ಪವನ್ ಕಲ್ಯಾಣ್- ಖಂಡ್ರೆ ಭೇಟಿ | ಆನೆ ಹಸ್ತಾಂತರ, ದಾಳಿ ನಿಯಂತ್ರಣ ಕುರಿತು ಚರ್ಚೆ
x

ಪವನ್ ಕಲ್ಯಾಣ್- ಖಂಡ್ರೆ ಭೇಟಿ | ಆನೆ ಹಸ್ತಾಂತರ, ದಾಳಿ ನಿಯಂತ್ರಣ ಕುರಿತು ಚರ್ಚೆ


ಆಂಧ್ರಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ ಅವರು ಇಂದು ಬೆಂಗಳೂರಿಗೆ ಆಗಮಿಸಿ ಸಿಎಂ ಸಿದ್ದರಾಮಯ್ಯ ಹಾಗೂ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಈ ಭೇಟಿ ವೇಳೆ ಪವನ್ ಕಲ್ಯಾಣ್ ಅವರು ಮುಖ್ಯವಾಗಿ ಕೆಂಪು ಚಂದನದ ಕಳ್ಳಸಾಗಣೆ ತಡೆಗೆ ಕೈಗೊಳ್ಳಬೇಕಾದ ಕ್ರಮಗಳು. ಕರ್ನಾಟಕದಿಂದ ಆರು ಕುಮ್ಕಿ ಆನೆಗಳನ್ನು ಆಂಧ್ರ ಪ್ರದೇಶಕ್ಕೆ ನೀಡುವುದು ಸೇರಿದಂತೆ ಹಲವು ವಿಚಾರಗಳನ್ನು ಚರ್ಚಿಸಿದರು. ಆಂಧ್ರ ಕೆಲ ಭಾಗಗಗಳಲ್ಲಿ ಕಾಡಾನೆಗಳು ರೈತರ ಹೊಲಗಳನ್ನು ಹಾಳು ಮಾಡುತ್ತಿರುವುದು, ಬೆಳೆ ನಾಶ ಮಾಡುವ ಆನೆಗಳ ಸೆರೆ ಹಿಡಿದು ಅವುಗಳನ್ನು ಫಳಗಿಸುವ ಬಗ್ಗೆಯೂ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ರಾಜಧಾನಿಯ ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಪವನ್ ಕಲ್ಯಾಣ್ ಅವರು ಕುಶಲೋಪರಿ ವಿಚಾರಿಸಿದರು. ಆ ಬಳಿಕ ವಿಧಾನಸೌಧದಲ್ಲಿ ಅರಣ್ಯ ಸಚಿವರ ಜೊತೆ ಸಭೆ ನಡೆಸಿದರು. ಇದಕ್ಕೂ ಮುನ್ನ ಈಶ್ವರ್ ಖಂಡ್ರೆ ಅವರಿಗೆ ಶಾಲು ಹಾರ ಹಾಕಿ ತಿರುಪತಿ ಲಡ್ಡು ನೀಡಿ ಸನ್ಮಾನಿಸಿ ಗೌರವಿಸಿದರು.

ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಆಂಧ್ರಪ್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್, ಆಂಧ್ರ ಮತ್ತು ರಾಜ್ಯದ ಅರಣ್ಯಾಧಿಕಾರಿಗಳ ಸಭೆಯ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಈಶ್ವರ್ ಖಂಡ್ರೆ, ʻʻಬೇರೆ ರಾಜ್ಯಗಳಿಗೆ ಆನೆಗಳನ್ನು ನೀಡುವುದು ಸಾಮಾನ್ಯ ಪ್ರಕ್ರಿಯೆ. ಆದರೆ ದಸರಾ ಆನೆಗಳನ್ನು ಯಾವುದೇ ರಾಜ್ಯಕ್ಕೆ ನೀಡುವುದಿಲ್ಲʼʼ ಎಂದು ಸ್ಪಷ್ಟಪಡಿಸಿದರು.

