
Bangalore Stampede| ಕಾಲ್ತುಳಿತ ದುರಂತ: ಸಿಎಂ, ಡಿಸಿಎಂ, ಹೋಮ್ ಮಿನಿಸ್ಟರ್ ವಿರುದ್ಧ ಪೊಲೀಸರಿಗೆ ದೂರು
ಕುಮಾರಸ್ವಾಮಿ ಜತೆ ಸೇರಿ ಬಿಜೆಪಿ ಬದಲಿಗೆ ಎನ್ಡಿಎ ಒಕ್ಕೂಟದ ಪತ್ರಿಕಾಗೋಷ್ಠಿಯಂತೆ ಮಾಡುವುದು, ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮತ್ತಷ್ಟು ಮುಜುಗರ ಸೃಷ್ಟಿಸುವುದು ಇದರ ಉದ್ದೇಶವಾಗಿದೆ ಎಂದು ಹೇಳಲಾಗಿದೆ
ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಗೃಹ ಸಚಿವ ಡಾ.ಜಿ. ಪರಮೇಶ್ವರ್ ವಿರುದ್ಧ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬುಧವಾರ(ಜೂ.4) ರಂದು ವಿಧಾನಸೌಧದ ಮೆಟ್ಟಿಲುಗಳ ಮೇಲೆ ಆರ್ಸಿಬಿ ಆಟಗಾರರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಂಜೆ ಕ್ರೀಡಾಂಗದ ಬಳಿ ಆರ್ಸಿಬಿ ವಿಜಯೋತ್ಸವ ಕಣ್ತುಂಬಿಕೊಳ್ಳಲು ಲಕ್ಷಾಂತರ ಅಭಿಮಾನಿಗಳು ಸೇರಿದ್ದರು. ಈ ವೇಳೆ ನೂಕುನುಗ್ಗಲು ಉಂಟಾಗಿ 11 ಜನರು ಮೃತಪಟ್ಟು 56 ಕ್ಕೂ ಹೆಚ್ಚು ಅಭಿಮಾನಿಗಳು ಗಾಯಗೊಂಡಿದ್ದರು. ಈ ದುರಂತಕ್ಕೆ ಸರ್ಕಾರವೇ ನೇರ ಕಾರಣವಾಗಿದ್ದು ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.
ದೂರಿನಲ್ಲೇನಿದೆ ?
ಮಂಗಳವಾರ(ಜೂ.3) ದಂದು ನಡೆದ ಐಪಿಎಲ್ ಫೈನಲ್ ಪಂದ್ಯಾವಳಿಯಲ್ಲಿ ಆರ್ಸಿಬಿ ಗೆಲುವು ಸಾಧಿಸಿತ್ತು. ಬುಧವಾರ ತಂಡ ಬೆಂಗಳೂರಿಗೆ ಆಗಮಿಸಲಿದ್ದು ಲಕ್ಷಾಂತರ ಅಭಿಮಾನಿಗಳು ಕ್ರೀಡಾಪಟುಗಳನ್ನು ನೋಡಲು ಆಗಮಿಸುತ್ತಾರೆ ಎಂದು ಗುಪ್ತಚರದಳಕ್ಕೆ ತಿಳಿದಿತ್ತು. ಆದರೂ ಯಾವುದೇ ಪೂರ್ವ ತಯಾರಿ ಇಲ್ಲದೆ ಸಿಎಂ ಹಾಗೂ ಡಿಸಿಎಂ ಅಧಿಕಾರಿಗಳ ಮೇಲೆ ಒತ್ತಡ ತಂದು ಕಾರ್ಯಕ್ರಮ ಆಯೋಜಿಸಿದ್ದಾರೆ. ಸಮಾರಂಭದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮುಖ್ಯಮಂತ್ರಿಯವರ ಅಧಿಕೃತ ʼಎಕ್ಸ್ʼ ಖಾತೆಯಿಂದ ಮುಕ್ತ ಆಹ್ವಾನ ಕೊಟ್ಟ ಪರಿಣಾಮ ವಿಧಾನಸೌಧ ಹಾಗೂ ಕ್ರೀಡಾಂಗಣದ ಬಳಿ ಲಕ್ಷಾಂತರ ಅಭಿಮಾನಿಗಳು ಸೇರಿದ್ದರಿಂದ ಈ ದುರಂತ ಸಂಭವಿಸಿದೆ.
ಸರ್ಕಾರದ ನಿರ್ಲಕ್ಷ್ಯ, ಕಾರ್ಯಕ್ರಮ ಆಯೋಜಿಸಲು ಯಾವುದೇ ಪೂರ್ವ ತಯಾರಿ ಮಾಡಿಕೊಳ್ಳದಿರುವುದು, ಸಾವು-ನೋವು ಸಂಭವಿಸಬಹುದು ಎಂಬ ಮಾಹಿತಿ ಇದ್ದರೂ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಂಡು ಕಾರ್ಯಕ್ರಮ ಆಯೋಜನೆ ಮಾಡಿರುವ ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಿಳಿಸಿದ್ದಾರೆ.
