
ಮೇಕೆದಾಟು ಯೋಜನೆಗೆ ನಿರ್ದೇಶಕರ ನೇತೃತ್ವದಲ್ಲಿ ವಿಶೇಷ ತಂಡ ರಚನೆ, ಕಚೇರಿ ಸ್ಥಾಪನೆ
ಕೆಇಆರ್.ಎಸ್ ಸಂಸ್ಥೆಯು ತನ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ನೌಕರರನ್ನು ಬಳಸಿಕೊಂಡು ಈ ತಂಡವನ್ನು ರಚಿಸಿದೆ. ತಂಡದಲ್ಲಿ ಒಬ್ಬ ಕಾರ್ಯಪಾಲಕ ಇಂಜಿನಿಯರ್, ಮೂವರು ತಾಂತ್ರಿಕ ಸಹಾಯಕರು, ಆರು ಸಹಾಯಕ ಇಂಜಿನಿಯರ್ಗಳು ಸೇರಿದಂತೆ ಒಟ್ಟು 29 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ರಾಜ್ಯದ ಬಹುನಿರೀಕ್ಷಿತ ಮೇಕೆದಾಟು ಸಮತೋಲಿತ ಜಲಾನಯನ ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಪ್ರಮುಖ ಕ್ರಮ ಕೈಗೊಂಡಿದೆ. ಕರ್ನಾಟಕ ಇಂಜಿನಿಯರಿಂಗ್ ಸಂಶೋಧನಾ ಕೇಂದ್ರದ (ಕೆಇಆರ್.ಎಸ್) ನಿರ್ದೇಶಕರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿ ಆದೇಶ ಹೊರಡಿಸಲಾಗಿದೆ.
ಉಪ ಮುಖ್ಯ ಇಂಜಿನಿಯರ್ಗಳು ಮತ್ತು ಅಗತ್ಯ ಸಿಬ್ಬಂದಿಯನ್ನು ಒಳಗೊಂಡ ಈ ತಂಡವು ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರವನ್ನು ಕೇಂದ್ರ ಸ್ಥಾನವಾಗಿಟ್ಟುಕೊಂಡು ಕಾರ್ಯ ನಿರ್ವಹಿಸಲಿದೆ. ಮೇಕೆದಾಟು ಯೋಜನೆಗೆ ಸಂಬಂಧಿಸಿದ ಎಲ್ಲಾ ಕಾರ್ಯಗಳಿಗಾಗಿ ರಾಮನಗರದಲ್ಲೇ ಕಚೇರಿಯನ್ನು ಸ್ಥಾಪಿಸಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಹೊಸ ಕಚೇರಿ ಸ್ಥಾಪನೆ ಮತ್ತು ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆಯ ಅನುಮತಿ ಪಡೆಯಲು ಸಾಕಷ್ಟು ಸಮಯ ಬೇಕಾಗುವುದರಿಂದ, ಯೋಜನೆ ಜಾರಿಗೊಳಿಸುವ ಸಂಪೂರ್ಣ ಜವಾಬ್ದಾರಿಯನ್ನು ಕೆಇಆರ್.ಎಸ್ ನಿರ್ದೇಶಕರಿಗೆ ವಹಿಸಲು ಸರ್ಕಾರ ನಿರ್ಧರಿಸಿದೆ.
29 ಸದಸ್ಯರ ತಾಂತ್ರಿಕ ತಂಡ
ಕೆಇಆರ್.ಎಸ್ ಸಂಸ್ಥೆಯು ತನ್ನ ಅಸ್ತಿತ್ವದಲ್ಲಿರುವ ಅಧಿಕಾರಿಗಳು ಮತ್ತು ನೌಕರರನ್ನು ಬಳಸಿಕೊಂಡು ಈ ವಿಶೇಷ ತಂಡವನ್ನು ರಚಿಸಿದೆ. ಒಬ್ಬ ಕಾರ್ಯಪಾಲಕ ಇಂಜಿನಿಯರ್, ಮೂವರು ತಾಂತ್ರಿಕ ಸಹಾಯಕರು, ಆರು ಸಹಾಯಕ ಇಂಜಿನಿಯರ್ಗಳು, ಆಡಳಿತಾಧಿಕಾರಿ, ಲೆಕ್ಕಾಧೀಕ್ಷಕರು, ಶೀಘ್ರಲಿಪಿಗಾರರು, ಬೆರಳಚ್ಚುಗಾರರು ಮತ್ತು ಗ್ರೂಪ್ ಡಿ ಸಿಬ್ಬಂದಿ ಸೇರಿದಂತೆ ಒಟ್ಟು 29 ಸದಸ್ಯರನ್ನು ತಂಡಕ್ಕೆ ನಿಯೋಜಿಸಲಾಗಿದೆ.
ಕಾವೇರಿ ನಿಗಮದ ಅಧೀನದಲ್ಲಿ ಕಾರ್ಯ
ಈ ತಂಡವು [ಕಾವೇರಿ ನೀರಾವರಿ ನಿಗಮ ನಿಯಮಿತದ (ಕೆಎನ್ಎನ್.ಎಲ್) ವ್ಯವಸ್ಥಾಪಕ ನಿರ್ದೇಶಕರ ಅಧೀನದಲ್ಲಿ ಕಾರ್ಯನಿರ್ವಹಿಸುತ್ತದೆ. ಕಚೇರಿಯ ಕಟ್ಟಡ ವ್ಯವಸ್ಥೆ, ನಿರ್ವಹಣೆ, ಮೂಲಭೂತ ಸೌಕರ್ಯ ಮತ್ತು ಇತರೆ ವೆಚ್ಚಗಳನ್ನು ಕೆಎನ್ಎನ್.ಎಲ್ ತನ್ನ ಅನುದಾನದಿಂದಲೇ ಭರಿಸಲಿದೆ.
ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದ ಸಕಲ ಕಡತಗಳು ಮತ್ತು ದಾಖಲೆಗಳನ್ನು ಕೆಎನ್ಎನ್.ಎಲ್ ವ್ಯವಸ್ಥಾಪಕ ನಿರ್ದೇಶಕರು ತಕ್ಷಣವೇ ಕೆಇಆರ್.ಎಸ್ ನಿರ್ದೇಶಕರಿಗೆ ಹಸ್ತಾಂತರಿಸಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

