
ಬಿಎಎಂಎಲ್ ಸಂಸ್ಥೆಯಲ್ಲಿನ ಕನ್ನಡ ಸಂಘ ಹಾಗೂ ಪದಾಧಿಕಾರಿಗಳು
ಅವನತಿ ಅಂಚಿನಲ್ಲಿದ್ದ ಐದು ದಶಕಗಳ ʼಬೆಮೆಲ್ ಕನ್ನಡ ಸಂಘʼ: ಪುನರಾರಂಭದ ಶುಭಸುದ್ದಿ!
BEMEL ನೇಮಕಾತಿ ಪ್ರಕ್ರಿಯೆಯಲ್ಲಿ ಕನ್ನಡಿಗರಿಗೆ ಅವಕಾಶ ನೀಡುವುದು, ಹೊರಗುತ್ತಿಗೆ ನೇಮಕಾತಿ ಕನ್ನಡಿಗರಿಗೆ ಮೊದಲ ಪ್ರಾಶಸ್ತ್ಯವನ್ನು ಕಲ್ಪಿಸಬೇಕೆಂದೂ ಸೂಚನೆ ನೀಡಲಾಗಿದೆ.
ಕೇಂದ್ರ ಸರ್ಕಾರಿ ಸ್ವಾಮ್ಯದ ಬೆಮಲ್ (ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (BEML))ನಲ್ಲಿ 1974ರಲ್ಲಿ ಸ್ಥಾಪನೆಯಾದ ಕನ್ನಡ ಸಂಘವು ಸುವರ್ಣ ಮಹೋತ್ಸವ ಆಚರಿಸುವ ವೇಳೆಯಲ್ಲೇ ಅವಾಸನದಂಚಿಗೆ ಬಂದಿತ್ತು!
ಇನ್ನೇನು ಈ ದುರ್ಘಟನೆ ನಡೆಯುತ್ತಿದೆ ಎನ್ನುವಾಗಲೇ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಮತ್ತು ಇತರ ಕನ್ನಡಪರ ಸಂಘಟನೆಗಳ ಮಧ್ಯಸ್ಥಿಕೆಯಿಂದ ಈಗ ಐದು ದಶಕಗಳ ಕಾಲ ಕನ್ನಡ ಸೇವೆ ಮಾಡಿದ ಸಂಘ ಮತ್ತೆ ಪುನರುತ್ಥಾನದತ್ತ ಸಾಗುವ ಲಕ್ಷಣ ಕಂಡುಬಂದಿದೆ.
ಬೆಮಲ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಂಘದ ಪುನರ್ ಸ್ಥಾಪನೆಗೆ ಆದ್ಯತೆ ನೀಡಬೇಕೆಂದು ಅಧಿಕೃತ ಸೂಚನೆ ನೀಡಿರುವುದು ಈ ಆಶಯಕ್ಕೆ ಕಾರಣವಾಗಿದೆ. ಇದೇ ರೀತಿ ಕೇಂದ್ರಸರ್ಕಾರ ಸ್ವಾಮ್ಯದ ಇತರ ಸಂಸ್ಥೆಗಳಲ್ಲೂ ಕನ್ನಡ ಸಂಘಗಳಿಗೆ ಹೆಚ್ಚಿನ ಆದ್ಯತೆ ಸಿಗಬಹದು ಎಂಬ ಆಶಯ ಮೂಡಿದೆ.
ಬೆಮೆಲ್ ಕನ್ನಡ ಸಂಘ ಅವಸಾನದತ್ತ ಸಾಗಿದ್ದೇಕೆ?
ಒಂದು ಕಾಲದಲ್ಲಿ ಹತ್ತು ಸಾವಿರಕ್ಕೂ ಅಧಿಕ ನೌಕರರು ಕಾರ್ಯನಿರ್ವಹಿಸುತ್ತಿದ್ದ ಬೆಮಲ್ನಲ್ಲಿ ಕನ್ನಡ ಸಂಘವು ಒಂದು ಕಾಲದಲ್ಲಿ ಅತ್ಯಂತ ಕ್ರಿಯಾಶೀಲವಾಗಿತ್ತು. ಆದರೆ, ಕಾಲಕ್ರಮೇಣ ಅದು ತನ್ನ ಪ್ರಭಾವವನ್ನು ಕಳೆದುಕೊಳ್ಳಲೂ ಪ್ರಮುಖ ಕಾರಣಗಳಿವೆ.
