![ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ಮತ್ತೆ ರಾಜ್ಯಪಾಲರ ಅಂಗಳಕ್ಕೆ ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ಮತ್ತೆ ರಾಜ್ಯಪಾಲರ ಅಂಗಳಕ್ಕೆ](https://karnataka.thefederal.com/h-upload/2024/10/15/483256-siddu-governor.webp)
ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ ಮತ್ತೆ ರಾಜ್ಯಪಾಲರ ಅಂಗಳಕ್ಕೆ
ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಆಗುತ್ತಿರುವ ದೌರ್ಜನ್ಯ ತಡೆಗೆ ರಾಜ್ಯ ಸರ್ಕಾರ ರಚಿಸಿ, ಅಂಕಿತಕ್ಕೆ ಕಳುಹಿಸಿದ್ದ ಸುಗ್ರೀವಾಜ್ಞೆಗೆ ಸಹಿ ಹಾಕಲು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದರು.
ರಾಜ್ಯಪಾಲರು ವಾಪಸ್ ಕಳುಹಿಸಿದ್ದ ಮೈಕ್ರೋ ಫೈನಾನ್ಸ್ ಕುರಿತ ಸುಗ್ರೀವಾಜ್ಞೆಯನ್ನು ಅವರು ಎತ್ತಿದ್ದ ಪ್ರಶ್ನೆಗಳಿಗೆ ವಿವರಣೆ ನೀಡಿ ಮತ್ತೆ ರಾಜಭವನಕ್ಕೆ ಸರ್ಕಾರ ಕಳುಹಿಸಿಕೊಟ್ಟಿದೆ.
ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಆಗುತ್ತಿರುವ ದೌರ್ಜನ್ಯ ತಡೆಗೆ ರಾಜ್ಯ ಸರ್ಕಾರ ರಚಿಸಿ, ಅಂಕಿತಕ್ಕೆ ಕಳುಹಿಸಿದ್ದ ಸುಗ್ರೀವಾಜ್ಞೆಗೆ ಸಹಿ ಹಾಕಲು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದರು.
ಸುಗ್ರೀವಾಜ್ಞೆ ಕರಡಿನಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ನಿಯಂತ್ರಣಕ್ಕೆ ಕ್ರಮಗಳನ್ನು ಉಲ್ಲೇಖಿಸಲಾಗಿದೆ. ಆದರೆ, ಸಾಲ ಕೊಟ್ಟವರ ಬಗ್ಗೆ ಯಾವುದೇ ಕಾಳಜಿ ತೋರಿಲ್ಲ. 10 ವರ್ಷಗಳ ಶಿಕ್ಷೆ ಹಾಗೂ ₹5 ಲಕ್ಷ ದಂಡ ಹಾಕುವ ಪ್ರಸ್ತಾಪ ದುಬಾರಿಯಾಗಿದೆ. ಅಸ್ತಿತ್ವದಲ್ಲಿರುವ ಕಾನೂನುಗಳನ್ನು ಬಳಸಿ ಪೊಲೀಸ್ ಇಲಾಖೆಯೇ ಪರಿಸ್ಥಿತಿ ನಿಯಂತ್ರಿಸಬಹುದಾಗಿದೆ. ರಾಜ್ಯ ಸರ್ಕಾರ ರೂಪಿಸಿರುವ ಸುಗ್ರೀವಾಜ್ಞೆ ಮೈಕ್ರೋ ಫೈನಾನ್ಸ್ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಜೊತೆಗೆ ಅಗತ್ಯ ಹಣಕಾಸು ಸೌಲಭ್ಯ ಪಡೆಯುವ ಬಡವರಿಗೂ ಸಮಸ್ಯೆಯಾಗಲಿದೆ ಎಂದು ಸುಗ್ರೀವಾಜ್ಞೆ ವಾಪಸ್ ಮಾಡಲು ಕಾರಣಗಳನ್ನು ನೀಡಲಾಗಿತ್ತು.
ರಾಜ್ಯದಲ್ಲಿ ಇತ್ತೀಚೆಗೆ ಮೈಕ್ರೋಫೈನಾನ್ಸ್ ಕಂಪನಿಗಳ ಕಿರುಕುಳದಿಂದ ಹಲವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಮೈಕ್ರೋ ಫೈನಾನ್ಸ್ ಕಂಪನಿಗಳ ದೌರ್ಜನ್ಯ ತಡೆಗಾಗಿ ಸುಗ್ರೀವಾಜ್ಞೆ ಮಸೂದೆ ರೂಪಿಸಿತ್ತು. ಅದನ್ನು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿಕೊಡಲಾಗಿತ್ತು.
