Ceasefire between India and Pakistan disappointing: Minister Priyank Kharge
x

ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ

ಸಚಿವ ಪ್ರಿಯಾಂಕ್ ಖರ್ಗೆ ಯುಎಸ್ ಪ್ರವಾಸಕ್ಕೆ ತಡವಾಗಿ ಅನುಮತಿ; ಕೇಂದ್ರದ ಕ್ರಮವನ್ನು ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ

ಜೂನ್ 19ರಂದು ಪತ್ರಿಕಾಗೋಷ್ಠಿಯಲ್ಲಿ ಖರ್ಗೆ ಅವರು ಕೇಂದ್ರದ ಈ ನಿರ್ಧಾರವನ್ನು ತೀವ್ರವಾಗಿ ಪ್ರಶ್ನಿಸಿ, ರಾಜಕೀಯ ಪ್ರೇರಿತ ನಿರ್ಧಾರ ಎಂದು ಸಂದೇಹ ವ್ಯಕ್ತಪಡಿಸಿದ್ದರು.


ಕರ್ನಾಟಕದ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಅಮೆರಿಕ ಪ್ರವಾಸಕ್ಕೆ ಕೇಂದ್ರದ ವಿದೇಶಾಂಗ ಸಚಿವಾಲಯ (MEA) ಆರಂಭದಲ್ಲಿ ಅನುಮತಿ ನಿರಾಕರಿಸಿ, ಬಳಿಕ ಸಾರ್ವಜನಿಕ ಒತ್ತಡ ಮತ್ತು ಮಾಧ್ಯಮ ಚರ್ಚೆಯ ನಂತರ ಜೂನ್ 19ರಂದು ಅನುಮತಿ ನೀಡಿರುವುದು ಭಾರೀ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಪ್ರಿಯಾಂಕ್​ ಖರ್ಗೆ ಅವರು ಎಕ್ಸ್​ ಪೋಸ್ಟ್​ನಲ್ಲಿ ಈ ಮಾಹಿತಿ ನೀಡಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪ್ರಿಯಾಂಕ್ ಖರ್ಗೆ ಅವರು ಜೂನ್ 14ರಿಂದ 27ರವರೆಗೆ ಯುಎಸ್‌ಗೆ ಪ್ರವಾಸ ಕೈಗೊಳ್ಳಲು ಮೇ 15ರಂದು ಅರ್ಜಿ ಸಲ್ಲಿಸಿದ್ದರು. ಈ ಪ್ರವಾಸದಲ್ಲಿ ಜಾಗತಿಕ ಮಹತ್ವದ ವೇದಿಕೆಗಳಲ್ಲಿ ಕರ್ನಾಟಕ ಸರ್ಕಾರವನ್ನು ಪ್ರತಿನಿಧಿಸುವುದು, ಹಾಗೂ 25ಕ್ಕೂ ಹೆಚ್ಚು ಅಧಿಕೃತ ಸಭೆಗಳಲ್ಲಿ ಪಾಲ್ಗೊಳ್ಳುವುದು ನಿಗದಿಯಾಗಿತ್ತು. ಆದರೆ, ಜೂನ್ 4ರಂದು ವಿದೇಶಾಂಗ ಸಚಿವಾಲಯವು ಈ ಅರ್ಜಿಯನ್ನು ತಿರಸ್ಕರಿಸಿತ್ತು.

ಜೂನ್ 19ರಂದು ಪತ್ರಿಕಾಗೋಷ್ಠಿಯಲ್ಲಿ ಖರ್ಗೆ ಅವರು ಕೇಂದ್ರದ ಈ ನಿರ್ಧಾರವನ್ನು ತೀವ್ರವಾಗಿ ಪ್ರಶ್ನಿಸಿ, ರಾಜಕೀಯ ಪ್ರೇರಿತ ನಿರ್ಧಾರ ಎಂದು ಸಂದೇಹ ವ್ಯಕ್ತಪಡಿಸಿದ್ದರು. ಸುದ್ದಿ ವ್ಯಾಪಕವಾಗಿ ಹರಡಿದ ನಂತರ, ಅದೇ ರಾತ್ರಿ ಎಂಇಎ ತನ್ನ ಮೊದಲ ನಿರ್ಧಾರವನ್ನು ರದ್ದುಗೊಳಿಸಿ, ತಡವಾಗಿ ಪ್ರವಾಸಕ್ಕೆ ಒಪ್ಪಿಗೆ ನೀಡಿತ್ತು.

ರಾಜಕೀಯ ದುರುದ್ದೇಶದ ಆರೋಪ

ಈ ತಡರಾತ್ರಿ ಒಪ್ಪಿಗೆಯ ಬಗ್ಗೆ ಸಚಿವ ಖರ್ಗೆ ಅವರು ಹಲವು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. 'ಆರಂಭದಲ್ಲಿ ಏಕೆ ಅನುಮತಿ ನಿರಾಕರಿಸಲಾಯಿತು? ಸಾರ್ವಜನಿಕ ಒತ್ತಡದ ಬಳಿಕ ಈ ನಿರ್ಧಾರ ಬದಲಾದದ್ದು ಜವಾಬ್ದಾರಿಯಿಂದ ಪಾರಾಗುವ ತಂತ್ರವೇ? ಪ್ರಮುಖ ಕಾರ್ಯಕ್ರಮಗಳು ಮುಗಿದ ಬಳಿಕ ಅನುಮತಿ ನೀಡುವುದರ ಅರ್ಥ ಏನು?' ಎಂದು ಅವರು ನೇರವಾಗಿ ಪ್ರಶ್ನಿಸಿದ್ದಾರೆ. ಕೇಂದ್ರದ ಈ ನಡೆ 'ಟ್ರೈನ್ ಹೋದ ಮೇಲೆ ತತ್ಕಾಲ್ ಟಿಕೆಟ್ ನೀಡಿದಂತೆ' ಎಂದು ವ್ಯಂಗ್ಯವಾಡಿದ್ದಾರೆ.