ಕಾರ್ಖಾನೆಯ ಆಡಳಿತ ಮಂಡಳಿಯು ಬದಲಾದ ಕಾಲಕ್ಕೆ ತಕ್ಕಂತೆ ಸಂಘದ ಚಟುವಟಿಕೆಗಳಿಗೆ ನೀಡುತ್ತಿದ್ದ ಪ್ರೋತ್ಸಾಹ ಮತ್ತು ಸೌಲಭ್ಯಗಳನ್ನು ಕಡಿಮೆ ಮಾಡಿದ್ದು ಸಂಘ ಅವನತಿಯತ್ತ ಸಾಗಲು ಪ್ರಮುಖ ಕಾರಣವಾಗಿದೆ.
ಬೆಮಲ್ ಸಂಸ್ಥೆಯ ಖಾಸಗೀಕರಣದ ಪ್ರಕ್ರಿಯೆ ಮತ್ತು ಅದಕ್ಕೆ ಸಂಬಂಧಿಸಿದ ಕಾರ್ಮಿಕ ಹೋರಾಟಗಳಿಂದಾಗಿ, ಸಾಂಸ್ಕೃತಿಕ ಸಂಘಟನೆಗಳಿಗಿಂತ ಕಾರ್ಮಿಕ ಸಂಘಟನೆಗಳಿಗೆ ಹೆಚ್ಚಿನ ಒತ್ತು ನೀಡಬೇಕಾದ ಅನಿವಾರ್ಯತೆ ಎದುರಾಯಿತು. ಇದು ಕನ್ನಡ ಸಂಘಕ್ಕೆ ಮುಳುವಾಯಿತು ಎಂಬ ಆ
ನಿವೃತ್ತಿ ಮತ್ತು ವರ್ಗಾವಣೆ ಕಾರಣ?
ಕನ್ನಡ ಸಂಘವನ್ನು ಕಟ್ಟಿ ಬೆಳೆಸಿದ ಹಿರಿಯ ಮತ್ತು ಉತ್ಸಾಹಿ ಕನ್ನಡ ಹೋರಾಟಗಾರರು ನಿವೃತ್ತರಾದ ನಂತರ, ಅದೇ ಮಟ್ಟದ ಬದ್ಧತೆ ಹೊಂದಿದ ಯುವ ಪೀಳಿಗೆಯ ಕೊರತೆಯು ಸಂಘದ ಹಿನ್ನಡೆಗೆ ಕಾರಣವಾಯಿತು. ಜಾಗತೀಕರಣ ಮತ್ತು ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಜನರ ಆಸಕ್ತಿಗಳು ಮತ್ತು ಸಾಂಸ್ಕೃತಿಕ ಆದ್ಯತೆಗಳು ಬದಲಾದವು, ಇದು ಸಂಘದ ಸಾಮೂಹಿಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ.
ಕಾರ್ಖಾನೆಯ ಒಳಗಿನ ಸಮಸ್ಯೆಗಳ ಪರಿಹಾರಕ್ಕಾಗಿ ಕಾರ್ಮಿಕರು ಸಾಹಿತ್ಯಿಕ ಅಥವಾ ಸಾಂಸ್ಕೃತಿಕ ಸಂಘಟನೆಗಳಿಗಿಂತ ಕಾರ್ಮಿಕ ಸಂಘಟನೆಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದು ಸಂಘದ ಚಟುವಟಿಕೆಗಳು ಕುಂಠಿತಗೊಳ್ಳಲು ದಾರಿಯಾಯಿತು. ಇದು ಸಂಘವು ಅವನತಿಯಾಗಲು ಪ್ರಮುಖ ಕಾರಣವಾಯಿತು.
