
ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರ ಒಡೆತನದ ಸಿದ್ದಾರ್ಥ ಶಿಕ್ಷಣ ಸಂಸ್ಥೆ.
ED Raid | ಪರಮೇಶ್ವರ್ ಬೆನ್ನಿಗೆ ನಿಂತ ದಲಿತ ಸಂಘಟನೆಗಳು; ಷಡ್ಯಂತ್ರ ಮಾಡಿದ ಮಹಾನಾಯಕನ ಹೆಸರು ಬಹಿರಂಗ?
ಪರಮೇಶ್ವರ್ ಶಿಕ್ಷಣ ಸಂಸ್ಥೆಗಳ ಮೇಲೆ ನಡೆದ ಇಡಿ ದಾಳಿಯಲ್ಲಿ ಮಹಾನಾಯಕನ ಕೈವಾಡವಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಕೂಡ ಆರೋಪಿಸಿದ್ದರು. ಹಾಗಾಗಿ ದಲಿತ ಸಂಘಟನೆಗಳ ಪತ್ರಿಕಾಗೋಷ್ಠಿ ಮಹತ್ವ ಪಡೆದುಕೊಂಡಿದೆ.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಒಡೆತನದ ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ನಡೆದ ಜಾರಿ ನಿರ್ದೇಶನಾಲಯದ (ಇಡಿ) ದಾಳಿಯಲ್ಲಿ 'ಕಾಣದ ಕೈಗಳ ಕೈವಾಡ' ಇರುವ ಬಗ್ಗೆ ದಲಿತ ಸಂಘಟನೆಗಳ ಒಕ್ಕೂಟ ಮಾಡಿರುವ ಆರೋಪ ತೀವ್ರ ಕುತೂಹಲ ಕೆರಳಿಸಿದೆ.
ಇಡಿ ದಾಳಿ ಮಾಡಿಸಿದ್ದು ಯಾರು? ಪರಮೇಶ್ವರ್ ಮೇಲೆ ಯಾರೆಲ್ಲಾ ಷಡ್ಯಂತ್ರ ಮಾಡಿದ್ದಾರೆ. ದಾಳಿಯ ಹಿಂದಿನ ಸ್ಫೋಟಕ ರಹಸ್ಯಗಳೇನು ಎಂಬುದನ್ನು ಬಹಿರಂಗಪಡಿಸುವುದಾಗಿ ದಲಿತ ಸಂಘಟನೆಗಳ ಒಕ್ಕೂಟ ಹೇಳಿದೆ. ಇಂದು ಮಧ್ಯಾಹ್ನ 1 ಗಂಟೆಗೆ ಬೆಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಮಾಹಿತಿ ಬಹಿರಂಗಪಡಿಸುವುದಾಗಿ ಹೇಳಿರುವುದು ಅಚ್ಚರಿ ಮೂಡಿಸಿದೆ.
ದಲಿತ ಸಂಘಟನೆಗಳ ಮೂಲಗಳ ಪ್ರಕಾರ, ಪತ್ರಿಕಾಗೋಷ್ಠಿಯಲ್ಲಿ ಯಾವುದೇ ರಹಸ್ಯ ಅಥವಾ ದಾಖಲೆ ಬಹಿರಂಗ ಪಡಿಸುವುದಿಲ್ಲ, ಬದಲಿಗೆ ಪರಮೇಶ್ವರ್ ಅವರಿಗೆ ಸಂಘಟನೆಗಳು ಬೆಂಬಲ ಘೋಷಿಸಲಿವೆ.
ಪರಮೇಶ್ವರ್ ಶಿಕ್ಷಣ ಸಂಸ್ಥೆಗಳ ಮೇಲೆ ನಡೆದ ಇಡಿ ದಾಳಿಯಲ್ಲಿ ಮಹಾನಾಯಕನ ಕೈವಾಡವಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಕೂಡ ಆರೋಪಿಸಿದ್ದರು. ಹಾಗಾಗಿ ದಲಿತ ಸಂಘಟನೆಗಳ ಪತ್ರಿಕಾಗೋಷ್ಠಿ ಮಹತ್ವ ಪಡೆದುಕೊಂಡಿದೆ.
