
ಕರ್ನಾಟಕದಲ್ಲಿ ರಾಜ್ಯ ಭದ್ರತಾ ಆಯೋಗ ರಚನೆ: ಪೊಲೀಸ್ ವ್ಯವಸ್ಥೆಗೆ ಸುಧಾರಣೆ ತರುವ ಈ ನಿರ್ಧಾರದ ಹಿನ್ನೆಲೆಯೇನು?
ರಾಜ್ಯ ಭದ್ರತಾ ಆಯೋಗದ ರಚನೆ ಕೇವಲ ಇತ್ತೀಚಿನ ಬೆಳವಣಿಗೆಯಲ್ಲ; ಇದು ಹಲವು ದಶಕಗಳ ಬೇಡಿಕೆ ಹಾಗೂ ನ್ಯಾಯಾಂಗದ ನಿರ್ದೇಶಗಳ ಫಲಿತಾಂಶವಾಗಿದೆ.
ಪೊಲೀಸ್ ವ್ಯವಸ್ಥೆಯಲ್ಲಿ ದಕ್ಷತೆ, ಸ್ವಾಯತ್ತತೆ ಮತ್ತು ಪಾರದರ್ಶಕತೆ ಹೆಚ್ಚಿಸುವ ಮಹತ್ವದ ಹೆಜ್ಜೆಯಾಗಿ ರಾಜ್ಯ ಸರ್ಕಾರವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯ ಭದ್ರತಾ ಆಯೋಗವನ್ನು (State Security Commission) ರಚಿಸಿ ಅಧಿಕೃತ ಆದೇಶ ಹೊರಡಿಸಿದೆ. ಹಿರಿಯ ವಕೀಲ ಉಮಾಪತಿ ಎಸ್. ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ, ಕರ್ನಾಟಕ ಹೈಕೋರ್ಟ್ನ ನಿರ್ದೇಶನ ಮತ್ತು ಸುಪ್ರೀಂ ಕೋರ್ಟ್ನ 2006ರ ಮಹತ್ವದ ತೀರ್ಪಿನ ಅನುಸಾರವಾಗಿ ಈ ಆಯೋಗವನ್ನು ರಚಿಸಲಾಗಿದೆ.
ರಾಜ್ಯ ಭದ್ರತಾ ಆಯೋಗದ ರಚನೆ ಕೇವಲ ಇತ್ತೀಚಿನ ಬೆಳವಣಿಗೆಯಲ್ಲ; ಇದು ಹಲವು ದಶಕಗಳ ಬೇಡಿಕೆ ಹಾಗೂ ನ್ಯಾಯಾಂಗದ ನಿರ್ದೇಶಗಳ ಫಲಿತಾಂಶವಾಗಿದೆ.
1996ರಲ್ಲಿ ಸಲ್ಲಿಸಲಾಗಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ 2006ರಲ್ಲಿ ತೀರ್ಪು ನೀಡಿತ್ತು. ಪೊಲೀಸ್ ಇಲಾಖೆಯ ಮೇಲೆ ಸರ್ಕಾರದ ಅನಗತ್ಯ ರಾಜಕೀಯ ಹಸ್ತಕ್ಷೇಪ ತಡೆಯುವ ಉದ್ದೇಶದಿಂದ ಪ್ರತಿಯೊಂದು ರಾಜ್ಯದಲ್ಲಿಯೂ ಭದ್ರತಾ ಆಯೋಗಗಳನ್ನು ರಚಿಸುವಂತೆ ನಿರ್ದೇಶನ ನೀಡಿತ್ತು. ಪೊಲೀಸ್ ಸುಧಾರಣೆಯ ದೃಷ್ಟಿಯಿಂದ ಐತಿಹಾಸಿಕ ತೀರ್ಪಾಗಿತ್ತು.
ಕರ್ನಾಟಕ ಪೊಲೀಸ್ (ತಿದ್ದುಪಡಿ) ಕಾಯಿದೆ, 2012ರ ಸೆಕ್ಷನ್ 20(A) ಅಡಿಯಲ್ಲಿ ಇಂತಹ ಆಯೋಗದ ರಚನೆಯನ್ನು ಕಡ್ಡಾಯಗೊಳಿಸಲಾಗಿದೆ. ಇತ್ತೀಚೆಗೆ ಹೈಕೋರ್ಟ್ ನೀಡಿದ ಆದೇಶವೂ ಸರ್ಕಾರಕ್ಕೆ ಈ ಆಯೋಗ ರಚನೆಯು ಒತ್ತಡ ಸೃಷ್ಟಿಸಿತ್ತು.
ರಾಷ್ಟ್ರೀಯ ಪೊಲೀಸ್ ಆಯೋಗ, ರಿಬೈರೋ ಸಮಿತಿ, ಪದ್ಮನಾಭಯ್ಯ ಸಮಿತಿ ಮತ್ತು ಸೋಲಿ ಸೊರಾಬ್ಜಿ ಸಮಿತಿ ಸೇರಿದಂತೆ ದೇಶದ ಹಲವು ಪ್ರಮುಖ ಪೊಲೀಸ್ ಸುಧಾರಣಾ ಸಮಿತಿಗಳು ರಾಜ್ಯದಲ್ಲಿ ಭದ್ರತಾ ಆಯೋಗದ ರಚನೆಗೆ ಶಿಫಾರಸು ಮಾಡಿದ್ದವು.
