ಬೆಂಬಲ ಬೆಲೆ ಘೋಷಣೆಗೆ ಪಟ್ಟು | ವಿಧಾನಸೌಧ ಎದುರು ಮಾವು ಸುರಿದು ಪ್ರತಿಭಟನೆಗೆ ರೈತರ ನಿರ್ಧಾರ
x

ಬೆಂಬಲ ಬೆಲೆ ಘೋಷಣೆಗೆ ಪಟ್ಟು | ವಿಧಾನಸೌಧ ಎದುರು ಮಾವು ಸುರಿದು ಪ್ರತಿಭಟನೆಗೆ ರೈತರ ನಿರ್ಧಾರ

'ದ ಫೆಡರಲ್ ಕರ್ನಾಟಕ' ಜತೆ ಮಾತನಾಡಿದ ಕೋಲಾರ ಜಿಲ್ಲಾ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ಚಿನ್ನಪ್ಪ ರೆಡ್ಡಿ , ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಮಾವು ಬೆಲೆ‌ ಕುಸಿತದಿಂದ ಮಾವು ಬೆಳೆಗಾರರು ಕಂಗಲಾಗಿದ್ದಾರೆ. ಒಂದು ಟನ್ ಮಾವು ಬೆಳೆಯಲು 10 ರಿಂದ 12 ಸಾವಿರ ರೂ. ಖರ್ಚಾಗಿದೆ. ಈಗ ಮಾವಿನಕಾಯಿ ಕೇಳುವವರಿಲ್ಲದೇ ಮಾವಿನ ಕಾಯಿ ಗಿಡದಲ್ಲೇ ಉಳಿಯುವಂತಾಗಿದೆ. ಆದರೆ, ಮಾವು ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಒಳಗಾದರೂ ನೆರವಿಗೆ ಧಾವಿಸದ ರಾಜ್ಯ ಸರ್ಕಾರದ ವಿರುದ್ದ ರೈತರು ರೊಚ್ಚಿಗೆದ್ದಿದ್ದಾರೆ.

ನಿರಾಶೆ ತಂದ ಸಚಿವ ಸಂಪುಟ ಸಭೆ

ಈಗಾಗಲೇ ಕೋಲಾರ ಭಾಗದ ರೈತರು ಮಾವಿನ ಬೆಲೆಗೆ ಬೆಂಬಲ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುವುದರ ಜೊತೆಗೆ ಸರ್ಕಾರಕ್ಕೂ ಮನವಿ ಸಲ್ಲಿಸಿದ್ದರು.

ನೆರೆಯ ಆಂದ್ರಪ್ರದೇಶವು ಕೋಲಾರದ ತೋತಾಪುರಿ ಬ್ಯಾನ್ ಮಾಡಿದ ಹಿನ್ನಲೆ ರೈತರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಇದೆಲ್ಲದರ ನಡುವೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಾವಿಗೆ ಬೆಂಬಲ ಬೆಲೆ ಘೋಷಿಸುವ ಬಗ್ಗೆ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಸುರೇಶ್ ಹಾಗೂ ಆ ಭಾಗದ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಭರವಸೆ ನೀಡಿದ್ದರು. ಆದರೆ, ಸಚಿವ ಸಂಪುಟ ಸಭೆಯಲ್ಲಿ ಬೆಂಬಲ ಘೋಷಣೆ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಳ್ಳದಿರುವುದು ರೈತರಿಗೆ ನಿರಾಸೆ ತಂದಿದೆ.

ಕೇಂದ್ರಕ್ಕೆ ಪತ್ರ ಬರೆದು ಬೆಂಬಲ ಬೆಲೆ ಬಗ್ಗೆ ಆಗ್ರಹಿಸುವುದು ಹಾಗೂ ಕೇಂದ್ರದ ಉತ್ತರ ನೋಡಿಕೊಂಡು ಮಾವು ಬೆಳೆಯ ಸಮೀಕ್ಷೆ ನಡೆಸಿದ ನಂತರ ರಾಜ್ಯ ಸರ್ಕಾರ ತೀರ್ಮಾನ ಮಾಡಲು ತೀರ್ಮಾನಿಸಿತ್ತು.

