
ಬಸವರಾಜ್ ಬೊಮ್ಮಾಯಿ
"ದಿಕ್ಕು ದೆಸೆ ಇಲ್ಲದ ಸರ್ಕಾರ": ರಾಜ್ಯ ಸರ್ಕಾರದ ವಿರುದ್ಧ ಬೊಮ್ಮಾಯಿ ವಾಗ್ದಾಳಿ
ಕಾನೂನು ಸಚಿವ ಎಚ್ ಕೆ ಪಾಟೀಲರು ಅಕ್ರಮ ಗಣಿ ತನಿಖೆ ಕುರಿತು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಅವರು ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಚಿವರಾಗಿದ್ದಾರೆ, ಅದನ್ನು ಅವರಿಗೆ ನೇರವಾಗಿಯೇ ಹೇಳಬಹುದಿತ್ತು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ರಾಜ್ಯದಲ್ಲಿ "ದಿಕ್ಕು ದೆಸೆ ಇಲ್ಲದ ಸರ್ಕಾರ" ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಬುಧವಾರ ಆರೋಪ ಮಾಡಿದ್ದಾರೆ. ರಾಜ್ಯ ಸರ್ಕಾರ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಅವರು ವಾಗ್ದಾಳಿ ನಡೆಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಹಣವಿಲ್ಲ ಎಂದು ಗೃಹ ಸಚಿವ ಪರಮೇಶ್ವರ ಅವರು ತಮಾಷೆಗಾದರೂ ಸತ್ಯ ಹೇಳಿದ್ದಕ್ಕೆ ಅಭಿನಂದನೆ ಸಲ್ಲಿಸುವೆ ಎಂದು ಅವರು ಇದೇ ವೇಳೆ ಲೇವಡಿ ಮಾಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಬೊಮ್ಮಾಯಿ, ಗೃಹ ಸಚಿವ ಪರಮೇಶ್ವರ ಅವರು ಸಾರ್ವಜನಿಕ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಬಳಿ ಹಣವಿಲ್ಲ ಎಂದು ಹೇಳಿದ್ದರು. ಈಗ ಪರಮೇಶ್ವರ ಅವರು ಅದನ್ನು ತಮಾಷೆಗಾಗಿ ಹೇಳಿದ್ದೆ ಎಂದು ಹೇಳುತ್ತಿದ್ದರೂ, "ತಮಾಷೆಗಾದರೂ ಸತ್ಯ ಹೇಳಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ" ಎಂದು ಬೊಮ್ಮಾಯಿ ವ್ಯಂಗ್ಯವಾಡಿದರು.
ಆಡಳಿತ ಪಕ್ಷದ ಶಾಸಕರಿಂದಲೇ ಭ್ರಷ್ಟಾಚಾರದ ಆರೋಪ
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳಾಗಿವೆ, ಆದರೆ ಆಡಳಿತ ಪಕ್ಷದ ಶಾಸಕರಿಗೆ ಯಾವುದೇ ಅನುದಾನವಿಲ್ಲ ಮತ್ತು ಕೆಲಸ ಮಾಡಲು ಸಾಧ್ಯವಾಗಿಲ್ಲ ಎಂದು ಬೊಮ್ಮಾಯಿ ದೂರಿದರು. "ಹೀಗಾದರೆ, ಇನ್ನೆರಡೂವರೆ ವರ್ಷದಲ್ಲಿ ಜನರ ಬಳಿ ಹೋಗಲು ಆಗುವುದಿಲ್ಲ. ಸರ್ಕಾರದ ಬಳಿ ಹಣವಿಲ್ಲ. ಕೆಲಸ ಮಾಡಲು ಪ್ರತಿಯೊಂದಕ್ಕೂ ಭ್ರಷ್ಟಾಚಾರ, ಎಸ್ಟಿಮೇಟ್ಗೂ ಭ್ರಷ್ಟಾಚಾರ, ವರ್ಕ್ ಆರ್ಡರ್ ತೆಗೆದುಕೊಳ್ಳಲು ಭ್ರಷ್ಟಾಚಾರ" ಎಂದು ಅವರು ಆರೋಪಿಸಿದರು. ಕಾಂಗ್ರೆಸ್ ನೀತಿಯಿಂದಾಗಿ ಜನರು ತಮ್ಮ ದುಡಿಮೆಯ ಹಣವನ್ನು ಭ್ರಷ್ಟಾಚಾರಕ್ಕೆ ನೀಡುವ ಪರಿಸ್ಥಿತಿ ಬಂದಿದೆ ಎಂದರು. ಸ್ಮಾರ್ಟ್ ಮೀಟರ್ ದರ 500-600 ರಿಂದ ಆರೇಳು ಸಾವಿರಕ್ಕೆ ಏರಿಕೆಯಾಗಿದ್ದು, ಇದನ್ನು ಸರ್ಕಾರ ಭರಿಸದೆ ಜನರಿಂದಲೇ ವಸೂಲಿ ಮಾಡುತ್ತಿದೆ ಮತ್ತು ಆ ಹಣದಿಂದ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಬೊಮ್ಮಾಯಿ ಗಂಭೀರ ಆರೋಪ ಮಾಡಿದರು.
