
ಧರ್ಮಸ್ಥಳ ಪ್ರಕರಣ |ತನಿಖಾ ತಂಡದಿಂದ ಅನುಚೇತ್, ಸ್ವಾತಿ ನಿರ್ಗಮಿಸದಂತೆ ಹೋರಾಟಗಾರರ ಆಗ್ರಹ
ರಾಜ್ಯ ಸರ್ಕಾರವು ಧರ್ಮಸ್ಥಳದ ಅಸಹಜ ಸಾವುಗಳ ತನಿಖೆಗೆ ಎಸ್ ಐಟಿ ರಚಿಸಿರುವುದನ್ನು ಮಹಿಳಾ ಹೋರಾಟಗಾರರು ಸ್ವಾಗತಿಸಿದ್ದಾರೆ. ತನಿಖೆಯಲ್ಲಿ ಯಾರನ್ನು ರಕ್ಷಿಸುವ ಕೆಲಸ ಆಗಬಾರದು ಎಂದು ಒತ್ತಾಯಿಸಿದ್ದಾರೆ.
ಧರ್ಮಸ್ಥಳದಲ್ಲಿ ಅಸಹಜ ಸಾವುಗಳ ತನಿಖೆಗೆ ರಚನೆಯಾಗಿರುವ ಎಸ್ಐಟಿಯಿಂದ ಇಬ್ಬರು ಐಪಿಎಸ್ ಅಧಿಕಾರಿಗಳಾದ ಅನುಚೇತ್ ಹಾಗೂ ಸೌಮ್ಯ ಹೊರಹೋಗುವ ಕುರಿತು ಮಹಿಳಾ ಹೋರಾಟಗಾರರು ಅಸಮಾಧಾನ ಹೊರಹಾಕಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ 'ನಾವೆದ್ದು ನಿಲ್ಲದಿದ್ದರೆ- ಕರ್ನಾಟಕ ವೇದಿಕೆ'ಯ ಹೋರಾಟಗಾರ್ತಿ ಕೆ.ಎಸ್.ವಿಮಲಾ ಅವರು, ನೆಲದ ಕಾನೂನನ್ನು ಪ್ರತಿಯೊಬ್ಬರು ಗೌರವಿಸಬೇಕು. ಇಲ್ಲಿ ಯಾರನ್ನು ರಕ್ಷಿಸುವ ಕೆಲಸ ಆಗಬಾರದು. ಯಾವುದೇ ಕಾರಣಕ್ಕೂ ಐಪಿಎಸ್ ಅಧಿಕಾರಿಗಳಾದ ಅನುಚೇತ್ ಹಾಗೂ ಚೈತ್ರಾ ಅವರು ಎಸ್ಐಟಿಯಿಂದ ಹೊರ ಹೋಗಬಾರದು ಎಂದು ಹೇಳಿದರು.
ರಾಜ್ಯ ಸರ್ಕಾರವು ಧರ್ಮಸ್ಥಳದ ಅಸಹಜ ಸಾವುಗಳ ತನಿಖೆಗೆ ಎಸ್ ಐಟಿ ರಚಿಸಿರುವುದು ಸ್ವಾಗತ ಮಾಡುತ್ತೇವೆ. ಆದರೆ ಇದು ಪಾರದರ್ಶಕವಾಗಿರಬೇಕು. ಯಾರನ್ನು ರಕ್ಷಿಸುವ ಕೆಲಸ ಆಗಬಾರದು ಎಂದು ಹೇಳಿದರು.
ಸೌಜನ್ಯ ಪ್ರಕರಣದ ತನಿಖೆಯಲ್ಲಿ ಲೋಪ ಆಗಿದ್ದು, ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು. ಧರ್ಮಸ್ಥಳ ದೇವಸ್ಥಾನವನ್ನು ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಲೈಂಗಿಕ ಅಲ್ಪಸಂಖ್ಯಾತರ ಪರ ಹಕ್ಕುಗಳ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ ಮಾತನಾಡಿ, ಧರ್ಮಸ್ಥಳ ಪ್ರಕರಣದಲ್ಲಿ ಎಸ್ ಐಟಿ ತನಿಖೆಯನ್ನು ಸ್ವಾಗತ ಮಾಡುತ್ತೇವೆ. ಇದರಲ್ಲಿ ಪ್ರಭಾವ ಬಳಕೆಯಾಗುವ ಸಾಧ್ಯತೆ ಇದೆ. ಎಸ್ ಐಟಿ ಬಗ್ಗೆ ಅನುಮಾನಪಡುವುದು ಬೇಡ. ಸಾಕ್ಷಿಗಳಿಗೆ ಭದ್ರತೆ ನೀಡಬೇಕು. ಈ ಬಗ್ಗೆ ಪೊಲೀಸರಿಗೆ ಸರ್ಕಾರ ಸೂಚನೆ ನೀಡಬೇಕು. ತನಿಖೆಯಲ್ಲಿ ಯಾವುದೇ ಒತ್ತಡಕ್ಕೆ ಒಳಗಾಗಬಾರದು. ಇದು ಹೆಣ್ಣು ಮಕ್ಕಳ ಹೋರಾಟಕ್ಕಾಗಿ ಮಾಡುತ್ತಿರುವುದು, ಇದು ನಮ್ಮಆದ್ಯಕರ್ತವ್ಯ. ಅಸಹಜ ಸಾವುಗಳ ಜತೆಗೆ ಸೌಜನ್ಯ ಪ್ರಕರಣ ಸಹ ತನಿಖೆಯಾಗಬೇಕು. ಈ ಬಗ್ಗೆ ನಾವು ಸಿಎಂ, ಗೃಹಸಚಿವರನ್ನು ಭೇಟಿಯಾಗಿ ಮನವಿ ಮಾಡುತ್ತೇವೆ ಎಂದು ಹೇಳಿದರು.