ಕುಮಾರಸ್ವಾಮಿ ವಾಗ್ದಾಳಿ ಹಿನ್ನೆಲೆ
ಪರಮೇಶ್ವರ್ ಅವರನ್ನು ರಾಜಕೀಯವಾಗಿ ಹಣಿಯಲು ಕಾಂಗ್ರೆಸ್ ಪಕ್ಷದ ಮಹಾನಾಯಕರೊಬ್ಬರು ಇಡಿಗೆ ಮಾಹಿತಿ ನೀಡಿದ್ದಾರೆ. ಸಿಎಂ ಆಗಲು ಹೊರಟಿರುವ ಆ ನಾಯಕನ ಕುತಂತ್ರದ ಭಾಗವೇ ಇಡಿ ದಾಳಿಯಾಗಿದೆ ಎಂದು ಕುಮಾರಸ್ವಾಮಿ ಅವರು ಹೆಸರೇಳದೇ ಪರೋಕ್ಷವಾಗಿ ಡಿ.ಕೆ. ಶಿವಕುಮಾರ್ ವಿರುದ್ಧ ಕಿಡಿಕಾರಿದ್ದರು.
ಕುಮಾರಸ್ವಾಮಿ ಆರೋಪದ ಕುರಿತು ಪ್ರತಿಕ್ರಿಯಿಸಿದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕುಮಾರಸ್ವಾಮಿ ಅವರು ಯಾವುದನ್ನೂ ಸ್ಪಷ್ಟವಾಗಿ ಹೇಳುವುದಿಲ್ಲ. ರಾಜಕೀಯದಲ್ಲಿ ಸಕ್ರಿಯವಾಗಿ ಇರಲು ಸುಮ್ಮನೆ ಏನೇನೋ ಹೇಳುತ್ತಿರುತ್ತಾರೆ. ಮಹಾನಾಯಕನ ಕುರಿತು ಮಾಹಿತಿ ಇದ್ದರೆ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದರು. ಪ್ರತಿಬಾರಿ ಆರೋಪ ಮಾಡಿದಾಗ ಸೂಕ್ತ ಸಮಯ ಬರಲಿ ಎನ್ನುತ್ತಾರೆ. ಅವರಿಗೆ ಮಾಹಿತಿ ಬಹಿರಂಗಪಡಿಸುವ ಸೂಕ್ತ ಸಮಯವೇ ಬಂದಿಲ್ಲ ಎನಿಸುತ್ತದೆ. ಸಮಯ ಬಂದಾಗಲೂ ಶೇಕಡಾ 1 ರಷ್ಟು ಕೂಡ ಹೊಸ ವಿಷಯ ಇರುವುದಿಲ್ಲ ಎಂದು ವ್ಯಂಗ್ಯವಾಡಿದ್ದರು.
ಅಕ್ರಮ ಚಿನ್ನ ಕಳ್ಳಸಾಗಾಣಿಕೆ ಪ್ರಕರಣದ ಆರೋಪಿ ರನ್ಯಾ ರಾವ್ಗೆ ಪರಮೇಶ್ವರ್ ಶಿಕ್ಷಣ ಸಂಸ್ಥೆಗಳಿಂದ 40 ಲಕ್ಷ ರೂ. ಸಂದಾಯವಾದ ಆರೋಪ ಮೇಲೆ ಇಡಿ ದಾಳಿ ನಡೆಸಿತ್ತು ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಇಡಿ ದಾಳಿಯ ಎರಡನೇ ದಿನವೇ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪರಮೇಶ್ವರ್ ಮನೆಗೆ ಭೇಟಿ ನೀಡಿದ ಮಾತುಕತೆ ನಡೆಸಿದ್ದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಪರಮೇಶ್ವರ್ ಅವರು ರನ್ಯಾ ರಾವ್ ಅವರಿಗೆ 15 ರಿಂದ 25ಲಕ್ಷ ಉಡುಗೊರೆ ನೀಡಿರಬಹುದು ಎಂದು ಹೇಳುವ ಮೂಲಕ ಮತ್ತೊಂದು ವಿವಾದ ಸೃಷ್ಟಿಸಿದ್ದರು.
ಡಿ.ಕೆ.ಶಿವಕುಮಾರ್ ಅವರ ಈ ಹೇಳಿಕೆಗೆ ಕಾಂಗ್ರೆಸ್ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಬಳಿಕ ಕಾಂಗ್ರೆಸ್ ಪಕ್ಷ ಪರಮೇಶ್ವರ್ ಅವರ ಬೆಂಬಲಕ್ಕೆ ನಿಲ್ಲುವುದಾಗಿ ಘೋಷಿಸಿತ್ತು. ಡಿಕೆಶಿ ಅವರ ಹೇಳಿಕೆ ರಾಜಕೀಯ ಕೋಲಾಹಲಕ್ಕೂ ಕಾರಣವಾಗಿತ್ತು.