Gang War Erupts Again in Parappana Agrahara Jail: Undertrial Prisoner Attacked by 8 Inmates
x

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ 

ಪರಪ್ಪನ ಅಗ್ರಹಾರ ಜೈಲಿನಲ್ಲಿ ಮತ್ತೆ ಗ್ಯಾಂಗ್ ವಾರ್: ವಿಚಾರಣಾಧೀನ ಕೈದಿ ಮೇಲೆ 8 ಮಂದಿಯಿಂದ ಹಲ್ಲೆ

ಪ್ರಕರಣವೊಂದರ ವಿಚಾರಣೆಗಾಗಿ ವಿಡಿಯೋ ಕಾನ್ಫರೆನ್ಸ್‌ಗೆ ಹಾಜರಾಗಲು ತೆರಳುತ್ತಿದ್ದಾಗ ಈ ಕೃತ್ಯ ಎಸಗಲಾಗಿದೆ.


ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ನಡುವಿನ ಮಾರಾಮಾರಿ ಘಟನೆಗಳು ಮುಂದುವರಿದಿದ್ದು, ವಿಚಾರಣಾಧೀನ ಕೈದಿಯೊಬ್ಬನ ಮೇಲೆ ಎಂಟು ಮಂದಿಯ ಗ್ಯಾಂಗ್ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆಯು ಜೈಲಿನ ಭದ್ರತಾ ವ್ಯವಸ್ಥೆಯ ಬಗ್ಗೆ ಮತ್ತೊಮ್ಮೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ವಿವರಗಳ ಪ್ರಕಾರ, ಆಗಸ್ಟ್ 22ರಂದು ಮಧ್ಯಾಹ್ನ ಸುಮಾರು 2.15ಕ್ಕೆ ಕೇಂದ್ರ ಕಾರಾಗೃಹದ ಭದ್ರತಾ ವಿಭಾಗ-2ರ ಕೊಠಡಿ ಸಂಖ್ಯೆ 6ರಲ್ಲಿ ಈ ಘಟನೆ ನಡೆದಿದೆ. ವಿಚಾರಣಾಧೀನ ಕೈದಿ ಅನಿಲ್ ಕುಮಾರ್ ಎಂಬಾತನ ಮೇಲೆ, ಭರತ್ ಕುಮಾರ್ ಅಲಿಯಾಸ್ ಕೆಟಿಎಂ ಭರತ್ ನೇತೃತ್ವದ ಎಂಟು ಕೈದಿಗಳ ಗ್ಯಾಂಗ್ ಮುಗಿಬಿದ್ದಿದೆ. ಪ್ರಕರಣವೊಂದರ ವಿಚಾರಣೆಗಾಗಿ ವಿಡಿಯೋ ಕಾನ್ಫರೆನ್ಸ್‌ಗೆ ಹಾಜರಾಗಲು ತೆರಳುತ್ತಿದ್ದಾಗ ಈ ಕೃತ್ಯ ಎಸಗಲಾಗಿದೆ. ಹಲ್ಲೆಯಿಂದ ಗಾಯಗೊಂಡ ಅನಿಲ್ ಕುಮಾರ್ ಅವರನ್ನು ಜೈಲು ಸಿಬ್ಬಂದಿ ತಕ್ಷಣವೇ ಕಾರಾಗೃಹದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು, ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಲ್ಲೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.

ಈ ಘಟನೆಯು ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆಯುತ್ತಿರುವ ಅಕ್ರಮಗಳು ಮತ್ತು ಹಿಂಸಾಚಾರದ ಸರಣಿಯ ಒಂದು ಭಾಗವಾಗಿದೆ. ಇತ್ತೀಚೆಗೆ ಪೊಲೀಸರು ನಡೆಸಿದ ದಾಳಿಗಳಲ್ಲಿ ಕೈದಿಗಳ ಬ್ಯಾರಕ್‌ಗಳಿಂದ ಮೊಬೈಲ್ ಫೋನ್‌ಗಳು, ನಗದು, ಇಂಡಕ್ಷನ್ ಸ್ಟೌವ್‌ಗಳು ಮತ್ತು ಚಾಕುಗಳಂತಹ ನಿಷೇಧಿತ ವಸ್ತುಗಳು ಪತ್ತೆಯಾಗಿದ್ದವು. ಜೈಲು ಸಿಬ್ಬಂದಿಯ ಸಹಕಾರವಿಲ್ಲದೆ ಇಂತಹ ವಸ್ತುಗಳು ಒಳಗೆ ಪ್ರವೇಶಿಸಲು ಸಾಧ್ಯವಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ, ಕೇಂದ್ರ ಕಾರಾಗೃಹದ ಅಧೀಕ್ಷಕ ಇಮಾಮ್‌ಸಾಬ್ ಅವರು ನೀಡಿದ ದೂರಿನ ಮೇರೆಗೆ ಹಲ್ಲೆ ನಡೆಸಿದ ಭರತ್ ಕುಮಾರ್ ಅಲಿಯಾಸ್ ಕೆಟಿಎಂ ಭರತ್, ಸುಮಂತ್ ಕುಮಾರ್, ಮಣಿಕಂಠ, ಮಹಮ್ಮದ್ ಯಾಸೀನ್, ಸೂರಿ, ಅರುಣ್ ಕುಮಾರ್, ಕಾರ್ತಿಕ್ ಹಾಗೂ ಭರತ್ ಕುಮಾರ್ ಅಲಿಯಾಸ್ ಹುಲಿ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಮುಂದುವರಿದಿದೆ

Read More
Next Story