
ಪರಪ್ಪನ ಅಗ್ರಹಾರದಲ್ಲಿ ನಿಷೇಧಿತ ವಸ್ತುಗಳು ವಶಕ್ಕೆ
Parappana Agrahara| ಕೇಂದ್ರ ಕಾರಾಗೃಹಕ್ಕೆ ಸಿಸಿಬಿ ದಾಳಿ: ಡ್ರಗ್ಸ್, ಮಾರಕಾಸ್ತ್ರ ಪತ್ತೆ
ಪರಪ್ಪನ ಅಗ್ರಹಾರದಲ್ಲಿ ಪೊಲೀಸರು ನಡೆಸಿದ ದಾಳಿ ವೇಳೆ ಚಾಕು, ಕತ್ತರಿ, ಸಿಗರೇಟು ಸೇರಿದಂತೆ ಹಲವು ನಿಷೇಧಿತ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಅಧಿಕಾರಿಗಳು ಮಂಗಳವಾರ ಸಂಜೆ ದಾಳಿ ನಡೆಸಿದ್ದು, ದಾಳಿ ವೇಳೆ ಚಾಕು, ಕತ್ತರಿ, ಸಿಗರೇಟು ಸೇರಿದಂತೆ ಹಲವು ನಿಷೇಧಿತ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ .
ಕೈದಿಗಳ ಕೆಲವು ಬ್ಯಾರಕ್ (ಕೈದಿಗಳು ಇರುವ ಸ್ಥಳ) ತಂಬಾಕು ಉತ್ಪನ್ನಗಳಾದ ಚೈನಿ, ಸ್ವಾಗತ್ ಗೋಲ್ಡ್, ಗಾಂಜಾ ಸೇದಲು ಕೈದಿಗಳು ಬಳಸುತ್ತಿದ್ದ ಕೊಳವೆಗಳು, ಚಾಕು, ಟ್ರಿಮರ್, ಕತ್ತರಿ, ಮೊಬೈಲ್ ಚಾರ್ಜರ್, ಬೆಂಕಿ ಪೊಟ್ಟಣ, ಲೈಟರ್, ಪ್ಲೇ ಕಾರ್ಡ್ಸ್, ಆಟದ ಬಳಿಕ ಸಂಖ್ಯೆ ಬರೆದುಕೊಳ್ಳಲು ಕೈದಿಗಳು ಉಪಯೋಗಿಸಿದ್ದ ಪುಸ್ತಕ, ಬಿಸಿ ನೀರು ಕಾಯಿಸುವ ಕಾಯಲ್, ಆಯುಧಗಳು, ಕಬ್ಬಿಣದ ರಾಡುಗಳು ಪತ್ತೆಯಾಗಿವೆ. ಇಬ್ಬರು ಕೈದಿಗಳ ಬಳಿಯಿದ್ದ 16 ಸಾವಿರ ರೂ ನಗದು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.
ಆಪ್ತ ಸಮಾಲೋಚಕರ ಬಂಧನ
ಕಾರಾಗೃಹದಲ್ಲಿರುವ ವಿಚಾರಣಾಧೀನ ಹಾಗೂ ಸಜಾ ಕೈದಿಗಳಿಗೆ ಕದ್ದುಮುಚ್ಚಿ ಮೊಬೈಲ್ ಪೂರೈಸುತ್ತಿದ್ದ ಕಾರಾಗೃಹ ಆಸ್ಪತ್ರೆಯ ಇಬ್ಬರು ಆಪ್ತ ಸಮಾಲೋಚಕರನ್ನು ಕಳೆದ ವಾರ ಬಂಧಿಸಲಾಗಿತ್ತು. ಹೊರ ಗುತ್ತಿಗೆ ಆಧಾರದಲ್ಲಿ ಆಪ್ತ ಸಮಾಲೋಚಕರಾಗಿ ಕೆಲಸ ಮಾಡುತ್ತಿದ್ದ ನವ್ಯಶ್ರೀ (33) ಮತ್ತು ಸೃಜನ್ (33) ಎಂಬವರು, ಕಾವಲು ಸಿಬ್ಬಂದಿಯ ಕಣ್ತಪ್ಪಿಸಿ ಕೈದಿಗಳಿಗೆ ಮೊಬೈಲ್ ಪೂರೈಸುತ್ತಿದ್ದರು.
ನವ್ಯಶ್ರೀ ಅವರು ತಮ್ಮ ಬ್ಯಾಗ್ನಲ್ಲಿ ಮೊಬೈಲ್ ಬಚ್ಚಿಟ್ಟುಕೊಂಡು ಜೈಲಿನ ಒಳಕ್ಕೆ ಹೋಗಲು ಯತ್ನಿಸಿದ್ದರು. ಆಗ ಪ್ರವೇಶ ದ್ವಾರದಲ್ಲಿದ್ದ ಸಿಬ್ಬಂದಿ ಬ್ಯಾಗ್ ಪರಿಶೀಲನೆ ನಡೆಸಿದಾಗ ಮೊಬೈಲ್ ಪತ್ತೆ ಆಗಿತ್ತು. ಬಂಧಿತರನ್ನು ವಿಚಾರಣೆ ನಡೆಸಿದಾಗ ಜೈಲಿನ ಒಳಗೆ ಕೆಲವು ಅಕ್ರಮ ಚಟುವಟಿಕೆ ನಡೆಯುತ್ತಿರುವುದು ಬಹಿರಂಗಗೊಂಡಿತ್ತು.
ಹಿಂದೆಯೂ ದಾಳಿ ನಡೆದಿತ್ತು
ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರು ನ್ಯಾಯಾಂಗ ಬಂಧನದಲ್ಲಿದ್ದ ವೇಳೆ ಅವರಿಗೆ ವಿಶೇಷ ಆತಿಥ್ಯ ಕಲ್ಪಿಸಿದ್ದ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ವಿಶೇಷ ಆತಿಥ್ಯ ಪ್ರಕರಣದ ಬಳಿಕ ಸೆಪ್ಟಂಬರ್ನಲ್ಲಿ ಸಿಸಿಬಿ ದಾಳಿ ನಡೆಸಿತ್ತು. ಆಗಲೂ ಮೊಬೈಲ್, ಪೆನ್ಡ್ರೈವ್, ಚಾಕು ಪತ್ತೆ ಆಗಿದ್ದವು. ಕಳೆದ ಮೇ 25ರಂದು ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಪೊಲೀಸರು ದಾಳಿ ನಡೆಸಿದಾಗ ನಗದು, ಚಾಕು, ಮೊಬೈಲ್ ಹಾಗೂ ಎಲೆಕ್ಟ್ರಿಕ್ ಸ್ಟೇ ಪತ್ತೆ ಆಗಿದ್ದವು.
ಕಳೆದ ಮೇ ತಿಂಗಳಿನಲ್ಲಿಯೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆದ ಶೋಧ ಕಾರ್ಯದ ವೇಳೆ ನಗದು, ಮೊಬೈಲ್ ಫೋನ್, ಚಾಕುಗಳು ಮತ್ತು ಇಂಡಕ್ಷನ್ ಸ್ಟೌವ್ ಪತ್ತೆಯಾಗಿತ್ತು.