ಆಯೋಗದ ಉದ್ದೇಶಗಳು, ಅಧಿಕಾರ ವ್ಯಾಪ್ತಿ
ಈ ನೂತನ ಆಯೋಗದ ಮುಖ್ಯ ಉದ್ದೇಶವೆಂದರೆ ಪೊಲೀಸ್ ಇಲಾಖೆಯ ಕಾರ್ಯಕ್ಷಮತೆಯನ್ನು ಗಣನೀಯವಾಗಿ ವೃದ್ಧಿಸುವುದು. ನೀತಿ ನಿರೂಪಣೆಯಲ್ಲಿ ಮಾರ್ಗದರ್ಶನ ಮಾಡುವುದು ಮತ್ತು ಪೊಲೀಸ್ ಸಿಬ್ಬಂದಿಯ ಕಾರ್ಯನಿರ್ವಹಣೆಯನ್ನು ಮೌಲ್ಯಮಾಪನ ಮಾಡುವುದು.
ರಾಜಕೀಯ ಅಥವಾ ಆಡಳಿತಾತ್ಮಕ ಹಸ್ತಕ್ಷೇಪದಿಂದ ಪೊಲೀಸ್ ಇಲಾಖೆಯನ್ನು ಮುಕ್ತವಾಗಿರಿಸುವುದು ಮತ್ತು ಅದು ಸ್ವತಂತ್ರವಾಗಿ ಕಾರ್ಯನಿರ್ವಹಿಸುವಂತೆ ಮಾಡುವುದೇ ಆಯೋಗದ ಪ್ರಮುಖ ಧ್ಯೇಯ. ಪೊಲೀಸ್ ವ್ಯವಸ್ಥೆಯು ಜನರಿಗೆ ಹೆಚ್ಚು ಅಪ್ಯಾಯಮಾನ ಹಾಗೂ ಪಾರದರ್ಶಕ ಎಂದು ಅನಿಸುವಂತೆ ಮಾಡುವುದು. ಪೊಲೀಸ್ ಇಲಾಖೆಯ ಕಾರ್ಯನಿರ್ವಹಣೆ, ಸೇವಾ ಗುಣಮಟ್ಟವನ್ನು ನಿಯಮಿತವಾಗಿ ಪರಿಶೀಲನೆ ನಡೆಸಿ ಅಗತ್ಯ ಸುಧಾರಣೆಗಳಿಗೆ ಶಿಫಾರಸು ಮಾಡಬೇಕು.
ಪೊಲೀಸ್ ಇಲಾಖೆಯ ಕಾರ್ಯನಿರ್ವಹಣೆ ವೇಳೆ ಸಾರ್ವಜನಿಕ ಹಿತಾಸಕ್ತಿಗಳು ರಕ್ಷಿಸಬೇಕು. ಅಂತೆಯೇ ಆಯೋಗವು ಪ್ರತಿ ವರ್ಷ ಪೊಲೀಸ್ ಇಲಾಖೆಯ ಕಾರ್ಯಕ್ಷಮತೆಯ ಬಗ್ಗೆ ಸಮಗ್ರ ವರದಿಯನ್ನು ಸಿದ್ಧಪಡಿಸಿ ವಿಧಾನಸಭೆಗೆ ಸಲ್ಲಿಸಲಿದೆ.
ಆಯೋಗದ ರಚನೆ ಹೇಗಿದೆ?
ರಾಜ್ಯ ಭದ್ರತಾ ಆಯೋಗವು ಸರ್ಕಾರ, ನ್ಯಾಯಾಂಗ ಮತ್ತು ವಿರೋಧ ಪಕ್ಷದ ಪ್ರತಿನಿಧಿಗಳನ್ನು ಒಳಗೊಂಡ ಬಹು-ಸದಸ್ಯರನ್ನು ಒಳಗೊಂಡಿರಲಿದೆ. ಮುಖ್ಯಮಂತ್ರಿಗಳು ಇದರ ಅಧ್ಯಕ್ಷರಾಗಿದ್ದರೆ ಗೃಹ ಸಚಿವ ಹಾಗೂ ವಿಧಾನಸಭೆಯ ಪ್ರತಿಪಕ್ಷದ ನಾಯಕ ರಾಜಕಾರಣಿಗಳ ಮಟ್ಟದ ಸದಸ್ಯರಾಗಿರುತ್ತಾರೆ.
ನಿವೃತ್ತ ನ್ಯಾಯಾಧೀಶರೊಬ್ಬರನ್ನು ನಾಮನಿರ್ದೇಶನ ಮಾಡುವಂತೆ ಹೈಕೋರ್ಟ್ ಕೊಟ್ಟಿರುವ ಸೂಚನೆಯಂತೆ ಹಾಲಿ ಸಮಿತಿಗೆ ಜಾನ್ ಮೈಕೆಲ್ ಕುನ್ಹಾ ಅವರನ್ನು ನೇಮಿಸಲಾಗಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಥವಾ ಪ್ರಧಾನ ಕಾರ್ಯದರ್ಶಿಗಳು ಮತ್ತು ಡಿಜಿ ಮತ್ತು ಐಜಿಪಿ ಇತರ ಸದಸ್ಯರಾಗಿರುತ್ತಾರೆ.
ಮುಂದಿನ ಹಾದಿ ಮತ್ತು ನಿರೀಕ್ಷೆಗಳು
ರಾಜ್ಯ ಭದ್ರತಾ ಆಯೋಗದ ರಚನೆಯು ಕರ್ನಾಟಕದ ಪೊಲೀಸ್ ಇಲಾಖೆಯಲ್ಲಿ ದೂರಗಾಮಿ ಪರಿಣಾಮಗಳ ನಿರೀಕ್ಷೆಯನ್ನು ಹೊಂದಿದೆ. ಆಯೋಗದ ಶಿಫಾರಸುಗಳ ಪ್ರಕಾರ ಪೊಲೀಸ್ ಇಲಾಖೆಯಲ್ಲಿ ಸುಧಾರಣೆ ತರುವುದು ಸರ್ಕಾರದ ಭಾಧ್ಯತೆಯಾಗಿರುತ್ತದೆ.