ರಸ್ತೆಗುಂಡಿ ಮುಚ್ಚುವ ಕಾಮಗಾರಿ ಪರಿಶೀಲನೆಗೆ ನೈಟ್‌ ರೌಂಡ್ಸ್‌: ಡಿಸಿಎಂ ಡಿ.ಕೆ. ಶಿವಕುಮಾರ್
x
ಡಿ.ಕೆ ಶಿವಕುಮಾರ್‌

ರಸ್ತೆಗುಂಡಿ ಮುಚ್ಚುವ ಕಾಮಗಾರಿ ಪರಿಶೀಲನೆಗೆ ನೈಟ್‌ ರೌಂಡ್ಸ್‌: ಡಿಸಿಎಂ ಡಿ.ಕೆ. ಶಿವಕುಮಾರ್

"ಬೆಂಗಳೂರು ನಗರದಲ್ಲಿ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಯ ಗುಣಮಟ್ಟ ವೀಕ್ಷಣೆ ಮಾಡಲು ರಾತ್ರಿ ಸಂಚಾರ ನಡೆಸುತ್ತೇನೆ. ಎರಡು ಮೂರು ದಿನಗಳಲ್ಲಿ ದಿನಾಂಕ ತಿಳಿಸುತ್ತೇನೆ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ


"ಬಿಬಿಎಂಪಿ ವ್ಯಾಪ್ತಿಯಲ್ಲಿ ಕೈಗೊಂಡಿರುವ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಯ ಗುಣಮಟ್ಟ ವೀಕ್ಷಣೆ ಮಾಡಲು ರಾತ್ರಿ ನಗರ ಸಂಚಾರ ನಡೆಸುತ್ತೇನೆ. ಎರಡು ಮೂರು ದಿನಗಳಲ್ಲಿ ದಿನಾಂಕ ತಿಳಿಸುತ್ತೇನೆ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು "ಎಷ್ಟು ರಸ್ತೆಗುಂಡಿಗಳಿವೆ ಎಂಬುದರ ಬಗ್ಗೆ ನನ್ನ ಬಳಿ ಲೆಕ್ಕವಿದೆ. ಅಭಿಯಾನದ ರೀತಿ ಕೆಲಸ ಮಾಡಿದ್ದೇವೆ. ಇದು ಸಾಧನೆಯಲ್ಲ ಜವಾಬ್ದಾರಿ. ನನ್ನ 40 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಆದೇಶ ಕೊಟ್ಟ ಮೇಲೆ ಅಧಿಕಾರಿಗಳು ಇಷ್ಟು ತ್ವರಿತವಾಗಿ ಕೆಲಸ ಮಾಡಿದ್ದನ್ನು ನಾನು ನೋಡಿರಲಿಲ್ಲ" ಎಂದು ಹೇಳಿದರು.

"ರಸ್ತೆಗುಂಡಿಗಳನ್ನು ಮುಚ್ಚಿಸುವ ವಿಚಾರದಲ್ಲಿ ಬಿಬಿಎಂಪಿ ಅಧಿಕಾರಿಗಳು ಹಗಲು- ರಾತ್ರಿ ಕೆಲಸ ಮಾಡುತ್ತಿದ್ದಾರೆ. ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು. ಮಧ್ಯೆ ಮಳೆ ಬಂದಿದೆ. ನೀವು (ಮಾಧ್ಯಮ)ಗಳು ಅಷ್ಟೋ, ಇಷ್ಟೊ ಕೆಲಸ ಮಾಡಿದ್ದಾರೆ ಎಂದು ವರದಿ ಮಾಡಿದ್ದೀರಿ. ನಾವು ಬದ್ಧತೆಯಿಂದ ನಾಗರೀಕರಿಗೆ ಅನುಕೂಲ ಮಾಡುವ ಕೆಲಸ ಮಾಡಿದ್ದೇವೆ" ಎಂದು ಹೇಳಿದರು.

ಬೇರೆ ರಾಜ್ಯಗಳಿಗೆ ಅವಮಾನ ಮಾಡಲು ಇಷ್ಟವಿಲ್ಲ

"ನಾನು ಬೇರೆ ರಾಜ್ಯಗಳಿಗೆಲ್ಲಾ ಭೇಟಿ ನೀಡಿದ್ದೇನೆ. ಅಲ್ಲಿನ ರಸ್ತೆಯ ವಿಡಿಯೋಗಳನ್ನು ಹಾಕಿದರೆ ಆ ರಾಜ್ಯಗಳಿಗೆ ಅವಮಾನವಾಗುತ್ತದೆ. ಅದಕ್ಕಿಂತ ಉತ್ತಮವಾಗಿ ನಮ್ಮವರು ಇಲ್ಲಿನ ರಸ್ತೆಗಳ ಪರಿವರ್ತನೆ ಮಾಡಬೇಕು ಎಂದು ಕೆಲಸ ಮಾಡಿದ್ದಾರೆ. ಅದರಲ್ಲಿ ನಾವು ಯಶಸ್ವಿಯಾಗುತ್ತಿದ್ದೇವೆ" ಎಂದರು.

ಆರ್. ಅಶೋಕ್ ಮೇಲಿನ ಸಂಚು ಕೇಳಿ ದಿಗ್ಬ್ರಮೆ

ಶಾಸಕ ಮುನಿರತ್ನ ಪ್ರಕರಣಗಳ ವಿಚಾರವಾಗಿ ಎಸ್ ಐಟಿ ರಚನೆ ಮಾಡಬೇಕು ಎಂದು ಮುಖ್ಯಮಂತ್ರಿಗಳಿಗೆ ಅನೇಕರು ಒತ್ತಡ ಹಾಕುತ್ತಿದ್ದಾರೆ. ನೀವು ಇದರ ಚರ್ಚೆ ನಡೆಸಿದ್ದೀರಾ ಎಂದು ಕೇಳಿದಾಗ "ನನಗೆ ಸಿಎಂ ಭೇಟಿ ಸಾಧ್ಯವಾಗಿಲ್ಲ. ಆದರೆ ಆರ್. ಅಶೋಕ್ ಮೇಲೆ ಮಾಡಿದ್ದ ಸಂಚು ಕೇಳಿ ದಿಗ್ಬ್ರಮೆಯಾಗಿದ್ದೇನೆ. ಈ ರೀತಿಯ ಸಂಚನ್ನು ನಾನು ಇಡೀ ಪ್ರಪಂಚದಲ್ಲಿಯೇ ಕೇಳಿಲ್ಲ" ಎಂದರು.

"ಮುನಿರತ್ನ ವಿಚಾರವಾಗಿ ಅಶೋಕ್ ಅವರು ಮೊದಲು ಮಾತನಾಡಿದ್ದನ್ನು ಕೇಳಿದ್ದೆ. ಈಗ ಮಾತನಾಡಿದ್ದನ್ನು ನಾನು ನೋಡಿಲ್ಲ. ಅಶೋಕಣ್ಣ, ಸಿ.ಟಿ. ರವಿಯಣ್ಣ, ವಿಜಯೇಂದ್ರಣ್ಣ ಅವರುಗಳು ಮಾತನಾಡಬೇಕು. ಈ ವಿಚಾರದಲ್ಲಿ ಸತ್ಯ ಏನಿದೆ ಎಂದು ತಮ್ಮ ಅಭಿಪ್ರಾಯಗಳನ್ನು ಹೇಳಬೇಕು. ಮುಖ್ಯವಾಗಿ ಕುಮಾರಣ್ಣ, ಡಾ. ಮಂಜುನಾಥ್ ಅವರು ಮಾತನಾಡಬೇಕು. ಯಾರು, ಯಾರಿಗೆ ಏನಾಗಿದೆ ಎಂದು ನಾನು ತಿಳಿದುಕೊಳ್ಳಲು ಆಗಿಲ್ಲ. ಜೆಟ್ ಲ್ಯಾಗ್ ಇರುವ ಕಾರಣಕ್ಕೆ ಮಾಧ್ಯಮಗಳನ್ನು ಸರಿಯಾಗಿ ಗಮನಿಸಲೂ ಆಗಿಲ್ಲ" ಎಂದರು.

ಡಿ.ಕೆ.ಸಹೋದರರ ನೇರ ಷಡ್ಯಂತ್ರ ಎಂದು ವಿಜಯೇಂದ್ರ, ಅಶ್ವಥ್ ನಾರಾಯಣ ಅವರ ಆರೋಪದ ಬಗ್ಗೆ ಕೇಳಿದಾಗ "ಅವರುಗಳು ನನ್ನ ನೆನೆಸಿ ಕೊಳ್ಳುತ್ತಿರಬೇಕು" ಎಂದರು.

ಇಷ್ಟೊಂದು ಆರೋಪಗಳು ಇದ್ದರೂ ಬಿಜೆಪಿ ನಾಯಕರು ಬೆಂಬಲ ನೀಡುತ್ತಿರುವ ಬಗ್ಗೆ ಕೇಳಿದಾಗ "ಬಿಜೆಪಿಯವರ ಸಮರ್ಥನೆ ನಮ್ಮ ರಾಜ್ಯದ ಜನತೆಗೆ ಅರ್ಥವಾಗಬೇಕು" ಎಂದು ಹೇಳಿದರು.

ಕುಮಾರಸ್ವಾಮಿ ಅವರ ಗಂಗೇನಹಳ್ಳಿ ಡಿನೋಟಿಫಿಕೇಷನ್ ಪ್ರಕರಣದ ದಾಖಲೆ ಬಿಡುಗಡೆ ಮಾಡಲಾಗಿದ್ದು, ಮುಂದಿನ ರಾಜಕೀಯ ಹೋರಾಟ ಹೇಗಿರಲಿದೆ ಎಂದು ಕೇಳಿದಾಗ "ಇದರ ಬಗ್ಗೆ ಸಂಪೂರ್ಣ ವಿಚಾರ ಗೊತ್ತಿಲ್ಲ. ತಿಳಿದುಕೊಂಡು ಮಾತನಾಡುತ್ತೇನೆ" ಎಂದಷ್ಟೇ ಹೇಳಿದರು.

Read More
Next Story