ಈ ಹಿಂದೆ ಕೂಡ ಸುಗ್ರೀವಾಜ್ಞೆ ಕರಡು ಪ್ರತಿಯಲ್ಲಿ ಕೆಲ ದೋಷಗಳನ್ನು ಸರಿಪಡಿಸುವಂತೆ ರಾಜ್ಯಪಾಲರು ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದರು. ಪರಿಷ್ಕರಿಸಿದ ಸುಗ್ರೀವಾಜ್ಞೆಯನ್ನು ರಾಜ್ಯಪಾಲರಿಗೆ ಕಳುಹಿಸಿಕೊಟ್ಟಿತ್ತು. ಜೊತೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ರಾಜ್ಯಪಾಲರನ್ನು ಭೇಟಿ ಮಾಡಿ ಸುಗ್ರೀವಾಜ್ಞೆಗೆ ಕುರಿತು ವಿವರಣೆ ನೀಡಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರಾಜ್ಯಪಾಲರು, ಆರ್ಬಿಐ ನಿಯಮಾವಳಿಯಂತೆ ಸಾಲ ನೀಡಲಾಗುತ್ತಿದೆ. ಸಾಲ ಪಡೆದವರ ರಕ್ಷಣೆ ಜೊತೆಗೆ ಸಾಲ ಕೊಟ್ಟವರ ಹಿತಾಸಕ್ತಿಯನ್ನು ಪರಿಗಣಿಸುವಂತೆ ಸೂಚಿಸಿ, ಸುಗ್ರೀವಾಜ್ಞೆ ವಾಪಸ್ ಕಳುಹಿಸಿದ್ದಾರೆ ಎಂದು ಸರ್ಕಾರ ಹೇಳಿತ್ತು.
ಏನೇನು ವಿವರಣೆ?
ಸುಗ್ರಿವಾಜ್ಞೆಯಿಂದ ಮೂಲಭೂತ ಹಕ್ಕನ್ನು ನಿರ್ಬಂಧಿಸಲಾಗುವುದಿಲ್ಲ ಹಾಗೂ ಸಾಲಗಾರರ ಹಿತಾಸಕ್ತಿಯನ್ನು ನಿರ್ಲಕ್ಷಿಸಲಾಗಿಲ್ಲ ಮತ್ತು ಕಾನೂನು ಪ್ರಕಾರ ಸಾಲ ವಸೂಲಾತಿಯನ್ನು ನಿರ್ಬಂಧಿಸಲಾಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ ಎನ್ನಲಾಗಿದೆ.
ಸಾಲವನ್ನು ಪರವಾನಗಿ ಇಲ್ಲದೆ ಖಾಸಗಿಯಾಗಿ ನೀಡಿ ಹೆಚ್ಚಿನ ಬಡ್ಡಿ ವಸೂಲಿ ಮಾಡಿದರೆ ಅದು ಕಾನೂನು ವಿರೋಧಿ ಚಟುವಟಿಕೆ ಆಗುತ್ತದೆ. ಆ ರೀತಿ ನೀಡಲಾಗುವ ಸಾಲ ಮರು ವಸೂಲಿಗೆ ಕಾನೂನು ಪ್ರಕಾರ ಅರ್ಹವಲ್ಲ. ಯಾಕೆಂದರೆ ಅಂತಹ ಸಾಲ ವಸೂಲಾತಿ ಅರ್ಜಿಗಳನ್ನು ಕಾನೂನು ಪ್ರಕಾರ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಒಳಪಡಿಸಲು ಸಾಧ್ಯವಿಲ್ಲ ಎಂದು ಸರ್ಕಾರ ವಿವರಣೆ ನೀಡಿದೆ ಎನ್ನಲಾಗಿದೆ.
ಕಾನೂನು ಪ್ರಕಾರವಾಗಿ ಪರವಾನಗಿಯುಳ್ಳ ಹಣಕಾಸು ಸಂಸ್ಥೆಗಳು ನಿಯಮ ಪ್ರಕಾರ ಸಾಲ ನೀಡಿದರೆ ವಸೂಲಿ ಮಾಡಬಾರದು ಎಂಬ ನಿಯಮವೇನಿಲ್ಲ ಎಂದೂ ಸರ್ಕಾರ ಸ್ಪಷ್ಟ ಪಡಿಸಿದೆ.