ದರ್ಶನ್ ಪ್ರಕರಣ| ಚಾರ್ಜ್ ಶೀಟ್ ವಿವರ ಪ್ರಸಾರ ಮಾಡದಂತೆ ಹೈಕೋರ್ಟ್ ನಿರ್ಬಂಧ
x
ನಟ ದರ್ಶನ್‌

ದರ್ಶನ್ ಪ್ರಕರಣ| ಚಾರ್ಜ್ ಶೀಟ್ ವಿವರ ಪ್ರಸಾರ ಮಾಡದಂತೆ ಹೈಕೋರ್ಟ್ ನಿರ್ಬಂಧ

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ವಿರುದ್ಧ ಬೆಂಗಳೂರು ಪೊಲೀಸರು ಸಲ್ಲಿಸಿರುವ ಚಾರ್ಜ್ ಶೀಟ್‌ನ ವಿವರಗಳನ್ನು ಪ್ರಸಾರ, ಮುದ್ರಣ, ಪ್ರಕಟಣೆ ಮತ್ತು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ಕರ್ನಾಟಕ ಹೈಕೋರ್ಟ್ ಮಂಗಳವಾರ ನಿರ್ಬಂಧ ವಿಧಿಸಿದೆ.


Click the Play button to hear this message in audio format

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ವಿರುದ್ಧ ಬೆಂಗಳೂರು ಪೊಲೀಸರು ಸಲ್ಲಿಸಿರುವ ಚಾರ್ಜ್ ಶೀಟ್‌ನ ವಿವರಗಳನ್ನು ಪ್ರಸಾರ, ಮುದ್ರಣ, ಪ್ರಕಟಣೆ ಮತ್ತು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ಕರ್ನಾಟಕ ಹೈಕೋರ್ಟ್ ಮಂಗಳವಾರ ನಿರ್ಬಂಧ ವಿಧಿಸಿದೆ.

ಆರೋಪ ಪಟ್ಟಿಯಲ್ಲಿ ಕೊಲೆಯ ವಿವರ, ಸ್ಥಳ ಮಹಜರು, ಆರೋಪಿಗಳ ಸ್ವ ಇಚ್ಛಾ ಹೇಳಿಕೆ, ಸಾಕ್ಷಿಗಳ ಹೇಳಿಕೆ, ಸಾಕ್ಷ್ಯಗಳ ಮಾಹಿತಿ ಇನ್ನೂ ಹಲವು ಅಂಶಗಳನ್ನು ಸೇರಿಸಲಾಗಿದೆ. ಆರೋಪ ಪಟ್ಟಿ ದಾಖಲು ಮಾಡಿದಾಗಿನಿಂದಲೂ ಆರೋಪ ಪಟ್ಟಿಯಲ್ಲಿರುವ ಅಂಶಗಳು ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ವರದಿ ಆಗುತ್ತಲೇ ಇವೆ. ದರ್ಶನ್, ಪವಿತ್ರಾ ಹಾಗೂ ರೇಣುಕಾ ಸ್ವಾಮಿಯ ಕೆಲವು ಫೋಟೊಗಳು ಸಹ ಹರಿದಾಡುತ್ತಿವೆ.

ಆಗಸ್ಟ್ 27 ರಂದು ದರ್ಶನ್ ಪತ್ನಿ ವಿಜಯಲಕ್ಷ್ಮಿ, ದರ್ಶನ್ ಅವರಿಗೆ ಸಂಬಂಧಿಸಿದ ಖಾಸಗಿ ಚಿತ್ರಗಳನ್ನು ಮಾಧ್ಯಮಗಳಲ್ಲಿ ಪ್ರದರ್ಶಿಸದಂತೆ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿ ಪ್ರತಿಬಂಧಕಾಜ್ಞೆ ತಂದಿದ್ದರು. ಈಗ ಅದೇ ಅರ್ಜಿಯನ್ನು ಉಲ್ಲೇಖಿಸಿ, ಆರೋಪ ಪಟ್ಟಿಯಲ್ಲಿರುವ ಮಾಹಿತಿ ಹಾಗೂ ಹರಿದಾಡುತ್ತಿರುವ ಕೆಲವು ಚಿತ್ರಗಳನ್ನು ಪ್ರದರ್ಶಿಸದಂತೆ ಸೂಚನೆ ನೀಡುವಂತೆ ಮನವಿ ಮಾಡಲಾಗಿತ್ತು. ಅದರಂತೆ ಹೈಕೋರ್ಟ್ ಏಕಸದಸ್ಯ ಪೀಠವು ಮುಂದಿನ ವಿಚಾರಣೆ ವರೆಗೂ ಆರೋಪ ಪಟ್ಟಿಯಲ್ಲಿರುವ ಮಾಹಿತಿಯನ್ನು ಪ್ರಸಾರ ಮಾಡದಂತೆ ಸೂಚನೆ ನೀಡಿದೆ.

ವಿಚಾರಣೆ ನಡೆಸಿದ ಹೈಕೋರ್ಟ್ ಪೀಠವು ಸುಪ್ರೀಂಕೋರ್ಟ್​ನ ಸಿದ್ಧಾರ್ಥ ವಶಿಷ್ಟ್ ಮನು ಶರ್ಮಾ ವಿರುದ್ಧ ರಾಜ್ಯ (ದೆಹಲಿಯ ಎನ್‌ಸಿಟಿ), 2010, ಮತ್ತು ಕೇಬಲ್ ಟೆಲಿವಿಷನ್ ನೆಟ್‌ವರ್ಕ್ ರೆಗ್ಯುಲೇಶನ್ ಆಕ್ಟ್, 1995 ರ ಷರತ್ತು 5 ಮತ್ತು ಸಮನ್ವಯ ಪೀಠದ ತೀರ್ಪನ್ನು ಉಲ್ಲೇಖ ಮಾಡಿ, ಈ ಆದೇಶ ನೀಡಿದೆ. ನ್ಯಾಯಾಲಯದ ಆದೇಶವನ್ನು ಮಾಧ್ಯಮಗಳಿಗೆ ತಲುಪಿಸುವಂತೆ ಹಾಗೂ ಆದೇಶ ಪಾಲನೆ ಆಗವಂತೆ ನಿಗಾ ವಹಿಸುವಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆಗೆ ನಿರ್ದೇಶನ ನೀಡಿದೆ.

ನ್ಯಾಯಾಂಗ ಬಂಧನ ವಿಸ್ತರಣೆ

ದರ್ಶನ್ ಮತ್ತು ಅವರ ಸ್ನೇಹಿತೆ ಪವಿತ್ರ ಗೌಡ ಮತ್ತು ಇತರರ ನ್ಯಾಯಾಂಗ ಬಂಧನವನ್ನು ಬೆಂಗಳೂರು ನ್ಯಾಯಾಲಯವು ಸೆಪ್ಟೆಂಬರ್ 12 ರವರೆಗೆ ವಿಸ್ತರಿಸಿದೆ. ದರ್ಶನ್ ಮತ್ತು ಪವಿತ್ರಾ ಸೇರಿದಂತೆ 17 ಆರೋಪಿಗಳ ನ್ಯಾಯಾಂಗ ಬಂಧನ ಮಂಗಳವಾರ ಅಂತ್ಯಗೊಂಡಿದ್ದರಿಂದ ಅವರನ್ನು ರಾಜ್ಯದ ವಿವಿಧ ಜೈಲುಗಳಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ 24ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

Read More
Next Story