
ಧರ್ಮಸ್ಥಳ ಪ್ರಕರಣ | ಬಾಲಕಿ ಶವ ಹೂತಿಟ್ಟಿರುವ ಆರೋಪ; ಇಚಿಲಂಪಾಡಿ ವ್ಯಕ್ತಿಯಿಂದ ಎಸ್ಐಟಿಗೆ ದೂರು, ನಾಳೆ ವಿಚಾರಣೆ
15 ವರ್ಷದ ಹಿಂದೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಬಾಲಕಿಯ ಶವವನ್ನು ಯಾವುದೇ ಕಾನೂನು ಪ್ರಕ್ರಿಯೆ ನಡೆಸದೇ ಹೂತು ಹಾಕಲಾಗಿದೆ ಎಂದು ಜಯಂತ್ ಎಂಬುವರು ದೂರಿದ್ದಾರೆ.
ಧರ್ಮಸ್ಥಳದಲ್ಲಿ ಶವಗಳನ್ನು, ಹೂತಿಟ್ಟಿರುವ ಆರೋಪಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಕಳೇಬರಗಳ ಶೋಧ ಕಾರ್ಯಾಚರಣೆಗೆ ಹೊಸ ತಿರುವು ಸಿಕ್ಕಿದೆ.
15 ವರ್ಷದ ಹಿಂದೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ 15 ವರ್ಷದ ಬಾಲಕಿಯ ಶವವನ್ನು ಯಾವುದೇ ಕಾನೂನು ಪ್ರಕ್ರಿಯೆ ನಡೆಸದೇ ಹೂತು ಹಾಕಲಾಗಿದೆ. ಆ ಜಾಗವನ್ನು ತೋರಿಸುವುದಾಗಿ ಇಚಿಲಂಪಾಡಿ ನಿವಾಸಿ, ಸಾಮಾಜಿಕ ಹೋರಾಟಗಾರ ಜಯಂತ್ ಎಂಬುವರು ಬೆಳ್ತಂಗಡಿಯ ಎಸ್ಐಟಿ ಅಧಿಕಾರಿಗಳು ದೂರು ನೀಡಿದ್ದಾರೆ.
ಕೊಳೆತ ಸ್ಥಿತಿಯಲ್ಲಿ ಸಿಕ್ಕ ಬಾಲಕಿಯ ಶವವನ್ನು ಹೂತು ಹಾಕಿರುವ ಬಗ್ಗೆ ಎಲ್ಲ ಸಾಕ್ಷ್ಯಗಳಿವೆ. ಅದಕ್ಕೆ ನಾನೇ ಪ್ರತ್ಯಕ್ಷದರ್ಶಿ, ಶವ ಹೂತು ಹಾಕಿರುವ ಜಾಗವೂ ಗೊತ್ತಿದೆ. ಬಾಲಕಿಯ ಕಳೇಬರ ಪತ್ತೆ ಮಾಡಿದರೂ ಯಾರೆಂಬ ಸತ್ಯ ತಿಳಿಯಲಿದೆ ಎಂದು ಜಯಂತ್ ಮಾಧ್ಯಮಗಳಿಗೆ ಹೇಳಿರುವುದು ಕಾರ್ಯಾಚರಣೆಗೆ ಮತ್ತೊಂದು ಟ್ವಿಸ್ಟ್ ಸಿಕ್ಕಂತಾಗಿದೆ.
ಬಾಲಕಿಯ ಶವ ಹೂತಿರುವ ಜಾಗ ನಿಖರವಾಗಿ ಗೊತ್ತಿದೆ. ನಾನು ಎಸ್ಐಟಿ ಅಧಿಕಾರಿಗಳಿಗೆ ಆ ಸ್ಥಳ ತೋರಿಸಲು ಸಿದ್ಧನಿದ್ದೇನೆ. ಅದು ಕೊಲೆಯೋ ಅಥವಾ ಬೇರೆ ಏನೋ ಅದು ನನಗೆ ತಿಳಿದಿಲ್ಲ. ನನ್ನ ಕುಟುಂಬದ ಸದಸ್ಯೆಯಾದ ಪದ್ಮಲತಾ ಎಂಬುವವರ ಕೊಲೆಯಾದಾಗ ನಮಗೆ ನ್ಯಾಯ ದೊರೆಯಲಿಲ್ಲ. ಹಾಗಾಗಿ ವ್ಯವಸ್ಥೆ ಮೇಲೆ ನಂಬಿಕೆ ಇರಲಿಲ್ಲ. ಇದೀಗ ಎಸ್ಐಟಿ ರಚನೆಯಾಗಿದ್ದು, ತನಿಖೆಯ ಮೇಲೆ ನಂಬಿಕೆ ಬಂದಿದೆ. ಹಾಗಾಗಿ ನಾನು ಎಲ್ಲಾ ಸಾಕ್ಷ್ಯಾಧಾರಗಳನ್ನು ಇಟ್ಟುಕೊಂಡು ದೂರು ನೀಡಲು ಬಂದಿದ್ದೇನೆ ಎಂದು ಜಯಂತ್ ಹೇಳಿದ್ದಾರೆ.
ಎಸ್ಐಟಿ ಅಧಿಕಾರಿಗಳು ಸೋಮವಾರ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ. ಹೆಣ್ಣು ಮಗುವಿಗೆ ಅನ್ಯಾಯವಾಗಿರುವ ಹಿನ್ನೆಲೆಯಲ್ಲಿ ಮಾನವೀಯತೆಯಿಂದ. ಸಾಕ್ಷ್ಯ ನುಡಿಯಲು ಬಂದಿದ್ದೇನೆ ಎಂದು ಜಯಂತ್ ಹೇಳಿದ್ದಾರೆ.
.ಒಂದು ವೇಳೆ ನಾನು ಹೇಳಿರುವುದು ಸುಳ್ಳಾದರೆ ರಸ್ತೆಯಲ್ಲಿ ನಿಲ್ಲಿಸಿ ಕಲ್ಲು ಹೊಡೆಯಿರಿ. ಅದಕ್ಕೆ ಸಿದ್ಧ ಎಂದು ಖಡಕ್ ಆಗಿ ಹೇಳಿದ್ದಾರೆ.
ಇನ್ನು ಧರ್ಮಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಮಾಜಿ ಸ್ವಚ್ಛತಾ ಕಾರ್ಮಿಕ ಎಂದು ಹೇಳಿಕೊಂಡಿರುವ ದೂರು ಸಾಕ್ಷ್ಯದಾರ ಗುರುತು ಮಾಡಿರುವ ಒಂಬತ್ತನೇ ಜಾಗದಲ್ಲಿ ಶೋಧ ಕಾರ್ಯ ನಡೆಯುತ್ತಿದೆ.