
ಧರ್ಮಸ್ಥಳ ಪ್ರಕರಣ
ಧರ್ಮಸ್ಥಳ ಪ್ರಕರಣ: ನೊಂದ ಮಹಿಳೆಯರಿಗೆ ನ್ಯಾಯ ಒದಗಿಸಲು ಆಗ್ರಹ
“ವೇದವಲ್ಲಿ, ಪದ್ಮಲತಾ, ಸೌಜನ್ಯಾ, ಆನೆ ಮಾವುತ ನಾರಾಯಣ ಮತ್ತು ಅವರ ಸಹೋದರಿ ಯಮುನಾ ಸೇರಿದಂತೆ ಹಲವು ಮಂದಿಯ ಸಾವಿಗೆ ಕಾರಣರಾದವರು ಯಾರು ಎಂಬುದು ಬಹಿರಂಗವಾಗಬೇಕು,” ಎಂದು ಮಹಿಳಾ ಹೋರಾಟಗಾರ್ತಿಯರು ಒತ್ತಾಯಿಸಿದರು.
ಧರ್ಮಸ್ಥಳ ಗ್ರಾಮದಲ್ಲಿ ನಡೆದಿವೆ ಎನ್ನಲಾದ ಕೊಲೆಗಳು ಹಾಗೂ ಅಸಹಜ ಸಾವು ಪ್ರಕರಣಗಳ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಮಹಿಳಾ ಹೋರಾಟಗಾರ್ತಿಯರು ಒತ್ತಾಯಿಸಿದ್ದಾರೆ.
'ಕೊಂದವರು ಯಾರು?' ಎಂಬ ಪ್ರಶ್ನೆ ಮುಂದಿಟ್ಟು ಹೋರಾಟ ನಡೆಸುತ್ತಿರುವ ಮಹಿಳಾ ಹೋರಾಟಗಾರ್ತಿಯರು, ಮಂಗಳವಾರ ಧರ್ಮಸ್ಥಳ ಸಮೀಪದ ಪಾಂಗಳದ ದಿ. ಸೌಜನ್ಯ ಅವರ ತಾಯಿ ಕುಸುಮಾವತಿ ಅವರನ್ನು ಭೇಟಿಯಾಗಿ ಸಾಂತ್ವನ ಹೇಳಿದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಹೋರಾಟಗಾರ್ತಿ ಚಂಪಾ,“ನೊಂದ ಮಹಿಳೆಯರಿಗೆ ನ್ಯಾಯ ಸಿಗಬೇಕು ಎಂಬುದೇ ನಮ್ಮ ಆಂದೋಲನದ ಉದ್ದೇಶ. ಎಸ್ಐಟಿ ತನಿಖೆಯನ್ನು ಮುಂದುವರೆಸಬೇಕು. ಈ ಕುರಿತು ಮುಖ್ಯಮಂತ್ರಿ ಹಾಗೂ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ,” ಎಂದರು.
“ವೇದವಲ್ಲಿ, ಪದ್ಮಲತಾ, ಸೌಜನ್ಯಾ, ಆನೆ ಮಾವುತ ನಾರಾಯಣ ಮತ್ತು ಅವರ ಸಹೋದರಿ ಯಮುನಾ ಸೇರಿದಂತೆ ಹಲವು ಮಂದಿಯ ಸಾವಿಗೆ ಕಾರಣರಾದವರು ಯಾರು ಎಂಬುದು ಬಹಿರಂಗವಾಗಬೇಕು,” ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜ್ಯೋತಿ ಅನಂತ ಸುಬ್ಬರಾವ್, ಶಶಿಕಲಾ ಶೆಟ್ಟಿ, ಗೀತಾ ಸುರತ್ಕಲ್, ಮಮತಾ, ಸುರೇಖಾ, ಶೈಲಜಾ, ಮಲ್ಲಿಗೆ ಮತ್ತಿತರರು ಹಾಜರಿದ್ದರು.

