ಬೆಂಗಳೂರು ಕಾಲ್ತುಳಿತ: ಎಫ್‌ಐಆರ್‌ ರದ್ದುಗೊಳಿಸುವಂತೆ ಹೈಕೋರ್ಟ್ ಮೆಟ್ಟಿಲೇರಿದ ಡಿಎನ್ಎ ಎಂಟರ್​ಟೈನ್ಮೆಂಟ್
x

ಹೈಕೋರ್ಟ್‌ ಮತ್ತು ಬೆಂಗಳೂರು ಕಾಲ್ತುಳಿತ ಘಟನೆ

ಬೆಂಗಳೂರು ಕಾಲ್ತುಳಿತ: ಎಫ್‌ಐಆರ್‌ ರದ್ದುಗೊಳಿಸುವಂತೆ ಹೈಕೋರ್ಟ್ ಮೆಟ್ಟಿಲೇರಿದ ಡಿಎನ್ಎ ಎಂಟರ್​ಟೈನ್ಮೆಂಟ್

ಭಾರತ ಟಿ20 ವಿಶ್ವ ಕಪ್ ಗೆದ್ದಾಗ ಮುಂಬೈನಲ್ಲಿ ವಿಕ್ಟರಿ ಪರೇಡ್ ನಡೆಸಲಾಗಿತ್ತು. DNA ಆಯೋಜಿಸಿದ್ದ ಪರೇಡ್​ ನಲ್ಲಿ 3 ಲಕ್ಷ ಜನರಿದ್ದರೂ ಯಾವುದೇ ಅವಘಡಗಳಾಗಿರಲಿಲ್ಲ. ವಾಂಖೆಡೆ ಸ್ಟೇಡಿಯಂನ ಪ್ರೇಕ್ಷಕರ ಸಾಮರ್ಥ್ಯ 32,000 ಇದ್ದರೂ ಸಮಸ್ಯೆ ಆಗಿರಲಿಲ್ಲ ಎಂದು ಡಿಎನ್ಎ ಎಂಟರ್​ಟೈನ್ಮೆಂಟ್ ಎಂದು ಹೈಕೋರ್ಟ್ ಗೆ ತಿಳಿಸಿದೆ.


ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವದ ವೇಳೆ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಡಿಎನ್‌ಎ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ, ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದೆ. ಅರ್ಜಿಯಲ್ಲಿ, ಕಾಲ್ತುಳಿತ ಘಟನೆಗೆ ಸರ್ಕಾರ ಮತ್ತು ಪೊಲೀಸ್ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂದು ಗಂಭೀರ ಆರೋಪಗಳನ್ನು ಮಾಡಲಾಗಿದೆ.

ಡಿಎನ್‌ಎ ಎಂಟರ್‌ಟೈನ್‌ಮೆಂಟ್ ಸಂಸ್ಥೆಯು ತನ್ನ ಅರ್ಜಿಯಲ್ಲಿ, ವಿಧಾನಸೌಧ ಮತ್ತು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮದ ಯೋಜನೆ ಮತ್ತು ನಿರ್ಧಾರಗಳನ್ನು ಸರ್ಕಾರ ಮತ್ತು ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ) ಕೈಗೊಂಡಿದ್ದವು ಎಂದು ಉಲ್ಲೇಖಿಸಿದೆ. ಆರ್‌ಸಿಬಿ ವಿಜಯೋತ್ಸವದಲ್ಲಿ ಭಾಗಿಯಾಗಲು ಸರ್ಕಾರವೇ ಜನರಿಗೆ ಕರೆ ನೀಡಿತ್ತು ಎಂದು ಹೇಳಿದೆ.

