
ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್
Bangalore stampede: ಪೊಲೀಸ್ ಆಯುಕ್ತ ದಯಾನಂದ್ ಅಮಾನತು ಮೂಲಕ ತನ್ನನ್ನು ರಕ್ಷಿಸಲು ಯತ್ನಿಸಿತೇ ಸರ್ಕಾರ?
ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಸೇರಿದಂತೆ ಐವರು ಅಧಿಕಾರಿಗಳ ತಲೆದಂಡ ಮಾಡಿರುವುದು ಸರ್ಕಾರವು ಪೊಲೀಸ್ ಸಿಬ್ಬಂದಿಯಿಂದ ಟೀಕಾಸ್ತ್ರ ಎದುರಿಸುವಂತಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ವಿಜಯೋತ್ಸವ ವೇಳೆ ನಡೆದ ದುರಂತ ನಾನಾ ಮಜಲು ಪಡೆದುಕೊಳ್ಳುತ್ತಿದೆ. ಸರ್ಕಾರ ವಿರುದ್ಧ ಪ್ರತಿಪಕ್ಷಗಳ ಟೀಕಾಪ್ರಹಾರ ಸೇರಿದಂತೆ ಸ್ವಪಕ್ಷೀಯರಿಂದಲೇ ಟೀಕೆ ವ್ಯಕ್ತವಾಗಲಾರಂಭಿಸಿತು. ಇದರ ಜೊತೆಗೆ ಕಾಂಗ್ರೆಸ್ ಹೈಕಮಾಡ್ನಿಂದಲೂ ಸರ್ಕಾರ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಅಭಿನಂದನಾ ಸಮಾರಂಭದ ಆತುರ ನಿರ್ಧಾರಕ್ಕೆ ವ್ಯಾಪಕ ವಾಗ್ದಾಳಿಗಳು ಆರಂಭಗೊಂಡವು.
ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ತನ್ನ ರಕ್ಷಣೆಗಾಗಿ ಸರ್ಕಾರವು ನಿರೀಕ್ಷೆಯಂತೆ ಪೊಲೀಸ್ ಇಲಾಖೆಯನ್ನು ಹೊಣೆಗಾರಿಕೆಯನ್ನಾಗಿ ಮಾಡಿದೆ. ಆದರೆ, ನಗರ ಪೊಲೀಸ್ ಆಯುಕ್ತರನ್ನೇ ಅಮಾನತುಗೊಳಿಸಿರುವುದು ಸಾರ್ವಜನಿಕ ವಲಯದಲ್ಲಿ ಮಾತ್ರವಲ್ಲದೇ, ಪೊಲೀಸ್ ಇಲಾಖೆಯಲ್ಲಿಯೂ ಸರ್ಕಾರದ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಕಠಿಣ ಕ್ರಮದ ಹೆಸರಲ್ಲಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಸೇರಿದಂತೆ ಐವರು ಅಧಿಕಾರಿಗಳ ತಲೆದಂಡ ಮಾಡಿರುವುದು ಸರ್ಕಾರವು ಪೊಲೀಸ್ ಸಿಬ್ಬಂದಿಯಿಂದ ಟೀಕಾಸ್ತ್ರ ಎದುರಿಸುವಂತಾಗಿದೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ಕೇಂದ್ರ ವಲಯ ಡಿಸಿಪಿ ಟಿ.ಶೇಖರ್, ಎಸಿಪಿ ಬಾಲಕೃಷ್ಣ, ಕಬ್ಬನ್ ಪಾರ್ಕ್ ಪೊಲೀಸ್ ಇನ್ಸ್ಪೆಕ್ಟರ್ ಗಿರೀಶ್ ಕಠಿಣ ಕ್ರಮ ಹೆಸರಲ್ಲಿ ಅಮಾನತುಗೊಳಿಸಿದೆ. ಪೊಲೀಸ್ ಇಲಾಖೆಯಲ್ಲಿ ದಕ್ಷ ಅಧಿಕಾರಿ ಎನ್ನಿಸಿಕೊಂಡಿದ್ದ ಪೊಲೀಸ್ ಆಯುಕ್ತ ಬಿ.