
ಸಿಎಂ ಸಿದ್ದರಾಮಯ್ಯ
ಘನತೆ, ಸಂಸ್ಕೃತಿಗೆ ಧಕ್ಕೆಯಾಗದಂತೆ ʼಗ್ರೇಟರ್ ಮೈಸೂರುʼ ನೀಲ ನಕ್ಷೆ ಸಿದ್ದಪಡಿಸಲು ಸಿಎಂ ಸೂಚನೆ
ಟ್ರಾಫಿಕ್ ಸಮಸ್ಯೆ, ಒಳಚರಂಡಿ, ಫುಟ್ ಪಾತ್, ಕುಡಿಯುವ ನೀರು ಸೇರಿದಂತೆ ಯಾವುದೇ ಸಮಸ್ಯೆಯೂ ಇರದಂತೆ ಅಭಿವೃದ್ಧಿ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ ಬೆಂಗಳೂರಿಗೆ ಪರ್ಯಾಯವಾಗಿ ಯಾವ ನಗರಗಳನ್ನು ಅಭಿವೃದ್ಧಿ ಮಾಡಲು ಸರ್ಕಾರ ಮನಸ್ಸು ಮಾಡುತ್ತಿಲ್ಲ ಎಂಬ ಹೇಳಿಕೆಗಳ ನಡುವೆಯೇ ರಾಜ್ಯ ಸರ್ಕಾರ ಮೈಸೂರನ್ನು ಉದ್ಯಾನನಗರಿಯಂತೆಯೇ ಅಭಿವೃದ್ಧಿ ಮಾಡಲು ಮುಂದಾಗಿದ್ದು, ಯೋಜನೆ ಸಿದ್ದಗೊಳಿಸುವಂತೆ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸಾಂಸ್ಕೃತಿಕ ನಗರಿ ಮೈಸೂರನ್ನು ಗ್ರೇಟರ್ ಬೆಂಗಳೂರಿನಂತೆ ಅಭಿವೃದ್ಧಿಪಡಿಸುವ ಉದ್ದೇಶವಿದ್ದು, ಟ್ರಾಫಿಕ್ ಸಮಸ್ಯೆ, ಒಳಚರಂಡಿ, ಫುಟ್ ಪಾತ್, ಕುಡಿಯುವ ನೀರು ಸೇರಿದಂತೆ ಯಾವುದೇ ಸಮಸ್ಯೆಯೂ ಇರದಂತೆ ಅಭಿವೃದ್ಧಿ ಮಾಡಬೇಕು ಎಂದು ತಿಳಿಸಿದ್ದಾರೆ.
ಮೈಸೂರಿನ ಪಾಲಿಕೆ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗ್ರೇಟರ್ ಮೈಸೂರು ಆಗಬೇಕು. ಆದರೆ ಈಗಿನ ಮೈಸೂರಿನ ಘನತೆ, ಸಂಸ್ಕೃತಿ, ವಿಶಾಲತೆಗೆ ಧಕ್ಕೆಯಾಗಬಾರದು ಎಂದು ಅಧಿಕಾರಿಗಳಿಗೆ ತಮ್ಮ ಸ್ಪಷ್ಟ ಪರಿಕಲ್ಪನೆಯನ್ನು ಸ್ಪಷ್ಟಪಡಿಸಿದ್ದಾರೆ.
ಸಿಎಂ ನೀಡಿದ ಸಲಹೆಗಳೇನು ?
ಪ್ರಸ್ತುತವಿತು ಜನಸಂಖ್ಯೆಗೆ ಬದಲಾಗಿ, ಮುಂದಿನ ೨೦ ವರ್ಷಗಳಿಗೆ ಮೂಲಭೂತ ಸೌಕರ್ಯ ಒದಗಿಸುವಂತೆ ಯೋಜನೆ ರೂಪಿಸಬೇಕು. ಯಾವುದೇ ಕಾರಣಕ್ಕೂ ಟ್ರಾಫಿಕ್ ಸಮಸ್ಯೆ ಇರಬಾರದು. ಉದ್ಯೋಗ ಸೃಷ್ಟಿಯಿಂದ ಘನ ತ್ಯಾಜ್ಯ ನಿರ್ವಹಣೆವರೆಗೂ ಆಧುನಿಕ ತಂತ್ರಜ್ಞಾನ ಬಳಕೆ ಮಾಡಬೇಕು. ತ್ಯಾಜ್ಯ ವಿಲೇವಾರಿ, ಕೈಗಾರಿಕಾ ತ್ಯಾಜ್ಯ ವಿಲೇವಾರಿ ಎಲ್ಲವೂ ವೈಜ್ಞಾನಿಕವಾಗಿರಬೇಕು. ಆಧುನಿಕ ತಂತ್ರಜ್ಞಾನದ ನೆರವು ಪಡೆಯಬೇಕು. ಬಡಾವಣೆಗಳ ನಿರ್ಮಾಣವಾಗುವ ವೇಳೆ ಚರಂಡಿ, ರಸ್ತೆಗಳು, ಒಳಚರಂಡಿ, ನೀರು, ವಿದ್ಯುತ್ ಜೊತೆಗೆ ಪಾರ್ಕ್ಗಳು ವ್ಯವಸ್ಥಿತವಾಗಿರಬೇಕು ಎಂದರು.
ಮೈಸೂರಿಗೆ ಮತ್ತೊಂದು ಹೊರ ವರ್ತುಲ ರಸ್ತೆ ಅಗತ್ಯವಿದೆ. ಅದಕ್ಕಾಗಿ ಈಗಲೇ ಯೋಜನೆ ರೂಪಿಸಿ. ಆದಾಯವೂ ಹೆಚ್ಚಾಗಬೇಕಾಗಿದ್ದು, ಇದಕ್ಕೆ ಸ್ಪಷ್ಟ ಅಂದಾಜು ಹಾಗೂ ಯೋಜನೆ ರೂಪಿಸಿಕೊಳ್ಳಬೇಕು. ವಿಶಾಲವಾದ ರಸ್ತೆಗಳು ಮೈಸೂರಿನ ಹೆಗ್ಗಳಿಕೆ, ಗ್ರೇಟರ್ ಮೈಸೂರು ಇನ್ನಷ್ಟು ಯೋಜನಾಬದ್ಧವಾಗಿರಬೇಕು. ಜನಸಂಖ್ಯೆಗೆ ಅನುಗುಣವಾಗಿ ಪೌರ ಕಾರ್ಮಿಕರ ಸಂಖ್ಯೆಯೂ ಹೆಚ್ಚಾಗಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಮೈಸೂರಿನ ಸದಸ್ಯದ ಸ್ಥಿತಿ ಏನು ?
ವಿಶ್ವವಿಖ್ಯಾತ ದಸರಾ ಉತ್ಸವ ಸೇರಿದಂತೆ ಹಲವು ಪ್ರವಾಸಿತಾಣಗಳಿಂದ ನೋಡುಗರನ್ನು ತನ್ನತ್ತ ಸೆಳೆಯುವ ಮೈಸೂರು ಸ್ವಚ್ಚತೆಗೂ ಹೆಸರುವಾಸಿಯಾಗಿದೆ. ವಿಶಾಲವಾದ ರಸ್ತೆಗಳು, ಅರಮನೆ, ಚಾಮುಂಡಿ ಬೆಟ್ಟ ಹಾಗೂ ಮೃಗಾಲಯವನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿದೆ. 2011ರ ಪ್ರಕಾರ ನಗರದಲ್ಲಿ 8.93ಲಕ್ಷ ಜನಸಂಖ್ಯೆ ಹೊಂದಿದ್ದು, 2024ರವರೆಗೆ ಅಂದಾಜು 12 ಲಕ್ಷ ಜನಸಂಖ್ಯೆಯನ್ನು ಹೊಂದಿದೆ. ಮೈಸೂರು ನಗರಾಭಿವೃದ್ಧಿ ಪ್ರದೇಶ ಸುಮಾರು 300 ಚದುರ ಕಿ.ಮೀಟರ್ಗಿಂತ ಹೆಚ್ಚು ವಿಸ್ತೀರ್ಣವನ್ನು ಹೊಂದಿದ್ದು ಗ್ರೇಟರ್ ಮೈಸೂರು ಯೋಜನೆ ಜಾರಿಯಾದರೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.

