
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಭೂಪೇಂದ್ರ ಯಾದವ್ ಪಾಲ್ಗೊಂಡಿದ್ದರು.
ಹಿಂದುಳಿದ ವರ್ಗಗಳ ಕಡೆಗಣಿಸಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್: ಸಚಿವ ಭೂಪೇಂದ್ರ ಯಾದವ್
ದೇಶವು ತುರ್ತು ಪರಿಸ್ಥಿತಿಯಿಂದ ಸ್ವತಂತ್ರವಾದ ಬಳಿಕ, ಕೌಟುಂಬಿಕ ಅಧಿಕಾರದಿಂದ ಮುಕ್ತವಾದ ನಂತರ, ಜನತಾ ಪಕ್ಷವು ಕೇಂದ್ರದಲ್ಲಿ ಅಧಿಕಾರ ಪಡೆದು ಮಂಡಲ್ ಆಯೋಗ ರಚಿಸಿತು ಎಂದು ಕೇಂದ್ರ ಸಚಿವ ಭೂಪೇಂದ್ರ ಯಾದವ್ ತಿಳಿಸಿದರು.
ಹಿಂದುಳಿದವರು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬಾರದೆಂದು ಕಾಂಗ್ರೆಸ್ ಪಕ್ಷವು ಹಿಂದೆ ಕಾಕಾ ಕಾಲೇಕರ್ ಆಯೋಗದ ವರದಿಯನ್ನು ಕಡೆಗಣಿಸಿತ್ತು. ಅದೇ ರೀತಿ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಬಿಸಿ ವರದಿಯನ್ನು ನಿರಾಕರಿಸಿದ್ದಾರೆ ಎಂದು ಕೇಂದ್ರ ಸಚಿವ ಭೂಪೇಂದ್ರ ಯಾದವ್ ತೀವ್ರ ಆರೋಪ ಮಾಡಿದ್ದಾರೆ.
ಭಾರತೀಯ ವಿದ್ಯಾಭವನದಲ್ಲಿ ಶನಿವಾರ (ಜೂನ್ 28) ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆ ವತಿಯಿಂದ ಏರ್ಪಡಿಸಿದ್ದ ‘ಜಾತಿಗಣತಿ: ಹಿನ್ನೋಟ- ಮುನ್ನೋಟ’ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರನ್ನು ಗುರುತಿಸುವಂತೆ ಸಂವಿಧಾನವೇ ಹೇಳುತ್ತದೆ. ಇದಕ್ಕಾಗಿಯೇ ಕಾಕಾ ಕಾಲೇಕರ್ ಆಯೋಗ ರಚಿಸಲಾಗಿತ್ತು. "ಸಂವಿಧಾನವನ್ನು ಜೇಬಿನಲ್ಲಿ ಇಡುವವರು ಕಾಕಾ ಕಾಲೇಕರ್ ಆಯೋಗದ ವರದಿಯನ್ನು ಏಕೆ ಅನುಷ್ಠಾನಕ್ಕೆ ತರಲಿಲ್ಲ?" ಎಂದು ಯಾದವ್ ಪ್ರಶ್ನಿಸಿದರು.
ದೇಶವು ತುರ್ತು ಪರಿಸ್ಥಿತಿಯಿಂದ ಹೊರಬಂದು, ಕೌಟುಂಬಿಕ ಅಧಿಕಾರದಿಂದ ಮುಕ್ತವಾದ ನಂತರ, ಜನತಾ ಪಕ್ಷವು ಕೇಂದ್ರದಲ್ಲಿ ಅಧಿಕಾರ ಪಡೆದು ಮಂಡಲ್ ಆಯೋಗವನ್ನು ರಚಿಸಿತು. ಕಾಂಗ್ರೆಸ್ ಅಧಿಕಾರದಿಂದ ದೂರವಾದ ಬಳಿಕವೇ ಒಬಿಸಿಗೆ ನ್ಯಾಯದ ಮಾತು ಮುನ್ನೆಲೆಗೆ ಬಂತು ಎಂದು ಭೂಪೇಂದ್ರ ಯಾದವ್ ಹೇಳಿದರು. ಕೆಲ ವರ್ಷಗಳ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷವು ಕಾಕಾ ಕಾಲೇಕರ್ ವರದಿಯ ಮಾದರಿಯಲ್ಲೇ ಮಂಡಲ್ ಆಯೋಗದ ವರದಿಯನ್ನೂ ಕಡೆಗಣಿಸಿತ್ತು ಎಂದು ಅವರು ದೂರಿದರು.
ಮೀಸಲಾತಿ ನೀಡದೆ ಅಧಿಕಾರ ಕಳೆದುಕೊಂಡ ಕಾಂಗ್ರೆಸ್
ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರಿಗೆ ಹಿಂದುಳಿದ ವರ್ಗಗಳೇ 400ಕ್ಕೂ ಹೆಚ್ಚು ಸಂಸದರ ಸ್ಥಾನಗಳನ್ನು ನೀಡಿದ್ದರು. ಆದರೆ, "ಒಬಿಸಿಯವರ ಮತದಿಂದ ಅಧಿಕಾರ ಪಡೆದರೂ ಇವರು ಸಾಮಾಜಿಕ ನ್ಯಾಯ ನೀಡಲಿಲ್ಲ. ಇದರಿಂದಾಗಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು. ಆಗ ಬಿಜೆಪಿ ಬೆಂಬಲಿತ ವಿ.ಪಿ. ಸಿಂಗ್ ಸರ್ಕಾರವು ಮಂಡಲ್ ಆಯೋಗದ ವರದಿ ಜಾರಿಗೊಳಿಸಿ ಒಬಿಸಿಗೆ ಮೀಸಲಾತಿ ಲಭಿಸಿತು," ಎಂದು ಯಾದವ್ ವಿವರಿಸಿದರು.