ದಯಾನಂದ ಅವರನ್ನು ಅಮಾನತುಗೊಳಿಸಿರುವುದು ಪೊಲೀಸ್ ಇಲಾಖೆಯಲ್ಲಿ ಹಲವರಿಗೆ ಬೇಸರ ತರಿಸಿದೆ. ಸರ್ಕಾರ ಆತುರದ ತೀರ್ಮಾನ ಕೈಗೊಳ್ಳುವ ಮೂಲಕ ತಪ್ಪು ನಿರ್ಧಾರ ಕೈಗೊಂಡಿದ್ದರಿಂದ ಅನಾಹುತ ಸಂಭವಿಸಿದೆ. ಇದಕ್ಕೆ ಪೊಲೀಸ್ ಅಧಿಕಾರಿಗಳ ತಲೆದಂಡ ಸರಿಯಲ್ಲ. ಅದರಲ್ಲಿಯೂ ಬಿ.ದಯಾನಂದ ಅವರನ್ನು ಅಮಾನತು ಮಾಡಿರುವುದು ಸರ್ಕಾರದ ಹೊಣಗೇಡಿತನ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ಬಿ.ದಯಾನಂದ ಅವರು ಪ್ರಾಮಾಣಿಕ ಮತ್ತು ಅತ್ಯುತ್ತಮ ಪೊಲೀಸ್ ಅಧಿಕಾರಿ. ಇವರನ್ನು ಅಮಾನತುಗೊಳಿಸುವ ಸರ್ಕಾರದ ನಿರ್ಧಾರವನ್ನು ಹಲವರು ಟೀಕಿಸಿದ್ದಾರೆ. ಆರ್ಸಿಬಿ ತಂಡ ಗೆಲುವು ಸಾಧಿಸಿದ ವೇಳೆ ತಡರಾತ್ರಿ ೩ ಗಂಟೆಯವರೆಗೆ ಕರ್ತವ್ಯ ನಿರ್ವಹಿಸಿದ್ದರು. ಯಾವುದೇ ಅಶಾಂತಿ ತಲೆದೋರದಂತೆ ರಾತ್ರಿ ಬಂದೋಬಸ್ತ್ ನಡೆಸಿದ್ದರು. ಕರ್ತವ್ಯದ ವಿಷಯದಲ್ಲಿ ಎಂದಿಗೂ ರಾಜೀ ಆದ ವ್ಯಕ್ತಿಯಲ್ಲ. ಪ್ರಾಮಾಣಿಕ, ನಾಗರಿಕ ಕೇಂದ್ರಿತ ಮತ್ತು ದೂರದೃಷ್ಟಿಯ ಅಧಿಕಾರಿಯನ್ನು ಬಲಿಪಶುವನ್ನಾಗಿ ಮಾಡಲಾಗುತ್ತಿದೆ. ರಾಜಕಾರಣಿಗಳು ತಮ್ಮ ಹೇಡಿತನವನ್ನು ರಕ್ಷಿಸಿಕೊಳ್ಳಲು ಪ್ರಾಮಾಣಿಕ ಅಧಿಕಾರಿಗಳನ್ನು ಬಲಿ ಪಡೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗಿದೆ.
ಬಿ. ದಯಾನಂದ ಅವರು 1994 ರ ಬ್ಯಾಚ್ ಅಧಿಕಾರಿಯಾಗಿದ್ದು, ಸಾರ್ವಜನಿಕ ಆಡಳಿತದಲ್ಲಿ ಪದವಿ ಪಡೆದಿದ್ದಾರೆ. ಅವರು ಕರ್ನಾಟಕದ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನವರು. 1994 ರಲ್ಲಿ ಭಾರತೀಯ ಪೊಲೀಸ್ ಸೇವೆಗೆ ಸೇರಿದ ಅವರಿಗೆ ಕರ್ನಾಟಕ ರಾಜ್ಯದ ಕೇಡರ್ ಅಧಿಕಾರಿಯಾಗಿ ನೀಡಲಾಯಿತು. ಪೊಲೀಸ್ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ ಅವರು, ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆ, ಕೋಮು ಗಲಭೆಗಳನ್ನು ನಿರ್ವಹಿಸುವುದು ಮತ್ತು ಸಂವೇದನಾಶೀಲ ಅಪರಾಧಗಳ ತನಿಖೆಯಲ್ಲಿ ಅನುಭವವನ್ನು ಗಳಿಸಿದ್ದಾರೆ. ರಾಜ್ಯ ವಿಧಿವಿಜ್ಞಾನ ಪ್ರಯೋಗಾಲಯದ ವ್ಯವಹಾರಗಳನ್ನು ನೋಡಿಕೊಂಡ ಸಮಯದಲ್ಲಿ ಅದರ ಮರುಸಂಘಟನೆಯನ್ನು ಕೈಗೆತ್ತಿಕೊಂಡರು ಮತ್ತು ವಿಶೇಷ ಸೈಬರ್ ವಿಧಿವಿಜ್ಞಾನ ಪ್ರಯೋಗಾಲಯವನ್ನು ಸಹ ಸ್ಥಾಪನೆಗೆ ಕಾರಣರಾದರು.