ಅಭಿವೃದ್ಧಿಗೆ ಅಡ್ಡಿ; ಖರ್ಗೆ ಬೇಸರ

ಎಕ್ಸ್​ಪೋಸ್ಟ್​ನಲ್ಲಿ ಪ್ರಿಯಾಂಕ್ ಖರ್ಗೆ, 'ಮೇಕ್ ಇನ್ ಇಂಡಿಯಾ,' 'ಡಿಜಿಟಲ್ ಇಂಡಿಯಾ,' 'ನ್ಯಾಷನಲ್ ಕ್ವಾಂಟಮ್ ಮಿಷನ್,' ಮತ್ತು 'ಇಂಡಿಯಾ ಎಐ ಮಿಷನ್' ನಂತಹ ಬೃಹತ್ ಘೋಷಣೆಗಳನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಆದರೆ, ಈ ಆಕಾಂಕ್ಷೆಗಳನ್ನು ಸಾಕಾರಗೊಳಿಸುವ ನಿಜವಾದ ಕೆಲಸ ಕರ್ನಾಟಕದಲ್ಲಿ ನಡೆಯುತ್ತಿದೆ ಎಂದು ಖರ್ಗೆ ಒತ್ತಿ ಹೇಳಿದ್ದಾರೆ. 'ಅವರು ದೊಡ್ಡ ದೊಡ್ಡ ದೃಷ್ಟಿಕೋನಗಳನ್ನು ರೂಪಿಸುತ್ತಾರೆ, ಆದರೆ ಬಂಡವಾಳ ತರಲು, ಉದ್ಯೋಗ ಸೃಷ್ಟಿಸಲು ಮತ್ತು ಭಾರತವನ್ನು ಜಾಗತಿಕ ನಾಯಕನಾಗಿ ಸ್ಥಾಪಿಸಲು ನಾವು ಕೆಲಸ ಮಾಡಿದಾಗ, ಅವರು ನಮ್ಮನ್ನು ತಡೆಯುತ್ತಾರೆ,' ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ 'MAGA + MIGA = MEGA' (Make America Great Again + Make India Great Again = Make Everything Great Again) ಎಂಬ ಹೇಳಿಕೆಯನ್ನು ಉಲ್ಲೇಖಿಸಿ, 'ಭಾರತದ ತಂತ್ರಜ್ಞಾನ ಮತ್ತು ಆವಿಷ್ಕಾರದ ಎಂಜಿನ್‌ನಂತಿರುವ ಕರ್ನಾಟಕ ರಾಜ್ಯವನ್ನು ಜಾಗತಿಕವಾಗಿ ಮುನ್ನಡೆಸಲು ಬೆಂಬಲ ನೀಡದಿದ್ದರೆ ಈ ಘೋಷಣೆಯ ಅರ್ಥವೇನು?' ಎಂದು ಖರ್ಗೆ ಪ್ರಶ್ನಿಸಿದ್ದಾರೆ.

ಕಾನೂನು ಹೋರಾಟದ ಎಚ್ಚರಿಕೆ

ಈ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಖರ್ಗೆ ಈಗಾಗಲೇ ವಿದೇಶಾಂಗ ಸಚಿವಾಲಯಕ್ಕೆ (MEA) ಪತ್ರ ಬರೆದಿದ್ದು, ತಮ್ಮ ಮೂಲ ಅರ್ಜಿಯ ನಿರಾಕರಣೆಗೆ ಸ್ಪಷ್ಟ ಕಾರಣ ಕೇಳಿದ್ದಾರೆ. 'ಸರಿಯಾದ ಕಾರಣ ನೀಡದಿದ್ದರೆ ಕಾನೂನು ಹೋರಾಟ ಮಾಡುತ್ತೇವೆ,' ಎಂದು ಅವರು ಕೇಂದ್ರಕ್ಕೆ ಎಚ್ಚರಿಕೆ ನೀಡಿದ್ದಾರೆ. ಕರ್ನಾಟಕದಲ್ಲಿ ಹೂಡಿಕೆಗೆ ಸೂಕ್ತ ವಾತಾವರಣ ಮತ್ತು ಕೌಶಲ್ಯಪೂರ್ಣ ಮಾನವ ಸಂಪನ್ಮೂಲ ಇರುವ ಕಾರಣ ಜಾಗತಿಕ ಬಂಡವಾಳ ಆಕರ್ಷಣೆಯಾಗುತ್ತಿದೆ ಎಂದು ಒತ್ತಿ ಹೇಳಿದ ಅವರು, ಕೇಂದ್ರದ ಕ್ರಮಗಳು ರಾಜ್ಯದ ಈ ಪ್ರಯತ್ನಗಳಿಗೆ ಅಡ್ಡಿಯಾಗುತ್ತಿವೆ ಎಂದು ಆರೋಪಿಸಿದ್ದಾರೆ.

Read More
Next Story