ರೈತರ ಹಾಲಿನ ಪ್ರೋತ್ಸಾಹ ಧನ 750 ಕೋಟಿ ರೂ. ಬಾಕಿ ಉಳಿದಿದ್ದು, ಹಾಲು ಉತ್ಪಾದಕ ಮಂಡಳಿಗಳಿಗೆ ಹಾಲಿನ ದರ ಏರಿಸಲು ಹೇಳಿ ಅದನ್ನು ಜನರ ಮೇಲೆ ಹಾಕಿರುವುದು, ಅಬಕಾರಿ ಇಲಾಖೆಯಲ್ಲಿ ಬಡವರು ಕುಡಿಯುವ ಸಾರಾಯಿ ಮೇಲೆ ಹೆಚ್ಚಿನ ತೆರಿಗೆ ಹಾಕಿರುವುದು ಸೇರಿದಂತೆ ಹಲವು ವಿಷಯಗಳಲ್ಲಿ ಸರ್ಕಾರದ ವೈಫಲ್ಯವನ್ನು ಬೊಮ್ಮಾಯಿ ಎತ್ತಿ ತೋರಿಸಿದರು. ಅಬಕಾರಿ ಡೀಲರ್ಗಳು, ಪಿಡಬ್ಲ್ಯುಡಿ ಗುತ್ತಿಗೆದಾರರು, ಮತ್ತು ವಿದ್ಯುತ್ ಗುತ್ತಿಗೆದಾರರು ಪ್ರತಿಭಟನೆ ಮಾಡಿದರೂ ಸರ್ಕಾರ ಸ್ಪಂದಿಸಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ವಿರೋಧ ಪಕ್ಷದಲ್ಲಿದ್ದಾಗ ಭ್ರಷ್ಟಾಚಾರದ ವಿರುದ್ಧ ದೊಡ್ಡ ಹೋರಾಟ ಮಾಡಿದ್ದ ಕಾಂಗ್ರೆಸ್, ಈಗ ಅಧಿಕಾರದಲ್ಲಿದ್ದಾಗ ಇಡೀ ಸರ್ಕಾರವೇ ಭ್ರಷ್ಟಾಚಾರದಲ್ಲಿ ಮುಳುಗಿ ದಿಕ್ಕು ದೆಸೆ ಇಲ್ಲದೆ ನಡೆದಿದೆ, ಇದರಿಂದ ಜನ ಬೇಸತ್ತಿದ್ದಾರೆ ಎಂದು ಬೊಮ್ಮಾಯಿ ಟೀಕಿಸಿದರು.
