ತುಂಗಭದ್ರಾ ಜಲಾಶಯಕ್ಕೆ ಸಮಾನಾಂತರ ಜಲಾಶಯ: ಬಸವರಾಜ ಬೊಮ್ಮಾಯಿ ಸಲಹೆ
x

ತುಂಗಭದ್ರಾ ಜಲಾಶಯಕ್ಕೆ ಸಮಾನಾಂತರ ಜಲಾಶಯ: ಬಸವರಾಜ ಬೊಮ್ಮಾಯಿ ಸಲಹೆ


ʻʻತುಂಗಭದ್ರಾ ಡ್ಯಾಮ್ ನ ಕ್ರಸ್ಟ್ ಗೇಟ್ ನ ಚೈನ್ ಕತ್ತರಿಸಿ ನೀರು ಹರಿದು ಪೋಲಾಗಿರುವುದರಿಂದ ರಾಜ್ಯ ಸರ್ಕಾರ ತಂಗಭದ್ರಾ ಜಲಾಶಯಕ್ಕೆ ಸಮಾನಾಂತರ ಜಲಾಶಯ ನಿರ್ಮಾಣ ಮಾಡಲು ಚಾಲನೆ ಕೊಡಲು ಇದು ಸೂಕ್ತ ಸಮಯ ʼʼ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸೋಮವಾರ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ʻʻತುಂಗಭದ್ರಾ ಜಲಾಶಯಕ್ಕೆ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಚಾಲನೆ ಕೊಡಲು ಇದು ಒಳ್ಳೆಯ ಕಾರಣ ಮತ್ತು ಸಮಯ ಕೂಡ, ಈಗಾಗಲೇ ಡಿಪಿಆರ್ ಸಿದ್ಧವಾಗಿದೆ. ಅದನ್ನು ಆಂಧ್ರಪ್ರದೇಶ ಸರ್ಕಾರದ ಜೊತೆಗೆ ಹಂಚಿಕೊಂಡಿದ್ದೇವೆ. ಹಿಂದಿನ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈಎಸ್ ಆರ್ ಜಗನಮೋಹನ್ ರೆಡ್ಡಿ ಅವರೊಂದಿಗೆ ಚರ್ಚೆ ನಡೆಸಿದ್ದೆವು. ಅವರು ತಾಂತ್ರಿಕ ತಂಡ ಕಳುಹಿಸಿಕೊಟ್ಟಿದ್ದರು. ತಾಂತ್ರಿಕವಾಗಿ ಒಪ್ಪಿಗೆಯೂ ಆಗಿತ್ತು. ರಾಜಕೀಯ ತೀರ್ಮಾನ ಮಾಡುವುದು ಬಾಕಿ ಉಳಿದಿತ್ತು. ರಾಜ್ಯದ ಕಾಂಗ್ರೆಸ್ ಸರ್ಕಾರ ಕಳೆದ ಒಂದೂವರೆ ವರ್ಷದಿಂದ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಮುಖ್ಯಮಂತ್ರಿಗಳು ಈಗಿನ ಆಂಧ್ರಪ್ರದೇಶ ಹಾಗೂ ತೆಲಂಗಾಣ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಮುಂದಾಗಬೇಕು. ಇದರಿಂದ 28 ಟಿಎಂಸಿ ನೀರು ಉಳಿತಾಯವಾಗಲಿದೆʼʼ ಎಂದು ಹೇಳಿದರು.