ಅಮಿತ್ ಶಾ ಸೂಚನೆ
ಆರ್ಸಿಬಿ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಸಂಭವಿಸಿ 11 ಮಂದಿ ಮೃತಪಟ್ಟಿರುವ ಘಟನೆ ರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಮುಜುಗರ ಸೃಷ್ಟಿಸುತ್ತಿದ್ದಂತೆ, ರಾಷ್ಟ್ರೀಯ ಬಿಜೆಪಿ ನಾಯಕರು ಕಣಕ್ಕಿಳಿದಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಪ್ರಾರಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ವಿರೋಧ ಪಕ್ಷ ನಾಯಕ ಆರ್. ಅಶೋಕ್ ಅವರಿಗೆ ಸಿದ್ದರಾಮಯ್ಯ ಸರ್ಕಾರವನ್ನು ನೇರವಾಗಿ ತರಾಟೆಗೆ ತೆಗೆದುಕೊಳ್ಳಲು ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಕುಮಾರಸ್ವಾಮಿ ಅವರು ಪತ್ರಿಕಾಗೋಷ್ಠಿಯಲ್ಲಿ ಸರ್ಕಾರವನ್ನು ಟೀಕಿಸುವ ಜತೆಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು. "ಸಿಎಂ ಜತೆ ಜತೆ ಇಪ್ಪತ್ತನಾಲ್ಕು ಗಂಟೆ ʼಗೋವಿಂದ.. ಗೋವಿಂದ..ʼ ಎನ್ನುವ ವ್ಯಕ್ತಿ ಇದ್ದಾರೆ. ಕಮಿಷನರ್ ವಿಧಾನಸೌಧ ಮುಂದೆ ಆರ್ಸಿಬಿ ಸಮಾರಂಭಕ್ಕೆ ಅನುಮತಿ ನೀಡಲು ನಿರಾಕರಿಸಿದಾಗ ಸಿಎಂಗೆ ಒತ್ತಡ ಹಾಕಿ ಅನುಮತಿ ಕೊಡಿಸ್ತಾರೆ," ಎಂದು ಹೇಳಿಕೆ ನೀಡಿದ್ದರು.
ಅವರ ಟೀಕೆ, ಸಿಂ ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿ ಆಗಿರುವ ಎಸ್. ಗೋವಿಂದರಾಜು ಅವರ ಕುರಿತಂತೆ ಆಗಿತ್ತು. ಪತ್ರಿಕಾಗೋಷ್ಠಿ ಬಳಿಕ ಕೆಲವೇ ಹೊತ್ತಿನಲ್ಲಿ ಗೋವಿಂದ ರಾಜು ಅವರ ರಾಜಕೀಯ ಕಾರ್ಯದರ್ಶಿ ಸ್ಥಾನವನ್ನು ಹಿಂಪಡೆಯಲಾಗಿದೆ. ಈ ಮೂಲಕ ಅಮಿತ್ ಶಾ ಸೂಚನೆಯಂತೆ ನಡೆದ ಕುಮಾರಸ್ವಾಮಿ ಸಹಿತ ನಡೆದ ಜಂಟಿ ಪತ್ರಿಕಾಗೋಷ್ಠಿ ಪರಿಣಾಮ ಬೀರಿದೆ.
ಘಟನೆ ನಡೆದ ತಕ್ಷಣ ಪ್ರಮುಖವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಬೊಟ್ಟು ಮಾಡಿ ಕುಮಾರಸ್ಬಾಮಿ ಅವರು ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಬೇಕೆಂದು ಬಿಜೆಪಿ ರಾಜ್ಯ ನಾಯಕರು ಸಿದ್ಧತೆ ನಡೆಸಿದ್ದರು. ಈಗ ಅಮಿತ್ ಶಾ ಅವರ ಸೂಚನೆಯಂತೆ ಕುಮಾರಸ್ವಾಮಿ ಮತ್ತು ಬಿಜೆಪಿ ನಾಯಕರು ಜಂಟಿ ಪತ್ರಿಕಾಗೋಷ್ಠಿ ನಡೆಸಲು ತೀರ್ಮಾನಿಸಿದ್ದಾರೆ ಎಂದು ನಾಯಕರೊಬ್ಬರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದ್ದಾರೆ.
ರಾಜ್ಯ ಬಿಜೆಪಿ ನಾಯಕರು ರಾಜ್ಯ ಕಾಂಗ್ರೆಸ್ ವಿರುದ್ಧ ಅಷ್ಟೇನೂ ಪ್ರಭಾವಯುತವಾಗಿ ದಾಳಿ ನಡೆಸುತ್ತಿಲ್ಲ. ನಾಯಕತ್ವ ಸಮಸ್ಯೆಯೂ ಇದೆ. ಹಾಗಾಗಿ ಕುಮಾರಸ್ವಾಮಿ ಜತೆ ಸೇರಿ ಬಿಜೆಪಿ ಬದಲಿಗೆ ಎನ್ಡಿಎ ಒಕ್ಕೂಟದ ಪತ್ರಿಕಾಗೋಷ್ಠಿಯಂತೆ ಮಾಡುವುದು, ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮತ್ತಷ್ಟು ಮುಜುಗರ ಸೃಷ್ಟಿಸುವುದು ಇದರ ಉದ್ದೇಶವಾಗಿದೆ ಎಂದು ಹೇಳಲಾಗಿದೆ.
