
Dharmasthala Ground Report: ಬಾಹುಬಲಿ ಬೆಟ್ಟದಿಂದ ಮಣ್ಣಿನ ಮಾದರಿಗಳ ಸಂಗ್ರಹ; 122 ಸ್ಯಾಂಪಲ್ಗಳು ಪ್ರಯೋಗಾಲಯಕ್ಕೆ ರವಾನೆ
ಶನಿವಾರ ಬಾಹುಬಲಿ ಬೆಟ್ಟದ ಬಳಿ ನಡೆಸಿದ ಅಗೆತದ ಕಾರ್ಯದಲ್ಲಿ, ಮೂರು ದೊಡ್ಡ ಪ್ಯಾಕೆಟ್ಗಳಲ್ಲಿ ತುಂಬುವಷ್ಟು ಅವಶೇಷಗಳು ಪತ್ತೆಯಾಗಿದ್ದು, ಅವುಗಳನ್ನು ವಿಧಿವಿಜ್ಞಾನ ಪರೀಕ್ಷೆಗಾಗಿ ಬಿಗಿ ಭದ್ರತೆಯಲ್ಲಿ ಮಣಿಪಾಲದ ಆಸ್ಪತ್ರೆಗೆ ರವಾನಿಸಲಾಗಿದೆ.
ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸರಣಿ ಅಸಹಜ ಸಾವುಗಳ ಆರೋಪದ ತನಿಖೆಯು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಶನಿವಾರದ ಶೋಧ ಕಾರ್ಯಾಚರಣೆಯಲ್ಲಿ ಬಾಹುಬಲಿ ಬೆಟ್ಟದಲ್ಲಿ ಕೆಲವೊಂದು ಮಾದರಿಗಳನ್ನು ಸಂಗ್ರಹಿಸಲಾಗಿದೆ. ಸಂಗ್ರಹಿಸಲಾದ ಮಾದರಿಗಳ ವೈಜ್ಞಾನಿಕ ವಿಶ್ಲೇಷಣೆಗೆ ಕಳುಹಿಸಲಾಗಿದೆ.
ಶನಿವಾರ ಬಾಹುಬಲಿ ಬೆಟ್ಟದ ಬಳಿ ನಡೆಸಿದ ಅಗೆತದ ಬಳಿಕ ಕೆಲವೊಂದು ಸ್ಯಾಂಪಲ್ಗಳನ್ನು ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಸಾಕ್ಷಿದಾರನ ಹೇಳಿಕೆ ಪ್ರಕಾರ ಮೊದಲ ಪಾಯಿಂಟ್ನಿಂದ ಎಸ್ಐಟಿ ಶೋಧ ಆರಂಭಿಸಿದ ಬಳಿಕ ಒಟ್ಟು 122 ಸ್ಯಾಂಪಲ್ಗಳು ಪರೀಕ್ಷೆಗೆ ಕಳುಹಿಸಲಾಗಿದ್ದು, ಇವುಗಳನ್ನು ಸಾಗಿಸಲು ಉಡುಪಿ ಮತ್ತು ಕಾರವಾರ ಪೊಲೀಸರನ್ನೊಳಗೊಂಡ ವಿಶೇಷ ತಂಡವನ್ನು ರಚಿಸಲಾಗಿದೆ. ಇನ್ನೊಂದೆಡೆ ಪ್ರಕರಣದ ಪ್ರಮುಖ ಸಾಕ್ಷಿಯ ಭದ್ರತೆಯ ಕಾಳಜಿ ವ್ಯಕ್ತಗೊಂಡಿದೆ.
