Girl commits suicide after friends death: Heartbreaking tragedy in Bengaluru
x

ಸಾಂದರ್ಭಿಕ ಚಿತ್ರ

ಸ್ನೇಹಿತೆಯ ಸಾವಿನಿಂದ ನೊಂದ ಬಾಲಕಿ ಆತ್ಮಹತ್ಯೆ: ಬೆಂಗಳೂರಿನಲ್ಲಿ ಮನಕಲಕುವ ದುರಂತ

ಶರ್ಮಿಳಾ ಮತ್ತು ಅವಳ ಸ್ನೇಹಿತೆ ವೈಶಾಲಿ ಒಂದೇ ಶಾಲೆಯಲ್ಲಿ ಓದುತ್ತಿದ್ದರು ಮತ್ತು ಅತ್ಯಂತ ಆಪ್ತ ಸ್ನೇಹಿತೆಯರಾಗಿದ್ದರು. ಕೆಲವು ದಿನಗಳ ಹಿಂದೆ ವೈಶಾಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಘಟನೆಯು ಶರ್ಮಿಳಾಳ ಮನಸ್ಸಿನ ಮೇಲೆ ಬಲವಾದ ಪರಿಣಾಮ ಬೀರಿತ್ತು.


Click the Play button to hear this message in audio format

ನಗರದ ಕಲಾಸಿಪಾಳ್ಯದಲ್ಲಿ ನಡೆದ ಮನಕಲಕುವ ಘಟನೆಯೊಂದರಲ್ಲಿ, ತನ್ನ ಆತ್ಮೀಯ ಸ್ನೇಹಿತೆಯ ಸಾವಿನಿಂದ ತೀವ್ರವಾಗಿ ನೊಂದ 9ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಕಲಾಸಿಪಾಳ್ಯದ ಕೋಟೆ 'ಡಿ' ರಸ್ತೆಯ ನಿವಾಸಿ, ತರಕಾರಿ ವ್ಯಾಪಾರಿ ಸಂತೋಷ್ ದಂಪತಿಯ ಪುತ್ರಿ ಶರ್ಮಿಳಾ (14) ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ಶರ್ಮಿಳಾ ಮತ್ತು ಅವಳ ಸ್ನೇಹಿತೆ ವೈಶಾಲಿ ಒಂದೇ ಶಾಲೆಯಲ್ಲಿ ಓದುತ್ತಿದ್ದರು ಮತ್ತು ಅತ್ಯಂತ ಆಪ್ತ ಸ್ನೇಹಿತೆಯರಾಗಿದ್ದರು. ಕೆಲವು ದಿನಗಳ ಹಿಂದೆ ವೈಶಾಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಘಟನೆಯು ಶರ್ಮಿಳಾಳ ಮನಸ್ಸಿನ ಮೇಲೆ ಬಲವಾದ ಪರಿಣಾಮ ಬೀರಿತ್ತು.

ಗೆಳತಿಯ ಅಗಲಿಕೆಯಿಂದ ಶರ್ಮಿಳಾ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಳು. "ವೈಶಾಲಿ ನನ್ನನ್ನು ತನ್ನೊಂದಿಗೆ ಬರುವಂತೆ ಕರೆಯುತ್ತಿದ್ದಾಳೆ, ಅವಳನ್ನು ಬಿಟ್ಟು ಇರಲು ಸಾಧ್ಯವಾಗುತ್ತಿಲ್ಲ" ಎಂದು ಶರ್ಮಿಳಾ ತನ್ನ ತಾಯಿಯ ಬಳಿ ಪದೇ ಪದೇ ಹೇಳಿಕೊಳ್ಳುತ್ತಿದ್ದಳು. ಮಗಳ ದುಃಖವನ್ನು ಅರಿತ ತಾಯಿ ಆಕೆಗೆ ಸಮಾಧಾನ ಹೇಳಿ ಧೈರ್ಯ ತುಂಬುವ ಪ್ರಯತ್ನ ಮಾಡಿದ್ದರು.

ದುರಂತ ಅಂತ್ಯ

ಶನಿವಾರ ರಾತ್ರಿ, ಶರ್ಮಿಳಾಳ ಪೋಷಕರು ತಮ್ಮ ಇಬ್ಬರು ಮಕ್ಕಳೊಂದಿಗೆ ತಮಿಳುನಾಡಿನ ದೇವಸ್ಥಾನಕ್ಕೆ ಹೋಗಿದ್ದರು. ಆಗ ಮನೆಯಲ್ಲಿ ಶರ್ಮಿಳಾ ಮತ್ತು ಅವಳ ಅಜ್ಜಿ ಮಾತ್ರ ಇದ್ದರು. ಭಾನುವಾರ ಸಂಜೆ, ಅಜ್ಜಿ ಮನೆಯಿಂದ ಹೊರಗೆ ಹೋಗಿದ್ದ ಸಮಯದಲ್ಲಿ, ಶರ್ಮಿಳಾ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆಯು ಪೋಷಕರು ಮತ್ತು ಸ್ಥಳೀಯರಲ್ಲಿ ಆಘಾತವನ್ನುಂಟುಮಾಡಿದೆ. ಕಲಾಸಿಪಾಳ್ಯ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಅಸಹಜ ಸಾವು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Read More
Next Story