ಬಂಧನ
ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ಕಾರ್ಯಕ್ರಮ ಆಯೋಜಕರು ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯ ಮೇರೆಗೆ ಡಿಎನ್ಎ ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಯ ಮೂವರು ಹಾಗೂ ಆರ್ಸಿಬಿ ಮಾರ್ಕೆಟಿಂಗ್ ಹೆಡ್ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಡಿಎನ್ಎ ಇವೆಂಟ್ ಮ್ಯಾನೇಜ್ಮೆಂಟ್ನ ಸುನೀಲ್ ಮ್ಯಾಥ್ಯೂ, ಕಿರಣ್ ಮತ್ತು ವಿನೋದ್, ಆರ್ಸಿಬಿ ಮಾರ್ಕೆಟಿಂಗ್ ಹೆಡ್ ನಿಖಿಲ್ ಬಂಧಿತರು.
ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿಂತೆ ಗುರುವಾರ ರಾತ್ರಿ ತುರ್ತು ಸುದ್ದಿಗೋಷ್ಠಿ ನಡೆಸಿದ್ದ ಸಿಎಂ, ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. 2 ಎಫ್ಐಆರ್ ಸಿಐಡಿಗೆ ವಹಿಸಿರುವುದಾಗಿ ತಿಳಿಸಿದ್ದರು. ಜತೆಗೆ ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಪೊಲೀಸ್ ಆಯುಕ್ತ ಬಿ. ದಯಾನಂದ ಮತ್ತು ಇತರ ಐವರು ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಿದ್ದರು.
ಈಗ ಕಾಲ್ತುಳಿತಕ್ಕೆ ಕಾರಣರಾದ ಆರ್ಸಿಬಿ ಆಡಳಿತ ಮಂಡಳಿ, ಡಿಎನ್ಎ ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆ ಹಾಗೂ ಕೆಎಸ್ಸಿಎ ಪ್ರತಿನಿಧಿಗಳನ್ನು ಬಂಧಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಈ ಬೆನ್ನಲ್ಲೇ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಹಲವರು ಎಸ್ಕೇಪ್
ಕೆಎಸ್ಸಿಎ ಪ್ರಮುಖರು ಗುರುವಾರ ರಾತ್ರೀಯೇ ತಪ್ಪಿಸಿಕೊಂಡಿದ್ದು, ಅವರ ಮನೆಗಳಿಗೆ ತೆರಳಿ ಪೊಲೀಸರು ಅವರಿಗಾಗಿ ಹುಡುಕಾಟ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಏನಿದು ಪ್ರಕರಣ?
ರಾಯಲ್ ಚಾಲೆಂಜರ್ಸ್ ಬೆಂಗಳೂರು 18 ವರ್ಷಗಳ ಬಳಿಕ ಐಪಿಎಲ್ ಕಪ್ ಗೆದ್ದುಕೊಂಡ ಹಿನ್ನಲೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವಿಜಯೋತ್ಸವ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ದಿಢೀರನೆ ವಿಜಯೋತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದರಿಂದ ಅಭಿಮಾನಿಗಳ ದಂಡೇ ಕ್ರೀಡಾಂಗಣಕ್ಕೆ ಹರಿದು ಬಂದಿತ್ತು. ಗೇಟ್ ನಂಬರ್ 18, 19, 20ರ ಬಳಿ ನೆರೆದಿದ್ದ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಲಾಠಿಯನ್ನೂ ಬೀಸಿದ್ದರು. ಆದರೆ, ಗೇಟ್ ನಂ.12ರ ಬಳಿ ಗೇಟ್ ತೆಗೆಯುತ್ತಿದ್ದಂತೆಯೇ ಭಾರೀ ಪ್ರಮಾಣದಲ್ಲಿ ನೂಕು ನುಗ್ಗಲು ನಡೆದಿತ್ತು. ಒಬ್ಬರ ಮೇಲೋಬ್ಬರು ಬಿದ್ದರು, ಉಸಿರಾಡಲೂ ಕೂಡ ಸಾಧ್ಯವಾಗಲಿಲ್ಲ. ತಕ್ಷಣವೇ ಹತ್ತಿರದ ಬೌರಿಂಗ್ ಆಸ್ಪತ್ರೆ, ವೈದೇಹಿ ಆಸ್ಪತ್ರೆ , ಮಣಿಪಾಲ್ಗೆ ದಾಖಲಿಸಲಾಯಿತು. ಆದರೆ, ಬೌರಿಂಗ್ ಆಸ್ಪತ್ರೆಯಲ್ಲಿ 7, ವೈದೇಹಿ ಆಸ್ಪತ್ರೆಯಲ್ಲಿ 4 ಹಾಗೂ ಮಣಿಪಾಲ ಆಸ್ಪತ್ರೆಯಲ್ಲಿ ಒಟ್ಟು ಸೇರಿ 11 ಮಂದಿ ಪ್ರಾಣ ಕಳೆದುಕೊಂಡರು. ಮತ್ತು ಹಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಪೊಲೀಸ್ ಆಯುಕ್ತರು ಅಮಾನತು
ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸೂಕ್ತ ಬಂದೋಬಸ್ತ್ ಕಲ್ಪಿಸದ ಹಿನ್ನೆಲೆಯಲ್ಲಿ ಕಾಲ್ತುಳಿತ ಸಂಭವಿಸಿದ್ದು, ಘಟನೆಗೆ ಹೊಣೆಯಾಗಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ಕೇಂದ್ರ ವಲಯ ಡಿಸಿಪಿ ಟಿ.ಶೇಖರ್, ಎಸಿಪಿ ಬಾಲಕೃಷ್ಣ, ಕ್ರೀಡಾಂಗಣದ ಉಸ್ತುವಾರಿ ವಹಿಸಿದ್ದ ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ವಿಕಾಸ್ ಹಾಗೂ ಕಬ್ಬನ್ ಪಾರ್ಕ್ ಪೊಲೀಸ್ ಇನ್ಸ್ಪೆಕ್ಟರ್ ಗಿರೀಶ್ ಹಾಗೂ ಸಿಬ್ಬಂದಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಲು ಸಿ.ಎಂ ಸಿದ್ದರಾಮಯ್ಯ ಗುರುವಾರ ತುರ್ತು ಪತ್ರಿಕಾಗೋಷ್ಟಿಯಲ್ಲಿ ಘೋಷಣೆ ಮಾಡಿದ್ದರು.
