ಇಡಿ ವಿರುದ್ಧ ದೂರು | ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ದುಸ್ಸಾಹಸ: ಬಿಜೆಪಿ ವಾಗ್ದಾಳಿ
x

ಇಡಿ ವಿರುದ್ಧ ದೂರು | ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ದುಸ್ಸಾಹಸ: ಬಿಜೆಪಿ ವಾಗ್ದಾಳಿ


ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯನವರಿಂದ ಇನ್ನಿಲ್ಲದ ದುಸ್ಸಾಹಸ ನಡೆದಿದೆ ಎಂದು ರಾಜ್ಯ ಬಿಜೆಪಿ ಆರೋಪ ಮಾಡಿದೆ.

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ನಾಗೇಂದ್ರ ಅವರ ಹೆಸರು ಹೇಳುವಂತೆ ಒತ್ತಡ ಹೇರಿದ್ದಾರೆ ಎಂದು ನಿಗಮದ ಮಾಜಿ ಪದನಿಮಿತ್ತ ನಿರ್ದೇಶಕ ಕಲ್ಲೇಶ್​​​ ಬಿ ದೂರು ನೀಡಿದ್ದಾರೆ. ಈ ವಿಚಾರವಾಗಿ ಕಾಂಗ್ರೆಸ್‌ ನಾಯಕರು, ತನಿಖಾ ಸಂಸ್ಥೆಗಳಾದ ಇಡಿ, ಸಿಬಿಐ, ಐಟಿಗಳನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿದ್ದಾರೆ. ಕೇಂದ್ರದ ವಿರುದ್ಧ ಕಾಂಗ್ರೆಸ್​ ನಾಯಕರು ಪ್ರತಿಭಟನೆ ನಡೆಸಿದ್ದರು.

ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿರುವ ರಾಜ್ಯ ಬಿಜೆಪಿ ಘಟಕ, ʼಎಕ್ಸ್‌ʼನಲ್ಲಿ ಪೋಸ್ಟ್‌ ಮಾಡಿದ್ದು, ʻʻಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯನವರಿಂದ ಇನ್ನಿಲ್ಲದ ದುಸ್ಸಾಹಸ. ಇಂದು ಇಡಿ ವಿರುದ್ಧ ಕಂಪ್ಲೇಂಟ್ ಮಾಡಿರುವ ಕಲ್ಲೇಶ್ ಬಿ ಎಂಬ ಅಧಿಕಾರಿಯನ್ನು ಕಳೆದ ತಿಂಗಳು ಭ್ರಷ್ಟಾಚಾರದ ಆರೋಪದಡಿ ರಾಜ್ಯ ಸರ್ಕಾರ ಅಮಾನತ್ತಿನಲ್ಲಿಟ್ಟಿತ್ತು. ಇಡಿ ತನಿಖೆಯಲ್ಲಿ ಸಿಎಂ ಹಾಗೂ ಡಿಸಿಎಂಗಳ ಕೈವಾಡದ ಬಗ್ಗೆ ಈ ಅಧಿಕಾರಿ ಮಾಹಿತಿ ನೀಡಿದ್ದಾನೆ ಎಂಬ ವಿಷಯ ತಿಳಿದ ತಕ್ಷಣ ಕಾಂಗ್ರೆಸ್ ನಾಟಕ ಒಂದನ್ನು ಆರಂಭಿಸಿದೆʼʼ ಎಂದು ವಾಗ್ದಾಳಿ ಮಾಡಿದೆ.

ʻʻಕಳಂಕಿತ ಅಧಿಕಾರಿಯಾದ ಕಲ್ಲೇಶ್ ಗೆ ಆಮಿಷ ಒಡ್ಡಿ, ಅಧಿಕಾರ ದುರುಪಯೋಗಪಡಿಸಿಕೊಂಡು ಕಾಂಗ್ರೆಸ್ ಸರ್ಕಾರವು ಇಡಿ ಅಧಿಕಾರಿಗಳ ವಿರುದ್ಧ ಸಿಎಂ, ಡಿಸಿಎಂ ಹೆಸರನ್ನು ಹೇಳಬೇಕೆಂದು ಒತ್ತಾಯಿಸುತ್ತಿದ್ದಾರೆ ಎಂದು ಸುಳ್ಳು ಕಂಪ್ಲೇಂಟ್ ಮಾಡಿಸಿದೆ. ಸಿದ್ದರಾಮಯ್ಯನವರು ಕುರ್ಚಿಗೆ ಅಂಟಿಕೊಳ್ಳದೆ, ವಾಲ್ಮೀಕಿ ಹಾಗೂ ಮೂಡಾ ಹಗರಣದ ನೈತಿಕ ಹೊಣೆಯನ್ನು ಹೊತ್ತು, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ, ಸಿಬಿಐ ತನಿಖೆಗೆ ಸಹಕರಿಸಬೇಕೆಂದು ಆಗ್ರಹಿಸುತ್ತೇವೆʼʼ ಎಂದು ಹೇಳಿದೆ.

