ಕೆರೆಗಳಲ್ಲಿ ಮೀನುಗಾರಿಕೆಗೆ ಮುಕ್ತ ಅವಕಾಶ: ಡಿಸಿಎಂ ಡಿ.ಕೆ. ಶಿವಕುಮಾರ್ ಮಹತ್ವದ ಘೋಷಣೆ
x

ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಾದ್ಯಂತ ಸುಮಾರು 10 ಸಾವಿರಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬಿಸುವ ಬೃಹತ್ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ.

ಕೆರೆಗಳಲ್ಲಿ ಮೀನುಗಾರಿಕೆಗೆ ಮುಕ್ತ ಅವಕಾಶ: ಡಿಸಿಎಂ ಡಿ.ಕೆ. ಶಿವಕುಮಾರ್ ಮಹತ್ವದ ಘೋಷಣೆ

ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಾದ್ಯಂತ ಸುಮಾರು 10 ಸಾವಿರಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬಿಸುವ ಬೃಹತ್ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ.


Click the Play button to hear this message in audio format

ರಾಜ್ಯದ ತುಂಬೆಲ್ಲಾ ವ್ಯಾಪಿಸಿರುವ ಕೆರೆಗಳಲ್ಲಿ ಮೀನುಗಾರಿಕೆ ಚಟುವಟಿಕೆಗಳನ್ನು ನಡೆಸಲು ಸರ್ಕಾರ ಮುಕ್ತ ಅವಕಾಶ ಕಲ್ಪಿಸಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ. ಈ ಯೋಜನೆಯು ಗ್ರಾಮೀಣ ಭಾಗದ ಯುವಕರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಜೊತೆಗೆ, ಸರ್ಕಾರಕ್ಕೂ ಆದಾಯ ತರುವ ಉದ್ದೇಶ ಹೊಂದಿದೆ.

ಹೆಬ್ಬಾಳದ ಪಶುವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ಶನಿವಾರ ನಡೆದ 'ವಿಶ್ವ ಮೀನುಗಾರಿಕೆ ದಿನಾಚರಣೆ ಹಾಗೂ ಮತ್ಸ್ಯ ಮೇಳ' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ಜಲಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ಕೆರೆಗಳಿಗೆ ನೀರು ಮತ್ತು ಮೀನುಗಾರಿಕೆ ಅವಕಾಶ

"ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಾದ್ಯಂತ ಸುಮಾರು 10 ಸಾವಿರಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬಿಸುವ ಬೃಹತ್ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ. ಈ ಪ್ರಕ್ರಿಯೆಗಾಗಿ ಇಂಧನ ಇಲಾಖೆಗೆ 3 ಸಾವಿರ ಕೋಟಿ ರೂಪಾಯಿಗಳ ಬಾಕಿ ಪಾವತಿಸಬೇಕಿದೆ. ಈಗ ನೀರಿನಿಂದ ತುಂಬಿರುವ ಈ ಕೆರೆಗಳನ್ನು ಆರ್ಥಿಕ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುವುದು. ಸಣ್ಣ ಕೆರೆಗಳ ನಿರ್ವಹಣೆ ಮತ್ತು ಮೀನುಗಾರಿಕೆ ಹಕ್ಕನ್ನು ಸ್ಥಳೀಯ ಸಹಕಾರ ಸಂಘಗಳಿಗೆ (ಸೊಸೈಟಿ) ನೀಡಲಾಗುವುದು. ಉಳಿದ ಮಧ್ಯಮ ಮತ್ತು ದೊಡ್ಡ ಕೆರೆಗಳಲ್ಲಿ ಹರಾಜು ಪ್ರಕ್ರಿಯೆ ಮೂಲಕ ಸಾರ್ವಜನಿಕರಿಗೆ ಮೀನುಗಾರಿಕೆ ನಡೆಸಲು ಅನುಮತಿ ನೀಡಲಾಗುವುದು," ಎಂದು ಡಿ.ಕೆ. ಶಿವಕುಮಾರ್ ವಿವರಿಸಿದರು.