ಪುರುಷೋತ್ತಮ ಬಿಳಿಮಲೆ ಸಭೆ
ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (BEML) ಅಧಿಕಾರಿಗಳೊಂದಿಗೆ ಮಂಗಳವಾರ(ಜ.27) ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಭಿಳಿಮಲೆ, "ಕಾರ್ಮಿಕರ ಕನ್ನಡ ಸಂಘವು ನಿಷ್ಕ್ರಿಯಗೊಂಡಿದ್ದು, ಆಡಳಿತ ವ್ಯವಸ್ಥೆಯಲ್ಲಿ ಕನ್ನಡಕ್ಕೆ ಪ್ರಥಮ ಪ್ರಾತಿನಿಧ್ಯವನ್ನು ಕಲ್ಪಿಸುವ ಉದ್ದೇಶದಿಂದ ಕೂಡಲೇ ಈ ಸಂಘ ಮುಂದುವರಿಕೆಗೆ ಆಡಳಿತ ಮಂಡಳಿ ಅವಕಾಶ ಕಲ್ಪಿಸಬೇಕು," ಎಂದು ಸೂಚಿಸಿದರು.
"ಸಾರ್ವಜನಿಕ ಸಂಸ್ಥೆಗಳಲ್ಲಿ, ವಿಶೇಷವಾಗಿ ಕೇಂದ್ರ ಸ್ವಾಮ್ಯದ ಉದ್ದಿಮೆಗಳಲ್ಲಿ ಕನ್ನಡ ಕಾರ್ಮಿಕರ ಸಂಖ್ಯೆ ನಾನಾ ಕಾರಣಗಳಿಗಾಗಿ ಕ್ಷೀಣಿಸುತ್ತಿದ್ದು, ಭಾಷಾ ಹಕ್ಕುಗಳ ಸಮರ್ಪಕ ಪ್ರತಿಪಾದನೆಗೆ ಕನ್ನಡ ಸಂಘಗಳ ಅವಶ್ಯಕತೆ ಹೆಚ್ಚಿರುತ್ತದೆ. ಅಂತಹ ಸಂದರ್ಭದಲ್ಲಿ ಕಳೆದ ಒಂದು ವರ್ಷದಿಂದ ಬೆಮೆಲ್ ಬೆಂಗಳೂರು ಸಂಕೀರ್ಣದಲ್ಲಿ ಕನ್ನಡ ಸಂಘ ಕಾರ್ಯ ನಿರ್ವಹಿಸದೆ ಇರುವ ಪರಿಸ್ಥಿತಿ ಸೃಷ್ಠಿಯಾಗಿರುವುದು ಕನ್ನಡದ ಹಿತದೃಷ್ಠಿಯಿಂದ ಒಳ್ಳೆಯ ಬೆಳವಣಿಗೆಯಲ್ಲ" ಎಂದು ಬಿಳಿಮಲೆ ಅಭಿಪ್ರಾಯಪಟ್ಟರು.
ಮಾರುಕಟ್ಟೆ ಭಾಷೆಯಿಂದ ಸ್ಥಳೀಯ ಭಾಷೆ ನೇಪಥ್ಯಕ್ಕೆ
"ಜಾಗತೀಕರಣದ ಪರಿಣಾಮವಾಗಿ ಮಾರುಕಟ್ಟೆ ಭಾಷೆಯು ಪ್ರಭಾವಶಾಲಿಯಾಗಿರುವ ಕಾರಣ ಸ್ಥಳೀಯ ಭಾಷೆಗಳು ನೇಪಥ್ಯಕ್ಕೆ ಸರಿಯುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕ ಸಂಸ್ಥೆಗಳು ಸ್ಥಳೀಯ ಭಾಷೆಗಳನ್ನು ಗೌರವಿಸುವ ವಾತಾವರಣ ಸೃಷ್ಠಿಸುವ ಮಹತ್ತರ ಜವಾಬ್ದಾರಿಯನ್ನು ಹೊಂದಿದ್ದು, ಇಂತಹ ಸನ್ನಿವೇಶದಲ್ಲಿ ಸ್ಥಳೀಯ ಭಾಷೆ ಸಂಸ್ಕೃತಿಯನ್ನು ಪೋಷಿಸುವ ಭಾಷಾ ಸಂಘಗಳು ಅವನತಿ ಹೊಂದಿದರೆ ವೃತ್ತಿಪರ ವಾತಾವರಣದಲ್ಲಿ ಸ್ಥಳೀಯ ಭಾಷೆಯ ಪರಿಸ್ಥಿತಿ ಭೀಕರವಾಗುತ್ತದೆ," ಎಂದು ಆತಂಕ ವ್ಯಕ್ತಪಡಿಸಿದರು.