ನ್ಯಾಯಾಂಗ ತನಿಖೆಗೆ ಆದೇಶ
ಇನ್ನು ಕಾಲ್ತುಳಿತ ದುರಂತದ ಕುರಿತು ಸಿಐಡಿ ತನಿಖೆ ಜೊತೆಗೆ ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿ.ಕುನ್ಹಾ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೂ ಸರ್ಕಾರ ಆದೇಶಿಸಿದೆ. ಗುರುವಾರ ನಡೆದ ಸಚಿವ ಸಂಪುಟದಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕೃತವಾಗಿ ಹೇಳಿಕೆ ನೀಡಿದ್ದರು.
Live Updates
- 6 Jun 2025 2:31 PM IST
ಕಾಲ್ತುಳಿತ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿರುವುದು ನಾಚಿಕೆಗೇಡು: ಎಚ್.ಕೆ. ಪಾಟೀಲ್
ಆರ್ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳಷ್ಟೇ ಅಲ್ಲದೆ ಲೋಪವೆಸಗಿದವರ ಎಲ್ಲರ ಮೇಲೂ ಕ್ರಮವಹಿಸಿದ್ದೇವೆ. ತನಿಖೆ ನಡೆಯುತ್ತಿದ್ದು ತರಾತುರಿಯಲ್ಲಿ ಕಾರ್ಯಕ್ರಮಕ್ಕೆ ಅವಕಾಶ ನೀಡಲಾಗಿತ್ತೇ ಎಂಬುದು ಗೊತ್ತಾಗಲಿದೆ. ಈ ಘಟನೆಯಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈಗಾಗಲೇ ಹಲವರನ್ನು ಬಂಧಿಸಲಾಗಿದೆ. ಸರ್ಕಾರ ಏಕಸದಸ್ಯ ಆಯೋಗ ರಚಿಸಿದ್ದು ಶೀಘ್ರವೇ ತನಿಖೆ ಆರಂಭವಾಗಲಿದ್ದು ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆಯಾಗಲಿದೆ ಎಂದರು.
- 6 Jun 2025 1:49 PM IST
ಕಾಲ್ತುಳಿತದ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ: ಸಿಎಂ ಸಿದ್ದರಾಮಯ್ಯ
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಬಿಜೆಪಿಯವರು ಪೊಲೀಸ್ ಅಧಿಕಾರಿಗಳನ್ನು ಬಲಿಪಶು ಮಾಡಿದ್ದಾರೆ ಎಂದು ಆರೋಪ ಮಾಡಿರುವ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಪ್ರಕರಣದಲ್ಲಿ ನಾನು ರಾಜಕೀಯ ಮಾತನಾಡುವುದಿಲ್ಲ. ಮೇಲ್ನೋಟಕ್ಕೆ ಜವಾಬ್ದಾರಿ ನಿರ್ವಹಿಸದ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲಾಗಿದೆ ಎಂದರು.
- 6 Jun 2025 1:40 PM IST
ಹೆಚ್ಡಿಕೆ ನಾಟಕ ಆಡುವುದರಲ್ಲಿ ಪರಿಣಿತರು: ಡಿ.ಕೆ. ಸುರೇಶ್ ತಿರುಗೇಟು
ಕಾಲ್ತುಳಿತ ವಿಚಾರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಣ್ಣಿರು ಹಾಕಿರುವುದು ಕೇವಲ ಡ್ರಾಮ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದರು. ಇದಕ್ಕೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಡಿ.ಕೆ. ಸುರೇಶ್, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಾಟಕ ಆಡುವುದರಲ್ಲಿ ಪರಿಣಿತರು ಎಂದು ತಿರುಗೇಟು ನೀಡಿದ್ದಾರೆ.
