ಧರ್ಮಸ್ಥಳ ಪ್ರಕರಣ | ಒಂದೊಂದೇ ಸತ್ಯ ಹೊರಬರುತ್ತಿದೆ; ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ
x

ಧರ್ಮಸ್ಥಳ ಪ್ರಕರಣ | ಒಂದೊಂದೇ ಸತ್ಯ ಹೊರಬರುತ್ತಿದೆ; ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ

ವಿಚಾರಣೆ ವೇಳೆ ಸಾಕ್ಷಿ ದೂರುದಾರ ಸುಳ್ಳು ಮಾಹಿತಿ ನೀಡಿದ ಕಾರಣ ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಸತ್ಯ ಒಂದೊಂದೇ ಹೊರಬರುತ್ತಿದೆ ಎಂದು ಹೇಳಿದ್ದಾರೆ.


ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದೆ ಎಂದು ಹೇಳಿಕೆ ನೀಡಿ ತೀವ್ರ ಸಂಚಲನ ಸೃಷ್ಟಿಸಿದ್ದ ಅನಾಮಧೇಯ ವ್ಯಕ್ತಿಯನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಈ ಪ್ರಕರಣದ ತನಿಖೆ ನಡೆಸಿದ ವಿಶೇಷ ತನಿಖಾ ದಳ (SIT) ಈತನ ಹೇಳಿಕೆಗಳು ಸುಳ್ಳು ಎಂದು ದೃಢಪಡಿಸಿದೆ ಎನ್ನಲಾಗಿದೆ.

ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಮುಸುಕು ಧರಿಸಿ ಎಸ್‌ಐಟಿ ಕಚೇರಿಗೆ ಬಂದಿದ್ದ ಈ ವ್ಯಕ್ತಿಯನ್ನು, ಎಸ್‌ಐಟಿ ಮುಖ್ಯಸ್ಥ ಪ್ರಣಬ್ ಮೊಹಂತಿ ಅವರು ಶನಿವಾರ ಬೆಳಗ್ಗೆ 5 ಗಂಟೆಯವರೆಗೆ ವಿಚಾರಣೆ ನಡೆಸಿದ್ದಾರೆ. ಈ ಸುದೀರ್ಘ ವಿಚಾರಣೆಯ ನಂತರ ಬಂಧಿಸಿದೆ ಎನ್ನಲಾಗಿದೆ.

ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆ ಎಂದು ಈ ವ್ಯಕ್ತಿ ಅನಾಮಧೇಯ ದೂರು ನೀಡಿದ್ದ. ಪ್ರಕರಣದ ಗಂಭೀರತೆ ಪರಿಗಣಿಸಿದ ರಾಜ್ಯ ಸರ್ಕಾರ, ತನಿಖೆಗಾಗಿ ಎಸ್‌ಐಟಿ ರಚನೆ ಮಾಡಿತ್ತು. ತನಿಖೆ ಆರಂಭವಾದಾಗ, ಈ ವ್ಯಕ್ತಿಯು ಶವಗಳನ್ನು ಹೂತು ಹಾಕಿರುವ 17 ಸ್ಥಳಗಳನ್ನು ತೋರಿಸಿದ್ದ. ಆದರೆ, ತನಿಖಾ ತಂಡ ಎರಡು ಸ್ಥಳಗಳಲ್ಲಿ ಮಾತ್ರ ಅಸ್ಥಿಪಂಜರ ಮತ್ತು ಮೂಳೆಗಳನ್ನು ಕಂಡುಕೊಂಡಿದ್ದು, ಉಳಿದ ಯಾವ ಸ್ಥಳದಲ್ಲೂ ಯಾವುದೇ ಕುರುಹು ಸಿಕ್ಕಿರಲಿಲ್ಲ ಎಂದು ಹೇಳಲಾಗಿದೆ.

ಕುರುಹುಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಎಸ್‌ಐಟಿ ತಂಡ ಸಮಾಧಿ ಶೋಧವನ್ನು ಸ್ಥಗಿತಗೊಳಿಸಿ, ಈ ವ್ಯಕ್ತಿಯ ಹೇಳಿಕೆಗಳ ಕುರಿತು ತನಿಖೆ ನಡೆಸಿತ್ತು. ಪ್ರಕರಣದ ತನಿಖಾಧಿಕಾರಿ ಜಿತೇಂದ್ರ ದಯಾಮ ಮತ್ತು ಸುಮಾರು 25 ಪೊಲೀಸರ ತಂಡ ಎಸ್‌ಐಟಿ ಠಾಣೆಯಲ್ಲಿ ಈತನನ್ನು ತೀವ್ರವಾಗಿ ವಿಚಾರಣೆ ನಡೆಸಿತ್ತು. ವಿವಿಧ ಆಯಾಮಗಳಲ್ಲಿ ಪ್ರಶ್ನೆಗಳನ್ನು ಕೇಳಿ, ಈತನ ಹೇಳಿಕೆಗಳನ್ನು ಪರಿಶೀಲಿಸಲಾಗಿತ್ತು.