240 ಭಾಷೆ ಕಣ್ಮರೆ
"90ರ ದಶಕದ ಜಾಗತೀಕರಣದ ಬಳಿಕ ದೇಶದಲ್ಲಿ 240 ಭಾಷೆಗಳು ಕಾಣೆಯಾಗಿದ್ದು, ಮುಂದಿನ 50 ವರ್ಷಗಳಲ್ಲಿ ಕನಿಷ್ಠ 390 ಭಾಷೆಗಳು ಜನಬಳಕೆಯಿಂದ ದೂರಸರಿಯಲಿವೆ. ಕನ್ನಡದ ಪರಿಸ್ಥಿತಿ ಇದಕ್ಕೆ ಭಿನ್ನವಾಗಿಲ್ಲ. ಬಂಡವಾಳಶಾಹಿ ಸಂಸ್ಕೃತಿ ಪ್ರಬಲವಾದಾಗ ಸರ್ಕಾರಗಳು ಕೂಡ ಕೈಚೆಲ್ಲಬೇಕಾಗುತ್ತದೆ. ಭಾಷಾಂಧತೆಯ ಹೊರತಾಗಿಯೂ ಇಂತಹ ಸಂದರ್ಭದಲ್ಲಿ ಭಾರತದ ಭಾಷೆಗಳ ಗತಿ ಏನಾಗಬಹುದೆಂಬ ಆತಂಕವು ನೀತಿ-ನಿರೂಪಕರನ್ನು ಕಾಡಬೇಕಾದ ಸಂದರ್ಭ ಇದಾಗಿದೆ," ಎಂದು ಅವರು ಹೇಳಿದ್ದಾರೆ.
ಸಭೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು.
ಬೆಮೆಲ್ ನೇಮಕದಲ್ಲೂ ಕನ್ನಡಿಗರಿಗೆ ಆದ್ಯತೆ ನೀಡಿ
ಬಹಳ ದಿನಗಳ ನಂತರ ಬೆಮೆಲ್ ಸಂಸ್ಥೆಯು ʼಸಿʼ ವೃಂದದ ನೌಕರರ ನೇಮಕಾತಿಗೆ ಚಾಲನೆಯನ್ನು ನೀಡುತ್ತಿದ್ದು, ನೇಮಕಾತಿ ಅಧಿಸೂಚನೆಯನ್ನು ಕನ್ನಡದಲ್ಲಿಯೂ ಪ್ರಕಟಿಸುವುದಲ್ಲದೇ, ನೇಮಕಾತಿಯಲ್ಲಿ ಸ್ಥಳೀಯ ಕನ್ನಡಿಗರಿಗೆ ಆದ್ಯತೆಯನ್ನು ನೀಡಬೇಕು. ಯಾವುದೇ ಸಂಸ್ಥೆಯ ಯಶಸ್ಸು ಸ್ಥಳೀಯ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಸಿಕೊಳ್ಳುವುದರಲ್ಲಿದೆ. ಸ್ಥಳೀಯ ಭಾಷೆ ಸಂಸ್ಕೃತಿಗಳನ್ನು ಗೌರವಿಸುವುದನ್ನು ಸಾರ್ವಜನಿಕ ಸಂಸ್ಥೆಗಳು ರೂಢಿಸಿಕೊಂಡಲ್ಲಿ ಸಂಸ್ಥೆಯ ಕಾರ್ಯ ಚಟುವಟಿಕೆಗಳು ಜನಮಾನಸದಲ್ಲಿ ಉಳಿಯುತ್ತವೆ ಎಂದು ಅಲ್ಲಿನ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಬೆಮೆಲ್ ಲಾಂಛನದಲ್ಲಿ ಕನ್ನಡವೂ ಇರಲಿ