- 6 Jun 2025 12:50 PM IST
ರಾಜ್ಯದಲ್ಲೊಬ್ಬರು ಗೂಂಡಾ ಇದ್ದಾರೆ: ಹೆಚ್.ಡಿ. ಕುಮಾರಸ್ವಾಮಿ
ಬೆಂಗಳೂರಿನಲ್ಲಿ ನಡೆದ ಆರ್ಸಿಬಿ ವಿಜಯೋತ್ಸವ ಸಮಾರಂಭದ ಕಾಲ್ತುಳಿತ ದುರಂತದ ನಂತರ ರಾಜ್ಯ ರಾಜಕೀಯದಲ್ಲಿ ಆರೋಪ-ಪ್ರತ್ಯಾರೋಪಗಳು ತೀವ್ರಗೊಂಡಿವೆ. ಈ ಮಧ್ಯೆ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಶುಕ್ರವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, "ರಾಜ್ಯದಲ್ಲೊಬ್ಬರು ಗೂಂಡಾ ಇದ್ದಾರೆ" ಎಂಬ ಹೇಳಿಕೆ ನೀಡಿದ್ದಾರೆ. ಅವರು ಯಾರ ಕುರಿತು ಇಂಥದ್ದೊಂದು ಹೇಳಿಕೆ ನೀಡಿದ್ದಾರೆ ಎಂಬುದಾಗಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ.
- 6 Jun 2025 12:41 PM IST
ಬಿಜೆಪಿ-ಜೆಡಿಎಸ್ ಮೈತ್ರಿ ಗಟ್ಟಿಯಾಗಿದೆ: "ಅಸೂಯೆ" ಆರೋಪಕ್ಕೆ ಹೆಚ್.ಡಿ. ಕುಮಾರಸ್ವಾಮಿ ತಿರುಗೇಟು
ಅಧಿಕಾರಿಗಳ ಅಮಾನತು ವಿರೋಧಿಸಿ ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಬಿಜೆಪಿ-ಜೆಡಿಎಸ್ ಮೈತ್ರಿಯ ಬಲವನ್ನು ಪುನರುಚ್ಚರಿಸಿದ್ದಾರೆ. ನಮ್ಮ ಬಂಧ ಗಟ್ಟಿಯಾಗಿದೆ ಎಂದು ಅವರು ಹೇಳಿದ್ದಾರೆ.
ತಮ್ಮ ಹೇಳಿಕೆಗಳನ್ನು "ಅಸೂಯೆ" ಎಂದು ಕರೆದ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದು, ತಮ್ಮ ಇಲಾಖೆಯ ಅಭಿವೃದ್ಧಿ ಕಾಮಗಾರಿಗಳನ್ನು ಉಲ್ಲೇಖಿಸಿ ತಿರುಗೇಟು ನೀಡಿದ್ದಾರೆ.
"ಬಿಜೆಪಿ ಜೆಡಿಎಸ್ ಮೈತ್ರಿ ಗಟ್ಟಿಯಾಗಿದೆ. ನಮ್ಮನ್ನು ಬೇರೆ ಮಾಡಲು ಆಗಲ್ಲ" ಎಂದು ಕುಮಾರಸ್ವಾಮಿ ದೃಢವಾಗಿ ಹೇಳಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಉತ್ತಮ ಸಾಧನೆ ಮಾಡಿವೆ. ಈ ಮೈತ್ರಿ ಮುಂದುವರಿಸಿಕೊಂಡು ಹೋಗುವ ಇರಾದೆ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ನಾಯಕರು ಈ ಮೈತ್ರಿಯನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಹೇಳಿಕೆ ಮಹತ್ವ ಪಡೆದಿದೆ.
- 6 Jun 2025 12:39 PM IST
ಕಾಂಗ್ರೆಸ್ ಹೈಕಮಾಂಡ್ಗೆ ಲೂಟಿ ಮಾಡುವುದಷ್ಟೇ ಗೊತ್ತು: ಎಚ್ಡಿಕೆ ಆರೋಪ
ಆಸ್ಪತ್ರೆಯಲ್ಲಿ ಗಾಯಾಳುಗಳಿದ್ದು, ಸಾವು ನೋವು ಸಂಭವಿಸುತ್ತಿದ್ದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಜನಾರ್ಧನಹೊಟೇಲ್ ನಲ್ಲಿ ಸಿಹಿ ತಿಂಡಿ ತಿನ್ನುತ್ತಿದ್ದರು. ಘಟನೆಗೆ ಅಧಿಕಾರಿಗಳ ತಪ್ಪು ಏನಿಲ್ಲ ಎಂದು ಎಫ್ಐಆರ್ನಲ್ಲಿ ದಾಖಲಾಗಿದೆ. ಸಿಎಂ ರಾಜಕೀಯ ಕಾರ್ಯದರ್ಶಿ ಮೊದಲು ಅವರನ್ನು