ಬಿ ದಯಾನಂದ ಅವರು ತಂತ್ರಜ್ಞಾನದ ಬುದ್ಧಿವಂತ ಪೊಲೀಸ್ ಅಧಿಕಾರಿಯಾಗಿದ್ದು, 2005 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾಗ ವಿಶ್ವದ ಮೊದಲ ಪೊಲೀಸ್ ಬ್ಲಾಗ್ಗಳಲ್ಲಿ ಒಂದನ್ನು ಪ್ರಾರಂಭಿಸಿದರು. ಈ ನವೀನ ವಿಧಾನಕ್ಕಾಗಿ, 2006 ರಲ್ಲಿ ದೆಹಲಿಯಲ್ಲಿ ನಡೆದ ಅಂತರರಾಷ್ಟ್ರೀಯ ಇ-ಆಡಳಿತ ಸಮ್ಮೇಳನದಲ್ಲಿ ಅವರಿಗೆ "ಇ-ಗವರ್ನನ್ಸ್ ಪ್ರಶಸ್ತಿ - 2006" ನೀಡಿ ಗೌರವಿಸಲಾಯಿತು. ಅವರ ಮಾರ್ಗದರ್ಶನದಲ್ಲಿ, ಬೆಂಗಳೂರು ನಗರ ಪೊಲೀಸರು ಸಾರ್ವಜನಿಕರೊಂದಿಗೆ ಉತ್ತಮ ಸಂಪರ್ಕ ಸಾಧಿಸಲು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸಲು ಪ್ರಾರಂಭಿಸಿದರು.
ದಯಾನಂದ ಅವರು ರಾಷ್ಟ್ರಪತಿಗಳ ಪ್ರತಿಭಾನ್ವಿತ ಸೇವೆಗಾಗಿ ಪೊಲೀಸ್ ಪದಕ (2011), ವಿಶ್ವ ಶಾಂತಿ ಪಾಲನೆಗಾಗಿ ವಿಶ್ವಸಂಸ್ಥೆಯ ಪದಕ (2003-04), ಮತ್ತು ಮುಖ್ಯಮಂತ್ರಿಗಳ ಚಿನ್ನದ ಪದಕ (1998-99) ಗಳನ್ನು ಸಹ ಪಡೆದಿದ್ದಾರೆ. 2022 ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ, ಅವರಿಗೆ ವಿಶಿಷ್ಟ ಸೇವೆಗಾಗಿ ರಾಷ್ಟ್ರಪತಿಗಳ ಪದಕವನ್ನು ನೀಡಲಾಗಿದೆ. ಇಂತಹ ಅಧಿಕಾರಿಯ ವಿರುದ್ಧ ಸರ್ಕಾರ ತನ್ನ ಸ್ವಯಂ ಪ್ರತಿಷ್ಠೆಗಾಗಿ ಅಮಾನತು ಮಾಡಿರುವುದು ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಬಿ.ದಯಾನಂದ ಅವರ ಅಮಾನತಿಗೆ ರಾಜ್ಯ ಸರ್ಕಾರ ಸಮಜಾಯಿಷಿ ನೀಡಿದೆ. ಜೂನ್ 3ರಂದು ಬೆಂಗಳೂರಿನಲ್ಲಿ ಆರ್ಸಿಬಿ ವಿಜಯಯಾತ್ರೆ ಮತ್ತು ಸಂಭ್ರಮಾಚರಣೆ ಆಯೋಜಿಸುತ್ತೇವೆ ಎಂದು ಆರ್ಸಿಬಿಯ ಸಿಇಒ ತಿಳಿಸಿದ್ದರು. ಆದರೆ, ಈ ಬಗ್ಗೆ ದಯಾನಂದ್ ಅವರು ಆಯೋಜಕರಿಗೆ ಲಿಖಿತ ಉತ್ತರ ನೀಡಿ ಅನುಮತಿ ನಿರಾಕರಿಸಲು ವಿಫಲರಾಗಿದ್ದಾರೆ. ಸಮಯಾವಕಾಶ ಸಾಕಾಗುವುದಿಲ್ಲ ಎಂದು ಅವರು ಅನುಮತಿ ನಿರಾಕರಿಸಬೇಕಿತ್ತು. ಆದರೆ, ಮಾಧ್ಯಮಗಳಲ್ಲಿ ಅವರು ತರಾತುರಿ ಕಾರ್ಯಕ್ರಮ ಆಯೋಜನೆ ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೆ. ಲಿಖಿತವಾಗಿ ಅವರು ನೀಡಬೇಕಾಗಿತ್ತು ಎಂದು ತಿಳಿಸಿದೆ.
