Caste census resurvey drama to hide stampede tragedy: R. Ashok
x

ಸಿಎಂ ಸಿದ್ದರಾಮಯ್ಯ ಹಾಗೂ ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌

Stampede |ಕಾಲ್ತುಳಿತ ದುರಂತ ಮರೆಮಾಚಲು ಮರು ಸಮೀಕ್ಷೆ ನಾಟಕ: ಆರ್‌. ಅಶೋಕ್‌ ಕಿಡಿ

90 ದಿನಗಳಲ್ಲಿ ಜಾತಿಗಣತಿ ಮರು ಸಮೀಕ್ಷೆ ನಡೆಸುವ ಬಗ್ಗೆ ಹಲವು ಗಂಭೀರ ಪ್ರಶ್ನೆಗಳು ಎದುರಾಗಿವೆ. ಕಾಲ್ತುಳಿತ ದುರಂತ ಮರೆಮಾಚಲು ಮರು ಸಮೀಕ್ಷೆ ನಾಟಕವಾಡುತ್ತಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌ ಆರೋಪಿಸಿದ್ದಾರೆ.


ಆರ್‌ಸಿಬಿ ವಿಜಯೋತ್ಸವದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತ ಮರೆಮಾಚಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹೈಕಮಾಂಡ್ ಸೇರಿಕೊಂಡು ಜಾತಿಗಣತಿ ಮರು ಸಮೀಕ್ಷೆಯ ನಾಟಕವಾಡುತ್ತಿದ್ದಾರೆ. ಇದು ಸಾರ್ವಜನಿಕರ ಗಮನ ಬೇರೆಡೆಗೆ ಸೆಳೆಯುವ ಪ್ರಯತ್ನವಾಗಿದೆ ಎಂದು ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಆರೋಪಿಸಿದ್ದಾರೆ.

ಜಾತಿ ಜನಗಣತಿ ಮರು ಸಮೀಕ್ಷೆ ಕುರಿತ ಸರ್ಕಾರದ ನಿಲುವು ಪ್ರಶ್ನಿಸಿರುವ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ತಮ್ಮ ʼಎಕ್ಸ್‌ʼ ಖಾತೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೈಕಮಾಂಡ್ ಹೇಳಿದರಷ್ಟೇ ಕೇಳುವುದಾ?

ಕಾಂತರಾಜು ಆಯೋಗದ ವರದಿ ಅವೈಜ್ಞಾನಿಕ, ಅಪೂರ್ಣ ಎಂದು ಮಠಾಧೀಶರು, ಸಮುದಾಯಗಳ ಮುಖಂಡರು ಹಾಗೂ ಕಾಂಗ್ರೆಸ್ ಪಕ್ಷದ ಅನೇಕ ಜನಪ್ರತಿನಿಧಿಗಳು ವಿರೋಧ ಮಾಡುತ್ತಿದ್ದರೂ ಅದನ್ನು ಬಲವಾಗಿ ಸಮರ್ಥಿಸಿಕೊಂಡು, ಸಂಪುಟದ ಮುಂದೆ ತರಲು ಹಠ ಮಾಡಿದ್ದೀರಿ. ಆದರೆ, ಈಗ ಹೈಕಮಾಂಡ್ ಹೇಳಿದ ತಕ್ಷಣವೇ ಮರು ಸಮೀಕ್ಷೆಯ ತೀರ್ಮಾನಕ್ಕೆ ಒಪ್ಪಿಗೆ ನೀಡಿದ್ದೀರಿ, ನೀವು ಹೈಕಮಾಂಡ್‌ ಹೇಳಿದಂತೆ ಮಾತ್ರ ಕೇಳಿದ್ದೀರಿ ಎಂದು ಟೀಕೆ ಮಾಡಿದ್ದಾರೆ.

ಸಮೀಕ್ಷೆ ನಡೆಸುವವರು ಯಾರು

ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದಂತೆ 90 ದಿನಗಳ ಕಾಲಮಿತಿಯಲ್ಲಿ ಸಮೀಕ್ಷೆ ನಡೆಸುವ ಬಗ್ಗೆ ಹಲವು ಗಂಭೀರ ಪ್ರಶ್ನೆಗಳು ಎದುರಾಗಿವೆ. ಪ್ರಸ್ತುತ ಸನ್ನಿವೇಶದಲ್ಲಿ ಈ ಸಮೀಕ್ಷೆ ಹೇಗೆ ನಡೆಸಬೇಕು, ಯಾರು ಮಾಡುತ್ತಾರೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿದೆ. ಶಾಲೆಗಳು ಈಗಾಗಲೇ ಆರಂಭವಾಗಿರುವುದರಿಂದ ಸಮೀಕ್ಷೆಗೆ ಶಿಕ್ಷಕರ ಬಳಕೆ ಅಸಾಧ್ಯ. ಒಂದು ವೇಳೆ ಬಳಸಿಕೊಂಡರೆ ಶೈಕ್ಷಣಿಕ ಚಟುವಟಿಕೆಗಳು ಸ್ಥಗಿತಗೊಳ್ಳಲಿವೆ. ಮಕ್ಕಳ ಭವಿಷ್ಯದ ಮೇಲೂ ನೇರ ಪರಿಣಾಮ ಬೀರಲಿದೆ. ಹೀಗಿರುವಾಗ ಸಮೀಕ್ಷೆಗೆ ಸರ್ಕಾರ ಯಾರನ್ನು ನಿಯೋಜಿಸಲಿದೆ ಎಂದು ಅಶೋಕ್‌ ಪ್ರಶ್ನಿಸಿದ್ದಾರೆ.