ಮುಸುಕುಧಾರಿಯನ್ನು ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಈ ಪ್ರಕರಣದ ಮತ್ತಷ್ಟು ವಿವರಗಳು ಪೊಲೀಸ್ ಕಸ್ಟಡಿ ವಿಚಾರಣೆಯ ನಂತರ ಹೊರಬೀಳುವ ನಿರೀಕ್ಷೆಯಿದೆ ಎನ್ನಲಾಗಿದೆ.

ಕಾನೂನು ರಕ್ಷಣೆ ಪಡೆದಿದ್ದ ಸಾಕ್ಷಿದಾರ

ವಿಟ್ನೆಸ್‌ ಪ್ರೊಟೆಕ್ಷನ್‌ ಆಕ್ಟ್‌ ಅಡಿಯಲ್ಲಿ ಸಾಕ್ಷಿ ದೂರುದಾರ ರಕ್ಷಣೆ ಪಡೆದಿದ್ದರು. ಎಸ್‌ಐಟಿ ತನಿಖೆ ನಡೆಯುವ ವೇಳೆ ವಕೀಲರೊಂದಿಗೆ ಬಂದು, ಇಡೀ ದಿನ ಎಸ್‌ಐಟಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಮತ್ತೆ ವಕೀಲರೊಂದಿಗೆ ಅಜ್ಞಾತ ಸ್ಥಳಕ್ಕೆ ತೆರಳುತ್ತಿದ್ದ.

ಸಾಕ್ಷಿ ದೂರುದಾರನನ್ನು ಬಂಧಿಸಿ, ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂಬ ಬೇಡಿಕೆ ಬಂದಿತ್ತು. ಇದೀಗ ದೂರುದಾರನಿಗೆ ಸಾಕ್ಷಿ ಸಂರಕ್ಷಣಾ ಕಾಯ್ದೆಯಡಿ ನೀಡಿದ್ದ ರಕ್ಷಣೆಯನ್ನು ಸಕ್ಷಮ ಪ್ರಾಧಿಕಾರ ರದ್ದುಪಡಿಸಿದ ಹಿನ್ನೆಲೆಯಲ್ಲಿ ಎಸ್‌ಐಟಿ ಆತನನ್ನು ಬಂಧಿಸಿದೆ ಎನ್ನಲಾಗಿದೆ.

ಬಂಧನ ಖಚಿತಪಡಿಸಿದ ಗೃಹ ಸಚಿವ

ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಡಾ.ಜಿ. ಪರಮೇಶ್ವರ್, 'ಸಾಕ್ಷಿ ದೂರುದಾರನ ಬಂಧನ ಆಗಿರುವುದು ನಿಜ. ಉಳಿದ ಮಾಹಿತಿಯನ್ನು ಎಸ್‌ಐಟಿ ನೀಡಲಿದೆ' ಎಂದು ಹೇಳಿದ್ದಾರೆ.

ಎಸ್‌ಐಟಿ ತನಿಖೆ ನಡೆಯುತ್ತಿದೆ. ಈ ಹಂತದಲ್ಲಿ ಯಾವುದೇ ಮಾಹಿತಿ ನೀಡಲು ಸಾಧ್ಯವಿಲ್ಲ. ಸುಜಾತಾ ಭಟ್ ಪ್ರಕರಣ ಹಾಗೂ ಸಾಕ್ಷಿ ದೂರುದಾರನ ಹಿಂದೆ ಜಾಲ ಇದೆ ಎಂಬ ಆರೋಪದ ಬಗ್ಗೆ ನಾನೇನೂ ಹೇಳುವುದಿಲ್ಲ. ಎಲ್ಲವನ್ನೂ ಎಸ್‌ಐಟಿ ತನಿಖೆ ಮಾಡುತ್ತಿದೆ. ಎಸ್‌ಐಟಿಯ ಅಂತಿಮ ವರದಿ ಬರುವವರೆಗೆ ನಾನು ಹೇಳಿಕೆ ನೀಡಲ್ಲ ಎಂದು ಪರಮೇಶ್ವರ್‌ ಹೇಳಿದರು.