ಹೊರಗೆಹಾಕಬೇಕು. ಸರ್ಕಾರದ ತನಿಖೆಯಿಂದ ಸತ್ಯಾಂಶ ಹೊರ ಬರುವುದಿಲ್ಲ. ಸರ್ಕಾರದಲ್ಲಿಎರಡೂವರೆ ವರ್ಷದ ಸಿಎಂ ಬದಲಾವಣೆ ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್ ಹೈಕಮಾಂಡ್ ಗೆ ಏನಾದರು ಮನುಷ್ಯತ್ವ ಇದ್ದರೆ ಸಿದ್ದರಾಮಯ್ಯ ಹಾಗು ಡಿಕೆಶಿ ಇಬ್ಬರನ್ನು ಹೊರಗೆ ಹಾಕಿ ಹೊಸಬರನ್ನು ಸಿಎಂ ಮಾಡಬೇಕು. ಇಂತಹ ಕೆಟ್ಟ ಆಡಳಿತ ಎಂದೂ ನೋಡಿಲ್ಲ ಎಂದು ಸಚಿವರು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ನನಗೆ ಎರಡು ದೊಡ್ಡ ಖಾತೆ ನೀಡಿದ್ದಾರೆ. ನನಗೆ ಅಧಿಕಾರ ಇದೆ. ಎಚ್ಎಂಟಿ ಪುನಶ್ಚೇತನ ಮಾಡುತ್ತೇನೆ, ಶಿವಮೊಗ್ಗದ ವಿಐಎಸ್ಎಲ್ಗೂ ಡಿಪಿಆರ್ ಸಿದ್ದಮಾಡುತ್ತಿದ್ದೇನೆ ಎಂದು ಎಚ್ಡಿಕೆ ತಿಳಿಸಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಮನುಷ್ಯತ್ವಕ್ಕಾದರೂ ಕನಿಕರದ ಮಾತನಾಡಿಲ್ಲ. ಹೈಕಮಾಂಡ್ಗೆ ರಾಜ್ಯದಿಂದ ಲೂಟಿ ಮಾಡುವುದು ಅಷ್ಟೆ ಗೊತ್ತು. ರಾಜ್ಯದ ಗೃಹ ಸಚಿವ ಪರಮೇಶ್ವರ್ ಕೀಲುಕುದುರೆ ಇದ್ದ ಹಾಗೆ ಎಂದು ತಿಳಿಸಿದ್ದಾರೆ.
- 6 Jun 2025 12:23 PM IST
ಮಧ್ಯಾಹ್ನ 3.10 ಕ್ಕೆ ಒಬ್ಬ ಮೃತಪಟ್ಟಿದ್ದರೂ ಕಾರ್ಯಕ್ರಮ ಮುಂದವರಿಸಿದ್ದ ಸರ್ಕಾರ ; ಎಚ್ಡಿಕೆ ಆರೋಪ
ಆರ್ಸಿಬಿ ವಿಜಯೋತ್ಸವ ಸಮಾರಂಭದ ಕಾಲ್ತುಳಿತ ದುರಂತಕ್ಕೆ ರಾಜ್ಯ ಸರ್ಕಾರದ ಸಂಪೂರ್ಣ ನಿರ್ಲಕ್ಷ್ಯವೇ ಕಾರಣ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮತ್ತೊಮ್ಮೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾರ್ಯಕ್ರಮದ ಆಯೋಜನೆಯಲ್ಲಿನ ಗೊಂದಲಗಳು, ಸರ್ಕಾರದ ನಿಧಾನಗತಿಯ ಪ್ರತಿಕ್ರಿಯೆ ಮತ್ತು ಸಚಿವರ ಮಕ್ಕಳ ಅಸಂಬದ್ಧ ವರ್ತನೆಯನ್ನು ಅವರು ಕಟುವಾಗಿ ಟೀಕಿಸಿದ್ದಾರೆ.
ವಿಧಾನಸೌಧ ಮುಂದೆ ಆರ್ಸಿಬಿ ಆಟಗಾರರಿಗೆ ಸನ್ಮಾನ ಮಾಡಿದ ರೀತಿ ನೋಡಿದರೆ ಗೊತ್ತಾಗುತ್ತದೆ ಎಷ್ಟು ಗೊಂದಲ ಇದೆ" ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಇದು ಕಾರ್ಯಕ್ರಮದ ಯೋಜನೆಯಲ್ಲಿ ಸ್ಪಷ್ಟತೆಯ ಕೊರತೆ ಮತ್ತು ಅವ್ಯವಸ್ಥೆ ಕಾಣುತ್ತದೆ. ಈವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಗಳು ವಿಧಾನಸೌಧ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣ ಎರಡೂ ಕಡೆ ಕಾರ್ಯಕ್ರಮಕ್ಕೆ ಅವಕಾಶ ಕೋರಿದ್ದು, ಸರ್ಕಾರದ ಮಟ್ಟದಲ್ಲಿ ಈ ಬಗ್ಗೆ ಸ್ಪಷ್ಟ ನಿರ್ಧಾರವಾಗದಿರುವುದು ಗೊಂದಲಕ್ಕೆ ಕಾರಣವಾಗಿದೆ ಎಂದು ಅವರು ಪರೋಕ್ಷವಾಗಿ ಆರೋಪಿಸಿದ್ದಾರೆ.
