
ಸಾಂದರ್ಭಿಕ ಚಿತ್ರ
ತಂದೆ ಸೇದಿ ಬಿಸಾಡಿದ್ದ ಬೀಡಿ ತುಂಡು ನುಂಗಿ ಮಗು ಸಾವು
ಬೀಡಿ ತುಂಡು ನುಂಗಿದ ಮಗುವನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಮಗು ಮೃತಪಟ್ಟಿದೆ,
ತಂದೆ ಸೇದಿ ಬಿಸಾಡಿದ್ದ ಬೀಡಿಯ ತುಂಡು ನುಂಗಿದ ಹತ್ತು ತಿಂಗಳ ಮಗುವೊಂದು ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮಂಗಳೂರಿನ ಅಡ್ಯಾರ್ನಲ್ಲಿ ವಾಸವಿದ್ದ ಬಿಹಾರ ಮೂಲದ ದಂಪತಿಯ ಮಗು ಅನೀಶ್ ಕುಮಾರ್ ಮೃತಪಟ್ಟಿದೆ. ಶನಿವಾರ ಮಧ್ಯಾಹ್ನ ಸುಮಾರು 1.30 ರ ಸುಮಾರಿಗೆ ಅರ್ಧ ಸೇದಿ ಬಿಸಾಡಿದ್ದ ಬೀಡಿ ತುಂಡನ್ನು ಮಗು ನುಂಗಿದ್ದು, ಅಸ್ವಸ್ಥಗೊಂಡಿದೆ. ಕೂಡಲೇ ಪೋಷಕರು ಮಗುವನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು. ಆದರೆ, ಚಿಕಿತ್ಸೆ ಫಲಿಸದೇ ಮಗು ಭಾನುವಾರ ಬೆಳಿಗ್ಗೆ 10.25ರ ಸುಮಾರಿಗೆ ಮೃತಪಟ್ಟಿದೆ. ಈ ಸಂಬಂಧ ಮಂಗಳವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
ತನ್ನ ಪತಿಯ ನಿರ್ಲಕ್ಷ್ಯದಿಂದಲೇ ಮಗು ಬೀಡಿಯ ತುಂಡನ್ನು ನುಂಗಿ ಮೃತಪಟ್ಟಿದೆ. ಮನೆಯೊಳಗೆ ಬೀಡಿ ಸೇದಿ ಬಿಸಾಡದಂತೆ ಪತಿಗೆ ಹಲವು ಬಾರಿ ಎಚ್ಚರಿಸಿದ್ದರೂ ಕೇಳಿರಲಿಲ್ಲ. ಇದರ ಪರಿಣಾಮ ಮಗು ಪ್ರಾಣ ಕಳೆದುಕೊಂಡಿದೆ ಎಂದು ಮಗುವಿನ ತಾಯಿ ಲಕ್ಷ್ಮಿದೇವಿ ದೂರು ನೀಡಿದ್ದಾರೆ. ಮಂಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.