Live Updates

  • ಧರ್ಮಸ್ಥಳ ಪ್ರಕರಣದ ಹಿಂದೆ ಪಿತೂರಿ- ಅಣ್ಣಾಮಲೈ ಆರೋಪ
    23 Aug 2025 4:37 PM IST

    ಧರ್ಮಸ್ಥಳ ಪ್ರಕರಣದ ಹಿಂದೆ ಪಿತೂರಿ- ಅಣ್ಣಾಮಲೈ ಆರೋಪ

    ಕಾಂಗ್ರೆಸ್ ಸರ್ಕಾರ ಆಧಾರರಹಿತ ಆರೋಪಗಳ ಆಧಾರದ ಮೇಲೆ ಯಾವುದೇ ಪ್ರಾಥಮಿಕ ಪುರಾವೆಗಳಿಲ್ಲದೆ ತನಿಖೆ ಆರಂಭಿಸಿದ್ದು ಮೂರ್ಖತನ ಎಂದು ಕರ್ನಾಟಕ ಮಾಜಿ ಐಪಿಎಸ್‌ ಅಧಿಕಾರಿ ಕೆ.ಅಣ್ಣಾಮಲೈ ಆರೋಪಿಸಿದ್ದಾರೆ.

    ಸರ್ಕಾರವು ಹತಾಶೆಯಲ್ಲಿ ಎಸ್‌ಐಟಿ ರಚಿಸಿ 17 ಸ್ಥಳಗಳಲ್ಲಿ ಉತ್ಖನನ ನಡೆಸಿತು. ಧರ್ಮಸ್ಥಳದಲ್ಲಿ ಅಸಹಜ ಸಾವುಗಳ ಮೃತದೇಹಗಳನ್ನು ಹೂತಿಡಲಾಗಿದೆ ಎಂದು ಸುಳ್ಳು ಅಪಪ್ರಚಾರ ಮಾಡಲಾಯಿತು. ಆದರೆ ತನಿಖೆಯಲ್ಲಿ ಆ ಆರೋಪಗಳು ಸಂಪೂರ್ಣ ಸುಳ್ಳು ಎಂದು ಸಾಬೀತಾಗಿದೆ ಎಂದು ಹೇಳಿದ್ದು, ಮುಸುಕುಧಾರಿಯ ಬಂಧನವನ್ನು ಸ್ವಾಗತಿಸಿದ್ದಾರೆ.

  • ಒಂದೊಂದೇ ಸತ್ಯ ಹೊರಬರುತ್ತಿದೆ; ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ
    23 Aug 2025 4:07 PM IST

    ಒಂದೊಂದೇ ಸತ್ಯ ಹೊರಬರುತ್ತಿದೆ; ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ

    ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟಿರುವುದಾಗಿ ಹೇಳಿಕೆ ನೀಡಿದ ಮುಸುಕುಧಾರಿಯನ್ನು ಎಸ್‌ಐಟಿ ಪೊಲೀಸರು ಬಂಧಿಸಿದ ಕುರಿತಂತೆ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಪ್ರತಿಕ್ರಿಯಿಸಿದ್ದಾರೆ. 

    ಈಗ ತಾನೇ ಒಂದೊಂದೇ ಸತ್ಯ ಹೊರಬರುತ್ತಿದೆ. ಎಸ್‌ಐಟಿ ತನಿಖೆಯಿಂದ ಸತ್ಯ ಹೊರಬರುವ ವಿಶ್ವಾಸವಿದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

  • ಮುಸುಕುಧಾರಿಯ ಸೋದರ ಎಸ್‌ಐಟಿ ವಶಕ್ಕೆ
    23 Aug 2025 4:00 PM IST

    ಮುಸುಕುಧಾರಿಯ ಸೋದರ ಎಸ್‌ಐಟಿ ವಶಕ್ಕೆ

    ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟಿರುವುದಾಗಿ ಹೇಳಿದ್ದ ದೂರು ಸಾಕ್ಷಿದಾರನನ್ನು ಬಂಧಿಸಿರುವ ಎಸ್‌ಐಟಿ ಅಧಿಕಾರಿಗಳು ಈಗ ಅವರ ಸೋದರ ತಾನಾಸಿ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.  ಮುಸುಕುಧಾರಿ ಸಾಕ್ಷಿ ದೂರುದಾರನ ಬಗ್ಗೆ ಅಧಿಕಾರಿಗಳು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Read More
Next Story