
2 ದಿನಗಳ ಕಾಲ ನೀರಿನ ಸರಬರಾಜು ವ್ಯತ್ಯಯವಾಗಲಿದೆ.
ಬೆಂಗಳೂರಿನ ಹಲವೆಡೆ ಎರಡು ದಿನ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ
ಸೆಪ್ಟೆಂಬರ್ 19 ಮತ್ತು 20ರಂದು ಎರಡು ದಿನಗಳ ಕಾಲ ನಗರದ ಕೆಲವು ಪ್ರದೇಶಗಳಲ್ಲಿ ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ನಾಗರಬಾವಿ ಬಿ.ಡಿ.ಎ. ಕಾಂಪ್ಲೆಕ್ಸ್ ಬಳಿ ಕಾವೇರಿ ನೀರಿನ ಮುಖ್ಯ ಪೈಪ್ಲೈನ್ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ, ಸೆಪ್ಟೆಂಬರ್ 19 ಮತ್ತು 20 ರಂದು (ಶುಕ್ರವಾರ ಮತ್ತು ಶನಿವಾರ) ನಗರದ ಕೆಲವು ಪ್ರದೇಶಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ತಿಳಿಸಿದೆ.
ನಾಗರಬಾವಿ ಪ್ರದೇಶದಲ್ಲಿರುವ 600 ಮಿಲಿಮೀಟರ್ ವ್ಯಾಸದ ಪ್ರಮುಖ ಪೈಪ್ಲೈನ್ನಲ್ಲಿ ಈ ಕಾಮಗಾರಿ ನಡೆಯಲಿದೆ. ಇರ ಪರಿಣಾಮವಾಗಿ, ವಿಜಯನಗರ, ಬನವಾಸಿ ರಸ್ತೆ, ಕೋರಮಂಗಲ, ಗಾಂಧಿನಗರ ಮತ್ತು ಬಿ.ಡಿ.ಎ. ಕಾಂಪ್ಲೆಕ್ಸ್ ಸುತ್ತಮುತ್ತಲಿನ ಪ್ರದೇಶಗಳು ಹಾಗೂ ಇತರ ಹತ್ತಿರದ ಬಡಾವಣೆಗಳಲ್ಲಿ ಕಾವೇರಿ ನೀರು ಪೂರೈಕೆಯು ಅಸ್ತವ್ಯಸ್ತಗೊಳ್ಳಲಿದೆ.
ಈ ತುರ್ತು ಕಾಮಗಾರಿಯಿಂದ ಸಾರ್ವಜನಿಕರಿಗೆ ಉಂಟಾಗುವ ಅನಾನುಕೂಲತೆಗಾಗಿ ಜಲಮಂಡಳಿಯು ವಿಷಾದ ವ್ಯಕ್ತಪಡಿಸಿದೆ. ನಾಗರಿಕರು ಈ ಎರಡು ದಿನಗಳ ಕಾಲ ನೀರನ್ನು ಮಿತವಾಗಿ ಬಳಸಬೇಕು, ಅಗತ್ಯವಿರುವಷ್ಟು ನೀರನ್ನು ಮುಂಚಿತವಾಗಿ ಸಂಗ್ರಹಿಸಿಟ್ಟುಕೊಳ್ಳಬೇಕು ಮತ್ತು ಮಂಡಳಿಯೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದೆ.