ಧರ್ಮಸ್ಥಳ ಪ್ರಕರಣ | ನಗರ ನಕ್ಸಲರ ಅಪಪ್ರಚಾರದ ಹುನ್ನಾರದಲ್ಲಿ ಸಿಎಂ ಪಾತ್ರ; ಅಶೋಕ್ ಆರೋಪ
x

ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌

ಧರ್ಮಸ್ಥಳ ಪ್ರಕರಣ | ನಗರ ನಕ್ಸಲರ ಅಪಪ್ರಚಾರದ ಹುನ್ನಾರದಲ್ಲಿ ಸಿಎಂ ಪಾತ್ರ; ಅಶೋಕ್ ಆರೋಪ

ನಮಗೆ ವಿರೇಂದ್ರ ಹೆಗ್ಗಡೆ ಅವರಿಗಿಂತ ಧರ್ಮಸ್ಥಳ-ಮಂಜುನಾಥ ಸ್ವಾಮಿ ಮುಖ್ಯ. ಪ್ರಕರಣದ ಹಿಂದೆ ಕಾಂಗ್ರೆಸ್ ಸರ್ಕಾರ ಇದೆ ಎನ್ನುವುದು ಸಾಬೀತಾಗುತ್ತಿದೆ. ಈ ಕುರಿತು ಅಧಿವೇಶನದಲ್ಲಿ ಹೋರಾಟ ನಡೆಸುತ್ತೇವೆ ಎಂದು ಅಶೋಕ್ ಹೇಳಿದರು.


ಹಿಂದೂ ಧರ್ಮ ಹಾಗೂ ದೇವಾಲಯಗಳ ವಿರುದ್ಧ ಅಪಪ್ರಚಾರ ಮಾಡಲು ಕಮ್ಯುನಿಸ್ಟ್‌ ಮನಸ್ಥಿತಿಯ ನಗರ ನಕ್ಸಲರಿಗೆ ಸರ್ಕಾರ ಬೆಂಬಲ ನೀಡುತ್ತಿದ್ದು, ಧರ್ಮಸ್ಥಳದ ಪ್ರಕರಣದ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರವಿದೆ ಎಂದು ಪ್ರತಿಪಕ್ಷ ನಾಯಕ ಆ‌ರ್. ಅಶೋಕ ಆರೋಪಿಸಿದರು.

ಹುಬ್ಬಳ್ಳಿಯಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ನಾವ್ಯಾರೂ ಸೌಜನ್ಯ ಪ್ರಕರಣ ಹಾಗೂ ಎಸ್‌ಟಿ ತನಿಖೆಯನ್ನು ವಿರೋಧಿಸುತ್ತಿಲ್ಲ. ಏಡಪಂಥೀಯರ ಮಾತು ಕೇಳಿ ಎಸ್‌ಐಟಿ ತನಿಖೆಗೆ ಮುಖ್ಯಮಂತ್ರಿ ಅನುಮತಿ‌ ಕೊಟ್ಟಿರುವುದಕ್ಕೆ ನಮ್ಮ ಆಕ್ಷೇಪ. ನಮಗೆ ವಿರೇಂದ್ರ ಹೆಗ್ಗಡೆ ಅವರಿಗಿಂತ ಧರ್ಮಸ್ಥಳ-ಮಂಜುನಾಥ ಸ್ವಾಮಿ ಮುಖ್ಯ. ಪ್ರಕರಣದ ಹಿಂದೆ ಕಾಂಗ್ರೆಸ್ ಸರ್ಕಾರ ಇದೆ ಎನ್ನುವುದು ಸಾಬೀತಾಗುತ್ತಿದೆ. ಈ ಕುರಿತು ಅಧಿವೇಶನದಲ್ಲಿ ಹೋರಾಟ ನಡೆಸುತ್ತೇವೆ ಎಂದು ಹೇಳಿದರು.