ವೇದಿಕೆಯಲ್ಲಿ ಅಸಂಬದ್ಧ ವರ್ತನೆ
"ವೇದಿಕೆಯಲ್ಲಿ ಸಚಿವರ ಮಕ್ಕಳು, ನಂಟರಿಷ್ಟರು ಸೇರಿಕೊಂಡು ಕೂಲಿಂಗ್ ಗ್ಲಾಸ್ ಹಾಕಿಕೊಂಡಿದ್ದರು" ಎಂದು ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಸರ್ಕಾರದ ಪ್ರತಿನಿಧಿಗಳ ಕುಟುಂಬ ಸದಸ್ಯರ ಅಪ್ರಬುದ್ಧ ಮತ್ತು ಬೇಜವಾಬ್ದಾರಿಯುತ ವರ್ತನೆ ಎತ್ತಿ ತೋರಿಸುತ್ತದೆ. ಇದು ಸಾರ್ವಜನಿಕರನ್ನು ಕೆರಳಿಸಿದೆ.
ದುರಂತದ ಅರಿವಿದ್ದರೂ ಸಂಭ್ರಮಾಚರಣೆ
"3.10 ಕ್ಕೆ ಕಾಲ್ತುಳಿತಕ್ಕೆ ಒಬ್ಬ ಸತ್ತಿರುವುದು ಸರ್ಕಾರದ ಗಮನಕ್ಕೆ ಬಂದರೂ ಸರ್ಕಾರ ಸಂಭ್ರಮಾಚರಣೆ ಮುಂದುವರಿಸಿತ್ತು" . ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಬಂದ ನಂತರವೂ ಸರ್ಕಾರವು ಕಾರ್ಯಕ್ರಮವನ್ನು ಮುಂದುವರಿಸಿದೆ ಎಂದರೆ, ಇದು ಸರ್ಕಾರದ ಸಂಪೂರ್ಣ ನಿರ್ಲಕ್ಷ್ಯ ಎತ್ತಿ ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ,
- 6 Jun 2025 12:18 PM IST
ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮ ಗೊಂದಲದ ಗೂಡಾಗಿತ್ತು: ಸಚಿವ ಎಚ್ಡಿಕೆ
ವಿಧಾನಸೌಧ ಮುಂದೆ ಆರ್ಸಿಬಿ ಆಟಗಾರರಿಗೆ ಸನ್ಮಾನ ಮಾಡಿದ ರೀತಿ ನೋಡಿದರೆ ಗೊತ್ತಾಗುತ್ತದೆ ಎಷ್ಟು ಗೊಂದಲ ಇದೆ ಎಂದು. ವೇದಿಕೆಯಲ್ಲಿ ಸಚಿವರ ಮಕ್ಕಳು, ಸಂಬಂಧಿಕರು ಸೇರಿಕೊಂಡು ಕೂಲಿಂಗ್ ಗ್ಲಾಸ್ ಹಾಕಿಕೊಂಡಿದ್ದರು. ಬುಧವಾರ ಮಧ್ಯಾಹ್ನ 3.10 ಕ್ಕೆ ಕಾಲ್ತುಳಿತಕ್ಕೆ ಒಬ್ಬರು ಮೃತಪಟ್ಟಿರುವುದು ಸರ್ಕಾರದ ಗಮನಕ್ಕೆ ಬಂದರೂ ಸರ್ಕಾರ ಸಂಭ್ರಮಾಚರಣೆ ಮಾಡುತ್ತಿದ್ದರು. ನಂತರ ಕ್ರೀಡಾಂಗಣಕ್ಕೆ ಡಿಕೆಶಿ ಹೋಗಿ ಟ್ರೋಪಿಗೆ ಮುತ್ತಿಡುತ್ತಿದ್ದರು. ಈವೆಂಟ್ ಮ್ಯಾನೇಜ್ ಮೆಂಟ್ನವರು ವಿಧಾನಸೌಧ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎರಡೂ ಕಡೆ ಕಾರ್ಯಕ್ರಮಕ್ಕೆ ಅವಕಾಶಕೋರಿದ್ದರು. ಅನುಮತಿ ನೀಡಿದ್ದು ಯಾರು ಎಂದು ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
- 6 Jun 2025 12:13 PM IST
ಡಿಕೆಶಿ ವರ್ತನೆ ಕುರಿತು ಹೆಚ್.ಡಿ. ಕುಮಾರಸ್ವಾಮಿ ಟೀಕೆ: "ಕಣ್ಣೀರಿನ ಡ್ರಾಮಾ' ಎಂದ ಸಚಿವರು
ಕಾಲ್ತುಳಿತ ವಿಚಾರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವರ್ತನೆಯನ್ನು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರವಾಗಿ ಟೀಕಿಸಿದ್ದಾರೆ. ಡಿಕೆಶಿ ಅವರು ಕಪ್ ಗೆದ್ದ ಆರ್ಸಿಬಿ ತಂಡವನ್ನು ನೇರವಾಗಿ ಸ್ವಾಗತಿಸಿ, ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದು ಮತ್ತು ನಂತರ ಕಣ್ಣೀರು ಹಾಕಿದ್ದು ಕೇವಲ "ಡ್ರಾಮಾ" ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.
