ದಾಂಡೇಲಿ: ಗಂಡನ ಮೇಲಿನ ಕೋಪಕ್ಕೆ ಮೊಸಳೆ ತುಂಬಿದ್ದ ನಾಲೆಗೆ ಮಗು ಎಸೆದು ಸಾಯಿಸಿದ ಪತ್ನಿ!
x

ದಾಂಡೇಲಿ: ಗಂಡನ ಮೇಲಿನ ಕೋಪಕ್ಕೆ ಮೊಸಳೆ ತುಂಬಿದ್ದ ನಾಲೆಗೆ ಮಗು ಎಸೆದು ಸಾಯಿಸಿದ ಪತ್ನಿ!


ಗಂಡನ ಜೊತೆ ಜಗಳ ಮಾಡುತ್ತಿದ್ದಾಗ ಕೋಪಗೊಂಡ ಮಹಿಳೆ ತನ್ನ ಆರು ವರ್ಷದ ಮಗುವನ್ನು ಮೊಸಳೆ ಇದ್ದ ನಾಲೆಗೆ ಎಸೆದು ಸಾಯಿಸಿದ ಘಟನೆ ಶನಿವಾರ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಹಾಲಮಡ್ಡಿಯಲ್ಲಿ ನಡೆದಿದೆ. ಭಾನುವಾರ ಬೆಳಿಗ್ಗೆ ಮಗುವಿನ ಶವ ಪತ್ತೆಯಾಗಿದೆ.

6 ವರ್ಷದ ಮಗು ವಿನೋದ್‌ನನ್ನು ಆತನ ತಾಯಿಯೇ ನಾಲೆಗೆ ಎಸಿದಿದ್ದಾಳೆ. ರವಿಕುಮಾರ ಹಾಗೂ ಸಾವಿತ್ರಿ ದಂಪತಿ ಜಗಳ‌ ಮಾಡುತ್ತಿರುವಾಗ ಕೋಪದ ಭರದಲ್ಲಿ ಸಾವಿತ್ರಿ ಮಗುವನ್ನು ಮನೆಯ ಹಿಂದಿರುವ ಕಾಗದ ಕಾರ್ಖಾನೆಯಿಂದ ಬರುವ ರಾಸಾಯನಿಕ ನೀರಿನ ನಾಲೆಗೆ ಎಸೆದಿದ್ದಾಳೆ.

ಈ ವಿಚಾರ ತಿಳಿದ ಅಕ್ಕಪಕ್ಕದ ಜನರು ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಸಿಕ್ಕ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿದ ದಾಂಡೇಲಿ ಗ್ರಾಮಿಣ ಠಾಣೆಯ ಪೊಲೀಸರು ಮತ್ತು ಜೋಯಿಡಾದ ಅಗ್ನಿಶಾಮಕ ದಳದವರು ಹಾಗೂ ಸ್ಥಳಿಯರು ಮಗುವಿನ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

ಶೋಧ ಕಾರ್ಯ ಭಾನುವಾರ ಮುಂಜಾನೆಯೂ ಮುಂದುವರೆದಾಗ ನಾಲೆಗೆ ಎಸೆಯಲಾಗಿದ್ದ ಮಗುವನ್ನು ಮೊಸಳೆಯೊಂದು ಬಾಯಿಯಲ್ಲಿ ಹಿಡಿದು ನದಿಯಲ್ಲಿ ಇರುವುದು ಕಂಡುಬಂದಿದೆ. ಆಗ ಸ್ಥಳೀಯ ಮುಳುಗುತಜ್ಞರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು‌ ಹಾಗೂ ಪೋಲಿಸ್‌ ಸಿಬ್ಬಂದಿಗಳು ಮೊಸಳೆ ಬಾಯಿಯಿಂದ ಮಗುವಿನ ಮೃತದೇಹವನ್ನು ಹೊರತರುವಲ್ಲಿ ಯಶಸ್ವಿಯಾಗಿದ್ದಾರೆ.

ಮಗುವಿನ ಮೃತದೇಹವನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಸ್ಥಳದಲ್ಲಿ ಡಿ.ವೈ.ಎಸ್‌ಪಿ ಶಿವಾನಂದ, ಸಿಪಿಐ ಭೀಮಣ್ಣ ಸೂರಿ ಹಾಗೂ ಅರಣ್ಯ ಇಲಾಖೆಯವರು ಉಪಸ್ಥಿತರಿದ್ದರು.

Read More
Next Story