ಸರ್ಕಾರದ ಸಮಜಾಯಿಷಿ ಒಪ್ಪುವಂತಹದ್ದಲ್ಲ. ತನ್ನನ್ನು ರಕ್ಷಣೆ ಮಾಡಿಕೊಳ್ಳಲು ನೆಪ ನೀಡಿದೆ. ಘಟನೆಗೆ ಸರ್ಕಾರವೇ ನೇರಹೊಣೆಯಾಗಿದೆ. ಕಾಲ್ತುಳಿತಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕೇ ಹೊರತು ಪ್ರಾಮಾಣಿಕ ಪೊಲೀಸ್ ಆಯುಕ್ತರ ವಿರುದ್ಧ ಕ್ರಮ ಕೈಗೊಳ್ಳುವುದು ಸಮಂಜಸವಲ್ಲ ಎಂಬ ಒತ್ತಾಯಗಳು ಕೇಳಿಬಂದಿವೆ.
ಆರ್ಸಿಬಿ ಸಂಭ್ರಮಾಚರಣೆಗಾಗಿ ಎರಡು ಪ್ರತ್ಯೇಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು. ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಅಭಿನಂದನಾ ಕಾರ್ಯಕ್ರಮ ಆಯೋಜಿಸಿದರೆ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಹಮ್ಮಿಕೊಳ್ಳಲಾಗಿತ್ತು. ಅಭಿನಂದನಾ ಸಮಾರಂಭಕ್ಕೆ ಕಿಕ್ಕಿರಿದು ಜನರು ಆಗಮಿಸಿದ್ದರೂ ಸಹ ಸುಗಮವಾಗಿ ನಡೆಯಿತು. ಆದರೆ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಜಯೋತ್ಸವ ಕಾರ್ಯಕ್ರಮಕ್ಕೂ ಲಕ್ಷಾಂತರ ಜನ ಆಗಮಿಸಿದ್ದರು. ಇಲ್ಲಿ ಉಚಿತ ಪ್ರವೇಶ ಎಂಬ ಗೊಂದಲದಿಂದಾಗಿ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಸಂಭವಿಸಿ 11 ಮಂದಿ ಸಾವನ್ನಪ್ಪಿದ್ದರು. ಇದು ದೇಶ-ವಿದೇಶದಲ್ಲಿ ಸುದ್ದಿಯಾಗಿ ತೀವ್ರ ಟೀಕೆಗಳು ವ್ಯಕ್ತವಾದವು. ಈ ಕಾರಣಕ್ಕಾಗಿ ಸರ್ಕಾರವು ತನ್ನ ತಪ್ಪಿಂದ ರಕ್ಷಿಸಿಕೊಳ್ಳಲು ಹಿರಿಯ ಪೊಲೀಸ್ ಅಧಿಕಾರಿಗಳ ತಲೆದಂಡ ಮಾಡಿದೆ ಎಂಬ ಟೀಕೆಗಳು ವ್ಯಕ್ತವಾಗಿವೆ.