
ಮಂಗಳೂರಿನಲ್ಲಿ ಜನವಾದಿ ಸಂಘಟನೆ ವತಿಯಿಂದ ಸಮ್ಮೇಳನ ನಡೆಯಿತು.
ಧರ್ಮಸ್ಥಳ ಪ್ರಕರಣ | ನಿಷ್ಪಕ್ಷಪಾತ ತನಿಖೆಗೆ ಜನವಾದಿ ಮಹಿಳಾ ಸಂಘಟನೆ ಆಗ್ರಹ
ಸಾರ್ವಜನಿಕರ ಒತ್ತಡದ ನಂತರ ಧರ್ಮಸ್ಥಳ ಪ್ರಕರಣಗಳ ತನಿಖೆಗೆ ವಿಶೇಷ ತನಿಖಾ ತಂಡ ರಚನೆಯಾಗಿದೆ. ಇದರಿಂದ ಜನರಲ್ಲಿ ಆಶಾಭಾವ ಮೂಡಿದೆ.
ಧರ್ಮಸ್ಥಳ ಗ್ರಾಮದಲ್ಲಿ ನಡೆದ ಪದ್ಮಲತಾ, ವೇದವಲ್ಲಿ, ಸೌಜನ್ಯಾ ಮತ್ತು ಯಮುನಾ ಸೇರಿದಂತೆ ಹೆಣ್ಣುಮಕ್ಕಳ ಅಸಹಜ ಸಾವಿನ ಪ್ರಕರಣಗಳನ್ನು ಮರುತನಿಖೆಗೆ ಒಳಪಡಿಸಬೇಕು. ಶವಗಳನ್ನು ಹೂತಿರುವ ಪ್ರಕರಣದ ನ್ಯಾಯಯುತ ತನಿಖೆ ನಡೆಯಬೇಕು ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಸಮ್ಮೇಳನ ಒತ್ತಾಯಿಸಿದೆ.
ಮಂಗಳೂರಿನಲ್ಲಿ ಭಾನುವಾರ ನಡೆದ 9ನೇ ದಕ್ಷಿಣ ಕನ್ನಡ ಜಿಲ್ಲಾ ಸಮ್ಮೇಳನದಲ್ಲಿ ಈ ಕುರಿತ ನಿರ್ಣಯ ಅಂಗೀಕರಿಸಲಾಯಿತು.
ಧರ್ಮಸ್ಥಳ ಗ್ರಾಮದಲ್ಲಿ ಅತ್ಯಾಚಾರ ನಡೆಸಿ ಕೊಲೆಯಾದ ಹಲವಾರು ಅಪರಿಚಿತ ಹೆಣ್ಣುಮಕ್ಕಳ ಮೃತದೇಹಗಳನ್ನು ನನ್ನಿಂದ ಬಲವಂತವಾಗಿ ಮಣ್ಣು ಮಾಡಿಸಿದ್ದಾರೆ' ಎಂದು ವ್ಯಕ್ತಿಯೊಬ್ಬರು ಹೇಳಿದ ನಂತರ ಹೆಣ್ಣುಮಕ್ಕಳ ಅಸಹಜ ಸಾವಿನ ಚರ್ಚೆ ಮುನ್ನೆಲೆಗೆ ಬಂದಿದೆ. ಈ ಕುರಿತು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಎಂಬ ನಿರ್ಣಯಿಸಲಾಯಿತು.
ಸಾರ್ವಜನಿಕರ ಒತ್ತಡದ ನಂತರ ಧರ್ಮಸ್ಥಳ ಪ್ರಕರಣಗಳ ತನಿಖೆಗೆ ವಿಶೇಷ ತನಿಖಾ ತಂಡ ರಚನೆಯಾಗಿದೆ. ಇದರಿಂದ ಜನರಲ್ಲಿ ಆಶಾಭಾವ ಮೂಡಿದೆ. ಆದರೆ, ಆಡಳಿತ ಮತ್ತು ವಿರೋಧ ಪಕ್ಷಗಳು ಪ್ರಕರಣದ ಕುರಿತು ವ್ಯಕ್ತಪಡಿಸುತ್ತಿರುವ ನಿಲುವುಗಳನ್ನು ಗಮನಿಸಿದರೆ ನಿಷ್ಪಕ್ಷಪಾತ ತನಿಖೆ ನಡೆಯುವ ಬಗ್ಗೆ ಸಂದೇಹ ಮೂಡಿದೆ ಎಂದು ಆತಂಕ ವಕ್ತಪಡಿಸಲಾಗಿದೆ.
ಜನರಲ್ಲಿ ಮೂಡಿರುವ ಆತಂಕಗಳನ್ನು ಗಮನಿಸಿ ಸರ್ಕಾರ ವಿಶೇಷ ತಂಡಕ್ಕೆ ಮುಕ್ತ ಅವಕಾಶ ನೀಡಿ, ನ್ಯಾಯಯುತ ತನಿಖೆ ನಡೆಯುವುದಾಗಿ ಖಾತರಿಪಡಿಸಬೇಕು. ಸಾಕ್ಷಿ ಮತ್ತು ಅವರ ಪರವಾದ ವಕೀಲರಿಗೆ ಗರಿಷ್ಠ ಭದ್ರತೆ ಒದಗಿಸಬೇಕು. ಹೆಣ ಹೂತು ಹಾಕಲಾಗಿದೆ ಎಂಬ ಪ್ರಕರಣಕ್ಕೆ ಮಾತ್ರ ತನಿಖೆಯನ್ನು ಸೀಮಿತಗೊಳಿಸದೆ 80ರ ದಶಕದಲ್ಲಿ ಅಪಹರಣಕ್ಕೆ ಒಳಗಾಗಿ ಕೊಲೆ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದ, ಪತ್ತೆ ಹಚ್ಚಲಾಗದ ಪ್ರಕರಣ ಎಂದು ಷರಾ ಬರೆದಿರುವ ವಿದ್ಯಾರ್ಥಿನಿ ಪದ್ಮಲತಾ, ಸೌಜನ್ಯಾ ಪ್ರಕರಣ, ಮಾವುತ ನಾರಾಯಣ ಹಾಗೂ ಅವರ ಸಹೋದರಿ ಯಮುನಾ ಕೊಲೆ ಪ್ರಕರಣಗಳನ್ನೂ ತನಿಖೆಗೆ ಒಳಪಡಿಸಬೇಕು ಎಂದು ನಿರ್ಣಯದಲ್ಲಿ ಆಗ್ರಹಿಸಲಾಯಿತು.