Caste survey: High Court refuses to stay for now; hearing adjourned till tomorrow
x

ಸಾಂದರ್ಭಿಕ ಚಿತ್ರ

ಜಾತಿ ಸಮೀಕ್ಷೆ: ಸದ್ಯಕ್ಕೆ ತಡೆ ನೀಡಲು ಹೈಕೋರ್ಟ್ ನಕಾರ; ವಿಚಾರಣೆ ನಾಳೆಗೆ ಮುಂದೂಡಿಕೆ

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲರಾದ ವಿವೇಕ್ ರೆಡ್ಡಿ ಮತ್ತು ಪ್ರಭುಲಿಂಗ ನಾವದಗಿ, "ಹಿಂದುಳಿದ ವರ್ಗಗಳ ಆಯೋಗ ಕಾಯಿದೆಗೆ ತಿದ್ದುಪಡಿ ಮಾಡಿರುವ ಸೆಕ್ಷನ್ 9 ಅನ್ನು ನಾವು ಪ್ರಶ್ನಿಸಿದ್ದೇವೆ ಎಂದು ತಿಳಿಸಿದರು.


Click the Play button to hear this message in audio format

ರಾಜ್ಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿರುವ "ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಸಮೀಕ್ಷೆ"ಗೆ (ಜಾತಿ ಸಮೀಕ್ಷೆ) ಮಧ್ಯಂತರ ತಡೆ ನೀಡಲು ಕರ್ನಾಟಕ ಹೈಕೋರ್ಟ್ ಸೋಮವಾರ ನಿರಾಕರಿಸಿದೆ. ಆದರೆ, ಪ್ರಕರಣದ ಅಂತಿಮ ವಿಚಾರಣೆಯನ್ನು ನಡೆಸುವ ಮಹತ್ವದ ಸೂಚನೆಯನ್ನು ನೀಡಿದ್ದು, ವಿಚಾರಣೆಯನ್ನು ಮಂಗಳವಾರ ಮಧ್ಯಾಹ್ನ 2.30ಕ್ಕೆ ಮುಂದೂಡಿದೆ.

ರಾಜ್ಯ ಒಕ್ಕಲಿಗರ ಸಂಘ ಮತ್ತು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸೇರಿದಂತೆ ಹಲವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಭಕ್ರು ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಅರ್ಜಿದಾರರ ಪ್ರಬಲ ವಾದ

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲರಾದ ವಿವೇಕ್ ರೆಡ್ಡಿ ಮತ್ತು ಪ್ರಭುಲಿಂಗ ನಾವದಗಿ, "ಹಿಂದುಳಿದ ವರ್ಗಗಳ ಆಯೋಗ ಕಾಯಿದೆಗೆ ತಿದ್ದುಪಡಿ ಮಾಡಿರುವ ಸೆಕ್ಷನ್ 9 ಅನ್ನು ನಾವು ಪ್ರಶ್ನಿಸಿದ್ದೇವೆ. ಸಮೀಕ್ಷೆಯು ಗಣತಿಯ ಸ್ವರೂಪದಲ್ಲಿದ್ದು, ಇದನ್ನು ನಡೆಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಆದ್ದರಿಂದ, ಸರ್ಕಾರದ ಅಧಿಸೂಚನೆಗೆ ತಡೆ ನೀಡಬೇಕು. ಈ ಅರ್ಜಿಗಳು ಇತ್ಯರ್ಥವಾಗುವವರೆಗೂ ಸಮೀಕ್ಷೆಯನ್ನು ಮುಂದುವರಿಸಬಾರದು" ಎಂದು ಬಲವಾಗಿ ವಾದಿಸಿದರು. "ಒಮ್ಮೆ ದತ್ತಾಂಶ ಸಂಗ್ರಹವಾದರೆ, ನಮ್ಮ ಅರ್ಜಿಗಳು ಅನೂರ್ಜಿತವಾಗುತ್ತವೆ" ಎಂಬ ಆತಂಕವನ್ನು ಅವರು ಪೀಠದ ಮುಂದೆ ವ್ಯಕ್ತಪಡಿಸಿದರು.

ಸರ್ಕಾರದ ಪರ ಸಿಂಘ್ವಿ ಪ್ರತಿವಾದ

ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಹಾಗೂ ಸಂಸದ ಡಾ. ಅಭಿಷೇಕ್ ಮನು ಸಿಂಘ್ವಿ, ಮಧ್ಯಂತರ ತಡೆ ನೀಡುವ ಮನವಿಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. "ಇದು ಜಾತಿ ಗಣತಿಯಲ್ಲ, ಕೇವಲ ಸಮೀಕ್ಷೆ ಮಾತ್ರ. ಇಂದಿರಾ ಸಾಹ್ನಿ ಪ್ರಕರಣದಲ್ಲಿ, ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲು ಬೇಕಾದ ದತ್ತಾಂಶವನ್ನು ಸಂಗ್ರಹಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ನಾವು ಅದೇ ಕಾರ್ಯವನ್ನು ಮಾಡುತ್ತಿದ್ದೇವೆ" ಎಂದು ಸಮರ್ಥಿಸಿಕೊಂಡರು.