ʻʻಕರ್ನಾಟಕದಲ್ಲಿ ನಡೆಯುವ ಮೈಸೂರು ದಸರಾ ಮಹೋತ್ಸವದಲ್ಲಿ ಆನೆಗಳೇ ಪ್ರಧಾನ ಆಕರ್ಷಣೆ. ಮೈಸೂರು ದಸರಾದಲ್ಲಿ ವಿಜಯದಶಮಿಯ ದಿನ ನಡೆಯುವ ಜಂಬೂಸವಾರಿ ವಿಶ್ವ ವಿಖ್ಯಾತವಾಗಿದೆ. ಇದಕ್ಕಾಗಿ ಆನೆಗಳನ್ನು ಕಾಡಿನಿಂದ ನಾಡಿಗೆ ತರುವ ಗಜ ಪಯಣ ಶಾಸ್ತ್ರೋಕ್ತವಾಗಿ ನಡೆಯುತ್ತದೆ. ಇದೇ ಆಗಸ್ಟ್ 21ರಂದು ವೀರನಹೊಸಹಳ್ಳಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆʼʼ ಎಂದು ಮಾಹಿತಿ ನೀಡಿದರು.

ʻʻಆಂಧ್ರದಲ್ಲಿಯೂ ಕಾಡಾನೆಗಳ ಸಮಸ್ಯೆ ಹೆಚ್ಚಾಗಿದೆ. ಹೀಗಾಗಿ ಕರ್ನಾಟಕದಲ್ಲಿ ಆನೆಗಳ ಹಾವಳಿ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳು, ರೈಲ್ವೆ ಬ್ಯಾರಿಕೇಡ್ ಅಳವಡಿಕೆಯ ಯಶಸ್ಸು, ಕಾಡಾನೆಗಳ ಸೆರೆ ಕಾರ್ಯಾಚರಣೆ, ಆನೆ ಪಳಗಿಸುವುದು ಮತ್ತು ಮಾವುತರ ತರಬೇತಿ ಕುರಿತಂತೆ ಚರ್ಚಿಸಲು ಇಂದು ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿಗಳಾದ ಪವನ್ ಕಲ್ಯಾಣ್ ಅವರು ತಮ್ಮ ರಾಜ್ಯದ ಉನ್ನತ ಅರಣ್ಯಾಧಿಕಾರಿಗಳೊಂದಿಗೆ ಕರ್ನಾಟಕಕ್ಕೆ ಆಗಮಿಸಿದ್ದಾರೆʼʼ ಎಂದರು.

ಆನೆ ಕಾರ್ಯಾಚರಣೆ ಅಪಾಯಕಾರಿ

ʻʻಹಿಂದೆ ಆನೆ ಹಿಡಿಯಲು ಖೆಡ್ಡಾ ತೋಡಲಾಗುತ್ತಿತ್ತು. ಈಗ ಅರೆವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿಯಲಾಗುತ್ತದೆ. ಇದು ಕೂಡ ಅತ್ಯಂತ ಅಪಾಯಕಾರಿ. ಆನೆ ಕಾರ್ಯಾಚರಣೆ ವೇಳೆ ಆಪಾಯವೂ ಇರುತ್ತದೆ. ಕರ್ನಾಟಕದ ಹೆಸರಾಂತ ಶಾರ್ಪ್ ಶೂಟರ್ ವೆಂಕಟೇಶ್ ಆನೆಗೆ ಅರವಳಿಕೆ ಚುಚ್ಚುಮದ್ದು ನೀಡುವಾಗ ಭೀಮ ಆನೆಗೆ ಬಲಿಯಾಗಿದ್ದು ನಿಮಗೆಲ್ಲಾ ತಿಳಿದಿದೆʼʼ ಎಂದು ಈಶ್ವರ ಖಂಡ್ರೆ ತಿಳಿಸಿದರು.

ಆನೆ ಸೆರೆ ಹಿಡಿಯುವ ಕೌಶಲ್ಯ, ಪಳಗಿಸುವ ನೈಪುಣ್ಯತೆ ಕರ್ನಾಟಕದ ಮಾವುತರಲ್ಲಿದೆ. ಹೀಗಾಗಿಯೇ ಭಾರತದ ಇತರ ರಾಜ್ಯಗಳು ಪಳಗಿಸಿದ ಕುಮ್ಕಿ ಆನೆಗಳನ್ನು ನೀಡುವಂತೆ ಬೇಡಿಕೆ ಸಲ್ಲಿಸುತ್ತಿರುತ್ತಾರೆ.