"ಡಬಲ್ ಸ್ಟ್ಯಾಂಡರ್ಡ್" ಆರೋಪ
ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಅವರು ಅಕ್ರಮ ಗಣಿ ತನಿಖೆ ಕುರಿತು ಮುಖ್ಯಮಂತ್ರಿಗೆ ಪತ್ರ ಬರೆದಿರುವ ಬಗ್ಗೆಯೂ ಬೊಮ್ಮಾಯಿ ಮಾತನಾಡಿದರು. "ಅವರು ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಚಿವರಾಗಿದ್ದಾರೆ, ಅದನ್ನು ಅವರಿಗೆ ನೇರವಾಗಿಯೇ ಹೇಳಬಹುದಿತ್ತು. ಅವರ ಮಾತು ಸಿಎಂ ಕೇಳುತ್ತಿರಲಿಲ್ಲವೆ? ಪ್ರತಿಪಕ್ಷದವರ ರೀತಿ ಬಹಿರಂಗವಾಗಿ ಪತ್ರ ಬರೆದಿದ್ದಾರೆ" ಎಂದು ಬೊಮ್ಮಾಯಿ ಪ್ರಶ್ನಿಸಿದರು. ಕೇಂದ್ರ ಸರ್ಕಾರ ಗಣಿ ಹರಾಜು ಹಾಕಲು ಕಾನೂನು ಮಾಡುವ ಮೊದಲೇ ರಾಜ್ಯ ಸರ್ಕಾರ ಗಣಿ ಹರಾಜು ಹಾಕಿದ್ದು, ಹಿಂದಿನ ಬಿಜೆಪಿ ಸರ್ಕಾರವಿದ್ದಾಗ ಜಿಂದಾಲ್ಗೆ ಜಮೀನು ನೀಡಬಾರದು ಎಂದು ಪತ್ರ ಬರೆದಿದ್ದ ಹೆಚ್.ಕೆ. ಪಾಟೀಲ್, ಈಗ ಅಧಿಕಾರಕ್ಕೆ ಬಂದ ಮೇಲೆ ಜಿಂದಾಲ್ಗೆ ಜಮೀನು ನೀಡಿದ್ದನ್ನು ಬೊಮ್ಮಾಯಿ ಉಲ್ಲೇಖಿಸಿ, ಇದು "ಡಬಲ್ ಸ್ಟ್ಯಾಂಡರ್ಡ್" ಎಂದು ದೂರಿದರು.
ರಾಜಕೀಯ ಪ್ರೇರಿತ ಆರೋಪಗಳು ಮತ್ತು ಬಿಜೆಪಿ ಹೋರಾಟ
ತಮ್ಮ ಸರ್ಕಾರದ ಅವಧಿಯಲ್ಲಿ ತಮ್ಮ ವಿರುದ್ಧ ಮಾಡಲಾಗಿದ್ದ ಭ್ರಷ್ಟಾಚಾರದ ಆರೋಪಗಳು ರಾಜಕೀಯ ಪ್ರೇರಿತವಾಗಿದ್ದವು. ಆಗಲೇ ದಾಖಲೆ ಕೊಡುವಂತೆ ಹೇಳಿದ್ದರೂ ಯಾರೂ ದಾಖಲೆ ನೀಡಿರಲಿಲ್ಲ ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದರು. ಈಗ ಅದೇ ಗುತ್ತಿಗೆದಾರ ಸಂಘ ಈ ಸರ್ಕಾರದ ವಿರುದ್ಧ ಆರೋಪ ಮಾಡಿರುವುದನ್ನು ಅವರು ನೆನಪಿಸಿದರು. ಶಾಸಕ ಬಿ.ಆರ್. ಪಾಟೀಲ್ ಅವರು ಸರ್ಕಾರದ ವಿರುದ್ಧ ಆರೋಪ ಮಾಡುತ್ತಿರುವುದು ಇದೇನು ಮೊದಲ ಸಲ ಅಲ್ಲ. ಈ ಹಿಂದೆ ಮೂರು ಬಾರಿ ಆರೋಪ ಮಾಡಿದ್ದರು. ಆಗ ಅವರನ್ನು ಸಮಾಧಾನಪಡಿಸಲು ಯೋಜನಾ ಆಯೋಗದ ಉಪಾಧ್ಯಕ್ಷರನ್ನಾಗಿ ಮಾಡಲಾಗಿತ್ತು. ಈಗ ಸಮಾಧಾನಪಡಿಸಲು ಸಂಪುಟ ಸ್ಥಾನ ನೀಡಬಹುದು ಎಂದು ಬೊಮ್ಮಾಯಿ ವ್ಯಂಗ್ಯವಾಡಿದರು.
ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡಲು ಬಿಜೆಪಿ ನಾಯಕರು ಸಭೆ ಸೇರಿ ಚರ್ಚಿಸಿ ಆಯಾ ಪ್ರದೇಶದ ಸಮಸ್ಯೆಗಳನ್ನು ತೆಗೆದುಕೊಂಡು ಹೋರಾಟ ಮಾಡುವುದಾಗಿ ಬೊಮ್ಮಾಯಿ ತಿಳಿಸಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಕ್ರಿಯ ಪಾತ್ರದ ಬಗ್ಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ಪಕ್ಷದ ಹಿರಿಯ ನಾಯಕರು. ಅವರು ಹೋರಾಟಕ್ಕೆ ಬಂದಾಗ ಸ್ಫೂರ್ತಿ ಬರುತ್ತದೆ. ಅವರು ದೊಡ್ಡ ನಾಯಕರು. ಅವರು ಪ್ರವಾಸ ಮಾಡಿದಾಗಲೆಲ್ಲಾ ಪಕ್ಷ ಅಧಿಕಾರಕ್ಕೆ ಬಂದಿದೆ. ಅವರು ಈಗ ಸ್ವಯಂಪ್ರೇರಿತರಾಗಿ ಪಕ್ಷ ಸಂಘಟನೆಗೆ ಬಂದಿದ್ದಾರೆ, ಅವರಿಂದ ಪಕ್ಷಕ್ಕೆ ಶಕ್ತಿ ಹೆಚ್ಚಾಗುತ್ತದೆ ಎಂದು ಬೊಮ್ಮಾಯಿ ಹೇಳಿದರು.
ತುರ್ತು ಪರಿಸ್ಥಿತಿ ಕುರಿತು ಪರಮೇಶ್ವರ ಹೇಳಿಕೆಗೆ ತಿರುಗೇಟು
ತುರ್ತು ಪರಿಸ್ಥಿತಿಯ ವಿರುದ್ಧ 50 ವರ್ಷಾಚರಣೆ ಮಾಡುತ್ತಿರುವ ಬಗ್ಗೆ ಗೃಹ ಸಚಿವ ಪರಮೇಶ್ವರ ಅವರು, ಬಿಜೆಪಿಯವರು ಮುಂದೆ ಹೋಗುವ ಬದಲು ಹಿಂದೆ ಹೋಗುತ್ತಿದ್ದಾರೆ ಎಂಬ ಹೇಳಿಕೆಗೆ ಬೊಮ್ಮಾಯಿ ತಿರುಗೇಟು ನೀಡಿದರು. ಪರಮೇಶ್ವರ ಅವರು ತಮಗೆ ಏನು ಅನುಕೂಲ ಇದೆ ಅದನ್ನು ತೆಗೆದುಕೊಳ್ಳುತ್ತಾರೆ. ರಾಹುಲ್ ಗಾಂಧಿ, ಖರ್ಗೆಯವರ ವಿಚಾರದಲ್ಲಿ ಹಿಂದೆ ಮಾಡಿರುವುದನ್ನು ಹೇಳುತ್ತಾರೆ. ಅನುಕೂಲ ಸಿಂಧುವಾಗಿ ವಾದ ಮಾಡುತ್ತಾರೆ ಎಂದು ಬೊಮ್ಮಾಯಿ ಟೀಕಿಸಿದರು. ತುರ್ತು ಪರಿಸ್ಥಿತಿ ಪ್ರಜಾಪ್ರಭುತ್ವದ ದೊಡ್ಡ ಅನಾಹುತ. ಅದು ಇದ್ದಿದ್ದರೆ ನಾವೂ ಇರುತ್ತಿರಲಿಲ್ಲ, ಪರಮೇಶ್ವರ ಅವರೂ ಇರುತ್ತಿರಲಿಲ್ಲ. ಅವರು ಮಾಡಿರುವ ತಪ್ಪನ್ನು ಒಪ್ಪಿಕೊಳ್ಳಬೇಕು ಎಂದು ಬೊಮ್ಮಾಯಿ ಹೇಳಿದರು.