ಡೆವಿಲ್ ಸಿನಿಮಾದ ಸಂಭ್ರಮಾಚರಣೆ ಮುಗಿಸಿ ಮನೆಗೆ ಮರಳುವಾಗ ದುರಂತ: ರಸ್ತೆ ಅಪಘಾತದಲ್ಲಿ ಯುವಕ ಸಾವು
x

 ಪುನೀತ್

ಡೆವಿಲ್ ಸಿನಿಮಾದ ಸಂಭ್ರಮಾಚರಣೆ ಮುಗಿಸಿ ಮನೆಗೆ ಮರಳುವಾಗ ದುರಂತ: ರಸ್ತೆ ಅಪಘಾತದಲ್ಲಿ ಯುವಕ ಸಾವು

ಡೆವಿಲ್ ಸಿನಿಮಾದ ಸಂಭ್ರಮಾಚರಣೆ ಮುಗಿಸಿ ಮನೆಗೆ ಮರಳುವಾಗ ದುರಂತ: ರಸ್ತೆ ಅಪಘಾತದಲ್ಲಿ ಯುವಕ ಸಾವು


Click the Play button to hear this message in audio format

ನೆಚ್ಚಿನ ನಟನ ಸಿನಿಮಾವನ್ನು ಸಂಭ್ರಮಿಸಿ, ಸಂತೋಷದಿಂದ ಮನೆಗೆ ಮರಳುತ್ತಿದ್ದ ಯುವಕನೊಬ್ಬ ರಸ್ತೆ ಅಪಘಾತದಲ್ಲಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ರಂಜದಕಟ್ಟೆ ಸಮೀಪದ ಶಿವರಾಜಪುರದಲ್ಲಿ ನಡೆದಿದೆ. ಡೆವಿಲ್ ಸಿನಿಮಾದ ಬಿಡುಗಡೆಯ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ವಾಪಸಾಗುತ್ತಿದ್ದ ಪುನೀತ್ (26) ಎಂಬುವವರೇ ಮೃತಪಟ್ಟ ದುರ್ದೈವಿ.

ಮೃತ ಪುನೀತ್ ಅವರು ತೀರ್ಥಹಳ್ಳಿ ತಾಲೂಕಿನ ಮೀನುಗುಂದ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ. ಬುಧವಾರ ರಾತ್ರಿ ತೀರ್ಥಹಳ್ಳಿಯ ವಿನಾಯಕ ಚಿತ್ರಮಂದಿರದಲ್ಲಿ ನಟ ದರ್ಶನ್ ಅಭಿನಯದ 'ಡೆವಿಲ್' ಸಿನಿಮಾದ ಬಿಡುಗಡೆಯ ಪ್ರಯುಕ್ತ ಅಭಿಮಾನಿಗಳು ವಿಶೇಷ ಸಂಭ್ರಮಾಚರಣೆಯನ್ನು ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದ ಪುನೀತ್, ಸಂಭ್ರಮಾಚರಣೆ ಮುಗಿದ ಬಳಿಕ ರಾತ್ರಿ ತಮ್ಮ ಬೈಕ್‌ನಲ್ಲಿ ಸ್ವಗ್ರಾಮಕ್ಕೆ ಮರಳುತ್ತಿದ್ದರು.

ಘಟನೆಯ ವಿವರ

ಪುನೀತ್ ಅವರು ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದಾಗ, ರಂಜದಕಟ್ಟೆ ಸಮೀಪದ ಶಿವರಾಜಪುರ ಬಳಿ ಎದುರಿನಿಂದ ವೇಗವಾಗಿ ಬಂದ ಕೆಎಸ್‌ಆರ್‌ಟಿಸಿ (KSRTC) ರಾಜಹಂಸ ಬಸ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅಪಘಾತದ ರಭಸಕ್ಕೆ ಪುನೀತ್ ರಸ್ತೆಗೆ ಬಿದ್ದಿದ್ದು, ಅವರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದವು. ಕೂಡಲೇ ಸ್ಥಳೀಯರು ಮತ್ತು ಸ್ನೇಹಿತರು ಅವರನ್ನು ಆಸ್ಪತ್ರೆಗೆ ಸಾಗಿಸಲು ಯತ್ನಿಸಿದರಾದರೂ, ಚಿಕಿತ್ಸೆ ಸಿಗುವ ಮುನ್ನವೇ ಮಾರ್ಗಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.

ಸಿನಿಮಾ ನೋಡಿ ಸಂಭ್ರಮಿಸಬೇಕಿದ್ದ ಯುವಕ, ಹೀಗೆ ಅರ್ಧ ದಾರಿಯಲ್ಲೇ ಪ್ರಾಣ ಕಳೆದುಕೊಂಡಿರುವುದು ಮೀನುಗುಂದ ಗ್ರಾಮದಲ್ಲಿ ತೀವ್ರ ಆಘಾತವನ್ನುಂಟುಮಾಡಿದೆ. ಮೃತ ಪುನೀತ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಅಭಿಮಾನಿ ವಲಯದಲ್ಲಿಯೂ ವಿಷಾದದ ಛಾಯೆ ಮೂಡಿದೆ.

ಘಟನೆಯ ವಿಷಯ ತಿಳಿದ ತಕ್ಷಣ ತೀರ್ಥಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

Read More
Next Story