
ಧರ್ಮಸ್ಥಳದ ಯುವತಿ ಪಂಜಾಬ್ನಲ್ಲಿ ನಿಗೂಢ ಸಾವು: ಕೊಲೆ ಶಂಕೆ ವ್ಯಕ್ತಪಡಿಸಿದ ಕುಟುಂಬಸ್ಥರು
ಗೆಳೆಯನೊಬ್ಬನ ಜೊತೆ ಬೈಕ್ನಲ್ಲಿ ಕಾಲೇಜಿಗೆ ತೆರಳಿದ್ದ ಆಕಾಂಕ್ಷ, ಪ್ರಮಾಣಪತ್ರ ಪಡೆದ ಬಳಿಕ ಕುಟುಂಬದ ಸದಸ್ಯರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದರು. ಆದರೆ, ಕೆಲವೇ ಕ್ಷಣಗಳ ನಂತರ ಆಕೆ ಕಾಲೇಜಿನ ಮೂರನೇ ಮಹಡಿಯಿಂದ ಕೆಳಗೆ ಬಿದ್ದು ಮೃತಪಟ್ಟಿರುವುದಾಗಿ ಮಾಹಿತಿ ಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಗ್ರಾಮದ ಬೊಳಿಯಾರು ನಿವಾಸಿ ಆಕಾಂಕ್ಷ ಎಸ್. ನಾಯರ್ (22) ಮೇ 17ರಂದು ಪಂಜಾಬ್ನಲ್ಲಿ ನಿಗೂಢವಾಗಿ ಮೃತಪಟ್ಟಿದ್ದಾರೆ. ಅವರು ಸಿವಿಲ್ ಗುತ್ತಿಗೆದಾರ ಸುರೇಂದ್ರ ಮತ್ತು ಸಿಂಧೂದೇವಿ ದಂಪತಿಯ ಪುತ್ರಿ.
ಪಂಜಾಬ್ನ ಎಲ್ಪಿಯು ಪಗ್ವಾಡ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪೂರೈಸಿದ್ದ ಆಕಾಂಕ್ಷ, ಕಳೆದ ಆರು ತಿಂಗಳಿನಿಂದ ದೆಹಲಿಯಲ್ಲಿ ಜೆಟ್ ಏರೊಸ್ಪೇಸ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಭವಿಷ್ಯದಲ್ಲಿ ಉದ್ಯೋಗ ನಿಮಿತ್ತ ಜಪಾನ್ಗೆ ತೆರಳಲು ಸಿದ್ಧತೆ ನಡೆಸಿದ್ದ ಅವರು, ಓದಿದ್ದ ಕಾಲೇಜಿನಿಂದ ಪ್ರಮಾಣಪತ್ರ ಪಡೆಯುವ ಸಲುವಾಗಿ ಶನಿವಾರ ಪಂಜಾಬ್ಗೆ ತೆರಳಿದ್ದರು.
ಗೆಳೆಯನೊಬ್ಬನ ಜೊತೆ ಬೈಕ್ನಲ್ಲಿ ಕಾಲೇಜಿಗೆ ತೆರಳಿದ್ದ ಆಕಾಂಕ್ಷ, ಪ್ರಮಾಣಪತ್ರ ಪಡೆದ ಬಳಿಕ ಕುಟುಂಬದ ಸದಸ್ಯರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದರು. ಆದರೆ, ಕೆಲವೇ ಕ್ಷಣಗಳ ನಂತರ ಆಕೆ ಕಾಲೇಜಿನ ಮೂರನೇ ಮಹಡಿಯಿಂದ ಕೆಳಗೆ ಬಿದ್ದು ಮೃತಪಟ್ಟಿರುವುದಾಗಿ ಮಾಹಿತಿ ಬಂದಿದೆ. ಈ ಸಂಬಂಧ ಪಂಜಾಬ್ನ ಜಲಂಧರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಆಕಾಂಕ್ಷ ಅವರ ಕುಟುಂಬದ ಸದಸ್ಯರೆಲ್ಲರೂ ಶನಿವಾರ ರಾತ್ರಿಯೇ ಪಂಜಾಬ್ಗೆ ಪ್ರಯಾಣ ಬೆಳೆಸಿದ್ದಾರೆ. ಸುರೇಂದ್ರ ಮತ್ತು ಸಿಂಧೂದೇವಿ ದಂಪತಿಗೆ ಪುತ್ರಿ ಆಕಾಂಕ್ಷ ಮತ್ತು ಒಬ್ಬ ಪುತ್ರ ಇದ್ದು, ಪುತ್ರನಿಗೆ ಇತ್ತೀಚೆಗೆ ಕೇರಳದಲ್ಲಿ ವಿವಾಹವಾಗಿತ್ತು.
ಸ್ಥಳೀಯ ಶಾಸಕ ಹರೀಶ್ ಪೂಂಜ ಅವರು ಮಂಗಳೂರು ವಿಮಾನ ನಿಲ್ದಾಣದಲ್ಲಿ ಆಕಾಂಕ್ಷ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಈ ವೇಳೆ ಆಕಾಂಕ್ಷ ಅವರ ಪೋಷಕರು, "ನಮ್ಮ ಮಗಳನ್ನು ಕೊಲೆ ಮಾಡಲಾಗಿದೆ. ಆಕೆ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಕೂಲಂಕಷ ತನಿಖೆ ನಡೆಯಬೇಕು" ಎಂದು ಶಾಸಕರಲ್ಲಿ ಒತ್ತಾಯಿಸಿದ್ದಾರೆ. ಕುಟುಂಬಸ್ಥರ ಈ ಹೇಳಿಕೆಯು ಘಟನೆಯ ಸುತ್ತಲಿನ ನಿಗೂಢತೆಯನ್ನು ಹೆಚ್ಚಿಸಿದೆ.