ತನಿಖೆಗೆ ಫಾರೆನ್ಸಿಕ್ ಸವಾಲು
ಪತ್ತೆಯಾಗಿರುವ ಅವಶೇಷಗಳು ಒಂದು ವರ್ಷಕ್ಕಿಂತಲೂ ಹಳೆಯದಾಗಿರುವುದರಿಂದ, ಅವುಗಳ ಪರೀಕ್ಷೆಯು ಸವಾಲಿನದ್ದಾಗಿದೆ. ಮಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ (FSL) ಈ ಹಿಂದೆ ಕಾರ್ಯನಿರ್ವಹಿಸಿದ್ದ ಡಾ. ಮಹಾಬಲೇಶ್ವರ ಭಟ್ ಅವರ ಪ್ರಕಾರ, "ಮಂಗಳೂರು ಅಥವಾ ಬೆಂಗಳೂರಿನಲ್ಲಿ ಇಷ್ಟು ಹಳೆಯ ಪಳೆಯುಳಿಕೆಗಳನ್ನು ನಿಖರವಾಗಿ ಪರೀಕ್ಷಿಸುವಂತಹ ಅತ್ಯಾಧುನಿಕ ಲ್ಯಾಬ್ ಇಲ್ಲ. ಇವುಗಳನ್ನು ಹೈದರಾಬಾದ್ನ ಲ್ಯಾಬ್ಗೆ ಕಳುಹಿಸಬೇಕು, ಅಲ್ಲಿ ವರದಿ ಬರಲು ಕನಿಷ್ಠ 15 ದಿನಗಳು ಬೇಕಾಗಬಹುದು," ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸಾಕ್ಷ್ಯಾಧಾರಕ್ಕೇ ಎಸ್ಐಟಿ ಆದ್ಯತೆ
ಈ ಕುರಿತು 'ದ ಫೆಡರಲ್ ಕರ್ನಾಟಕ' ಜತೆ ಮಾತನಾಡಿದ ಎಸ್ಐಟಿಯ ಐಪಿಎಸ್ ಅಧಿಕಾರಿ ಎಮ್. ಎನ್ ಅನುಚೇತ್, "ನಾವು ಸದ್ಯ ಆರೋಪಿಗಳನ್ನು ಹುಡುಕುವುದಕ್ಕಿಂತ ಹೆಚ್ಚಾಗಿ, ಸಾಕ್ಷಿ-ಆಧಾರಗಳನ್ನು ಪರಿಶೀಲಿಸುವುದಕ್ಕೆ ಮೊದಲ ಆದ್ಯತೆ ನೀಡುತ್ತಿದ್ದೇವೆ. ಅನಾಮಿಕ ವ್ಯಕ್ತಿ ಹೇಳಿರುವ ಪ್ರತಿಯೊಂದು ಸಾಕ್ಷ್ಯವನ್ನೂ ಕೂಲಂಕಷವಾಗಿ ಪರಿಶೀಲಿಸಲಾಗುವುದು," ಎಂದು ಸ್ಪಷ್ಟಪಡಿಸಿದ್ದಾರೆ.
ಸಾಕ್ಷಿಗೆ ಭದ್ರತಾ ಲೋಪ?
ಈ ಮಧ್ಯೆ, ಪ್ರಕರಣದ ಪ್ರಮುಖ ಸಾಕ್ಷಿ, 'ಅನಾಮಿಕ ಭೀಮ' ಯಾನೆ ಚೆನ್ನಯ್ಯ, ತನಗೆ ಪೊಲೀಸ್ ಭದ್ರತೆ ಬೇಕು ಮತ್ತು ಒಂದು ದಿನ ವಿಶ್ರಾಂತಿ ಬೇಕು ಎಂದು ಕೇಳಿಕೊಂಡಿದ್ದಾನೆ. ಆದರೆ, ಆತನನ್ನು ಪೊಲೀಸ್ ಸುಪರ್ದಿಯಲ್ಲಿ ಮಹೇಶ್ ತಿಮರೋಡಿ ಅವರ ಮನೆಯಿರುವ ರಸ್ತೆಯ ಕಡೆಗೆ ಕಳುಹಿಸಲಾಗಿದೆ. ಆತನ ವಾಹನವನ್ನು, ಗಿರೀಶ್ ಮಟ್ಟೆಣ್ಣವರ್ ಅವರ ಜೊತೆ ಗುರುತಿಸಿಕೊಂಡಿದ್ದ ವ್ಯಕ್ತಿಗಳಿದ್ದ ಬೊಲೆರೋ ವಾಹನವೊಂದು ಹಿಂಬಾಲಿಸಿದೆ ಎಂದು ಸ್ಥಳೀಯರು ಗುರುತಿಸಿದ್ದಾರೆ. ಹೀಗಾಗಿ ಸಾಕ್ಷಿಯ ಭದ್ರತೆಯ ಬಗ್ಗೆ ತೀವ್ರ ಆತಂಕವನ್ನು ಸೃಷ್ಟಿಸಿದೆ.
ಭಾನುವಾರ ಅಗೆತದ ಕಾರ್ಯಕ್ಕೆ ವಿರಾಮ
ಧರ್ಮಸ್ಥಳದಲ್ಲಿ ಸತತವಾಗಿ ನಡೆಯುತ್ತಿದ್ದ ವಿಶೇಷ ತನಿಖಾ ತಂಡದ (SIT) ಶೋಧ ಮತ್ತು ಅಗೆತದ ಕಾರ್ಯಕ್ಕೆ ನಾಳೆ, ಭಾನುವಾರದಂದು ವಿರಾಮ ನೀಡಲು ನಿರ್ಧರಿಸಲಾಗಿದೆ. ಕಳೆದ ಹಲವು ದಿನಗಳಿಂದ ಬಿಡುವಿಲ್ಲದೆ, ಕಠಿಣ ಪರಿಸ್ಥಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರು ಮತ್ತು ಪೊಲೀಸ್ ಸಿಬ್ಬಂದಿಗೆ ವಿಶ್ರಾಂತಿ ನೀಡುವ ಉದ್ದೇಶದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ತನಿಖಾ ತಂಡವು ಸೋಮವಾರದಿಂದ ತನ್ನ ಕಾರ್ಯಾಚರಣೆಯನ್ನು ಪುನರಾರಂಭಿಸುವ ನಿರೀಕ್ಷೆಯಿದೆ.