
ಆರ್.ಸಿ.ಬಿ. ವಿಜಯೋತ್ಸವದ ವೇಳೆ ಕಬ್ಬನ್ ಪಾರ್ಕ್ ಗಿಡ-ಮರಗಳಿಗೂ ಹಾನಿ; ಠಾಣೆಗೆ ದೂರು
ಉದ್ಯಾನಕ್ಕೆ ನುಗ್ಗಿದ ಜನರು ಗಿಡಗಳನ್ನು ತುಳಿದು ಹಾಕಿ, ಮರದ ರೆಂಬೆಗಳನ್ನು ಮುರಿದು ಹಾಕಿದ್ದಾರೆ. ಉದ್ಯಾನದ ಬೇಲಿಯನ್ನು ಕೂಡ ಕಿತ್ತು ಹಾಕಿದ್ದಾರೆ" ಎಂದು ದೂರಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವ ಮೆರವಣಿಗೆಯ ವೇಳೆ ಸಂಭವಿಸಿದ ಕಾಲ್ತುಳಿತ ದುರಂತದ ಸಮಯದಲ್ಲಿ ಹುಚ್ಚಾಟ ತೋರಿಸಿದ ಅಭಿಮಾನಿಗಳು ಕಬ್ಬನ್ ಪಾರ್ಕ್ನ ಪರಿಸರಕ್ಕೂ ಹಾನಿ ಮಾಡಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಕಬ್ಬನ್ ಪಾರ್ಕ್ ನಡಿಗೆದಾರರ ಸಂಘವು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದೆ.
ಕಬ್ಬನ್ ಪಾರ್ಕ್ ನಡಿಗೆದಾರರ ಸಂಘದ ಅಧ್ಯಕ್ಷ ಎಸ್. ಉಮೇಶ್ ಸಲ್ಲಿಸಿರುವ ದೂರಿನಲ್ಲಿ, "ಆರ್ಸಿಬಿ ವಿಜಯೋತ್ಸವದ ಅಂಗವಾಗಿ ವಿಧಾನಸೌಧ ಹಾಗೂ ಕ್ರೀಡಾಂಗಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ಆದರೆ, ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದ ಕಾರಣ, ಉದ್ಯಾನಕ್ಕೆ ನುಗ್ಗಿದ ಜನರು ಗಿಡಗಳನ್ನು ತುಳಿದು ಹಾಕಿ, ಮರದ ರೆಂಬೆಗಳನ್ನು ಮುರಿದು ಹಾಕಿದ್ದಾರೆ. ಉದ್ಯಾನದ ಬೇಲಿಯನ್ನು ಕೂಡ ಕಿತ್ತು ಹಾಕಿದ್ದಾರೆ" ಎಂದು ದೂರಿದ್ದಾರೆ. .
ಕಬ್ಬನ್ ಉದ್ಯಾನದಲ್ಲಿ ಆಗಿರುವ ಹಾನಿಯ ಬಗ್ಗೆ ಈವರೆಗೂ ಅಂದಾಜು ಮಾಡಿಲ್ಲ. ಉದ್ಯಾನವನ್ನು ರಕ್ಷಣೆ ಮಾಡುವ ಬದಲು ಹಾಳು ಮಾಡಲಾಗಿದೆ ಎಂದು ಸಂಘವು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ), ಡಿಎನ್ಎ ಎಂಟರ್ಟೈನ್ಮೆಂಟ್ಸ್ ಪ್ರೈವೇಟ್ ಲಿಮಿಟೆಡ್, ಮತ್ತು ಆರ್ಸಿಬಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣದ ನಂತರ ಕ್ರೀಡಾಂಗಣದ ಸುತ್ತಮುತ್ತಲಿನ ಘಟನೆಗಳ ಬಗ್ಗೆ ಕುತೂಹಲ ಹೆಚ್ಚಾಗಿದ್ದು, ಪರಿಸರಕ್ಕೆ ಆದ ಹಾನಿಯ ಬಗ್ಗೆಯೂ ಸಾರ್ವಜನಿಕ ವಲಯದಲ್ಲಿ ಚರ್ಚೆ ಆರಂಭವಾಗಿದೆ.