ಸರ್ಕಾರದ ವೈಫಲ್ಯದ ಬಗ್ಗೆ ಡಿಎನ್‌ಎ ಆರೋಪ

2024ರಲ್ಲಿ ಭಾರತ ಟಿ20 ವಿಶ್ವಕಪ್ ಗೆದ್ದಾಗ ಮುಂಬೈನಲ್ಲಿ ವಿಕ್ಟರಿ ಪರೇಡ್ ನಡೆಸಲಾಗಿತ್ತು. ಡಿಎನ್‌ಎ ಸಂಸ್ಥೆಯೇ ಆಯೋಜಿಸಿದ್ದ ಆ ಪರೇಡ್‌ನಲ್ಲಿ 3 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದರೂ ಯಾವುದೇ ಅವಘಡಗಳು ಸಂಭವಿಸಿರಲಿಲ್ಲ. ವಾಂಖೆಡೆ ಸ್ಟೇಡಿಯಂನ ಪ್ರೇಕ್ಷಕರ ಸಾಮರ್ಥ್ಯ ಕೇವಲ 32,000 ಇದ್ದರೂ ಅಲ್ಲಿ ಯಾವುದೇ ಸಮಸ್ಯೆ ಎದುರಾಗಿರಲಿಲ್ಲ ಎಂದು ಡಿಎನ್‌ಎ ಎಂಟರ್‌ಟೈನ್‌ಮೆಂಟ್ ಹೈಕೋರ್ಟ್‌ಗೆ ತಿಳಿಸಿದೆ. ಈ ಉದಾಹರಣೆಗಳನ್ನು ನೀಡಿ, ಚಿನ್ನಸ್ವಾಮಿ ಸ್ಟೇಡಿಯಂ ಬಳಿಯ ಘಟನೆಗೆ ತಾವು ಕಾರಣವಲ್ಲ ಎಂದು ಹೇಳಿಕೊಂಡಿದೆ.

ಆರ್‌ಸಿಬಿ ವಿಕ್ಟರಿ ಪರೇಡ್ ನಡೆಸಲು ಜೂನ್ 3ರಂದು ಅನುಮತಿಗಾಗಿ ಪತ್ರ ಬರೆಯಲಾಗಿತ್ತು. ಆದರೆ, ತೆರೆದ ಬಸ್‌ನಲ್ಲಿ ಪರೇಡ್ ನಡೆಸಲು ಪೊಲೀಸರು ಅನುಮತಿ ನಿರಾಕರಿಸಿದ್ದರು. ಬಳಿಕ ರಾಜ್ಯ ಸರ್ಕಾರವೇ ವಿಧಾನಸೌಧದ ಮುಂದೆ ಕಾರ್ಯಕ್ರಮ ನಡೆಸಲು ನಿರ್ಧರಿಸಿತು. ಪೊಲೀಸರು ವಿಧಾನಸೌಧದ ಕಾರ್ಯಕ್ರಮಕ್ಕೆ ಹೆಚ್ಚಿನ ಭದ್ರತೆ ನೀಡಿದರು. ಆದರೆ, ಎಂ. ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಅಗತ್ಯವಿದ್ದಷ್ಟು ಪೊಲೀಸರು ಇರಲಿಲ್ಲ ಎಂದು ಡಿಎನ್‌ಎ ಸಂಸ್ಥೆ ಆರೋಪಿಸಿದೆ.

ಡಿಎನ್‌ಎ ಸಂಸ್ಥೆಯಿಂದಲೇ ಖಾಸಗಿ ಭದ್ರತೆ

ಡಿಎನ್‌ಎ ಸಂಸ್ಥೆಯು ತನ್ನ ಪರವಾಗಿ 584 ಖಾಸಗಿ ಭದ್ರತಾ ಸಿಬ್ಬಂದಿಯನ್ನು ನೇಮಿಸಿತ್ತು. ಆದಾಗ್ಯೂ, ಪೊಲೀಸ್ ಇಲಾಖೆಯ ಸಮರ್ಪಕ ಸಹಕಾರ ದೊರೆಯದಿರುವುದು ಮತ್ತು ಜನಸಂದಣಿಯನ್ನು ನಿಯಂತ್ರಿಸುವಲ್ಲಿನ ವೈಫಲ್ಯವೇ ಕಾಲ್ತುಳಿತಕ್ಕೆ ಕಾರಣ ಎಂದು ಸಂಸ್ಥೆ ಪ್ರತಿಪಾದಿಸಿದೆ. ರಾಜ್ಯ ಸರ್ಕಾರವು ತನ್ನ ವೈಫಲ್ಯವನ್ನು ಮುಚ್ಚಿಟ್ಟುಕೊಳ್ಳಲು ಡಿಎನ್‌ಎ ಎಂಟರ್‌ಟೈನ್‌ಮೆಂಟ್ ಸಂಸ್ಥೆಯ ಸಿಬ್ಬಂದಿಯನ್ನು ಬಂಧಿಸಲು ಆದೇಶಿಸಿದೆ ಎಂದು ರಿಟ್ ಅರ್ಜಿಯಲ್ಲಿ ಆರೋಪಿಸಲಾಗಿದೆ.

Read More
Next Story