ಆನ್‌ಲೈನ್ ಸಮೀಕ್ಷೆ ಅವಿವೇಕದ ಕ್ರಮ

ಆನ್‌ಲೈನ್ ಮೂಲಕ ಸಮೀಕ್ಷೆ ನಡೆಸುವ ಚಿಂತನೆ ಮತ್ತೊಂದು ಅವಿವೇಕದ ಕ್ರಮವೆಂದು ತೋರುತ್ತಿದೆ. ಅನೇಕ ಅಕ್ಷರಸ್ಥರೇ ಇಂದಿಗೂ ಆನ್‌ಲೈನ್ ವ್ಯವಸ್ಥೆಯಿಂದ ದೂರ ಇರುವಾಗ, ಇಂತಹ ಸಮೀಕ್ಷೆ ಹೇಗೆ ಸಾಧ್ಯ? ಇದರಿಂದ ಮಾಹಿತಿಯ ನಿಖರತೆ ಮತ್ತು ಗುರುತು ಪತ್ತೆ ಹೇಗೆ ಸಾಧ್ಯವಾಗುತ್ತದೆ?, ತಪ್ಪು ದಾಖಲಾತಿಗಳನ್ನು ತಡೆಯಲು ಸರ್ಕಾರ ಏನು ಕ್ರಮ ತೆಗೆದುಕೊಳ್ಳಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

167 ಕೋಟಿ ರೂ. ವೆಚ್ಚಕ್ಕೆ ಹೊಣೆ ಯಾರು?

ಜಾತಿ ಜನಗಣತಿಗಾಗಿ ಈಗಾಗಲೇ ಖರ್ಚಾಗಿರುವ 167 ಕೋಟಿ ರೂ. ಹಣಕ್ಕೆ ಯಾರು ಹೊಣೆಗಾರರು?, ಈ ಹಿಂದೆ ಸಿದ್ಧಪಡಿಸಿದ್ದ ಕಾಂತರಾಜು, ಜಯಪ್ರಕಾಶ್ ಹೆಗ್ಡೆ ವರದಿಗೆ ಈಗ ಎಳ್ಳು ನೀರು ಬಿಟ್ಟಂತಾಗಿದೆ. ಆ ವರದಿಗೆ ತೆರಿಗೆದಾರರ 167 ಕೋಟಿ ರೂ. ವ್ಯಯ ಮಾಡಲಾಗಿದೆ. ಈ ಹಣವನ್ನು ಯಾರಿಂದ ವಸೂಲಿ ಮಾಡುತ್ತೀರಿ?, ಯಾರನ್ನು ಹೊಣೆ ಮಾಡುತ್ತೀರಿ ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಅಶೋಕ್‌ ಪ್ರಶ್ನಿಸಿದ್ದಾರೆ.

ಸರ್ಕಾರಕ್ಕೆ ನಿಜಕ್ಕೂ ಬದ್ಧತೆ ಮತ್ತು ಪ್ರಾಮಾಣಿಕತೆ ಇದ್ದರೆ, ಸಮೀಕ್ಷೆ ಹೇಗಿರಬೇಕು ಎಂಬ ಕುರಿತು ಮೊದಲು ಸಾರ್ವಜನಿಕ ಚರ್ಚೆಗೆ ಅವಕಾಶ ಕೊಡಬೇಕು. ಸರ್ವಪಕ್ಷಗಳ ಸಭೆ ಕರೆದು ಚರ್ಚಿಸಿ ಎಲ್ಲರ ಅಭಿಪ್ರಾಯಗಳನ್ನು ಆಲಿಸಬೇಕು. ಮರು ಸಮೀಕ್ಷೆಗೆ ಅಗತ್ಯವಾದ ಎಲ್ಲ ಸಿದ್ಧತೆಗಳನ್ನು ಮುಗಿಸಿ ಈ ಶೈಕ್ಷಣಿಕ ವರ್ಷ ಮುಗಿದ ಬಳಿಕ ಶಿಕ್ಷಕರನ್ನು ಬಳಸಿಕೊಂಡು ಸಮೀಕ್ಷೆ ನಡೆಸಬೇಕು. ಇದು ರಾಜ್ಯದ ಹಿತದೃಷ್ಟಿಯಿಂದ ಅತಿ ಅವಶ್ಯಕ ಎಂದು ಸಲಹೆ ನೀಡಿದ್ದಾರೆ.

Read More
Next Story