ರಾಜ್ಯದಿಂದ ಹಿಂದೆಯೂ ಆನೆ ನೀಡಿದ್ದೇವೆ

ಈ ಹಿಂದೆ ಕೂಡ ರಾಜ್ಯದಿಂದ ಸಾಕಷ್ಟು ಆನೆಗಳನ್ನು ಇತರ ರಾಜ್ಯಗಳಿಗೆ ಕಳುಹಿಸಲಾಗಿದೆ. 2016-17ರಲ್ಲಿ ಉತ್ತರ ಖಂಡಕ್ಕೆ ಕರ್ನಾಟಕದಿಂದ 11 ಆನೆ ನೀಡಲಾಗಿತ್ತು. ಅದೇ ವರ್ಷ ಛತ್ತೀಸಗಡಕ್ಕೆ 6 ಮತ್ತು ಜಾರ್ಖಂಡ್ ಗೆ 3 ಆನೆ ನೀಡಲಾಗಿತ್ತು. 18-19ರಲ್ಲಿ ಪಶ್ಚಿಮ ಬಂಗಾಳಕ್ಕೆ 8 ಆನೆ, ಬಿಹಾರಕ್ಕೆ 4, ಉತ್ತರ ಪ್ರದೇಶಕ್ಕೆ 12 ಆನೆ ಕಳುಹಿಸಲಾಗಿತ್ತು. 2022-23ರಲ್ಲಿ ಉತ್ತರ ಪ್ರದೇಶಕ್ಕೆ 4, ಮಧ್ಯಪ್ರದೇಶಕ್ಕೆ 14, ಮಹಾರಾಷ್ಟ್ರಕ್ಕೆ 3 ಆನೆ ಕಳುಹಿಸಲಾಗಿತ್ತು. ಅದರಲ್ಲಿ ಒಂದು ಆನೆ ಮಹಾರಾಷ್ಟ್ರದ್ದೇ ಆಗಿದ್ದು, ಇಲ್ಲಿ ಅದಕ್ಕೆ ತರಬೇತಿ ನೀಡಲಾಗಿತ್ತು. ಆನೆಗಳನ್ನು ಇತರ ರಾಜ್ಯಗಳಿಗೆ ನೀಡುವುದು ಒಂದು ಸಾಮಾನ್ಯ ಪ್ರಕ್ರಿಯೆ ಎಂದು ಈಶ್ವರ ಖಂಡ್ರೆ ತಿಳಿಸಿದರು.

ಆಂಧ್ರ-ಕರ್ನಾಟಕ ನಡುವೆ ಅವಿನಾಭಾವ ಸಂಬಂಧ

ಕರ್ನಾಟಕಕ್ಕೂ ಆಂಧ್ರಪ್ರದೇಶಕ್ಕೂ ಮೊದಲಿನಿಂದಲೂ ಅವಿನಾಭಾವ ಸಂಬಂಧವಿದೆ. ಪಂಚ ದ್ರಾವಿಡ ಭಾಷೆಗಳಲ್ಲಿ ಕನ್ನಡ ಮತ್ತು ತೆಲುಗು ಎರಡೂ ಭಾಷೆ ಸೇರುತ್ತವೆ. ನಮ್ಮ ಭಾಷೆ ಬೇರೆ ಆದರೂ ಭಾವನೆಗಳು ಒಂದೇ ಆಗಿದೆ. ಎರಡೂ ಭಾಷೆಯ ಲಿಪಿಗಳ ನಡುವೆ ಸಾಮ್ಯತೆ ಇದೆ. ಎರಡೂ ರಾಜ್ಯಗಳ ಜನರ ನಡುವೆ ಸಮನ್ವಯತೆ, ಸೋದರತ್ವ ಇದೆ ಎಂದರು.

ನಮ್ಮ ಎರಡೂ ರಾಜ್ಯಗಳ ನಡುವೆ ಬಾಂಧವ್ಯ ಇರಬೇಕು. ನಾವು ಹೊರ ರಾಷ್ಟ್ರಗಳಿಂದ ಕೂಡ ನಮ್ಮ ಮೃಗಾಲಯಗಳಿಗೆ ಪ್ರಾಣಿಗಳನ್ನು ತರಿಸಿಕೊಳ್ಳುತ್ತೇವೆ. ನಮ್ಮಲ್ಲಿ ಹೆಚ್ಚಾಗಿರುವ ಪ್ರಾಣಿಗಳನ್ನು ಇತರ ರಾಷ್ಟ್ರಗಳಿಗೂ ನೀಡುತ್ತೇವೆ ಎಂದು ತಿಳಿಸಿದರು.

Read More
Next Story