ʻʻಈ ಅನಾಹುತಕ್ಕೆ ಎರಡು ಸಮಸ್ಯೆಗಳಿವೆ. ಇದು ವರ್ಟಿಕಲ್ ಗೇಟ್, ಈ ಗೇಟನ್ನು ಆಪರೇಟ್ ಮಾಡುವಾಗ ಆಗುವ ಲೀಕೇಜ್ ಎಲಿಮೆಂಟ್ ಬಹಳ ಮುಖ್ಯ. ಒಂದು ಬೇರಿಂಗ್ ಹೋದರೂ ಕೂಡ ಗೇಟ್ ಕಿತ್ತು ಹೋಗುತ್ತದೆ. ಎಲ್ಲಿ ಗೇಟಿಗೆ ಸಂಪರ್ಕ ಕಲ್ಪಿಸಬೇಕಿತ್ತೊ ಅದೇ ಲಿಂಕ್ ಕಿತ್ತು ಹೋಗಿದೆ. ಇದು ನಿಷ್ಕ್ರಿಯ ಲಿಂಕ್ . ಹೀಗಾಗಿ ಅದು ಕಿತ್ತು ಹೋಗಿದೆ. ಇದಕ್ಕೆ ಯಾರೂ ಕಾರಣ ಅಲ್ಲ ಎಂದು ಹೇಳುವುದನ್ನು ನಾನು ಒಪ್ಪುವುದಿಲ್ಲ. ಅಧಿಕಾರಿಗಳು, ಸರಕಾರವೂ ಕಾರಣ ಅಲ್ಲ ಆಂದರೆ ಹೇಗೆ, ಇಷ್ಟು ದಿನ ಆಗದಿರುವುದು ಈಗ ಏಕೆ ಆಯಿತು? ನೀರು ಎಷ್ಟು ಬಿಡಬೇಕು, ಎಷ್ಟು ಹಿಡಿದಿಟ್ಟುಕೊಳ್ಳಬೇಕೊ ಅದನ್ನು ನೋಡಿಕೊಳ್ಳಲು ನೀರು ನಿರ್ವಹಣೆ ತುಂಗಭದ್ರ ಬೊರ್ಡ್ ಇದೆ. ಅದು ಸರಿಯಾಗಿ ನೋಡಿಕೊಳ್ಳಬೇಕು. ಡ್ಯಾಮ್ ನ ಗೇಟುಗಳನ್ನು ಹಂಚಿಕೊಂಡಿದ್ದಾರೆ. 0-16 ಆಂದ್ರದ್ದು, ಆ ನಂತರದ್ದು ಕರ್ನಾಟಕದ್ದು, ಇಬ್ಬರು ಮುಖ್ಯ ಎಂಜನೀಯರ್ ಇದ್ದಾರೆ. 19 ನೇ ಗೇಟು ಕರ್ನಾಟಕದ ವ್ಯಾಪ್ತಿಗೆ ಬರುತ್ತದೆ. ಕರ್ನಾಟಕದ ಎಂಜನೀಯರ್ ಗಳ ಜವಾಬ್ದಾರಿ ಹೆಚ್ಚಿದೆ. ಇದನ್ನು ಎಂಜನಿಯರು ಸರಿಯಾಗಿ ನಿರ್ವಹಣೆ ಮಾಡಿಲ್ಲ. ಎಲ್ಲ ಗೇಟುಗಳನ್ನು ಪರಿಶೀಲನೆ ಮಾಡಬೇಕಿದೆ. ಈಗ ನೀರಿನ ಪ್ರಮಾಣ ಕಡಿಮೆ ಇದೆ. ನೀರು ಹೆಚ್ಚಾದಾಗ ಮತ್ತೆ ಏನು ಸಮಸ್ಯೆಯಾಗುತ್ತದೊ ಗೊತ್ತಿಲ್ಲ. ನೀರಿನ ನಿರ್ವಹಣೆಗೆ ಹೊಸ ಮಾನದಂಡ ನಿರ್ಧರಿಸಬೇಕು. ಈ ವರ್ಟಿಕಲ್ ಗೇಟ್ ಗೆ ಬೇಕಾದ ಸಾಧನಗಳ ಬಗ್ಗೆ ಪರಿಶೀಲನೆ ಮಾಡಿ ತನಿಖೆ ಮಾಡಬೇಕು ಆಗ ಎಲ್ಲಿ ವೈಫ್ಯಲ ಆಗಿದೆ ಎನ್ನುವುದು ಗೊತ್ತಾಗುತ್ತದೆʼʼ ಎಂದರು.

ʻʻಸರ್ಕಾರದವರು ಮೂರು ನಾಲ್ಕು ದಿನಗಳಲ್ಲಿ ಸರಿಪಡಿಸುವುದಾಗಿ ಹೇಳುತ್ತಾರೆ. ಅಖಂಡ ಗೇಟ್ ಇರುವಾಗ ಈ ಸಮಸ್ಯೆ ಆಗಿದೆ. ಫ್ಯಾಬ್ರಿಕೇಟ್ ಹಾಕಿದರೆ ಏನಾಗುತ್ತದೊ ಗೊತ್ತಿಲ್ಲ. ಎಚ್ಚರಿಕೆಯಿಂದ ಮಾಡುವಂತೆ ಸಲಹೆ ನೀಡಿದ್ದೇವೆ. ಇನ್ನೊಂದು ಸಮಸ್ಯೆ ಇವತ್ತು ನೀರನ್ನು ಉಳಿತಾಯ ಮಾಡಬೇಕು. ನೀರು ಹರಿವು ಇಟ್ಟುಕೊಂಡೆ ಈ ಗೇಟನ್ನು ನಾವು ಫ್ಯಾಬ್ರಿಕೆಟ್ ಮಾಡಿ ಜೋಡಿಸುತ್ತೇವೆ ಎನ್ನುವುದು ಸ್ವಾಭಾವಿಕ. ಇದನ್ನು ಮಾಡುವಾಗ ಎಲ್ಲ ರೀತಿಯ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಫ್ಯಾಬ್ರಿಕೆಶನ್ ಕೆಳಗಿಳಿಸಿ ಮತ್ತೆ ಜೋಡಿಸುವುದು ಬಹಳ ಮುಖ್ಯ ಅದಕ್ಕೆ ಕ್ರೇನ್ ವ್ಯವಸ್ಥೆ ಇರಬೇಕು. ಇದಕ್ಕೆ ಲಿಫ್ಟ್ ಮಾದರಿಯಲ್ಲಿ ಕೌಂಟರ್ ವೇಟ್ ಇರಬೇಕು. ಇವೆಲ್ಲವನ್ನು ಎಚ್ಚರಿಕೆಯಿಂದ ಮಾಡಬೇಕು ಎಂದು ಸಲಹೆ ನೀಡಿದ್ದೇವೆ. ಇವರು ಕೇನ್ ಮೂಲಕ ಮಾಡುತ್ತಿರುವುದಾಗಿ ಹೇಳಿದ್ದಾರೆ.