ಡಿಸಿಎಂ ಕನಕಪುರದಿಂದ ನೇರವಾಗಿ ಹೆಚ್ಎಎಲ್ಗೆ ಹೋಗಿ ಶೋ ಆಫ್ ಮಾಡಿದ್ದಾರೆ. ಆರ್ಸಿಬಿ ತಂಡ ಬೆಂಗಳೂರಿಗೆ ಆಗಮಿಸುತ್ತಿದ್ದಂತೆ, ಡಿಕೆಶಿ ಅವರು ತರಾತುರಿಯಲ್ಲಿ ಹೋಗಿ ತಮ್ಮನ್ನು ಬಿಂಬಿಸಿಕೊಳ್ಳಲು ಪ್ರಯತ್ನಿಸಿದ್ದರು ಎಂದು ಕುಮಾರಸ್ವಾಮಿ ದೂರಿದ್ದಾರೆ.
"ಡಿಸಿಎಂ ಆರ್ಸಿಬಿಗೆ ಎಸ್ಕಾರ್ಟ್ ಮಾಡಿ ಹೋಟೆಲ್ಗೆ ಬಿಟ್ಟಿದ್ದಾರೆ. ವಿಜಯೋತ್ಸವದ ಆಯೋಜನೆಯಲ್ಲಿ ಡಿಕೆಶಿ ಅವರ ಪಾತ್ರ ಬಹಳ ದೊಡ್ಡದಿತ್ತು ಮತ್ತು ಅವರು ತಂಡವನ್ನು ಸ್ವಾಗತಿಸುವಲ್ಲಿ ಪ್ರಮುಖವಾಗಿ ನಿಂತಿದ್ದರು ಎಂದು ಕುಮಾರಸ್ವಾಮಿ ಸೂಚಿಸಿದ್ದಾರೆ.
ಮೊಸಳೆ ಕಣ್ಣೀರು
ಡಿಕೆ ಶಿವಕುಮಾರ್ 24 ಗಂಟೆ ಬಳಿಕ ಕಣ್ಣೀರು ಹಾಕಿದ್ದಾರೆ. ದುರಂತ ಸಂಭವಿಸಿದ ತಕ್ಷಣ ಕಣ್ಣೀರು ಹಾಕದ ಡಿಕೆಶಿ, 24 ಗಂಟೆಗಳ ನಂತರ ಕಣ್ಣೀರು ಹಾಕಿದ್ದು ಕೇವಲ ಒಂದು ಪ್ರಹಸನ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.
ಕಣ್ಣೀರು ಹೃದಯದಿಂದ ಬರಬೇಕು. ಎಲ್ಲವೂ ಸುಳ್ಳು. ಇವರ ಡ್ರಾಮಾ ಬಯಲಾಗಿದೆ. ಡಿಕೆಶಿ ಅವರ ಕಣ್ಣೀರು ನೈಜವಲ್ಲ, ಬದಲಿಗೆ ರಾಜಕೀಯ ಲಾಭಕ್ಕಾಗಿ ಅಥವಾ ಸಾರ್ವಜನಿಕ ಸಹಾನುಭೂತಿ ಪಡೆಯಲು ಮಾಡಿದ ನಾಟಕ ಎಂದು ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.
- 6 Jun 2025 12:11 PM IST
ಸಿಎಂ ಆಪ್ತ ಗೋವಿಂದರಾಜು ವಿರುದ್ಧ ಎಚ್ಡಿಕೆ ಗಂಭೀರ ಆರೋಪ
ಆರ್ಸಿಬಿ ವಿಜಯೋತ್ಸವ ಸಮಾರಂಭದ ಕಾಲ್ತುಳಿತ ದುರಂತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ 24 ಗಂಟೆಯೂ ಇರುವ ಅವರ ರಾಜಕೀಯ ಕಾರ್ಯದರ್ಶೀ ಗೋವಿಂದರಾಜು ಕೂಡ ಕಾರಣ ಎಂಬುದಾಗಿ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
ವಿಧಾನಸೌಧದ ಮುಂದೆ ಕಾರ್ಯಕ್ರಮ ಆಯೋಜಿಸಲು ಪೊಲೀಸ್ ಕಮಿಷನರ್ ಅನುಮತಿ ನಿರಾಕರಿಸಿದಾಗ, ಗೋವಿಂದರಾಜು ಅವರು ಮುಖ್ಯಮಂತ್ರಿಗಳ ಮೂಲಕವೇ ಒತ್ತಡ ಹೇರಿ ಅನುಮತಿ ಪಡೆದಿದ್ದಾರೆ ಎಂದು ಜೆಡಿಎಸ್ ಮುಖಂಡ ಆರೋಪಿಸಿದ್ದಾರೆ.
"ಸಿಎಂ ಜೊತೆಯಲ್ಲಿ 24 ಗಂಟೆ ಭದ್ರತಾ ಸಿಬ್ಬಂದಿ ಇರುತ್ತಾರೆ. ಅದರ ಜೊತೆಗೆ 24 ಗಂಟೆ 'ಗೋವಿಂದಾ ಗೋವಿಂದಾ' ಎನ್ನುವ ವ್ಯಕ್ತಿ ಇರುತ್ತಾರೆ," ಎಂದು ಎಂಎಲ್ಸಿ ಗೋವಿಂದರಾಜು ಅವರನ್ನು ಪರೋಕ್ಷವಾಗಿ ಎಚ್ಡಿಕೆ ಉಲ್ಲೇಖಿಸಿದರು.