"ಅರ್ಜಿದಾರರು ಕೊನೆ ಕ್ಷಣದಲ್ಲಿ ನ್ಯಾಯಾಲಯದ ಮೊರೆ ಬಂದಿದ್ದಾರೆ. ಈ ಸಮೀಕ್ಷೆಗಾಗಿ ಸರ್ಕಾರವು ಈಗಾಗಲೇ 450 ಕೋಟಿ ರೂಪಾಯಿ ಬಜೆಟ್ ಮೀಸಲಿಟ್ಟಿದೆ. ಸುಮಾರು ಎರಡು ಕೋಟಿ ಕುಟುಂಬಗಳಿಗೆ ಸಮೀಕ್ಷೆಯ ಪ್ರತಿಗಳನ್ನು ವಿತರಿಸಲಾಗಿದೆ. ಶಿಕ್ಷಕರು, ಆಶಾ ಕಾರ್ಯಕರ್ತೆಯರು ಸೇರಿದಂತೆ ಮಾನವ ಸಂಪನ್ಮೂಲವನ್ನು ಸಜ್ಜುಗೊಳಿಸಲಾಗಿದೆ. ದಸರಾ ರಜೆಯನ್ನು ಬಳಸಿಕೊಂಡು ಈ ಕಾರ್ಯವನ್ನು ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಇಂತಹ ಸಂದರ್ಭದಲ್ಲಿ ತಡೆ ನೀಡುವುದು ಸೂಕ್ತವಲ್ಲ" ಎಂದು ಸಿಂಘ್ವಿ ವಾದಿಸಿದರು.

"2014ರಲ್ಲೇ ಈ ಸಮೀಕ್ಷೆ ಆರಂಭವಾಗಿ, 2024ರಲ್ಲಿ ವರದಿ ನೀಡಲಾಗಿತ್ತು. ಆ ಹಳೆಯ ದತ್ತಾಂಶವನ್ನು ನವೀಕರಿಸಲು (update) ಈಗ ಹೊಸ ಸಮೀಕ್ಷೆ ನಡೆಸಲಾಗುತ್ತಿದೆ. ದತ್ತಾಂಶ ಸಂಗ್ರಹಿಸುವ ವಿಚಾರದಲ್ಲಿ ಮತ್ತು ಸರ್ಕಾರದ ನೀತಿ ನಿರೂಪಣೆಯಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಬಾರದು," ಎಂದು ಅವರು ಮನವಿ ಮಾಡಿದರು.

ಪೀಠದ ಅಭಿಪ್ರಾಯ ಮತ್ತು ನಿರ್ಧಾರ

ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಪೀಠವು, "ಸದ್ಯಕ್ಕೆ ಮಧ್ಯಂತರ ತಡೆ ನೀಡಲು ಸಾಧ್ಯವಿಲ್ಲ. ನಾವು ಪ್ರಕರಣದ ಅಂತಿಮ ವಿಚಾರಣೆಯನ್ನು ನಡೆಸಲು ಬಯಸುತ್ತೇವೆ. ಮಧ್ಯಂತರ ಪರಿಹಾರವನ್ನು ಪರಿಗಣಿಸಲು ನಾವು ಬಯಸುವುದಿಲ್ಲ" ಎಂದು ಸ್ಪಷ್ಟಪಡಿಸಿತು.

"ಸಂಗ್ರಹಿಸಿದ ದತ್ತಾಂಶವನ್ನು ನಂತರ ಹೇಗೆ ರದ್ದುಗೊಳಿಸಲು ಸಾಧ್ಯ?" ಎಂದು ಅರ್ಜಿದಾರರ ಆತಂಕಕ್ಕೆ ಧ್ವನಿಗೂಡಿಸಿದ ಪೀಠವು, ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಹಕರಿಸಲು "ಅಮಿಕಸ್ ಕ್ಯೂರಿ" (ನ್ಯಾಯಾಲಯದ ಮಿತ್ರ) ಅವರನ್ನು ನೇಮಿಸುವ ಚಿಂತನೆ ಇದೆ ಎಂದು ತಿಳಿಸಿತು.

ಕೇಂದ್ರ ಸರ್ಕಾರದ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್ ಅವರು, "ಇದು ಗಣತಿಯಲ್ಲದೆ ಬೇರೇನೂ ಅಲ್ಲ" ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಅಂತಿಮವಾಗಿ, ಎಲ್ಲಾ ವಾದಗಳನ್ನು ಪರಿಶೀಲಿಸುವುದಾಗಿ ತಿಳಿಸಿದ ಪೀಠವು, ವಿಚಾರಣೆಯನ್ನು ಮಂಗಳವಾರ ಮಧ್ಯಾಹ್ನ 2.30ಕ್ಕೆ ಮುಂದೂಡಿತು. ಈ ಮೂಲಕ, ರಾಜ್ಯದಲ್ಲಿ ಇಂದಿನಿಂದ ಆರಂಭವಾಗಿರುವ ಜಾತಿ ಸಮೀಕ್ಷೆಯ ಭವಿಷ್ಯವು ಹೈಕೋರ್ಟ್‌ನ ಅಂತಿಮ ತೀರ್ಪನ್ನು ಅವಲಂಬಿಸಿದೆ.

Read More
Next Story