Dharmasthala Case: Women’s Groups Demand Justice
x

ಮಹಿಳಾ ಪರ ಹೋರಾಟಗಾರರು ಭಿತ್ತಿ ಪತ್ರ ಪ್ರದರ್ಶಿಸಿದರು.

ಧರ್ಮಸ್ಥಳ ಪ್ರಕರಣ: 'ಕೊಂದವರು ಯಾರು?: ರಾಜ್ಯಾದ್ಯಂತ ಜನಾಂದೋಲನಕ್ಕೆ ಮಹಿಳಾ ಸಂಘಟನೆಗಳ ನಿರ್ಧಾರ

ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸರಣಿ ಕೊಲೆಗಳು ಮತ್ತು ಅಸಹಜ ಸಾವುಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು. ಇದಕ್ಕಾಗಿ ರಾಜ್ಯದಾದ್ಯಂತ ಸಭೆಗಳು, ವಿಚಾರ ಸಂಕಿರಣಗಳು ಮತ್ತು ಜನಸಮಾಲೋಚನಾ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ.


Click the Play button to hear this message in audio format

ಧರ್ಮಸ್ಥಳ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಶಕಗಳಿಂದ ನಡೆದಿರುವ ಅಸಹಜ ಸಾವುಗಳು ಮತ್ತು ಬಗೆಹರಿಯದ ಕೊಲೆ ಪ್ರಕರಣಗಳ ಸತ್ಯಾಸತ್ಯತೆಯನ್ನು ಬಯಲಿಗೆಳೆಯಲು ಹಾಗೂ ಸಂತ್ರಸ್ತರಿಗೆ ನ್ಯಾಯ ಒದಗಿಸಲು, "ಕೊಂದವರು ಯಾರು?" ಎಂಬ ಶೀರ್ಷಿಕೆಯಡಿ ರಾಜ್ಯಾದ್ಯಂತ ಬೃಹತ್ ಜನಾಂದೋಲನವನ್ನು ರೂಪಿಸಲು ವಿವಿಧ ಮಹಿಳಾ ಸಂಘಟನೆಗಳು ನಿರ್ಧರಿಸಿವೆ.

ಮಂಗಳವಾರ 'ನೊಂದವರೊಂದಿಗೆ ನಾವು-ನೀವು' ಸಂಘಟನೆಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಮಹತ್ವದ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಈ ಅಭಿಯಾನಕ್ಕೆ ಮಂಗಳವಾರವೇ ಚಾಲನೆ ನೀಡಲಾಗಿದ್ದು, ಧರ್ಮಸ್ಥಳ ಪ್ರಕರಣದ ತನಿಖೆಯು ಕೇವಲ 'ತಲೆಬುರುಡೆಗಳ' ಸುತ್ತ ಮಾತ್ರ ಚರ್ಚೆಯಾಗದೆ, ವರ್ಷಗಳಿಂದ ನ್ಯಾಯಕ್ಕಾಗಿ ಕಾಯುತ್ತಿರುವ ನೂರಾರು ಸಂತ್ರಸ್ತ ಕುಟುಂಬಗಳ ನೋವಿಗೆ ಸ್ಪಂದಿಸಬೇಕು ಎಂದು ಸಂಘಟನೆಗಳು ಆಗ್ರಹಿಸಿವೆ.

ಜನಾಂದೋಲನದ ಪ್ರಮುಖ ಉದ್ದೇಶಗಳು

ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸರಣಿ ಕೊಲೆಗಳು ಮತ್ತು ಅಸಹಜ ಸಾವುಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು. ಇದಕ್ಕಾಗಿ ರಾಜ್ಯದಾದ್ಯಂತ ಸಭೆಗಳು, ವಿಚಾರ ಸಂಕಿರಣಗಳು ಮತ್ತು ಜನಸಮಾಲೋಚನಾ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳಕ್ಕೆ (SIT) ಯಾವುದೇ ರಾಜಕೀಯ ಅಥವಾ ಬಾಹ್ಯ ಒತ್ತಡವಿಲ್ಲದೆ, ಮುಕ್ತವಾಗಿ ಮತ್ತು ನಿಷ್ಪಕ್ಷಪಾತವಾಗಿ ತನಿಖೆ ನಡೆಸಲು ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು ಎಂಬುದು ಆಂದೋಲನದ ಒತ್ತಾಯವಾಗಿದೆ.

2012ರಲ್ಲಿ ನಡೆದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಯಲ್ಲಿ ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಪ್ರಕರಣದ ಮರುತನಿಖೆ ನಡೆಸಬೇಕು. 'ಕೊಂದವರು ಯಾರು?' ಎಂಬ ಪ್ರಶ್ನೆ: ಪ್ರತಿ ಕೊಲೆಯ ಹಿಂದಿರುವ ನಿಜವಾದ ಅಪರಾಧಿಗಳು ಯಾರು ಎಂಬುದನ್ನು ಪತ್ತೆಹಚ್ಚಿ, ಅವರಿಗೆ ಕಠಿಣ ಶಿಕ್ಷೆಯಾಗುವವರೆಗೂ ಹೋರಾಟವನ್ನು ಜೀವಂತವಾಗಿಡುವುದು ಹೋರಾಟದ ಉದ್ದೇಶವಾಗಿದೆ.

ಸರ್ಕಾರದ ನಿಲುವಿನ ಬಗ್ಗೆ ಅಸಮಾಧಾನ

ಈ ಹಿಂದೆ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು, ಎಸ್ಐಟಿ ತನಿಖೆಯು ಸೌಜನ್ಯ ಪ್ರಕರಣವನ್ನು ಒಳಗೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಇದು ಹೋರಾಟಗಾರರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಎಲ್ಲಾ ಅಸಹಜ ಸಾವುಗಳು ಮತ್ತು ಕೊಲೆ ಪ್ರಕರಣಗಳನ್ನು ಒಂದೇ ತನಿಖೆಯ ವ್ಯಾಪ್ತಿಗೆ ತರಬೇಕು ಎಂಬುದು ಸಂಘಟನೆಗಳ ಪ್ರಮುಖ ಬೇಡಿಕೆಯಾಗಿದೆ.

Read More
Next Story