ಸಿಸಿಬಿ ಪೊಲೀಸ್ ಇನ್‌ಸ್ಪೆಕ್ಟರ್ ಸಾವು ಪ್ರಕರಣ: ಆತ್ಮಹತ್ಯೆಯಲ್ಲ ಕೊಲೆ- ಕುಟುಂಬಸ್ಥರ ಆರೋಪ
x

ಸಿಸಿಬಿ ಪೊಲೀಸ್ ಇನ್‌ಸ್ಪೆಕ್ಟರ್ ಸಾವು ಪ್ರಕರಣ: ಆತ್ಮಹತ್ಯೆಯಲ್ಲ ಕೊಲೆ- ಕುಟುಂಬಸ್ಥರ ಆರೋಪ


ಸಿಸಿಬಿ ಪೊಲೀಸ್ ಇನ್‌ಸ್ಪೆಕ್ಟರ್​ ತಿಮ್ಮೇಗೌಡ ಎಂಬವರು ರಾಮನಗರ ಜಿಲ್ಲೆಯ ಬಿಡದಿ ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯ ನಿರ್ಜನ ಪ್ರದೇಶದಲ್ಲಿ ಸೋಮವಾರ ಸಾವಾಗಿದ್ದು, ನೇಣುಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಕುಟುಂಬಸ್ಥರು ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಆರೋಪಿಸಿದ್ದಾರೆ.

ತಿಮ್ಮೇಗೌಡ ಅವರು ಈ ಹಿಂದೆ ಕುಂಬಳಗೋಡಿನ ಇನ್‌ಸ್ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಎರಡು ತಿಂಗಳ ಹಿಂದೆ ಸಿಸಿಬಿಗೆ ವರ್ಗಾವಣೆಗೊಂಡಿದ್ದರು. ಬೆಂಗಳೂರು ಸಿಸಿಬಿಯ ಆರ್ಥಿಕ ಅಪರಾಧ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಸೋಮವಾರ ತಮ್ಮ ತೋಟದ ಜಾಗದಲ್ಲಿ ಮರಕ್ಕೆ ನೇಣು ಬಿಗಿದುಕೊಂಡಿದ್ದಾರೆ. ಬಿಡದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕಳೆದ ವರ್ಷ ಆನೇಕಲ್‌ನಲ್ಲಿ ಪಟಾಕಿ ದುರಂತ ನಡೆದಿತ್ತು. ಆಗ ಇಲ್ಲಿ ಇನ್ಸ್‌ಪೆಕ್ಟರ್‌ ಆಗಿದ್ದ ತಿಮ್ಮೇಗೌಡ ಅವರು ಪಟಾಕಿ ಅಂಗಡಿಗೆ ಅನುಮತಿ ನೀಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡಲಾಗಿತ್ತು. ನಂತರ ನಡೆದ ಇಲಾಖಾ ವಿಚಾರಣೆ ವೇಳೆ ಅವರಿಗೆ ಕ್ಲೀನ್‌ ಚಿಟ್‌ ಸಿಕ್ಕಿತ್ತು. ಪ್ರಕರಣದಲ್ಲಿ ಕ್ಲೀನ್‌ ಚಿಟ್‌ ಸಿಕ್ಕಿದ ನಂತರ ಸಿಸಿಬಿಯಲ್ಲಿ ಇನ್ಸ್‌ಪೆಕ್ಟರ್‌ ಆಗಿದ್ದರು. ಆದರೂ ಕೂಡಾ ಅವರು ತೀವ್ರ ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗುತ್ತಿದೆ. ತೀವ್ರ ಮಾನಸಿಕ ಒತ್ತಡ ಅನುಭವಿಸಿದ್ದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಕೊಲೆ ಆರೋಪ: ಕುಟುಂಬಸ್ಥರು ಮೈಸೂರಿನಲ್ಲಿ ಇದ್ದ ಕಾರಣ ಕುಟುಂಬಸ್ಥರ ಸಮ್ಮುಖದಲ್ಲಿಯೇ ಶವವನ್ನು ತೆಗೆಯಲು ಪೊಲೀಸರು ಕಾಯುತ್ತಿದ್ದರು. ನಂತರ ಸ್ಥಳಕ್ಕೆ ಬಂದ ಕುಟುಂಬಸ್ಥರು, ʻʻತಿಮ್ಮೇಗೌಡ ಆತ್ಮಹತ್ಯೆ ಮಾಡಿಕೊಳ್ಳುವ ಸ್ವಭಾವದವರಲ್ಲ. ಯಾರೋ ಹೊಡೆದು ಕೊಲೆ ಮಾಡಿದ್ದಾರೆʼʼ ಎಂದು ಶಂಕೆ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಸ್ವಲ್ಪ ಸಮಯ ಪೊಲೀಸರು ಹಾಗೂ ಕುಟುಂಬದವರ ನಡುವೆ ಮಾತಿನ ಚಕಮಕಿ‌ ನಡೆಯಿತು. ಶವವನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗದಂತೆ ಕೂಡ ಆಂಬ್ಯುಲೆನ್ಸ್ ತಡೆದರು.

ನಂತರ ಹಿರಿಯ ಪೊಲೀಸ್​ ಅಧಿಕಾರಿಗಳು ಮಧ್ಯ ಪ್ರವೇಶಿಸಿ, ಕುಟುಂಬಸ್ಥರ ಮನವೊಲಿಸಿ ಶವವನ್ನು ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಗೆ ರವಾನಿಸಿದರು. ಈ ಬಗ್ಗೆ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯಾದಗಿರಿಯಲ್ಲಿ ಪಿಎಸ್‌ಐ ಪರಶುರಾಮ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ರಾಜ್ಯ ಸರ್ಕಾರಕ್ಕೆ ಮುಜುಗರ ಸೃಷ್ಟಿಸುವ ಬೆನ್ನಲ್ಲೇ ಇನ್ನೊಬ್ಬ ಎಸ್‌ಐ ಆತ್ಮಹತ್ಯೆ ಪ್ರಕರಣ ನಡೆದಿದೆ. ಪಿಎಸ್‌ಐ ಪರಶುರಾಮ್ ಅವರ ಟ್ರಾನ್ಸ್‌ಫರ್‌ಗಾಗಿ ಲಂಚ ಕೇಳಿದ ಸ್ಥಳೀಯ ಶಾಸಕ ಹಾಗೂ ಆತನ ಪುತ್ರನ ಮೇಲೆ ದೂರು ದಾಖಲಾಗಿದೆ.

Read More
Next Story