ತಂದೆ ಕೋವಿಡ್ ಸಂದರ್ಭದಲ್ಲಿ ತೀರಿಕೊಂಡರು. ಬಳಿಕ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಒಳಗಾಯಿತು. ಆ ಬಡತನದಲ್ಲಿ ನಮಗೆ ನೆರವಾಗಿದ್ದು ನಮ್ಮ ತಾಯಿಗೆ ಬರುತ್ತಿದ್ದ ʻಗೃಹ ಲಕ್ಷ್ಮಿ ಯೋಜನೆʼಯ 2000ರೂ ಹಣ. ಅದು ನನ್ನ ಓದಿಗೆ ತುಂಬಾ ಸಹಾಯವಾಯಿತುʼʼ.

ಹೀಗೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯನ್ನು ನೆನೆದವರು, ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಕಲಾ ವಿಭಾಗ(ಕನ್ನಡ ಮಾಧ್ಯಮ)ದಲ್ಲಿ 596 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿರುವ ವಿಜಯಪುರ ನಗರದ ಎಸ್.ಎಸ್. ಪಿ.ಯು ಕಾಲೇಜಿನ ವಿದ್ಯಾರ್ಥಿ ವೇದಾಂತ ಜ್ಞಾನೋಬಾ ನಾವಿ.

ವಿದ್ಯಾರ್ಥಿ ವೇದಾಂತ ನಾವಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಕಲಬೀಳಗಿ ಗ್ರಾಮದವರಾದವರು. ಸದ್ಯ ಅವರು ವಿಜಯಪುರ ನಗರದ ಶಾಸ್ತ್ರಿನಗರದ ಡಿ.ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಇದ್ದುಕೊಂಡು ಎಸ್.ಎಸ್. ಪಿಯು ಕಾಲೇಜಿನಲ್ಲಿ ಓದಿದ್ದಾರೆ.

ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡುವ ವೇಳೆ ಗೃಹಲಕ್ಷ್ಮೀ ಯೋಜನೆಯ ಹಣ ನನ್ನ ಓದಿಗೆ ಸಹಾಯವಾಗಿದೆ ಎಂದು ಹೇಳಿಕೊಂಡಿದ್ದಾರೆ.

ʻʻರಾಜ್ಯಕ್ಕೆ ಪ್ರಥಮ ಬರುತ್ತೇನೆ ಎಂಬ ನಿರೀಕ್ಷೆ ಇರಲಿಲ್ಲ, ಖುಷಿಯಾಗಿದೆ. ಓದಿಗಾಗಿ ಹೆಚ್ಚು ಸಮಯ ಮೀಸಲಿಟ್ಟಿರಲಿಲ್ಲ. ಅವಕಾಶ ಸಿಕ್ಕಾಗ ಓದುತ್ತಿದ್ದೆ. ಯಾವುದೇ ಟ್ಯೂಷನ್‌ಗೆ ಹೋಗಿಲ್ಲ, ಪ್ರತಿ ದಿನ ಕಾಲೇಜಿನಲ್ಲಿ ಮಾಡುವ ಪಾಠಗಳನ್ನು ಆ ದಿನವೇ ಓದಿಕೊಳ್ಳುತ್ತಿದ್ದೆʼʼ ಎಂದು ವೇದಾಂತ ತಿಳಿಸಿದರು.

'ಪದವಿ ಓದಿದ ಬಳಿಕ ಐಎಎಸ್, ಕೆಎಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಆದ್ಯತೆ ನೀಡುತ್ತೇನೆ' ಎಂದು ಹೇಳಿಕೊಂಡಿದ್ದಾರೆ. ಅದೇ ವೇಳೆ ತಮ್ಮ ಕುಟುಂಬದ ಹಿನ್ನೆಲೆಯ ಬಗ್ಗೆ ಕೇಳಿದ ಪ್ರಶ್ನೆಗೆ, ʻʻಕ್ಷೌರಿಕ ಕೆಲಸ ಮಾಡುತ್ತಿದ್ದ ತಂದೆ ಕೋವಿಡ್ ಸಂದರ್ಭದಲ್ಲಿ ತೀರಿಕೊಂಡರು. ಬಳಿಕ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಒಳಗಾಯಿತು. ಆ ಬಡತನದಲ್ಲಿ ನಮಗೆ ನೆರವಾಗಿದ್ದು ನಮ್ಮ ತಾಯಿಗೆ ಬರುತ್ತಿದ್ದ ʻಗೃಹ ಲಕ್ಷ್ಮಿ ಯೋಜನೆʼಯ 2000ರೂ ಹಣ. ಅದು ನನ್ನ ಓದಿಗೆ ತುಂಬಾ ಸಹಾಯವಾಯಿತುʼʼ ಎಂದು ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯನ್ನು ನೆನೆದಿದ್ದಾರೆ.

ʻʻಕಾಲೇಜಿನ ಉಪನ್ಯಾಸಕರ ಮಾರ್ಗದರ್ಶನದಿಂದ ಹೆಚ್ಚು ಅಂಕಗಳಿಸಲು ಸಹಾಯವಾಯಿತು. ಬಡತನ ಓದಿಗೆ ಸಮಸ್ಯೆ ಆಗಲಿಲ್ಲʼʼ ಎಂದು ವೇದಾಂತ ತಿಳಿಸಿದರು.

ವಿಜಯಪುರ ಜಿಲ್ಲಾಧಿಕಾರಿ ಟಿ.ಭೂಬಾಲ್ ಅವರು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ವೇದಾಂತ ನಾವಿ ಅವರಿಗೆ ಸಿಹಿ ತಿನ್ನಿಸಿ, ಸನ್ಮಾನಿಸಿ ಶುಭ ಹಾರೈಸಿದರು.

ವೇದಾಂತ ನಾವಿ ಅವರು ಕಲಬೀಳಗಿಯ ಬಂಜಾರ ವಿದ್ಯಾವರ್ದಕ ಸಂಘದ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಓದಿದರು. ಅಲ್ಲಿ ಅವರು ಶೇ 96.96 ರಷ್ಟು ಅಂಕಗಳಿಸಿ, ಉತ್ತಮ ಸಾಧನೆ ಮಾಡಿದ್ದರು. ಇದೀಗ ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸುವ ಮೂಲಕ ಅತ್ಯುತ್ತಮ ಸಾಧನೆಗೈದಿದ್ದಾರೆ.

Read More
Next Story