
ನಗರ್ತಪೇಟೆ ಅಗ್ನಿ ಅವಘಡ
ನಗರ್ತಪೇಟೆ ಬೆಂಕಿ ಅವಘಡ| ಕಟ್ಟಡ ಮಾಲೀಕ ಮತ್ತು ಪುತ್ರ ಬಂಧನ
ಶನಿವಾರ ನಸುಕಿನಲ್ಲಿ 2.30 ರ ಸುಮಾರಿಗೆ ಕಟ್ಟಡದ ನೆಲಮಹಡಿಯಲ್ಲಿ ಹೊತ್ತಿಕೊಂಡಿದ್ದ ಬೆಂಕಿ ಬಹುಬೇಗನೆ ಮೇಲಿನ ಮಹಡಿಗೆ ವ್ಯಾಪಿಸಿತ್ತು. ಘಟನೆಯಲ್ಲಿ ಐವರು ಮೃತಪಟ್ಟಿದ್ದರು.
ಬೆಂಗಳೂರಿನ ಕೆ.ಆರ್. ಮಾರುಕಟ್ಟೆ ಬಳಿಯ ನಗರ್ತಪೇಟೆಯಲ್ಲಿ ಪ್ಲಾಸ್ಟಿಕ್ ಮ್ಯಾಟ್ ಅಂಗಡಿಯಲ್ಲಿ ಅಗ್ನಿ ಅವಘಡ ಸಂಭವಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟಡದ ಮಾಲೀಕ ಮತ್ತು ಆತನ ಮಗನನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಅನಧಿಕೃತವಾಗಿ ನಿರ್ಮಾಣ ಕಾಮಗಾರಿ ಮಾಡಿರುವುದು, ಸುರಕ್ಷತಾ ಕ್ರಮಗಳ ಕೊರತೆ ಮತ್ತು ಅಗ್ನಿ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಅನುಷ್ಠಾನಗೊಳಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದಕ್ಕಾಗಿ ಕಟ್ಟಡ ಮಾಲೀಕ ಬಾಲಕೃಷ್ಣಯ್ಯ ಶೆಟ್ಟಿ ಮತ್ತು ಅವರ ಪುತ್ರ ಸಂದೀಪ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಶನಿವಾರ ನಸುಕಿನಲ್ಲಿ 2.30 ರ ಸುಮಾರಿಗೆ ಕಟ್ಟಡದ ನೆಲಮಹಡಿಯಲ್ಲಿ ಹೊತ್ತಿಕೊಂಡಿದ್ದ ಬೆಂಕಿ ಬಹುಬೇಗನೆ ಮೇಲಿನ ಮಹಡಿಗೆ ವ್ಯಾಪಿಸಿತ್ತು. ಘಟನೆಯಲ್ಲಿ ಐವರು ಮೃತಪಟ್ಟಿದ್ದರು. ಅದೃಷ್ಟವಶಾತ್, ಕಟ್ಟಡದಲ್ಲಿದ್ದ ಹೆಚ್ಚಿವರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.
ಕಟ್ಟಡದ ಮೂರನೇ ಮಹಡಿಯಲ್ಲಿ ಕುಟುಂಬವೊಂದು ವಾಸವಿತ್ತು. ದುರದೃಷ್ಟವಶಾತ್ ಆ ಕುಟುಂಬದ ಮದನ್ ಸಿಂಗ್ (38) ಮತ್ತು ಅವರ ಪತ್ನಿ ಸಂಗೀತಾ (33) ಮತ್ತು ಅವರ ಇಬ್ಬರು ಮಕ್ಕಳು ಮಿಥೇಶ್ (7) ಮತ್ತು ವಿಹಾನ್ (5) ಮತ್ತು ಅವರ ನೆರೆಯ ಸುರೇಶ್ ಕುಮಾರ್ (26) ಮೃತಪಟ್ಟಿದ್ದರು. ಮದನ್ ಸಿಂಗ್ ರಾಜಸ್ಥಾನದವರಾಗಿದ್ದು, ಸುಮಾರು 10 ವರ್ಷಗಳಿಂದ ಕಟ್ಟಡವನ್ನು ಬಾಡಿಗೆಗೆ ಪಡೆದು ವಾಸವಿದ್ದರು.
ಅವರು ಪ್ಲಾಸ್ಟಿಕ್ ಸಾಮಗ್ರಿಗಳು ಹಾಗೂ ಚಾಪೆಗಳು ಮತ್ತು ಉಕ್ಕಿನ ಅಡುಗೆ ಪಾತ್ರೆಗಳನ್ನು ತಯಾರಿಸುವ ಸಣ್ಣ ಉತ್ಪಾದನಾ ಘಟಕವನ್ನು ನಡೆಸುತ್ತಿದ್ದರು. ಅವರ ಕುಟುಂಬ ಕಟ್ಟಡದ ಮೇಲಿನ ಮಹಡಿಯಲ್ಲಿ ವಾಸಿಸುತ್ತಿದ್ದರು. ಸದ್ಯ, ಕಟ್ಟಡದ ಮಾಲೀಕ ಹಾಗೂ ಆತನ ಮಗನನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.