ಕೆಲವರು ಧರ್ಮಸ್ಥಳ ದೇವಸ್ಥಾನಕ್ಕೆ ಜೆಸಿಬಿ ನುಗ್ಗಿಸುತ್ತೇವೆ ಎನ್ನುತ್ತಿದ್ದಾರೆ. ಕಾಡಿನಲ್ಲಿದ್ದ ಮತಾಂಧ, ಕಮ್ಯುನಿಸ್ಟ್‌ ನಕ್ಸಲ್‌ಗಳನ್ನು ರೆಡ್‌ ಕಾರ್ಪೆಟ್ ಹಾಸಿ ನಾಡಿಗೆ ಕರೆಸಿಕೊಂಡ ಸಿದ್ದರಾಮಯ್ಯ ಅವರೇ ಕಾರಣ. ಕಾಡಲ್ಲಾದರೆ ಊಟ, ಬಟ್ಟೆಗೆ ಅಲೆಯಬೇಕಾಗಿತ್ತು, ಈಗ ಅವರಿಗೆ ನಗರದಲ್ಲಿ ಎಲ್ಲವೂ ಸಿಗುತ್ತಿದೆ. ಮಾಡಲು ಕೆಲಸವಿಲ್ಲದ ಕಾರಣ ಹಿಂದೂ ದೇವಸ್ಥಾನಗಳ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿದಿನ ನೂರಾರು ಪ್ರಕರಣಗಳು ಸಿಬಿಐ, ಎಸ್‌ಐಟಿಗೆ ವಹಿಸಿ ಎಂದು ಸಾರ್ವಜನಿಕರು, ಸಂಘ-ಸಂಸ್ಥೆಗಳು ಅರ್ಜಿ ಸಲ್ಲಿಸುತ್ತವೆ. ವಿಧಾನಸಭೆಯಲ್ಲೂ ವಿರೋಧ ಪಕ್ಷದವರು ಸರ್ಕಾರವನ್ನು ಆಗ್ರಹಿಸುತ್ತೇವೆ. ಅವೆಲ್ಲವನ್ನೂ ತನಿಖೆಗೆ ಕೊಟ್ಟು ಬಿಡುತ್ತಾರೆಯೇ, ಟಿಪ್ಪು ಸಿದ್ಧಾಂತ ಪ್ರೇರಿತ ಮತಾಂಧ ಮನಸ್ಥಿತಿಯ ಗ್ಯಾಂಗ್‌ಗೆ ಸಿದ್ದರಾಮಯ್ಯ ಬೆಂಬಲ ನೀಡುತ್ತಿದ್ದಾರೆ. ಕತರ್ನಾಕ್, ನಗರ ನಕ್ಸಲರು ಪ್ರಕರಣದ ಹಿಂದೆ ಇದ್ದಾರೆ' ಎಂದು ದೂರಿದರು.

ಪ್ರಕರಣದ ಹಿಂದೆ ಷಡ್ಯಂತ್ರ ನಡೆದಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಆದರೆ, ಆ ಕುರಿತು ಮುಖ್ಯಮಂತ್ರಿ ಯಾವ ಹೇಳಿಕೆಯೂ ನೀಡುತ್ತಿಲ್ಲ. ಕಾಂಗ್ರೆಸ್‌ನಲ್ಲಿಯೇ ಹಿಂದೂ ವಿರೋಧಿ ಮತ್ತು ಹಿಂದೂ ಪರ ಗುಂಪುಗಳಿದ್ದು, ಪರಸ್ಪರರಲ್ಲಿ ಒಡಕು ಇದೆ. ದೇವಸ್ಥಾನದ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿರುವ ಕಾಂಗ್ರೆಸ್‌ಗೆ ಜನರೇ ಪಾಠ ಕಲಿಸುತ್ತಾರೆ' ಎಂದರು.

ಎನ್‌ಐಎ ತನಿಖೆಗೆ ಆಗ್ರಹ

ಧರ್ಮಸ್ಥಳದ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಆರೋಪ ಮಾಡಿರುವ ಸಮೀರ್ ಎಂಬಾತ, ಪಿಎಫ್‌ಐ, ಎಸ್‌ಡಿಪಿಐ ಕಾರ್ಯಕರ್ತನಾಗಿದ್ದಾನೆ. ಅವನ ಜೊತೆ ಮತ್ತೂ ಕೆಲವಷ್ಟು ಮಂದಿ ಯೂಟ್ಯೂಬ್‌ ಚಾನಲ್‌ನಲ್ಲಿ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಇವರಿಗೆ ವಿದೇಶದಿಂದ ದುಡ್ಡು ಬರುತ್ತಿದೆ ಎನ್ನುವ ಅನುಮಾನವಿದೆ. ಈ ಕುರಿತು ತನಿಖೆ ನಡೆಸಲು ಎನ್‌ಐಎಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.

Read More
Next Story