"ದೇಶದ ಶಾಸನಗಳಿಗೆ ಸಂವಿಧಾನವೇ ಮೂಲ ಆಧಾರ. ಕೆಲವರು ಸಂವಿಧಾನವನ್ನು ಕುಟುಂಬದ ಕಿಸೆಯೊಳಗೆ ಇಟ್ಟುಕೊಂಡರೆ, ನಾವು ಅದನ್ನು ಆತ್ಮದಲ್ಲಿ ಇಟ್ಟುಕೊಂಡಿದ್ದೇವೆ," ಎಂದು ಭೂಪೇಂದ್ರ ಯಾದವ್ ಹೇಳಿದರು. ಹಿಂದುಳಿದ ವರ್ಗಗಳ ಕಡೆಗಣನೆಯ ಪರಿಣಾಮವಾಗಿ ಉತ್ತರ ಪ್ರದೇಶ, ಬಿಹಾರ, ತಮಿಳುನಾಡು, ಪಶ್ಚಿಮ ಬಂಗಾಳಗಳಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ. ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳು ಜಾಗೃತರಾದಾಗ ಕಾಂಗ್ರೆಸ್ ಮತ್ತೆ ಅಧಿಕಾರ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಅಸ್ಪೃಶ್ಯತೆ ಮಾನವೀಯತೆಯ ಕಳಂಕವಾಗಿದ್ದು, ಅದಕ್ಕಾಗಿಯೇ ಮೀಸಲಾತಿ ನೀಡಲಾಗಿದೆ. 17-18ನೇ ಶತಮಾನದಲ್ಲಿ ದೇಶದಲ್ಲಿ ಸಾಮಾಜಿಕ ಸುಧಾರಣೆಯ ಆಂದೋಲನ ನಡೆದಿತ್ತು, ಇದು ಭಾರತದ ಪುನರ್ಜಾಗೃತಿಗಾಗಿತ್ತು. ಅದರ ಪರಿಣಾಮವಾಗಿ ಗಾಂಧೀಜಿ ನೇತೃತ್ವದಲ್ಲಿ ಸ್ವಾತಂತ್ರ್ಯ ದೊರೆಯಿತು. ಪ್ರತಿ ವ್ಯಕ್ತಿಗೆ ಸಾಮಾಜಿಕ, ರಾಜಕೀಯ, ಆರ್ಥಿಕ ನ್ಯಾಯ ನೀಡುವುದೇ ಭಾರತದ ಸಂವಿಧಾನದ ಉದ್ದೇಶ ಎಂದು ಅವರು ವಿವರಿಸಿದರು.
ಜಾತಿಗಣತಿ ಬಗ್ಗೆ ಭಿನ್ನ ಅಭಿಪ್ರಾಯಗಳು
ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಡಾ. ಕೆ. ಭಕ್ತವತ್ಸಲ ಮಾತನಾಡಿ, "ಡಾ. ಅಂಬೇಡ್ಕರ್ ಅವರ ಸಂವಿಧಾನದಲ್ಲಿ ಸಾಮಾಜಿಕ ನ್ಯಾಯ ಚಿಂತನೆಯಡಿ ಎಲ್ಲರೂ ಸಮಾನರು ಎಂದಿದೆ. ನಮ್ಮ ದೇಶದ ಜನಸಂಖ್ಯೆಯೇ ನಮ್ಮ ದೊಡ್ಡ ಆಸ್ತಿ. ಜಾತಿಗಣತಿ ಅತ್ಯಂತ ಮಹತ್ವದ್ದಾಗಿದ್ದು, ಸುಲಭದ ಕೆಲಸವಲ್ಲ. ಇದಕ್ಕೆ ಪ್ರತಿಯೊಬ್ಬರೂ ಸಹಕರಿಸಬೇಕು," ಎಂದು ಕರೆ ನೀಡಿದರು.
ಆದರೆ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ರಘು ಕೌಟಿಲ್ಯ ಅವರು ರಾಜ್ಯ ಸರ್ಕಾರದ ಜಾತಿಗಣತಿ ಪ್ರಯತ್ನವನ್ನು ಟೀಕಿಸಿದರು. "ಸಾಂವಿಧಾನಿಕ ಅವಕಾಶವಿಲ್ಲದಿದ್ದರೂ ರಾಜ್ಯದಲ್ಲಿ ಜಾತಿಗಣತಿಯ ಹೊಸ ನಾಟಕ ಶುರು ಮಾಡಿದ್ದಾರೆ. ಸುಮಾರು 300 ಕೋಟಿ ರೂ. ಖರ್ಚು ಮಾಡಿ ಕೇವಲ ಮೂರು ತಿಂಗಳಲ್ಲಿ ಮತ್ತೊಂದು ಜಾತಿಗಣತಿ ಮಾಡುವುದಾಗಿ ಹೇಳಿಕೊಂಡು ಜನರನ್ನು ಮೋಸ ಮಾಡಿ ದಿಕ್ಕು ತಪ್ಪಿಸುವ ಪ್ರಯತ್ನ ನಡೆಯುತ್ತಿದ್ದು, ಅದನ್ನು ಹಿಮ್ಮೆಟ್ಟಿಸಬೇಕಿದೆ," ಎಂದು ರಘು ಕೌಟಿಲ್ಯ ತಿಳಿಸಿದರು.