
ನಟ ದರ್ಶನ್, ಪವಿತ್ರಾಗೌಡ
ರೇಣುಕಾಸ್ವಾಮಿ ಕೊಲೆ ಪ್ರಕರಣ| ನವೆಂಬರ್ 10ಕ್ಕೆ ದರ್ಶನ್ ವಿಚಾರಣೆ ಮುಂದೂಡಿಕೆ
ಚಿತ್ರದುರ್ಗದ ನಿವಾಸಿ ಮತ್ತು ದರ್ಶನ್ ಅವರ ಅಭಿಮಾನಿಯಾಗಿದ್ದ 33 ವರ್ಷದ ರೇಣುಕಾಸ್ವಾಮಿ ಅವರು ಜೂನ್ 9, 2024 ರಂದು ಬೆಂಗಳೂರಿನಲ್ಲಿ ಶವವಾಗಿ ಪತ್ತೆಯಾಗಿದ್ದರು.
ರಾಜ್ಯಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟ ದರ್ಶನ್ ತೂಗುದೀಪ, ಪವಿತ್ರಾ ಗೌಡ ಸೇರಿದಂತೆ ಎಲ್ಲಾ 17 ಆರೋಪಿಗಳು ತಮ್ಮ ಮೇಲಿನ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಸೋಮವಾರ ಬೆಂಗಳೂರಿನ ಸಿಸಿಎಚ್ 70ನೇ ನ್ಯಾಯಾಲಯದಲ್ಲಿ ನಡೆದ ವಿಚಾರಣೆ ವೇಳೆ, ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾದ ಎಲ್ಲಾ ಆರೋಪಗಳು ಸುಳ್ಳು ಎಂದು ಆರೋಪಿಗಳು ಹೇಳಿಕೆ ನೀಡಿದ್ದು, ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ನವೆಂಬರ್ 10ಕ್ಕೆ ಮುಂದೂಡಿದೆ.
ನ್ಯಾಯಾಲಯದಲ್ಲಿ ಗದ್ದಲ, ನ್ಯಾಯಾಧೀಶರ ಎಚ್ಚರಿಕೆ
ಸೋಮವಾರ ಕಲಾಪ ಆರಂಭವಾಗುತ್ತಿದ್ದಂತೆ ನ್ಯಾಯಾಲಯದ ಕೊಠಡಿಯು ವಕೀಲರು ಮತ್ತು ಸಾರ್ವಜನಿಕರಿಂದ ಕಿಕ್ಕಿರಿದು ತುಂಬಿತ್ತು. ಈ ಜನದಟ್ಟಣೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಧೀಶ ಐ.ಪಿ. ನಾಯಕ್, "ಇಲ್ಲಿ ಇಷ್ಟೊಂದು ಜನರ ಮೇಲೆ ಆರೋಪ ಹೊರಿಸುವುದು ಹೇಗೆ ಸಾಧ್ಯ?" ಎಂದು ಪ್ರಶ್ನಿಸಿದರು. ಪ್ರಕರಣಕ್ಕೆ ಸಂಬಂಧವಿಲ್ಲದ ವಕೀಲರು ತಕ್ಷಣವೇ ಕೊಠಡಿಯಿಂದ ಹೊರಹೋಗುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಇದೇ ಪರಿಸ್ಥಿತಿ ಮುಂದುವರಿದರೆ ವಿಚಾರಣೆಯನ್ನು ಮುಂದೂಡಲಾಗುವುದು ಮತ್ತು ಅಗತ್ಯವಿದ್ದರೆ ರಹಸ್ಯ ವಿಚಾರಣೆ (in-camera trial) ನಡೆಸುವುದಾಗಿಯೂ ನ್ಯಾಯಾಧೀಶರು ಬಲವಾದ ಎಚ್ಚರಿಕೆ ನೀಡಿದರು.
ಆರೋಪ ಪಟ್ಟಿ ವಾಚನ ಮತ್ತು ಆರೋಪಿಗಳ ನಿರಾಕರಣೆ
ಬಳಿಕ ನ್ಯಾಯಾಧೀಶರು, ಮೊದಲ ಆರೋಪಿ ಪವಿತ್ರಾ ಗೌಡ ವಿರುದ್ಧದ ಆರೋಪಗಳನ್ನು ಓದುವ ಮೂಲಕ ಕಲಾಪ ಆರಂಭಿಸಿದರು. ರೇಣುಕಾಸ್ವಾಮಿ ಅವರು ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದನ್ನು ಕಾರಣವಾಗಿಟ್ಟುಕೊಂಡು, ಆತನನ್ನು ಅಪಹರಿಸಿ ಬೆಂಗಳೂರಿನ ಶೆಡ್ಗೆ ಕರೆತರಲಾಯಿತು. ಅಲ್ಲಿ ಚಪ್ಪಲಿ ಮತ್ತು ಮರದ ಹಲಗೆಯಿಂದ ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿದೆ ಎಂದು ಆರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ. ಅಲ್ಲದೆ, ಕೆಲವು ಆರೋಪಿಗಳಿಗೆ ಹಣದ ಆಮಿಷವೊಡ್ಡಿ ತಪ್ಪನ್ನು ತಮ್ಮ ಮೇಲೆ ಹೊರಿಸಿಕೊಳ್ಳಲು ಪ್ರೇರೇಪಿಸಲಾಗಿದೆ ಎಂಬ ಅಂಶವನ್ನೂ ನ್ಯಾಯಾಲಯ ಗಮನಿಸಿತು.
ನ್ಯಾಯಾಧೀಶರು ಓದಿ ಹೇಳಿದ ಎಲ್ಲಾ ಆರೋಪಗಳನ್ನು 17 ಆರೋಪಿಗಳು ಒಕ್ಕೊರಲಿನಿಂದ ನಿರಾಕರಿಸಿದರು. ತಾವು ನಿರಪರಾಧಿಗಳು ಎಂದು ವಾದಿಸಿದ ನಂತರ, ನ್ಯಾಯಾಲಯವು ವಿಚಾರಣೆಯನ್ನು ನವೆಂಬರ್ 10ಕ್ಕೆ ಮುಂದೂಡಿತು.
ಪ್ರಕರಣದ ಹಿನ್ನೆಲೆ
ಚಿತ್ರದುರ್ಗದ ನಿವಾಸಿಯಾಗಿದ್ದ 33 ವರ್ಷದ ರೇಣುಕಾಸ್ವಾಮಿ, ಜೂನ್ 9, 2024 ರಂದು ಬೆಂಗಳೂರಿನಲ್ಲಿ ಶವವಾಗಿ ಪತ್ತೆಯಾಗಿದ್ದರು. ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ ಕಾರಣಕ್ಕಾಗಿ ದರ್ಶನ್ ಮತ್ತು ಅವರ ಗ್ಯಾಂಗ್ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದರು.