ಇಡಿ ಅಧಿಕಾರಿಗಳ ವಿರುದ್ಧದ ದೂರಿನಲ್ಲಿ ಏನಿದೆ?

ʻʻಮಹರ್ಷಿ ಮಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ನನ್ನನ್ನು ವಿಚಾರಣೆಗೆ ಹಾಜರಾಗುವಂತೆ ದಿನಾಂಕ 16.07.2024 ರಂದು ದೂರವಾಣಿ ಮೂಲಕ ಕರೆ ಮಾಡಿ ತಿಳಿಸಿದ್ದರು. ಅದರಂತೆ ನಾನು ಶಾಂತಿನಗರದ ಜಾರಿ ನಿರ್ದೇಶನಾಲಯ ಕಚೇರಿಗೆ ಹೋಗಿದ್ದು, ನನ್ನ ಹೇಳಿಕೆಯನ್ನು‌ ಇಡಿ ಸಹ ನಿರ್ದೇಶಕ ಮುರುಳಿ ಕಣ್ಣನ್ ದಾಖಲಿಸಿಕೊಳ್ಳುತ್ತಾರೆ. ಈ ಸಂದರ್ಬದಲ್ಲಿ, ನನಗೆ 17 ಪ್ರಶ್ನೆಗಳನ್ನು ಕೇಳುತ್ತಾರೆ, ನಾನು 17 ಪ್ರಶ್ನೆಗಳಿಗೂ ಉತ್ತರ ನೀಡುತ್ತೇನೆ, ಅದರಲ್ಲಿ ಮೂರು ಪ್ರಶ್ನೆಗಳಿಗೆ ಉತ್ತರಿಸಲು ನನಗೆ ಕಡತ (ಫೈಲ್)ಬೇಕು ಹಾಗೂ ನನ್ನ ಕೆಳಹಂತದ ಅಧಿಕಾರಿಗಳು ಬೇಕಾಗುತ್ತಾರೆಂದು ತಿಳಿಸಿರುತ್ತೇನೆ. ಆಗ ಕಣ್ಣನ್ ರವರು ದಿನಾಂಕ 18.07.2024 ರಂದು 2 ಗಂಟೆಗೆ ಬನ್ನಿ, ಆಗ ಕಡತ ಮತ್ತು ಇತರೆ ಅಧಿಕಾರಿಗಳನ್ನು ಕರೆಯುತ್ತೇನೆಂದು ತಿಳಿಸಿರುತ್ತಾರೆʼʼ ಎಂದು ಮಾಜಿ ಪದನಿಮಿತ್ತ ನಿರ್ದೇಶಕ ಕಲ್ಲೇಶ್​​​ ಬಿ ದೂರಿನಲ್ಲಿ ವಿವರಿಸಿದ್ದಾರೆ.