ಬೆಮೆಲ್ ಸಂಸ್ಥೆ ತನ್ನ ಲಾಂಛನದ ಪಠ್ಯದಲ್ಲಿ ಕೇವಲ ಹಿಂದಿ ಮತ್ತು ಆಂಗ್ಲ ಭಾಷೆಗೆ ಅವಕಾಶ ನೀಡಿದ್ದು, ಕೂಡಲೇ ಈ ಲಾಂಛನದಲ್ಲಿ ಕನ್ನಡವನ್ನು ಸಹ ಅಳವಡಿಸಬೇಕು. ಸಂಸ್ಥೆಯ ಜಾಲತಾಣದಲ್ಲಿಯೂ ಕನ್ನಡವನ್ನು ಆಯ್ಕೆ ಭಾಷೆಯನ್ನಾಗಿ ಸೇರ್ಪಡಿಸಬೇಕು.
ಇಂತಹ ಸಣ್ಣಪುಟ್ಟ ಬದಲಾವಣೆಗಳು ಕೇಂದ್ರ ಸ್ವಾಮ್ಯದ ಸ್ಥಳೀಯ ಕಚೇರಿಗಳ ಭಾಷಾಪರ ವರ್ಚಸ್ಸಿಗೆ ಹೊಸ ಸ್ವರೂಪವನ್ನೇ ಕಲ್ಪಿಸಲಿವೆ. ಭಾಷಾ ವಿವೇಕವೆನ್ನುವುದು ಎಲ್ಲೆಡೆ ಜಾಗೃತವಾಗಬೇಕಾದ ಸುಸಂದರ್ಭ ಇದಾಗಿದೆ ಎಂದರು.
ಮಾಹಿತಿ ಕನ್ನಡದಲ್ಲಿರಲಿ
ನೇಮಕಾತಿ ಪ್ರಕ್ರಿಯೆಯಲ್ಲಿ ಕನ್ನಡಿಗರಿಗೆ ಅವಕಾಶ ನೀಡುವುದು, ಹೊರಗುತ್ತಿಗೆ ನೇಮಕಾತಿ ಕನ್ನಡಿಗರಿಗೆ ಮೊದಲ ಪ್ರಾಶಸ್ತ್ಯವನ್ನು ಕಲ್ಪಿಸುವುದು, ಬೆಮೆಲ್ನ ವಾರ್ತಾ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಎಲ್ಲ ಮಾಹಿತಿಗಳು ಕನ್ನಡದಲ್ಲಿಯೂ ಇರುವ ಹಾಗೆ ನೋಡಿಕೊಳ್ಳುವುದು, ಬೆಮೆಲ್ನ ಉತ್ಪನ್ನಗಳ ಜ್ಞಾನ ಹಾಗೂ ಅಳವಡಿಸಿಕೊಂಡಿರುವ ತಾಂತ್ರಿಕತೆಗಳು ಕನ್ನಡಿಗರಿಗೆ ತಲುಪಲು ಅವಶ್ಯವಾಗುವಂತೆ ಈ ಸಂಬಂಧ ಕಿರುಹೊತ್ತಿಗೆಗಳನ್ನು ಪ್ರಕಟಿಸಿ ಶಿಕ್ಷಣ ಸಂಸ್ಥೆಗಳಿಗೆ ಪೂರೈಸುವುದೂ ಸೇರಿದಂತೆ ಹಲವು ನಿರ್ದೇಶನಗಳನ್ನು ಅಧಿಕಾರಿಗಳಿಗೆ ನೀಡಿದರು.