ʻʻಕೆಆರ್‌ಎಸ್‌ನಲ್ಲಿ ಇದೇ ರೀತಿ ಸಮಸ್ಯೆಯಾದಾಗ ನಾವು 16 ಗೇಟ್‌ಗಳನ್ನು ಆಳವಡಿಸಬೇಕಾಗಿತ್ತು. ಆಗ ಗೇಟ್ ಒಡೆದಿರಲಿಲ್ಲ. ಸೋರಿಕೆಯಾಗಿತ್ತು. ಆಗ ಇದೇ ನಾರಾಯಣ ಸಂಸ್ಥೆಯವರು ಮಾಡಿದ್ದರು. ಆ ಸಂದರ್ಭದಲ್ಲಿ ದೊಡ್ಡ ಸವಾಲಾಗಿತ್ತು. 2005 ರಲ್ಲಿ ಖರ್ಗೆಯವರು ನೀರಾವರಿ ಸಚಿವರಾಗಿದ್ದಾಗ ನಾರಾಯಣ ಸಂಸ್ಥೆಯವರು ನಾರಾಯಣಪುರ ಡ್ಯಾಮ್ ಗೇಟ್ ಅಳವಡಿಸುತ್ತಿದ್ದರು. ಆಗ ಅವರನ್ನು ಬಳಸಿಕೊಂಡು ಗೇಟ್ ಸರಿಪಡಿಲಾಗಿತ್ತುʼʼ ಎಂದು ಹೇಳಿದರು.

ʻʻನೀರಿನ ನಿರ್ವಹಣೆಯನ್ನು ಸರಿಯಾಗಿ ಮಾಡದಿರುವ ಬಗ್ಗೆ ಸರಿಯಾದ ತನಿಖೆಯಾಗಬೇಕು. ಡ್ಯಾಂ ಸುರಕ್ಷತಾ ನಿರ್ವಹಣಾ ಸಮಿತಿ ನೀಡಿರುವ ಸಲಹೆಗಳನ್ನು ಸರಿಯಾಗಿ ಪಾಲಿಸಿಲ್ಲ. ಡ್ಯಾಮ್‌ಗಳ ನಿರ್ವಹಣೆಗೆ ವಿಶ್ವ ಬ್ಯಾಂಕ್ ಹಣ ಕೊಡುತ್ತದೆ. ಆ ಹಣವನ್ನು ಸಂಪೂರ್ಣ ಬಳಕೆ ಮಾಡಿ, ಎಲ್ಲ ಗೇಟ್‌ಗಳನ್ನು ಪರಿಶೀಲನೆ ಮಾಡಿ ಯಾವುದು ಬದಲಾವಣೆ ಮಾಡಬೇಕೊ ಅದನ್ನು ಬದಲಾಯಿಸಬೇಕು. ರಾಜ್ಯದ ಬಹುತೇಕ ಆಣೆಕಟ್ಟೆಗಳು ಐವತ್ತು ವರ್ಷ ಪೂರೈಸಿವೆ. ಬಹಳಷ್ಟು ಡ್ಯಾಮ್‌ಗಳಿಗೆ ಸ್ಟ್ರಾಪ್‌ಪ್ಲಗ್ ಗೇಟ್‌ಗಳು ಇಲ್ಲ. ಸ್ಟಾಪ್ ಪ್ಲಗ್ ಗೇಟ್‌ಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕು. ಅಲ್ಲದೇ ಡ್ಯಾಮ್‌ಗಳ ಸುರಕ್ಷತೆಯ ಒಂದು ವಿಶೇಷ ತಜ್ಞರ ತಂಡ ರಚನೆ ಮಾಡಿ, ಕೇಂದ್ರದ ಮಾದರಿಯಲ್ಲಿ ಈ ತಂಡ ಡ್ಯಾಮ್‌ಗಳ ಸುರಕ್ಷತೆಯ ಬಗ್ಗೆ ಮಾಹಿತಿ ನೀಡುವ ಕೆಲಸ ಮಾಡಬೇಕು. ಈ ಕೆಲಸವನು ಎಲ್ಲರೂ ಸೇರಿ ಮಾಡೋಣʼʼ ಎಂದರು.

Read More
Next Story