ʻʻವಿಚಾರಣೆ ಮುಗಿದು ನನ್ನ ಕಡೆಯಿಂದ ನನ್ನ ಹೇಳಿಕೆಗೆ ಸಹಿ ಪಡೆಯುತ್ತಾರೆ. ನಾನು ನನ್ನ ಹೇಳಿಕೆಯ ಪ್ರತಿಯನ್ನು ನನಗೊಂದು ಕೊಡಿ ಎಂದು ಕೇಳುತ್ತೇನೆ. ಆದರೆ ಅವರು ಕೊಡಲಿಲ್ಲ. ನಂತರ ಪುನಃ ನನ್ನನ್ನು ಪ್ರಶ್ನೆ ಕೇಳುತ್ತಾರೆ, ಆದರೆ ಈ ಸಲ ಯಾವುದೇ ಲಿಖಿತ ರೂಪದಲ್ಲಿ ಪ್ರಶ್ನೆ ನೀಡುವುದಿಲ್ಲ. ಎಂ.ಜಿ ರೋಡ್ ಬ್ಯಾಂಕ್ ಖಾತೆಗೆ ಖಜಾನೆಯ ಮೂಲಕ ಹಣವನ್ನು ಮಹರ್ಷಿ ಮಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮಕ್ಕೆ ಜಮಾ ಮಾಡಿರುವುದು ತಪ್ಪು ಎಂದು ಹೇಳುತ್ತಾರೆ. ಆಗ ನಾನು ಸರ್ಕಾರದ ಆದೇಶದ ಪ್ರಕಾರ ಬಿಲ್ ಮಾಡಿ, ದಿನಾಂಕ 25.03.2024 ರಂದು ಜಮಾ ಮಾಡಿದ್ದೇನೆ. ಆದರೆ ಈ ಖಾತೆಯಲ್ಲಿ ದಿನಾಂಕ 05.03.2024 ರಿಂದಲೇ ಅಕ್ರಮ ಹಣ ವರ್ಗಾವಣೆಯಾಗಿರುತ್ತದೆ. ಆದ್ದರಿಂದ ನನ್ನದು ಯಾವುದು ತಪ್ಪು ಇಲ್ಲ ಎಂದು ಹೇಳಿದರೂ ಸಹ ನಿಮ್ಮನ್ನು ಅರೆಸ್ಟ್ ಮಾಡುತ್ತೇವೆಂದು ಧಮ್ಕಿ ಹಾಕಿರುತ್ತಾರೆ. ಎರಡು ವರ್ಷ ಆದರೂ ನಿಮಗೆ ಜಾಮೀನು ಸಿಗುವುದಿಲ್ಲ ಎಂದು ಬೈಯುತ್ತಾರೆ. ಇಡಿಯು ನಿಮಗೆ ಸಹಾಯ ಮಾಡುತ್ತದೆ, ಆದರೆ ನೀವು ಎಂ.ಜಿ ರೋಡ್ ಖಾತೆಗೆ ಅನುದಾನ ಜಮಾ ಮಾಡಲು ಮಾಜಿ ಸಚಿವ ನಾಗೇಂದ್ರ, ಸರ್ಕಾರದ ಹೈಯರ್ ಅಥಾರಿಟಿ ಮತ್ತು ಎಫ್.ಡಿ ಇಲಾಖೆಯಿಂದ ಸೂಚನೆ ಇತ್ತು ಎಂದು ಒಪ್ಪಿಕೊಳ್ಳಬೇಕು. ಆಗ ನಿಮ್ಮನ್ನು ಬಿಡುತ್ತೇವೆ, ಇಲ್ಲದಿದ್ದರೆ ಅರೆಸ್ಟ್ ಮಾಡುತ್ತೇವೆ ಎಂದು ಮಾನಸಿಕ ಹಿಂಸೆಯನ್ನು ನೀಡಿರುತ್ತಾರೆʼʼ ಎಂದು ಅವರು ಆರೋಪ ಮಾಡಿದ್ದಾರೆ.