ಮೀನುಗಾರಿಕೆ: ತಾಳ್ಮೆಯ ಕಲೆ ಮತ್ತು ಶ್ರಮಜೀವಿಗಳ ಬದುಕು

ತಮ್ಮ ಬಾಲ್ಯದ ದಿನಗಳನ್ನು ಸ್ಮರಿಸಿದ ಡಿಸಿಎಂ, "ಮೀನುಗಾರಿಕೆ ಕೇವಲ ಒಂದು ವೃತ್ತಿಯಲ್ಲ, ಅದು ತಾಳ್ಮೆಯ ಕಲೆ. ನಾನು ಸಣ್ಣವನಿದ್ದಾಗ ಸಂಗಮದಲ್ಲಿ ಗಾಳ ಹಾಕಿ ಮೀನು ಹಿಡಿಯುತ್ತಿದ್ದೆ. ಆ ಕಲೆಗಾರಿಕೆ ನನಗೂ ಕರಗತವಾಗಿದೆ. ಮೀನುಗಾರರು ತಮ್ಮ ಜೀವವನ್ನೇ ಪಣಕ್ಕಿಟ್ಟು ಸಮುದ್ರ ಮತ್ತು ನದಿಗಳಲ್ಲಿ ಮೀನು ಹಿಡಿಯುತ್ತಾರೆ. ನಿಮಗೆ ಸೂರ್ಯ ಮತ್ತು ಚಂದ್ರರೇ ಸಾಕ್ಷಿ. ನಿಮ್ಮ ಆತ್ಮಬಲವೇ ನಿಮಗೆ ರಕ್ಷಣೆ. ಮೀನು ಎಂದರೆ ಲಕ್ಷ್ಮಿ ಇದ್ದಂತೆ. ರೈತರು ಭೂಮಿಯಲ್ಲಿ ಕೃಷಿ ಮಾಡಿದರೆ, ನೀವು ನೀರಿನಲ್ಲಿ ಕೃಷಿ ಮಾಡುವ ಶ್ರಮಜೀವಿಗಳು," ಎಂದು ಮೀನುಗಾರ ಸಮುದಾಯವನ್ನು ಕೊಂಡಾಡಿದರು.

ಮುಖ್ಯಮಂತ್ರಿಗಳಿಗೆ 'ಮಶೀರ್ ಮೀನು' (Mahseer Fish) ತೋರಿಸಿದ ಪ್ರಸಂಗವನ್ನು ಉಲ್ಲೇಖಿಸಿದ ಅವರು, "ಮೀನು ಹಿಡಿಯುವುದು ಮತ್ತು ಅದನ್ನು ಮಾರಾಟ ಮಾಡುವುದು ಎರಡೂ ವಿಭಿನ್ನ ಕೌಶಲ್ಯಗಳು. ಈ ವೃತ್ತಿಯಲ್ಲಿ ಜಾತಿ ಮುಖ್ಯವಲ್ಲ; ನೀತಿ, ಛಲ ಮತ್ತು ಆಸಕ್ತಿ ಮುಖ್ಯ. ಮೀನುಗಾರರಿಗೆ ನಿತ್ಯವೂ ಮೀನು ಸಿಗುವುದಿಲ್ಲ, ಕೆಲವೊಮ್ಮೆ ವಾರಗಟ್ಟಲೆ ಕಾಯಬೇಕಾಗುತ್ತದೆ. ಇಂತಹ ತಾಳ್ಮೆಯ ಬದುಕು ನಿಮ್ಮದು," ಎಂದು ಬಣ್ಣಿಸಿದರು.

ಕರಾವಳಿ ಪ್ರವಾಸೋದ್ಯಮಕ್ಕೆ ಹೊಸ ನೀತಿ

ಕರಾವಳಿ ಭಾಗದ ಅಭಿವೃದ್ಧಿಗೆ ಸರ್ಕಾರ ವಿಶೇಷ ಒತ್ತು ನೀಡಿದ್ದು, ಶೀಘ್ರದಲ್ಲೇ 'ಪ್ರತ್ಯೇಕ ಕರಾವಳಿ ಪ್ರವಾಸೋದ್ಯಮ ನೀತಿ'ಯನ್ನು ಜಾರಿಗೆ ತರಲಾಗುವುದು ಎಂದು ಶಿವಕುಮಾರ್ ಭರವಸೆ ನೀಡಿದರು. ಈ ನೀತಿಯು ಮೀನುಗಾರಿಕೆ ಮತ್ತು ಪ್ರವಾಸೋದ್ಯಮವನ್ನು ಬೆಸೆಯಲಿದ್ದು, ಕರಾವಳಿ ಭಾಗದ ಆರ್ಥಿಕತೆಗೆ ಹೊಸ ಚೈತನ್ಯ ನೀಡಲಿದೆ.

"ನೀವು ನಿಜವಾದ ಗಂಗಾ ಪುತ್ರರು. ನೀರಿನಲ್ಲಿ ಕೆಲಸ ಮಾಡಿ ಸಮಾಜಕ್ಕೆ ಆಹಾರ ಒದಗಿಸುವ ನಿಮ್ಮ ಸೇವೆ ಅನನ್ಯ. ಭೀಷ್ಮನ ಪ್ರತಿಜ್ಞೆಯಂತೆ ನಿಮ್ಮ ವೃತ್ತಿಗೂ ಒಂದು ಘನತೆ ಇದೆ. ಮೀನುಗಾರರ ಏಳಿಗೆಗೆ ಮತ್ತು ಮೀನುಗಾರಿಕೆ ಉತ್ತೇಜನಕ್ಕೆ ಸರ್ಕಾರ ಸದಾ ಬದ್ಧವಾಗಿದೆ," ಎಂದು ಅವರು ಶುಭ ಹಾರೈಸಿದರು.

Read More
Next Story