ಸಂಪುಟ ನಿರ್ಧಾರದ ವಿರುದ್ಧ ರೊಚ್ಚಿಗೆದ್ದ ರೈತರು

'ದ ಫೆಡರಲ್ ಕರ್ನಾಟಕ' ಜತೆ ಮಾತನಾಡಿದ ಕೋಲಾರ ಜಿಲ್ಲಾ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ಚಿನ್ನಪ್ಪ ರೆಡ್ಡಿ , ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾವು ಇಂದೇ ಬೆಂಬಲ ಬೆಲೆ ಘೋಷಣೆ ಮಾಡಲಾಗುವುದು ಎಂಬ ನಿರೀಕ್ಷೆಯಲ್ಲಿದ್ದೆವು. ಇವರು ಸಮೀಕ್ಷೆ ಮಾಡುವುದು ಯಾವಾಗ, ನಮಗೆ ಬೆಂಬಲ ಬೆಲೆ ಕೊಡುವುದು ಯಾವಾಗ, ಮುಂದಿನ 15 ದಿವಸ ಕಳೆದರೆ ಮಾವು ಬೆಳೆ ಖಾಲಿಯಾಗುತ್ತದೆ. ಆಗ ಇವರು ಯಾವುದಕ್ಕೆ ಬೆಂಬಲ ಬೆಲೆ ಕೊಡುತ್ತಾರೆ‌ ಎಂದು ಪ್ರಶ್ನಿಸಿದ್ದಾರೆ.

ವಿಧಾನಸೌಧ ಮುಂದೆ ಮಾವು ಸುರಿದು ಪ್ರತಿಭಟನೆ

ಸರ್ಕಾರದ ವಿರುದ್ಧ ನಾವು ಉಗ್ರ ಹೋರಾಟ ಮಾಡುತ್ತೇವೆ. ವಿಧಾನಸೌಧ ಮುಂದೆ ಮಾವು ಸುರಿದು ಪ್ರತಿಭಟನೆ ನಡೆಸುತ್ತೇವೆ ಎಂದು ಕೋಲಾರ ಹಾಗೂ ಚಿಕ್ಕಬಳ್ಳಾಪುರ ಭಾಗದ ಮಾವು ಬೆಳೆಗಾರರು ಎಚ್ಚರಿಕೆ ನೀಡಿದ್ದಾರೆ.

ಬೆಲೆ ಕುಸಿತದಿಂದ ನಷ್ಟಕ್ಕೆ ಒಳಗಾಗಿರುವ ರೈತರು ವಿಧಾನಸೌಧ ಮುಂದೆ ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಸರ್ಕಾರವೇ ನೇರ ಹೊಣೆ ಎಂದು ಮಾವು ಬೆಳೆಗಾರರ‌ ಸಂಘದ ಅಧ್ಯಕ್ಷ ಚಿನ್ನಪ್ಪ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.

ಕೇಂದ್ರಕ್ಕೆ ಕಾಯದೆ ಹಿಂದೆ ಬೆಂಬಲ ಘೋಷಿಸಿದ್ದ ಎಚ್ ಡಿಕೆ

ಬೆಂಬಲ ಬೆಲೆ ಬಗ್ಗೆ ಕೇಂದ್ರ ಸರ್ಕಾರದ ನೆರವಿಗೆ ಕಾಯುತ್ತಿರುವ ರಾಜ್ಯ ಸರ್ಕಾರದ ವಿರುದ್ದ ಕೋಲಾರ ಮಾವು ಬೆಳೆೆಗಾರರು ಆಕ್ರೋಶ ಹೊರಹಾಕಿದ್ದಾರೆ.

ಕೇಂದ್ರಕ್ಕೆ ಕಾಯುವ ಬದಲು ಮೊದಲು ನಮ್ಮ ಸರ್ಕಾರ ಬೆಂಬಲ ಬೆಲೆ ಘೋಷಿಸಲಿ. ಪಕ್ಕದ ಆಂಧ್ರಪ್ರದೇಶದ ಸರ್ಕಾರ ಟನ್ನಿಗೆ ನಾಲ್ಕುಸಾವಿರ ಬೆಂಬಲ ಬೆಲೆ ಘೋಷಿಸಿದೆ. ಎಚ್ ಡಿ ಕುಮಾರಸ್ವಾಮಿ ಅವರು ಮೊದಲಬಾರಿಗೆ ಸಿಎಂ ಆಗಿದ್ದಾಗ ಇದೇ ರೀತಿ ಮಾವು ಬೆಲೆ ಕುಸಿದಾಗ ಆಗ ಬೆಂಬಲ ಬೆಲೆ ಘೋಷಿಸಿದ್ದರು. ನಂತರ ಎರಡನೇ ಬಾರಿ ಟೊಮ್ಯಾಟೊ ಬೆಲೆಗೂ ಬೆಂಬಲ ಬೆಲೆ ಘೋಷಿಸಿದ್ದರು. ಆಗ ಎಚ್ ಡಿ ಕುಮಾರಸ್ವಾಮಿ ಕೇಂದ್ರದ ನೆರವಿಗೆಕಾಯಲಿಲ್ಲ. ಈಗ ಸರ್ಕಾರ ಕೂಡಲೇ ಟನ್ನಿಗೆ 5 ಸಾವಿರ ಬೆಂಬಲ ಬೆಲೆ ಘೋಷಿಸಬೇಕು ಎಂದು ಆಗ್ರಹಿಸಿದರು.

Read More
Next Story