ʻʻಆ ನಂತರ ಮುರುಳಿ ಕಣ್ಣನ್ ರವರು ಮಿತ್ತಲ್ ಐ.ಆರ್.ಎಸ್ ಇವರ ಹತ್ತಿರ ಕಳುಸಿರುತ್ತಾರೆ, ಮಿತ್ತಲ್ ಸರ್ ರವರು ನನ್ನನ್ನು ನಿಲಿಸಿ, ನೀನೊಬ್ಬ ಅಪರಾಧಿ, ನಿನ್ನನ್ನು ಈಗಲೇ ಅರೆಸ್ಟ್ ಮಾಡುತ್ತೇನೆ, ಇಡಿ ಬಗ್ಗೆ ನಿನಗೆ ಗೊತ್ತಿಲ್ಲ, 2-3 ವರ್ಷ ನಿನಗೆ ಜಾಮೀನು ಸಿಗುವುದಿಲ್ಲ, ನಿನ್ನ ಹೇಳಿಕೆಯನ್ನು ನಾನು ಓದಿದ್ದೇನೆ. ಇದು ಪ್ರಯೋಜನಕ್ಕೆ ಬರುವುದಿಲ್ಲ. ನಿನಗೆ ಇಡಿ ಸಹಾಯ ಮಾಡಬೇಕೆಂದರೆ, ನೀನು ಬರೆದು ಕೊಡಬೇಕು, ಎಂ.ಜಿ ರೋಡ್ ಖಾತೆಗೆ ಹಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್, ಮಾಜಿ ಸಚಿವ ನಾಗೇಂದ್ರ ಸರ್ ಮತ್ತು ಎಫ್.ಡಿ ನಿರ್ದೇಶನದಂತೆ ಮಾಡಿರುತ್ತೇನೆ. ಅವರ ಒತ್ತಡ ಇತ್ತು ಎಂದು ಬರೆದುಕೊಡಲು ತಿಳಿಸಿರುತ್ತಾರೆ, ಪದೇಪದೆ ಇದೇ ಪ್ರಶ್ನೆ ಕೇಳಿ ನಿನಗೆ 7 ವರ್ಷ ಜೈಲು ಶಿಕ್ಷೆ ಮಾಡಿಸುವವರೆಗೂ ಬಿಡುವುದಿಲ್ಲʼʼ ಎಂದು ಗಧರಿಸುತ್ತಾರೆ, ಇದರಿಂದ ನನ್ನನ್ನು ಭಯಭೀತನನ್ನಾಗಿ ಮಾಡಿರುತ್ತಾರೆʼʼ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ʻʻಮಿತ್ತಲ್ ರವರು ಕಣ್ಣನ್ ರವರಿಗೆ ದೂರವಾಣಿ ಕರೆ ಮಾಡಿ, ತಮ್ಮ ಚೇಂಬರ್ ಗೆ ಕರೆಯಿಸಿಕೊಳ್ಳುತ್ತಾರೆ, ಪುನಃ ಇಬ್ಬರು ಸೇರಿ, ಅದೇ ಪ್ರಶ್ನೆ ಕೇಳುತ್ತಾರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್, ಮಾಜಿ ಸಚಿವ ನಾಗೇಂದ್ರ ಸರ್ ಮತ್ತು ಎಫ್.ಡಿ ರವರ ಸೂಚನೆ ಇತ್ತು ಎಂದು ಒಪ್ಪಿಕೊ, ಇಲ್ಲದಿದ್ದರೇ ಈಗಲೇ ಅರೆಸ್ಟ್ ಮಾಡುತ್ತೇವೆಂದು ನನಗೆ ಭಯ ಬರುವಂತೆ ವಾತಾವರಣ ಸೃಷ್ಟಿ ಮಾಡಿರುತ್ತಾರೆ. ಕೊನೆಗೆ ಇಬ್ಬರು ಚರ್ಚಿಸಿ ಏನು ಮಾಡೋಣಾ ? ಅರೆಸ್ಟ್ ಮಾಡೋಣವೇ ? ಎಂದು ಮಾತಾನಾಡಿಕೊಳ್ಳುತ್ತಾರೆ. ನಂತರ ಮುರುಳಿ ಕಣ್ಣನ್ ರವರು ಇವತ್ತು ಬೇಡ ದಿನಾಂಕ 18.07.2024ರಂದು ಬರುತ್ತಾರಲ್ಲಾ.. ಅವತ್ತು ಮಾಡೋಣ ಎಂದು ತಿಳಿಸಿರುತ್ತಾರೆ. ಆದ್ದರಿಂದ ನಾನು ಯಾವುದೇ ತಪ್ಪು ಮಾಡದಿದ್ದರೂ ಸಹ ಕಾನೂನು ಬಾಹಿರವಾಗಿ ವಿಚಾರಣೆ ಮಾಡಿ, ನನ್ನನ್ನು ಬೈದು, ನನಗೆ ಬೆದರಿಕೆ ಹಾಕುತ್ತಿರುವ ಮಿತ್ತಲ್ ಮತ್ತು ಕಣ್ಣೂನ್ ರವರ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ಜರುಗಿಸಬೇಕುʼʼ ಎಂದು ಸಮಾಜ ಕಲ್ಯಾಣ ಇಲಾಖೆಯ ಅಪರ ನಿರ್ದೇಶಕ ಕಲ್ಲೇಶ್.ಬಿ ಅವರು ದೂರು ಕೊಟ್ಟಿದ್ದಾರೆ.

Read More
Next Story